ವಿಪಕ್ಷ ಒಕ್ಕೂಟವನ್ನ ಸನಾತನ ಸಂಕಟಕ್ಕೆ ಕೆಡವಿದ ಡಿಎಂಕೆ ನಾಯಕ
ಉದಯನಿಧಿ ಹೇಳಿಕೆ ಬಿಸಿ ತುಪ್ಪವಾಗಿ ಪರಿಗಣಿಸಿದ ‘ಇಂಡಿಯಾ’ ಕೂಟ
ಉದಯನಿಧಿ ಸ್ಟಾಲಿನ್ ಕೂಡಲೇ ದೇಶದ ಕ್ಷಮೆಯಾಚಿಸಲು ಆಗ್ರಹ
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಸಚಿವ ಉದಯನಿಧಿ ನೀಡಿದ ಸನಾತನ ನಿರ್ಮೂಲನೆ ಹೇಳಿಕೆ ಇಂಡಿಯಾ ಮೈತ್ರಿಕೂಟವನ್ನ ಅಡಕತ್ತರಿಯಲ್ಲಿ ಸಿಲುಕಿಸಿದೆ. ಕಾಂಗ್ರೆಸ್ನಲ್ಲೇ ಈ ಹೇಳಿಕೆ ಭಿನ್ನತೆ ಸೃಷ್ಟಿಸಿದೆ. ಇತ್ತ, ಇತರ ಪಕ್ಷಗಳು ಹೇಳಿಕೆಯನ್ನ ಸಮರ್ಥಿಸಲು ಹಿಂದೇಟು ಹಾಕ್ತಿದ್ದು, ವಿಪಕ್ಷ ಒಕ್ಕೂಟದಲ್ಲಿ ಬಿರುಕಿಗೆ ಕಾರಣವಾಗಿದೆ.
ಕಳೆದ ಮೂರು ದಿನಗಳಿಂದ ದೇಶದಲ್ಲಿ ಸನಾತನ ಕದನ ಏರ್ಪಟ್ಟಿದೆ. ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೊತ್ತಿಸಿದ ವಿವಾದಾತ್ಮಕ ಕಿಡಿ, ರಾಷ್ಟ್ರ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಬಿಜೆಪಿಗೆ ವಿವಾದದ ನಿಧಿಯಾಗಿ ಸಿಕ್ಕು ಧರ್ಮಾಸ್ತ್ರದ ಉದಯಕ್ಕೆ ಅವಕಾಶ ಕಲ್ಪಿಸಿದೆ.
ವಿಪಕ್ಷ ಒಕ್ಕೂಟವನ್ನ ಸನಾತನ ಸಂಕಟಕ್ಕೆ ಕೆಡವಿದ ಡಿಎಂಕೆ
ಉದಯನಿಧಿ ಹೇಳಿಕೆ ಬಿಸಿ ತುಪ್ಪವಾಗಿ ಪರಿಗಣಿಸಿದ ‘ಇಂಡಿಯಾ’
ಉದಯನಿಧಿ ಐಎನ್ಡಿಐಎ ಮೈತ್ರಿಕೂಟಕ್ಕೆ ದುಬಾರಿ ಆಗಿದ್ದಾರೆ. ಸನಾತನ ಬಗ್ಗೆ ಆಡಿದ ಮಾತು ಭಿನ್ನಮತಕ್ಕೆ ನಾಂದಿ ಹಾಡಿದೆ. ವಿಚಿತ್ರ ಅಂದ್ರೆ ಕಾಂಗ್ರೆಸ್ನೊಳಗೆ ಎರಡು ದನಿಗಳು ಕೇಳಿ ಬರ್ತಿದ್ದು, ಪರ-ವಿರೋಧಕ್ಕೆ ನಾಂದಿ ಹಾಡಿದೆ. ಯುಪಿಎ ಕೂಟ ದಶಕದ ಗೆಳೆಯ ಡಿಎಂಕೆ ನಾಯಕ ಆಡಿದ ಮಾತು, ಹೊಸ ಇಂಡಿಯಾ ಕೂಟದಲ್ಲಿ ಭಿನ್ನ ನಿಲುವಿಗೆ ಕಾರಣ ಕೊಟ್ಟಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಪರೋಕ್ಷವಾಗಿ ಅಭಿಪ್ರಾಯ ಸ್ವಾತಂತ್ರ್ಯ ಪ್ರಸ್ತಾಪಿಸಿ ಬೆಂಬಲಿಸಿದ್ರೆ, ಇತರ ಮೈತ್ರಿ ಪಕ್ಷಗಳು ಕಿಡಿಕಾರಿವೆ.
‘ಸರ್ವಧರ್ಮಗಳಿಗೆ ಗೌರವ ಕೊಡುವುದು ಕಾಂಗ್ರೆಸ್ ಮೂಲ ಸಿದ್ಧಾಂತ. ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ ಯಾವುದೇ ರಾಜಕೀಯ ಪಕ್ಷ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ಹೊಂದಿದೆ’
– ಕೆ.ಸಿ. ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಇಷ್ಟಾದ ಮೇಲೆ ತಾವು ಉದಯನಿಧಿ ಹೇಳಿಕೆಯನ್ನ ಒಪ್ಪಲ್ಲ ಅಂತಾ ಮಧ್ಯಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ ಕಮಲ್ನಾಥ್ ಹೇಳಿದ್ದಾರೆ.
‘ಇದು ಅವರ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು. ನಾನು ಉದಯನಿಧಿ ಅವರ ಮಾತುಗಳನ್ನ ಒಪ್ಪುವುದಿಲ್ಲ’
ಬೈಟ್ : ಕಮಲ್ನಾಥ್, ಮಧ್ಯಪ್ರದೇಶ ಮಾಜಿ ಸಿಎಂ
ಟಿಎಂಸಿ ಈ ಹೇಳಿಕೆ ಅತ್ಯಂತ ದುರದೃಷ್ಟಕರ ಅಂತಾ ಹೇಳಿದೆ. ಎಲ್ಲಾ ಧರ್ಮಿಯರಿಗೂ ವೈಯಕ್ತಿಕ ಭಾವನೆಗಳಿರುತ್ತವೆ. ಅವಮಾನಿಸುವ ಮಟ್ಟಿಗೆ ಯಾರು ಎಂದಿಗೂ ಇಳಿಯಬಾರದು ಅಂತ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
‘ಇಂಡಿಯಾ ಒಂದು ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರ. ಇದರ ಜೊತೆಗೆ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಮೂಲ ಸಿದ್ಧಾಂತ ನಮ್ಮದು. ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ. ಒಂದು ವರ್ಗದ ಜನರನ್ನು ನೋಯಿಸುವ ಯಾವುದೇ ವಿಷಯದಲ್ಲಿ ನಾವು ಭಾಗಿಯಾಗಬಾರದು. ಉದಯನಿಧಿ ಇನ್ನೂ ಚಿಕ್ಕವ ಭಾವನೆಗಳು ಗೊತ್ತಿಲ್ಲ’
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ
ವಿಪಕ್ಷಗಳ ಮೈತ್ರಿಕೂಟದ ಸದಸ್ಯ ಪಕ್ಷವಾದ ಶಿವಸೇನೆ ಉದ್ಧವ್ ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಸನಾತನ ಧರ್ಮದ ಪರ ಬ್ಯಾಟ್ ಬೀಸಿದ್ದಾರೆ. ದೆಹಲಿಯಲ್ಲಿ ಉದಯನಿಧಿ ಹೇಳಿಕೆ ಖಂಡಿಸಿ ತಮಿಳುನಾಡು ಭವನದ ಬಳಿ ಬಿಜೆಪಿ ಪ್ರತಿಭಟನೆ ನಡೆಸಿತು. ಉದಯನಿಧಿ ಸ್ಟಾಲಿನ್ ಈ ಕೂಡಲೇ ದೇಶದ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದ್ದಾರೆ. ಇನ್ನು, ಬಿಹಾರದ ಮುಜಫ್ಫರ್ಪುರ ವಕೀಲರೊಬ್ಬರು ಸ್ಥಳೀಯ ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ. ಸಿಎಂ ಸ್ಟಾಲಿನ್ ಮತ್ತು ಪುತ್ರ ಉದಯನಿಧಿ ವಿರುದ್ಧ ಕೇಸ್ ರಿಜಿಸ್ಟರ್ ಮಾಡಿದ್ದಾರೆ.
ವರ್ಷಾಂತ್ಯಕ್ಕೆ ನಡೆಯುವ ಹಿಂದಿ ಹಾರ್ಟ್ಲ್ಯಾಂಡ್ನ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಹಿಂದುತ್ವದ ಗಟ್ಟಿ ನೆಲದಲ್ಲಿನ ಈ ಹೇಳಿಕೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಸನಾತನ ಧರ್ಮ ಸಂಕಟದಲ್ಲಿ ಕಾಂಗ್ರೆಸ್ಗೂ ಆತಂಕ ಕಾಡ್ತಿದೆ. ಈ ಕಾರಣಕ್ಕೆ ಎಎಪಿ, ಜೆಡಿಯು, ಆರ್ಜೆಡಿ ಅಂತರ ಕಾಯ್ದುಕೊಂಡಿವೆ. ಅಲ್ಲದೆ, ಲೋಕ ಕದನ ಮುನ್ನವೇ ಇಂಡಿಯಾ ಕೂಟದಲ್ಲಿ ಈ ಹೇಳಿಕೆ ವಿಭಜನೆಗೆ ದಾರಿ ಮಾಡಿಕೊಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ