ವಿಮಾನಗಳಿಗೆ ಜೆಟ್ ಇಂಜಿನ್ ಅನ್ನು ಅಭಿವೃದ್ಧಿಪಡಿಸುವುದು ವಾಯುಯಾನ ಕ್ಷೇತ್ರದ ಇತಿಹಾಸದಲ್ಲಿ ಬಹುದೊಡ್ಡ ಮೈಲಿಗಲ್ಲಾಗಿದೆ. ಇದೀಗ ಭಾರತದಲ್ಲಿ ಕಾವೇರಿ ಇಂಜಿನ್ ಯೋಜನೆಗೆ ಸ್ಪಷ್ಟ ಚಿತ್ರಣ ದೊರೆಯಲಾರಂಭಿಸಿದೆ. ತೇಜಸ್ ಯುದ್ಧ ವಿಮಾನಕ್ಕೆ ಶಕ್ತಿ ತುಂಬಲೆಂದು ಇದನ್ನು ಆರಂಭಿಸಲಾಗಿತ್ತು. ಆದರೆ, ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ತೇಜಸ್ಗೆ ಜಿಇ ಇಂಜಿನ್ ಗಳನ್ನು ಬಳಸಿ ಹಾರಾಟವನ್ನು ನಡೆಸಲಾಯಿತು ಮತ್ತು ಇಂದಿಗೂ ಅದನ್ನೇ ಬಳಸಲಾಗುತ್ತಿದೆ.
ಜೆಟ್ ಇಂಜಿನ್ನ ಸಂಕೀರ್ಣತೆ ಏನು..?
1985ರಲ್ಲಿ ದೇಸೀಯ ವಿಮಾನ ಇಂಜಿನ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿತ್ತು. ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಈ ಕೆಲಸವನ್ನು ಗ್ಯಾಸ್ ಟರ್ಬೈನ್ ರೀಸರ್ಚ್ ಎಸ್ಟಾಬ್ಲಿಷ್ ಮೆಂಟ್ ಗೆ ವಹಿಸಿತ್ತು. ಆದರೆ, ಆ ಸಂಸ್ಥೆಗೆ ಇಂಜಿನ್ ತಯಾರಿಕೆಯಲ್ಲಿ ಸ್ವಲ್ಪ ಮಟ್ಟಿನ ಅನುಭವ ಇತ್ತು. ವಿಳಂಬದ ಹಿನ್ನೆಲೆಯಲ್ಲಿ ತೇಜಸ್ ಮೂರು ದಶಕಗಳ ನಂತರ ಹಾರಾಟ ನಡೆಸಿತು. ಈ ತೇಜಸ್ ಅನ್ನು ಇಡೀ ವಿಶ್ವದಲ್ಲಿ ಅತ್ಯಂತ ಹಗುರವಾದ ಯುದ್ಧ ವಿಮಾನ ಎಂದು ಪರಿಗಣಿಸಲಾಗಿದೆ ಮತ್ತು ಇದನ್ನು ಭಾರತೀಯ ವಾಯು ಸೇನೆಯ ಭವಿಷ್ಯವೆಂದೇ ಹೇಳಲಾಗುತ್ತಿದೆ. ಆದರೆ, ಉದ್ದೇಶಿತ ವಿಮಾನ ಇಂಜಿನ್ ಅನ್ನು ಅತ್ಯಂತ ಕಳಪೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶವು ಈಗ ತೇಜಸ್ಗೆ ಶಕ್ತಿ ತುಂಬಲು ಅಂದರೆ ಇಂಜಿನ್ಗಾಗಿ ವಿದೇಶಿ ಉತ್ಪಾದಕರನ್ನು ಅವಲಂಬಿಸುತ್ತಿದೆ.
ಆರಂಭದಿಂದಲೂ ಕಾವೇರಿ ಇಂಜಿನ್ ಯೋಜನೆ ಅನೇಕ ಹಿನ್ನಡೆಗಳನ್ನು ಅನುಭವಿಸಿತು. ಈ ಹಿನ್ನಡೆ ಪಟ್ಟಿಯಲ್ಲಿ ಸರ್ಕಾರದಿಂದ ಸಿಗಬೇಕಿದ್ದ ಆರ್ಥಿಕ ಬೆಂಬಲವು ಪ್ರಮುಖವಾಗಿದೆ. 1985ರಲ್ಲಿ ಕಾವೇರಿ ಇಂಜಿನ್ ಯೋಜನೆ ಆರಂಭವಾಯಿತಾದರೂ ಇಂದಿಗೂ ಇದರಿಂದ ಯಾವುದೇ ಫಲಿತಾಂಶ ಬಂದಿಲ್ಲ. ಇದರ ವೈಫಲ್ಯಕ್ಕೆ ಕಾರಣಗಳನ್ನು ಹುಡುಕುವ ಮುನ್ನ ನಾವು ಜೆಟ್ ಇಂಜಿನ್ ನ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಜೆಟ್ ಇಂಜಿನ್ ಒಂದು ಕಾಂಪ್ಯಾಕ್ಟ್ ಗ್ಯಾಸ್ ಟರ್ಬೈನ್ ಆಗಿದ್ದು, ಇದು ವಿಮಾನ ಮೇಲಕ್ಕೆ ಹಾರಲು ಬೇಕಾದ ಶಕ್ತಿಯನ್ನು ಉತ್ಪಾದಿಸುತ್ತದೆ. ಇಂಜಿನ್ ಅನ್ನು ಐದು ನಿರ್ಣಾಯಕವಾದ ಭಾಗಗಳಿಂದ ತಯಾರಿಸಲಾಗುತ್ತದೆ. ಅವುಗಳೆಂದರೆ ಫ್ಯಾನ್, ಕಂಪ್ರೆಸ್ಸರ್, ಕಂಬಶನ್, ಟರ್ಬೈನ್, ಮಿಕ್ಸರ್ ಮತ್ತು ನಾಝಲ್. ಫ್ಯಾನ್ ಗಾಳಿಯನ್ನು ಹೀರಿಕೊಳ್ಳಲಿದ್ದರೆ, ಅಲ್ಲಿ ಗಾಳಿಯು ಸಂಕುಚಿತಗೊಳ್ಳುತ್ತದೆ ಮತ್ತು ಇಂಧನ ಹಾಗೂ ವಿದ್ಯುತ್ ಸ್ಪಾರ್ಕ್ ಸಹಾಯದಿಂದ ಟರ್ಬೈನ್ ಮೂಲಕ ಹರಡುತ್ತದೆ. ಇದಾದ ಬಳಿಕ ಟರ್ಬೈನ್ ಮೂಲಕ ಹರಿಯುತ್ತದೆ ಮತ್ತು ನಾಝಲ್ ಅಂದರೆ ಕೊಳವೆ ಮೂಲಕ ಸ್ಫೋಟಗೊಳ್ಳುತ್ತದೆ. ಉತ್ಪಾದನೆಯಾದ ಶಕ್ತಿಯ ಒತ್ತಡವನ್ನು ಹಿಂದಕ್ಕೆ ತಳ್ಳಲಾಗುತ್ತದೆ. ಇದು ವಿಮಾನ ಮುಂದಕ್ಕೆ ಹೋಗುವ ಚಲನಶಕ್ತಿಯನ್ನು ನೀಡುತ್ತದೆ.
ಇಲ್ಲಿ ಉತ್ಪತ್ತಿಯಾಗುವ ಒತ್ತಡವು ತುಂಬಾ ಶಕ್ತಿಯುತವಾಗಿದ್ದು, ಸಾಮಾನ್ಯ ಲೋಹಗಳು ಶಾಖವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ದೂರನ್ನು ಇಂಜಿನ್ ಅಭಿವೃದ್ಧಿಪಡಿಸುವ ಆರಂಭದ ದಿನಗಳಲ್ಲಿ ದಾಖಲಿಸಲಾಗುತ್ತದೆ, ಇಂಜಿನ್ ಕ್ರಿಸ್ಟಲ್ ಬ್ಲೇಡ್ ಗಳನ್ನು ಹೊರ ಹಾಕಲು ಆರಂಭಿಸಿತು. ಸುಮಾರು 6000 ಗಂಟೆಗಳವರೆಗೆ ಶಾಖವನ್ನು ತಡೆದುಕೊಳ್ಳುವ ವಿಶೇಷವಾದ ಲೋಹದ ಅಗತ್ಯವಿರುತ್ತದೆ.
ಕಾವೇರಿ ಇಂಜಿನ್ ನಡೆದುಬಂದ ಹಾದಿ
ಡಿಆರ್ ಡಿಒ 17 ಮಾದರಿಗಳಿಗೆ ಯೋಜನೆ ರೂಪಿಸಿತ್ತು. ಕಾವೇರಿ ಮಾದರಿಯ ಮೊದಲ ಪರೀಕ್ಷೆಯನ್ನು 1996ರಲ್ಲಿ ಕೈಗೊಳ್ಳಲಾಯಿತು ಮತ್ತು 1998ರಲ್ಲಿ ಗ್ರೌಂಡ್ ಟೆಸ್ಟ್ ಗಳನ್ನು ನಡೆಸಲಾಯಿತು. ನಂತರ 1999 ರಲ್ಲಿ ಪರೀಕ್ಷಾರ್ಥ ಹಾರಾಟಕ್ಕೆ ಸಮಯ ನಿಗದಿಯಾಗಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಪರೀಕ್ಷೆ ಸಾಧ್ಯವಾಗಲಿಲ್ಲ. 2003 ರಲ್ಲಿ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಲಘು ಯುದ್ಧ ವಿಮಾನಗಳಿಗೆ 17 F404-IN20 ಇಂಜಿನ್ ಪೂರೈಸಲು ಜಿಇಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಕಾವೇರಿ ಇಂಜಿನ್ ರಷ್ಯಾದಲ್ಲಿ ನಡೆದ ಹೈ-ಆಲ್ಟಿಟ್ಯೂಡ್ ಪರೀಕ್ಷೆಯಲ್ಲಿ ವಿಫಲವಾಯಿತು. ಇದರ ಮೂಲಕ ತೇಜಸ್ ಗೆ ಸ್ವದೇಶಿ ಉತ್ಪಾದನೆಯ ಮೊದಲ ಇಂಜಿನ್ ಮೇಲೆ ಇಟ್ಟಿದ್ದ ನಿರೀಕ್ಷೆಗಳೆಲ್ಲಾ ಅಂತ್ಯಗೊಂಡಂತಾಯಿತು.
ಯಶಸ್ಸು:
ಕಾವೇರಿ ಇಂಜಿನ್ ಯೋಜನೆ ಸಂಪೂರ್ಣ ವಿಫಲವಾಗಲಿಲ್ಲ. ಜಿಟಿಆರ್ ಇ ಎಂಟು ಮಾದರಿಯ ಮತ್ತು ನಾಲ್ಕು ಕೋರ್ ಇಂಜಿನ್ ಗಳನ್ನು ಅಭಿವೃದ್ಧಿಪಡಿಸಿತು. ರಷ್ಯನ್ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಏವಿಯೇಷನ್ ಮೋಟರ್ಸ್ (ಸಿಐಎಎಂ) ನೆರವಿನಿಂದ 2010 ರಲ್ಲಿ ಆಲ್ಟಿಟ್ಯೂಡ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಪ್ರಮುಖವಾದ ಮೈಲಿಗಲ್ಲು ಸ್ಥಾಪಿಸಿತು. ಡಿಆರ್ ಡಿಒ ಪ್ರಕಾರ ಕಾವೇರಿ ಇಂಜಿನ್ ಕಾರ್ಯಕ್ಷಮತೆಯನ್ನು ವಿವಿಧ ಆಲ್ಟಿಟ್ಯೂಡ್ ಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಡಿಆರ್ ಡಿಒ ಪ್ರಕಾರ, ರಷ್ಯಾದ ಗ್ರೊಮೊವ್ ದಲ್ಲಿ ಈ ಇಂಜಿನ್ ನೊಂದಿಗೆ ಒಂದು ಗಂಟೆಗೂ ಹೆಚ್ಚು ಸಮಯದವರೆಗೆ 6000 ಮೀಟರ್ ಗಳ(20,000 ಅಡಿಗಳು) ಎತ್ತರದಲ್ಲಿ ಹಾರಾಟ ಪರೀಕ್ಷೆಯನ್ನು ನಡೆಸಲಾಗಿದೆ. 2021 ರಲ್ಲಿ ಡಿಆರ್ಡಿಒ ಸಿಂಗಲ್ ಕ್ರಿಸ್ಟಲ್ ಬ್ಲೇಡ್ ಗಳು ಮತ್ತು ಅಗತ್ಯವಾದ ಘಟಕಗಳನ್ನು ಅಭಿವೃದ್ಧಿಪಡಿಸಿತು. ಇಂತಹ ಸಾಧನೆ ಸಾಧಿಸಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಯಿತು.
ವಿಶ್ಲೇಷಣೆ:
36 ವರ್ಷಗಳ ನಂತರವೂ, ದೇಸೀಯ ಇಂಜಿನ್ ಅಭಿವೃದ್ಧಿಗೆ ಹಲವಾರು ಹಿನ್ನಡೆಗಳು ಕಂಡುಬರುತ್ತಿವೆ. ಇದಕ್ಕೆ ಡಿಆರ್ ಡಿಒ ಯೋಜನೆ ರೂಪಿಸುವ ಕೊರತೆ ಪ್ರಮುಖ ಕಾರಣವಾಗಿದೆ. ಇಂಜಿನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಒಪ್ಪಿಕೊಳ್ಳಲು ಇದಕ್ಕೆ ಇಷ್ಟವಿರಲಿಲ್ಲ. ಆದರೆ, ಇದಕ್ಕೆ ಬಲಿಯಾಗುತ್ತಿರುವುದು ಮಾತ್ರ ಎಲ್ ಸಿಎ ತೇಜಸ್. ಸಮಸ್ಯೆ ಉಲ್ಬಣಗೊಳ್ಳುವವರೆಗೆ ಯಾವುದೇ ವಿದೇಶಿ ಕಂಪನಿಯನ್ನು ಒಳಗೊಳ್ಳುವಂತೆ ಮಾಡಿಕೊಳ್ಳಲು ಸಂಸ್ಥೆಯು ಹಿಂಜರಿಯುತ್ತಿತ್ತು.
ನಿರ್ಣಾಯಕ ಯಂತ್ರೋಪಕರಣಗಳು ಮತ್ತು ಉತ್ಪನ್ನಗಳ ಲಭ್ಯತೆಯ ಕೊರತೆ, ತಂತ್ರಜ್ಞಾನ ಸಂಕೀರ್ಣತೆಗಳು, ಶೂನ್ಯ ಪರೀಕ್ಷಾ ಸೌಲಭ್ಯಗಳು ಮತ್ತು ಕೌಶಲ್ಯಾಧಾರಿತ ಸಿಬ್ಬಂದಿ ಕೊರತೆಗಳು ಈ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು 2010 ರಲ್ಲಿ ರಕ್ಷಣಾ ಸಚಿವಾಲಯ ಸ್ಪಷ್ಟೀಕರಣ ನೀಡಿತ್ತು. ತಂತ್ರಜ್ಞಾನವನ್ನು ಹೊಂದಿರುವ ದೇಶಗಳು ಡಿಆರ್ ಡಿಒದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಡಿಆರ್ ಡಿಒ ಕತ್ತಲೆಯಲ್ಲಿ ತಡಕಾಡುತ್ತಿದ್ದುದನ್ನು ಸಚಿವಾಲಯ ಗಮನಿಸಿದೆ. ಈ ವಿಳಂಬವು ಇಂದಿಗೂ ದೇಶಕ್ಕೆ ನಷ್ಟವಾಗುವಂತೆ ಮಾಡುತ್ತಿದೆ. ತೇಜಸ್ ಗಾಗಿ 99 ಜಿಇ ಇಂಜಿನ್ ಗಳನ್ನು ಖರೀದಿಸಲು ಎಚ್ಎಎಲ್ 716 ಮಿಲಿಯನ್ ಡಾಲರ್ (5000 ಕೋಟಿ ರೂಪಾಯಿಗಳನ್ನು)ಗಳ ಒಪ್ಪಂದವನ್ನು ಮಾಡಿಕೊಂಡಿದೆ.
ಸಿಎಜಿ: ಅದಕ್ಕೆ ಸಂಕಷ್ಟಗಳನ್ನು ಹೆಚ್ಚಿಸಲು, ಕಂಟ್ರೋಲರ್ ಆಡಿಟರ್ ಜನರಲ್ ಆಫ್ ಇಂಡಿಯಾ ವರದಿ 2010-11 ರ ಪ್ರಕಾರ 265.3 ಮಿಲಿಯನ್ ಡಾಲರ್ ಅನ್ನು ಖರ್ಚು ಮಾಡಲಾಗಿದೆ. ಆದರೆ, ಯೋಜನೆ ಮಾತ್ರ ವಿಫಲವಾಗಿದೆ. ಅದರಂತೆ ಇಂಜಿನ್ ನಿರ್ದಿಷ್ಟಪಡಿಸಿದ 1100 ಕೆಜಿಗೆ ಬದಲಾಗಿ 1235 ಕೆಜಿ ತೂಕವಿದೆ.
ಕೈಬಿಟ್ಟದ್ದು ಮತ್ತು ಪುನರುಜ್ಜೀವನಗೊಳಿಸಲಾಗಿರುವುದು:
ಹಲವಾರು ಟೀಕೆಗಳು ವ್ಯಕ್ತವಾದ ನಂತರ ಡಿಆರ್ ಡಿಒ ನವೆಂಬರ್ 2014 ರಲ್ಲಿ ಯೋಜನೆಯನ್ನು ಕೈಬಿಟ್ಟಿತಾದರೂ ಫ್ರಾನ್ಸ್ ಜಂಟಿಯಾಗಿ ಇಂಜಿನ್ ಅಭಿವೃದ್ಧಿಪಡಿಸಲು ಮುಂದಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಪುನಶ್ಚೇತನಗೊಳಿಸಲಾಯಿತು. ಆದರೆ, ಫ್ರೆಂಚ್ ತಂತ್ರಜ್ಞಾನವನ್ನು ವರ್ಗಾವಣೆ ಮಾಡಲು ನಿರಾಕರಿಸಿದ್ದರಿಂದ ಈ ಪ್ರಸ್ತಾಪಕ್ಕೆ ಹಿನ್ನಡೆ ಉಂಟಾಯಿತು. ಭಾರತೀಯ ವಾಯುಪಡೆಯಿಂದ ಎಂಎಂಆರ್ ಸಿಎ ಅಡಿಯಲ್ಲಿ ಹೆಚ್ಚಿನ ಯುದ್ಧ ವಿಮಾನಗಳನ್ನು ಖರೀದಿಸಲು ಆಸಕ್ತಿ ತೋರಿದ್ದರ ಫಲವಾಗಿ ಹಲವಾರು ದೇಶಗಳು ಭಾರತದೊಂದಿಗೆ ಜೆಟ್ ಇಂಜಿನ್ ಅಭಿವೃದ್ಧಿಪಡಿಸಲು ಮುಂದೆ ಬಂದಿವೆ.
ಐಎಎಫ್ ಸ್ಥಳೀಯವಾದ ಸ್ಟೆಲ್ತ್ ವಿಮಾನವಾದ ಎಎಂಸಿಎ ಮೇಲೆ ವೇಗವಾಗಿ ಒತ್ತು ನೀಡುತ್ತಿದೆ. ಡಿಆರ್ ಡಿಒ ತನ್ನ ಹಿಂದಿನ ತಪ್ಪನ್ನು ಪುನರಾವರ್ತಿಸಲು ಬಯಸುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಇಂಜಿನ್ ನೊಂದಿಗೆ ಎಎಂಸಿಎಗೆ ಶಕ್ತಿಯನ್ನು ನೀಡಲು ಆಸಕ್ತಿ ತೋರಿದೆ. ಇದರ ಪರಿಣಾಮ ಸಂಸ್ಥೆಯು ಇದೀಗ ವಿದೇಶಿ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಎದುರು ನೋಡುತ್ತಿದೆ. ಪಾಲುದಾರಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಏವಿಯೇಷನ್ ಜೈಂಟ್ ರೋಲ್ಸ್ ರಾಯ್ಸ್ ಮುಂಚೂಣಿಯಲ್ಲಿದೆ. ರಷ್ಯನ್ನರು ಸಹ ಆಸಕ್ತಿ ತೋರಿದ್ದಾರೆ.

ಇತರೆ ದೇಶಗಳು: ಜೆಟ್ ಇಂಜಿನ್ ಅಭಿವೃದ್ಧಿ ಒಂದು ಸಂಕೀರ್ಣವಾದ ತಂತ್ರಜ್ಞಾನವಾಗಿದೆ. ಚೀನಾ, ಕೊರಿಯಾ ಮತ್ತು ಇರಾನ್ ನಂತಹ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಂಡಿರುವ ಅನೇಕ ದೇಶಗಳು ಹೆಣಗಾಡುತ್ತಿವೆ. ಏಕೆಂದರೆ, ಈ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಅತ್ಯಾಧುನಿಕ ಸಂಶೋಧನಾ ತಂಡ, ಹಣ, ನುರಿತ ಮಾನವ ಶಕ್ತಿಯ ಬೆಂಬಲ ಅಗತ್ಯವಾಗಿರುತ್ತದೆ.
ಬೆಳ್ಳಿ ರೇಖೆ: ನಿರಂತರ ಪ್ರಯತ್ನದ ನಂತರ, ಭಾರತದ ಜೆಟ್ ಇಂಜಿನ್ ಯೋಜನೆಯು ಸ್ವಲ್ಪ ಮಟ್ಟಿನ ಪ್ರಗತಿಯನ್ನು ಸಾಧಿಸಿದೆ. ಇಂಜಿನ್ 75 ಕೆ ನ್ಯೂಟನ್ ಥ್ರಸ್ಟ್ ಅನ್ನು ಉತ್ಪಾದನೆ ಮಾಡಲು ಸಮರ್ಥವಾಗಿದೆ. ಆದರೆ, ಎಲ್ ಸಿಎಗೆ 90 ಕೆ ಮತ್ತು ಎಎಂಸಿಎಗೆ 110 ಕೆ ಥ್ರಸ್ಟ್ ನ ಅಗತ್ಯವಿದೆ. ರೋಲ್ಸ್ ರಾಯ್ಸ್ ಜೊತೆಗಿನ ಯೋಜನೆಯು ಇವುಗಳನ್ನು ಪೂರೈಸುವ ಭರವಸೆಯನ್ನು ಮೂಡಿಸಿದೆ.
ರಕ್ಷಣಾ ವಾಯುಯಾನ ಕ್ಷೇತ್ರದಲ್ಲಿ ಭಾರತ ದೇಶ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಸ್ವದೇಶಿ ಜೆಟ್ ಇಂಜಿನ್ ಅಭಿವೃದ್ಧಿಗೆ ಇಲ್ಲಿ ಮಹತ್ವ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳು ಇಲ್ಲಿ ಸಕಾರಾತ್ಮಕವಾದ ಪರಿಣಾಮವನ್ನು ಬೀರಬಹುದಾಗಿದೆ.
ಲೇಖಕರು: ಗಿರೀಶ್ ಲಿಂಗಣ್ಣ, ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post