ಬೆಂಗಳೂರಲ್ಲಿ ಇಂದು, ನಾಳೆ ವಿಪಕ್ಷಗಳ ಸಮರಾಭ್ಯಾಸ
ಮೋದಿ ಕಟ್ಟಿ ಹಾಕಲು ಮಹಾಘಟಬಂಧನ್ನಲ್ಲಿ ಚರ್ಚೆ
ಮಹಾಘಟಬಂಧನ್ನ ನಾಯಕ ಯಾರು ಆಗುತ್ತಾರೆ..?
ನಾಳೆ ನಾಡಿದ್ದು, ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ವಿರೋಧ ಪಕ್ಷಗಳ ಒಕ್ಕೂಟದ ಸಭೆ ನಡೆಯಲಿದೆ. ಸಭೆಗೆ ಒಟ್ಟು 24 ಪಕ್ಷಗಳಿಗೆ ಅಧಿಕೃತ ಆಹ್ವಾನ. ಇಂದು ಸಂಜೆ ಮೈತ್ರಿಕೂಟದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೋಜನ ಕೂಟ ಆಯೋಜಿಸಿದ್ದಾರೆ. ವಿಪಕ್ಷಗಳ ಒಕ್ಕೂಟದ ಸಭೆ ಹೆಚ್ಚು ಮಹತ್ವ ಪಡೆದುಕೊಳ್ಳಲು ಕಾರಣಗಳೇನು?
ಲೋಕಸಭೆ ಚುನಾವಣೆಗೆ ಅಖಾಡ ಸಜ್ಜಾಗ್ತಿದೆ. ಬಿಜೆಪಿಯೇತ್ತರ ಪಕ್ಷಗಳು ಒಗ್ಗಟ್ಟಿನ ಮಂತ್ರ ಪಠಿಸ್ತಿವೆ. ಪ್ರಧಾನಿ ಮೋದಿ ಸೋಲಿಗೆ ರಣವ್ಯೂಹ ರಚಿಸುತ್ತಿವೆ. ನಮೋ ವಿರುದ್ಧ ಬಲಿಷ್ಠ ಪಡೆ ಕಟ್ಟಿ ಎನ್ಡಿಎ ಮೈತ್ರಿ ಕೂಟವನ್ನ ಬಗ್ಗು ಬಡಿಯೋಕೆ ರಣತಂತ್ರ ಹೆಣೆಯುತ್ತಿವೆ. ಇವತ್ತು ಮತ್ತು ನಾಳೆ ಬೆಂಗಳೂರಲ್ಲಿ ವಿಪಕ್ಷಗಳು ಸಮರಾಭ್ಯಾಸ ಹಮ್ಮಿಕೊಂಡಿವೆ.
ಲೋಕಾ ಯುದ್ಧಕ್ಕೆ ‘ಮೋದಿ ವಿರೋಧಿ ಕೂಟ’ ಸಜ್ಜು
ಇಡೀ ದೇಶದ ರಾಜಕಾರಣ ಚಿತ್ತ ಬೆಂಗಳೂರಿನ ಮೇಲೆ ನೆಟ್ಟಿದೆ. ಕಾರಣ ಇವತ್ತು ಮತ್ತು ನಾಳೆ ಬೆಂಗಳೂರಲ್ಲಿ ಮಹಾಘಟಬಂಧನ್ ಸಭೆ ಸೇರುತ್ತಿದೆ. ಬಿಜೆಪಿಯನ್ನ ಕಟ್ಟಿ ಹಾಕಲು ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ಕೈ ಜೋಡಿಸ್ತಿವೆ. ವಿಪಕ್ಷಗಳ ಈ ಸಭೆಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಸಿದ್ಧಗೊಂಡಿದೆ. ಎಐಸಿಸಿ ಅಧ್ಯಕ್ಷ ಖರ್ಗೆ, ಸೋನಿಯಾ, ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಒಕ್ಕೂಟದ ನೇತೃತ್ವ ವಹಿಸಿರುವ ನಿತೀಶ್ ಕುಮಾರ್, ಡಿಎಂಕೆ ವರಿಷ್ಠ ಎಂ.ಕೆ ಸ್ಟ್ಯಾಲಿನ್, ಉದ್ಧವ್ ಠಾಕ್ರೆ ಸೇರಿ ಪ್ರಮುಖ ನಾಯಕರ ಫ್ಲೆಕ್ಸ್, ಬ್ಯಾನರ್ಗಳು ರಸ್ತೆಗಳಲ್ಲಿ ರಾರಾಜಿಸ್ತಿವೆ.
ಬೆಂಗಳೂರಲ್ಲಿ ಮಹಾಘಟಬಂಧನ್
- ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಮಹಾಘಟ್ಬಂಧನ್
- ಸಭೆಗೆ ಒಟ್ಟು 24 ಪಕ್ಷಗಳಿಗೆ ಅಧಿಕೃತ ಆಹ್ವಾನ ನೀಡಲಾಗಿದೆ
- ಎಂಡಿಕೆ, ಎನ್ಸಿಪಿ, ಎಎಪಿಗೆ ಅಧಿಕೃತ ಆಹ್ವಾನ ನೀಡಲಾಗಿದೆ
- ಇಂದು ರಾತ್ರಿ ಮೈತ್ರಿಕೂಟದ ನಾಯಕರಿಗೆ ಭೋಜನ ಕೂಟ
- ತಾಜ್ ವೆಸ್ಟ್ಎಂಡ್ನಲ್ಲಿ ನಾಳೆ ಅಸಲಿ ಮಹಾಘಟ್ಬಂಧನ್
- ಈ ವೇಳೆ ಮೈತ್ರಿಕೂಟಕ್ಕೆ ಅಧಿಕೃತ ಹೆಸರು ಘೋಷಣೆ ಸಾಧ್ಯತೆ
- ಸೀಟು ಹಂಚಿಕೆ ಸಂಬಂಧವೂ ಮಹತ್ವದ ನಿರ್ಧಾರ ಸಾಧ್ಯತೆ
- 150 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬಹುದೆಂಬ ಬಗ್ಗೆ ಚರ್ಚೆ
- ನಾಳೆ ಮಧ್ಯಾಹ್ನ ಡಿ.ಕೆ.ಶಿವಕುಮಾರ್ರಿಂದ ಭೋಜನ ಕೂಟ
2024ರ ಎಲೆಕ್ಷನ್ಗಾಗಿ ಈಗಾಗಲೇ ಪಾಟ್ನಾದಲ್ಲಿ ಆರಂಭದ ಸಭೆ ಮಾಡಲಾಗಿದ್ದು ಇದು ಯಶಸ್ವಿಯಾಗಿದೆ. ಪಾಟ್ನಾ ಮೀಟಿಂಗ್ ಇಲ್ಲಿ ಮುಂದುವರೆಯುತ್ತಿದೆ. ಮುಂದಿನ ಎಲೆಕ್ಷನ್ಗೆ ಬೇಕಾದ ಚರ್ಚೆಗಳನ್ನು ಮಾಡುತ್ತೇವೆ.
ಕೆ.ಸಿ ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಇನ್ನು ಈ ಬಾರಿಯ ವಿಪಕ್ಷಗಳ ಒಕ್ಕೂಟದ ಸಭೆ ಅತಿ ಹೆಚ್ಚು ಮಹತ್ವ ಪಡೆದುಕೊಳ್ಳಲು ಕಾರಣಗಳೇನು ಅಂತಾ ನೋಡೋದಾದ್ರೆ..
ಮಹಾಘಟಬಂಧನ್.. ಏನೆಲ್ಲಾ ಲೆಕ್ಕಾಚಾರ?
- ಬಿಜೆಪಿ ವಿರುದ್ಧ ವಿಪಕ್ಷಗಳ ಒಕ್ಕೂಟದಿಂದ ಒಗ್ಗಟ್ಟು ಪ್ರದರ್ಶನ
- ರಾಹುಲ್ ಗಾಂಧಿ ಅನರ್ಹತೆ ವಿರುದ್ಧ ಒಗ್ಗಟ್ಟಾಗಿ ಹೋರಾಟ
- ಬಿಜೆಪಿ ವಿರುದ್ಧ ವಿಪಕ್ಷಗಳ ಒಕ್ಕೂಟದಿಂದ ಒಬ್ಬರೇ ಅಭ್ಯರ್ಥಿಯ ತಂತ್ರ
- 2019ರ ಲೋಕಾ ಚುನಾವಣೆಯಲ್ಲಿ 303 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ
- ಒಟ್ಟಾರೆ ಎನ್ಡಿಎ ಮೈತ್ರಿಕೂಟದ ಸಂಖ್ಯಾ ಬಲ 353ಕ್ಕೆ ಏರಿಕೆ ಕಂಡಿತ್ತು
- ಇಷ್ಟು ಸಂಖ್ಯೆ ಇರುವ ಬಿಜೆಪಿಯನ್ನ ಒಂದು ಪಕ್ಷ ಮಣಿಸುವುದು ಕಷ್ಟ
- ಎಲ್ಲ ವಿಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ಹೋರಾಟಕ್ಕೆ ಒಲವು
- ಎಲ್ಲ ಪಕ್ಷಗಳೂ ಒಂದಾದರೆ ಮತಗಳ ವಿಭಜನೆ ಆಗೋದಿಲ್ಲ
- ಬಿಜೆಪಿಯನ್ನ ಈ ಬಾರಿ ಸೋಲಿಸದಿದ್ರೆ ಮುಂದಿನ 5 ವರ್ಷ ಸಂಕಷ್ಟ
- ಹೀಗಾಗಿ ಸೀಟು ಹಂಚಿಕೆ ಬಗ್ಗೆಯೂ ಇದೇ ಸಭೆಯಲ್ಲಿ ನಿರ್ಧಾರ
- ಒಕ್ಕೂಟಕ್ಕೆ ನಾಯಕನ್ಯಾರು ಎಂಬುದಕ್ಕೂ ಉತ್ತರ ಸಿಗುವ ಸಾಧ್ಯತೆ
ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ ಮೈತ್ರಿಕೂಟದಲ್ಲಿ ಹಲವು ಪಕ್ಷಗಳು ಕೆಲ ರಾಜ್ಯಗಳಲ್ಲಿ ಸಾಂಪ್ರದಾಯಿಕ ವಿರೋಧಿಗಳು. ಇದು ಸಾಲದೆಂಬಂತೆ ಈ ಬಾರಿ ವಿಪಕ್ಷಗಳ ಒಕ್ಕೂಟಕ್ಕೆ ಯಾರ ನೇತೃತ್ವ ಅನ್ನೋದೆ ಯಕ್ಷ ಪ್ರಶ್ನೆ. ಕಾರಣ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ದೀದಿ, ನಿತಿಶ್ ಕುಮಾರ್ ಮಧ್ಯೆಯೇ ಪೈಪೋಟಿ ಇದೆ. ಈ ಎಲ್ಲ ಗೊಂದಲಗಳು ಇಂದಿನ ಸಭೆಯಲ್ಲಿ ಬಗೆಹರಿಯುತ್ತಾ ಅನ್ನೋದೆ ಸದ್ಯದ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ