/newsfirstlive-kannada/media/media_files/2026/02/19/bandipura-safari-reopen-2026-02-19-12-48-24.jpg)
ಬಂಡೀಪುರ & ನಾಗರಹೊಳೆಯಲ್ಲಿ ಮತ್ತೆ ಸಫಾರಿಗೆ ಇಂದಿನಿಂದ ಅನುಮತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬಂಡೀಪುರ, ನಾಗರಹೊಳೆ ಭಾಗದಲ್ಲಿ 50% ವಾಹನಗಳಿಗೆ ಮಾತ್ರ ಅನುಮತಿ ನೀಡಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ. ರಾತ್ರಿ 8 ಗಂಟೆಯವರೆಗೆ ಸಫಾರಿ ನಡೆಯುತ್ತಿತ್ತು. ಅದನ್ನ ಈಗ ಐದು ಗಂಟೆಗೆ ಇಳಿಸಿದ್ದೇವೆ ಎಂದು ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಪ್ರತಿ ಐದು ಕಿಲೋಮೀಟರ್ ಗೆ ಒಂದೊಂದು ಕ್ಯಾಂಪ್ ಮಾಡಲು ಅರಣ್ಯ ಇಲಾಖೆ ಸೂಚಿಸಿದೆ. ನೂರು ಜನ ಹೆಚ್ಚುವರಿ ಸಿಬ್ಬಂದಿಯನ್ನು ಅರಣ್ಯ ಅಂಚಿನ ಗ್ರಾಮಗಳಲ್ಲಿ ನೇಮಕ ಮಾಡಲಾಗುವುದು. ಬಂಡೀಪುರದಲ್ಲಿ ಪ್ರತಿ ವರ್ಷ 20 ಕೋಟಿ ಹಣ ಬರುತ್ತಿತ್ತು. ಅದನ್ನ ಪ್ರಾಣಿಗಳಿಗೆ ಹುಲ್ಲುಗಾವಲು, ಸಿಬ್ಬಂದಿಯವರ ಶಿಕ್ಷಣ, ಆರೋಗ್ಯಕ್ಕೆ ಮೀಸಲಿಡಲು ಸೂಚಿಸಿದ್ದೆ. ಈಗಲೂ ಅದನ್ನೇ ಮಾಡ್ತಿದ್ದೇವೆ. ರೆಸಾರ್ಟ್, ಹೋಂ ಸ್ಟೇಗಳು ಹೇಗೆ ನಡೆಯುತ್ತಿವೆ ಅಂತಾ ಪುನರ್ ಪರಿಶೀಲನೆ ಮಾಡಬೇಕು. ಕಂದಾಯ ಇಲಾಖೆ , ಜಿಲ್ಲಾಡಳಿತ ಪುನರ್ ಪರಿಶೀಲನೆ ನಡೆಸಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/03/Eshwar-Khandre.jpg)
ಬಂಡಿಪುರ, ನಾಗರಹೊಳೆ ಭಾಗದಲ್ಲಿ ಮಾನವ, ವನ್ಯ ಪ್ರಾಣಿ ಸಂಘರ್ಷ ಇತ್ತು. ಹೀಗಾಗಿ ಆ ಭಾಗದಲ್ಲಿ ಸಫಾರಿ ನಿಲ್ಲಿಸಿದ್ದೇವೆ. ನಮ್ಮ ಆದ್ಯತೆ ಮಾನವನ ಜೀವ, ಯಾವುದೇ ಜೀವಹಾನಿ ಆಗಬಾರದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಮಾನವ ಪ್ರಾಣಿ ಸಂಘರ್ಷ ತಡೆಯುವ ಕೆಲಸ ಮಾಡಿದ್ದೇನೆ. ಹೀಗಿದ್ದರೂ ಪ್ರತಿ ವರ್ಷ 45- 50 ಜನ ಬಲಿಯಾಗುತ್ತಿದ್ದಾರೆ. ಹಾಗಾಗಿ ತಾಂತ್ರಿಕ ಸಮಿತಿಯನ್ನ ರಚಿಸಲು ಮುಂದಾಗಿದ್ದೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯರ ಗಮನಕ್ಕೆ ತಂದಿದ್ದೇವೆ. ಹಿರಿಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ಮಧ್ಯಂತರ ವರದಿ ಕೊಟ್ಟಿದೆ. ಸಫಾರಿ ಸ್ಥಗಿತಗೊಳಿಸಿದ ಬಳಿಕ ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಸಫಾರಿ ನಿಲ್ಲಿಸಿರುವುದರಿಂದ ಜನರ ಜೀವನ ಮತ್ತು ಜೀವನೋಪಾಯಕ್ಕೆ ಕಷ್ಟವಾಗಿದೆ. ಹೀಗಾಗಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಹಂತ ಹಂತವಾಗಿ ಸಫಾರಿ ಪುನರಾರಂಭಿಸಲು ತೀರ್ಮಾನಿಸಿದ್ದೇವೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಸಫಾರಿಯಿಂದ ವನ್ಯ ಪ್ರಾಣಿಗಳು ನಾಡಿಗೆ ಬರುತ್ತಿವೆ ಅನ್ನೋದಕ್ಕೆ ವೈಜ್ಞಾನಿಕ ಪುರಾವೆ ಇಲ್ಲ. ಆದರೆ ಅಂತಿಮ ವರದಿ ಬರಬೇಕಿದೆ. ಅರಣ್ಯ ಬಳಿಯ ಗ್ರಾಮಗಳ ಬಳಿ ಗಸ್ತು ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ. ಫೈರ್ ಕ್ಯಾಂಪ್ ಬಗ್ಗೆ ದೂರುಗಳಿವೆ . ಬಂಡೀಪುರದಲ್ಲಿ ಐದು, ನಾಗರಹೊಳೆಯಲ್ಲಿ ನಾಲ್ಕು ಡ್ರೋನ್ ಕ್ಯಾಮೆರಾ ಬಳಕೆ ಮಾಡ್ತಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2026/02/19/bandipura-safari-2026-02-19-12-49-15.jpg)
ವಿರೋಧದ ನಡುವೆಯೂ ಇಂದಿನಿಂದಲೇ ಸಫಾರಿ ಆರಂಭಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಇದಕ್ಕೆ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ರೊಚ್ಚಿಗೆದ್ದ ರೈತಸಂಘದಿಂದ ಪ್ರತಿಭಟನೆಗಳಿಗೆ ಕರೆ ನೀಡಲಾಗಿದೆ. ಒಂದೆಡೆ ಮೈಸೂರಿನ ಅರಣ್ಯಭವನಕ್ಕೆ ಮುತ್ತಿಗೆ ಹಾಕಲು ರೈತರು ತಯಾರಿ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಸಫಾರಿ ಪಾಯಿಂಟ್ ಬಳಿ ಹೋರಾಟಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿಯೂ ಹೋರಾಟಕ್ಕೆ ರೈತರ ತಂಡ ಸನ್ನದ್ಧವಾಗಿದೆ. ಕಾಡಿನ ಬದಲು ಕಾಸು ಅನ್ನು ಕಾಪಾಡಿದ ಕಾಡುಮಂತ್ರಿ ಅಂತ ರೈತರು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಆರೋಪಿಸುತ್ತಿದ್ದಾರೆ.
ಇವತ್ತು ಸಫಾರಿ ಪಾಯಿಂಟ್ ಬಳಿ ಮುತ್ತಿಗೆಗೆ ರೈತ ನಾಯಕರು ಮುಂದಾಗಿದ್ದಾರೆ. ರೈತರ ಹೆಣ್ಣು ಮಕ್ಕಳು ಮುಂಡೇರು ಆಗಬೇಕಾ? ಎಷ್ಟು ಜನ ರೈತರ ಪ್ರಾಣ ಬೇಕು ನಿಮಗೆ? ಅಕ್ರಮ ರೆಸಾರ್ಟ್ಸ್ ಮಾಲೀಕರ ಹಣ ತಿಂದು ರೈತರ ಬಲಿ ಕೊಡ್ತೀರಾ? ರೆಸಾರ್ಟ್ಸ್ ಮಾಲೀಕರ ಕಾಸು ತಿಂದು ರೈತರ ಜೊತೆ ಆಟ ಆಡ್ತೀರಾ?ಸಫಾರಿ ಆರಂಭಿಸಿದರೆ ಬೀದಿಗಿಳಿದು ಹೋರಾಟ ಗ್ಯಾರೆಂಟಿ ಎಂದು ರೈತರು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಫಾರಿಯಿಂದ ಹಲವು ರೈತರ ಪ್ರಾಣ ಹಾನಿ ಆಗಿದೆ. ಸಫಾರಿ ನಿಂತ ಮೇಲೆ ಹುಲಿ ದಾಳಿ ನಿಂತಿದೆ ಎಂದು
ಮೈಸೂರಿನಲ್ಲಿ ರೈತ ನಾಯಕ ಹೊನ್ನೂರು ಪ್ರಕಾಶ್, ಮಂಜು ಕಿರಣ್ ಹೇಳಿದ್ದಾರೆ. ಜೊತೆಗೆ ರೈತರಿಂದ ಹೋರಾಟಕ್ಕೆ ಕರೆ ನೀಡಿದ್ದಾರೆ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿಯೂ ಹೋರಾಟಕ್ಕೆ ತೀರ್ಮಾನಿಸಲಾಗಿದೆ. ಭಾಗ್ಯರಾಜ್ ತಂಡದಿಂದ ಅರಣ್ಯ ಭವನಕ್ಕೆ ಮುತ್ತಿಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us