/newsfirstlive-kannada/media/post_attachments/wp-content/uploads/2024/11/FENGAL_1.jpg)
ಬಂಗಾಳ ಕೊಲ್ಲಿಯಲ್ಲಿ ಫೆಂಗಲ್ ಆರ್ಭಟ ಜೋರಾಗಿದೆ. ಸೈಕ್ಲೋನ್ ಅಬ್ಬರಕ್ಕೆ ರಾವಣನ ನಾಡು ಶ್ರೀಲಂಕಾ ತತ್ತರಿಸಿದ್ದು, ಭಾರೀ ಮಳೆ, ಪ್ರವಾಹಕ್ಕೆ ಜನ ಬಳಲಿ ಬೆಂಡಾಗಿದ್ದಾರೆ. ಈಗ ಇದೇ ಚಂಡಮಾರುತ ಭಾರತದ ಕಡೆ ನುಗ್ಗುತ್ತಿದ್ದು, ಪ್ರವೇಶಕ್ಕೂ ಮುನ್ನವೇ ವಿನಾಶ ರೂಪ ತಳೆದಿದೆ. ತಮಿಳುನಾಡು, ಪುದುಚೇರಿಯಲ್ಲಿ ಮಳೆ ಶುರುವಾಗಿದ್ದು, ಜನರು ಆತಂಕದಲ್ಲಿದ್ದಾರೆ.
ರಣ ವೇಗ ಪಡೆದುಕೊಂಡ ಫೆಂಗಲ್ ಚಂಡಮಾರುತ
ಫೆಂಗಲ್ ಈ ಶಬ್ಧ ಕೇಳ್ತಿದ್ದಂತೆ ತಮಿಳುನಾಡಿನ ಜನರ ಮುಖದ ಚಹರೆ ಬದಲಾಗುತ್ತೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ಫೆಂಗಲ್ ಚಂಡಮಾರುತದ ವೇಗದಲ್ಲಿ ಕ್ಷಣಕ್ಷಣಕ್ಕೂ ತೀವ್ರ ಸ್ವರೂಪ ಪಡೆಕೊಳ್ಳುತ್ತಿದೆ. ಭಯಾನಕ ರೂಪ ತಾಳಿರುವ ಫೆಂಗಲ್ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ಕೊಟ್ಟಿದ್ದು, ಕರಾವಳಿ ಜನರ ಮನದಲ್ಲಿ ಭಯ ಹುಟ್ಟಿಸುವಂತಿದೆ.
/newsfirstlive-kannada/media/post_attachments/wp-content/uploads/2024/11/FENGAL.jpg)
ಪುದುಚೇರಿಯ ಕೆಲ ಭಾಗಕ್ಕೆ ಅತಿಥಿಯಾದ ಫೆಂಗಲ್
ಫೆಂಗಲ್ ವೇಷ ಹಾಕಿರೋ ವರುಣ ದೇವ. ಇವತ್ತು ಪುದುಚೇರಿಯ ಕರಾವಳಿ ಭಾಗಕ್ಕೆ ಅತಿಥಿಯಾಗ್ತಿದ್ದಾನೆ. ಪುದುಚೇರಿ ಬಳಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆ ಇದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 80 ರಿಂದ 100 ಕಿಲೋ ಮೀಟರ್ ಇರಲಿದೆ. ಇತ್ತ ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ ಮತ್ತು ಕಡಲೂರುಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಸಮುದ್ರ ತೀರದ ಜನರು ಮತ್ತು ಮೀನುಗಾರರಿಗೆ ಸಮುದ್ರದ ಕಡೆ ತೆರಳದಂತೆ ಸೂಚನೆ ನೀಡಲಾಗಿದೆ.
ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಪುದುಚೇರಿ ಹಾಗೂ ಚೆನ್ನೈನ ಸಮುದ್ರ ತೀರಕ್ಕೆ ಇವತ್ತು ಚಂಡಮಾರುತ ಎಫೆಕ್ಟ್​ ತೀವ್ರಗೊಳ್ಳಲಿದೆ. ಇದರಿಂದ ಕರಾವಳಿ ಭಾಗದಲ್ಲಿ ಮಧ್ಯಾಹ್ನದ ಹೊತ್ತಿಗೆಗಾಲೇ ಮಳೆ, ಮೈಕೊರೆವ ಚಳಿಯಲ್ಲಿ ಜನ ನಲುಗಬೇಕಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಹೈಅಲರ್ಟ್​ ಘೋಷಣೆ ಆಗಿದ್ದು, ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಚೆನ್ನೈಗೆ ಸಂಪರ್ಕ ಕಲ್ಪಿಸುವ 13 ವಿಮಾನಗಳ ಹಾರಾಟ ರದ್ದು
ಫೆಂಗಲ್ ನೆರಳು ವಿಮಾನ ಹಾರಾಟದ ಮೇಲೂ ಬಿದ್ದಿದೆ. ಮಂಗಳೂರು, ತಿರುಚ್ಚಿ, ಕೊಯಮತ್ತೂರು, ಭುವನೇಶ್ವರ್, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುವ 13 ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ನ್ಯೂಸ್ಫಸ್ಟ್ ಸಾರಥ್ಯದಲ್ಲಿ ವಿನೂತನ ಆರೋಗ್ಯ ಹಬ್ಬ.. ಇಂದು, ನಾಳೆ ಕುಟುಂಬ ಸಮೇತರಾಗಿ ಬನ್ನಿ
/newsfirstlive-kannada/media/post_attachments/wp-content/uploads/2024/11/FENGAL-1-1.jpg)
ಆಂಧ್ರ, ಒಡಿಶಾ, ಕರ್ನಾಟಕದ ವಿವಿಧೆಡೆ ಮಳೆಯ ಮುನ್ಸೂಚನೆ
ಚಂಡಮಾರುತದ ಪ್ರಭಾವಕ್ಕೆ ಮುಂದಿನ ನಾಲ್ಕೈದು ದಿನ ತಮಿಳುನಾಡು, ಆಂಧ್ರ, ಒಡಿಶಾ, ಕರ್ನಾಟಕದ ವಿವಿಧೆಡೆ ಮಳೆ ಆಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕರಾವಳಿ ರಾಜ್ಯದ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದ್ದು, ಜನ ಜೀವನ ಅಸ್ತವ್ಯಸ್ತವಾಗಲಿದೆ ಎಂಬ ಭಯ ಸ್ಥಳೀಯರನ್ನ ಕಾಡುತ್ತಿದೆ.
ಮೊನ್ನೆ ಮೊನ್ನೆಯಷ್ಟೇ ಮಳೆ ಅಬ್ಬರದಿಂದ ನಲುಗಿ ಹೋಗಿದ್ದ ಚೆನ್ನೈ ಜನತೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಮುಂಜಾಗ್ರತ ಕ್ರಮವಾಗಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us