ಸಾಮರಸ್ಯ, ಸೌಹಾರ್ದತೆಯ ಪ್ರತೀಕ ಎನಿಸಿಕೊಂಡಿರೋ ಶಿರಸಿ ತಾಲೂಕಿನ ಸ್ವರ್ಣವಲ್ಲಿಯ ರಥೋತ್ಸವಕ್ಕೆ ರಥ ಕಟ್ಟುವ ಕೆಲಸ ಆರಂಭವಾಗಿದೆ. ಇಂದು ನಡೆಯುತ್ತಿರುವ ರಥೋತ್ಸವದಲ್ಲಿ ಮುಸ್ಲಿಂ ಧರ್ಮದವರು ರಥ ನಿರ್ಮಾಣ ಮಾಡೋ ಪದ್ಧತಿ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದೆ.
ಸ್ವರ್ಣವಲ್ಲಿಯ ಪೀಠಾಧೀಶರಾದ ಹಸಿರು ಸ್ವಾಮಿಗಳೆಂದು ಹೆಸರು ವಾಸಿಯಾವಗಿರೋ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಈಗ ಸೌಹಾರ್ದತೆಯ ಪ್ರತೀಕವೂ ಎನಿಸಿಕೊಂಡಿದ್ದಾರೆ. ಆಜಾನ್ ಗಲಾಟೆ, ಹಿಂದೂ ದೇವಾಲಯದ ಆವಾರಕ್ಕೆ ಅನ್ಯ ಧರ್ಮದವರಿಗೆ ಪ್ರವೇಶ ನಿರಾಕರಣೆ, ಹಿಜಾಬ್ ವಿವಾದ ಹೀಗೆ ವಿವಿಧ ರೀತಿಯ ಕೋಮು ಸೌಹಾರ್ದ ಹಾಳಾಗೋ ಸಂಗತಿಗಳು ನಡೆಯುತ್ತಿದ್ದರೂ ಸಹ ಶ್ರೀಗಳು ಮಾತ್ರ ತಮ್ಮ ಹಿಂದಿನ ಪದ್ದತಿಯನ್ನ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಈ ವರ್ಷವೂ ಸಹ ನೂರಾರು ವರ್ಷಗಳಿಂದ ನಡೆದುಕೊಂಡ ಬಂದ ಪದ್ದತಿಯಂತೆ ಮುಸ್ಲಿಂ ಸಮುದಾಯದವರೇ ರಥ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೋಮು ಸೌಹಾರ್ದದ ವಿವಾದ ಈಗ ಎದ್ದಿದೆ.
ಸ್ವರ್ಣವಲ್ಲೀ ಮಠದಲ್ಲಿ ಮುಸ್ಲಿಂ ಧರ್ಮದವರು ರಥ ಕಟ್ಟುವ ಕೆಲಸ ಮಾಡುತ್ತಿರುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಎಲ್ಲಾ ಕಡೆ ಸೌಹಾರ್ದಯುತ ವಾತಾವರಣ ಇರಬೇಕು.
ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸ್ವರ್ಣವಲ್ಲಿ ಮಠ
ಸುಮಾರು 300 ವರ್ಷಗಳಿಂದ ಸ್ವರ್ಣವಲ್ಲಿಯಲ್ಲಿ ಮುಸ್ಲಿಂ ಸಮುದಾಯದವರು ರಥ ಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಾವು ಅಲ್ಲಾನನ್ನೂ ನಂಬುತ್ತೇವೆ. ನರಸಿಂಹ ದೇವರನ್ನೂ ನಂಬುತ್ತೇವೆ. ಎಲ್ಲರೂ ಒಂದಾಗಿ ಬಾಳುತ್ತೇವೆ. ಅಂಥ ರಥ ಕಟ್ಟುವ ಪ್ರಮುಖ ವ್ಯಕ್ತಿ ಹಸನ ಸಾಬ ಖಾಜಿ ಹೇಳುತ್ತಾರೆ. 5 ಜನರು ಕೂಡಿ ರಥ ಕಟ್ಟುತ್ತಾರೆ. ರಥವನ್ನು ಹಗ್ಗದಿಂದ ಮಾಡಲಾಗುತ್ತದೆ. ರಥೋತ್ಸವದ ದಿನ ರಥದ ಮೇಲೆ ನಿಯಂತ್ರಣವನ್ನೂ ಸಹ ಮುಸ್ಲಿಂ ಸಮುದಾಯದವರೇ ಮಾಡುತ್ತಾರೆ. ಇದಕ್ಕೆ ಮಠದಿಂದ ಹಾಗೂ ಶ್ರೀಗಳು ಸಾಕಷ್ಟು ಗೌರವ ನೀಡುತ್ತಾರೆ ಎನ್ನುತ್ತಾರೆ ಹಸನ ಸಾಬ ಖಾಜಿ.
ಸ್ವರ್ಣವಲ್ಲಿ ಮಠದಲ್ಲಿ ಮುಸ್ಲಿಂ ಸಮುದಾಯವರು ರಥ ಕಟ್ಟುವ ಕೆಲಸ ಮಾಡಿದರೆ ಕ್ರಿಶ್ಚಿಯನ್ ಸಮುದಾಯದವರು ಪಟಾಕಿ ಸಿಡಿಸುವ ಸಂಭ್ರಮದಲ್ಲಿ ತೊಡಗಿಕೊಳ್ತಾರೆ. ಕಾರಣ ಈ ರಥೋತ್ಸವ ಸರ್ವ ಧರ್ಮದವರ ಸೌಹಾರ್ದತೆಯ ಪ್ರತೀಕವಾಗಿದೆ. ಅಲ್ಲದೇ ಇದು ತಾಲೂಕಿನಲ್ಲಿ ನಡೆಯುವ ಮಾಸದ ಕೊನೆಯ ರಥೋತ್ಸವವಾಗಿದೆ. ಇಂತಹ ರಥೋತ್ಸವದಲ್ಲಿ ಇಡೀ ದೇಶಕ್ಕೆ ಮಾದರಿ ಎನ್ನುವಂತೆ ಸೌಹಾರ್ದತೆ ಕಾಪಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ.
ವಿಶೇಷ ವರದಿ: ಶ್ರೀಧರ್ ಜಿ.ಹೆಚ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post