/newsfirstlive-kannada/media/post_attachments/wp-content/uploads/2025/04/Kashmira-Kannadigaru-5.jpg)
ನವದೆಹಲಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಭೀಕರ ದಾಳಿಯಲ್ಲಿ ಭಾರತದ ಹಲವು ರಾಜ್ಯದ ಪ್ರವಾಸಿಗರು ಬಲಿಯಾಗಿದ್ದಾರೆ. ಉಗ್ರರ ನರಮೇಧದಲ್ಲಿ ಕರ್ನಾಟಕದಿಂದ ತೆರಳಿದ್ದ ಮೂವರು ಪ್ರಾಣ ಕಳೆದುಕೊಂಡಿದ್ದು, ನೂರಾರು ಕನ್ನಡಿಗರು ಅಕ್ಷರಶಃ ಕಂಗಾಲಾಗಿದ್ದರು.
ಪಹಲ್ಗಾಮ್ ಸೇರಿದಂತೆ ಕಾಶ್ಮೀರದ ಹಲವು ತಾಣಗಳಿಗೆ ಪ್ರವಾಸಕ್ಕೆ ಹೋಗಿದ್ದ ಕನ್ನಡಿಗರು ಸದ್ಯ ಸುರಕ್ಷಿತವಾಗಿದ್ದಾರೆ. ಕಾಶ್ಮೀರಕ್ಕೆ ತೆರಳಿದ್ದ ಕನ್ನಡಿಗರಿಗೆ ರಕ್ಷಣೆ ನೀಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ತಂಡವನ್ನ ಕಳುಹಿಸಿದ್ದರು.
ಕಾಶ್ಮೀರಕ್ಕೆ ತೆರಳಿದ್ದ ಸಚಿವ ಸಂತೋಷ್ ಲಾಡ್ ಅವರ ತಂಡ ಪ್ರತಿಯೊಬ್ಬ ಕನ್ನಡಿಗರನ್ನು ಹುಡುಕಿ ಸಂಪರ್ಕಿಸೋ ಪ್ರಯತ್ನ ಮಾಡಿದೆ. ನಿನ್ನೆಯಿಂದ ವಿವಿಧ ಹೋಟೆಲ್ಗಳಲ್ಲಿ ನೆಲೆಸಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುತ್ತಿದೆ.
ಕನ್ನಡಿಗರ ರಕ್ಷಣೆಯ ಭಾಗವಾಗಿ ಮೊದಲ ವಿಮಾನ ಈಗಾಗಲೇ ಶ್ರೀನಗರದಿಂದ ಬೆಂಗಳೂರು KIA ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಸುರಕ್ಷಿತವಾಗಿ ಬೆಂಗಳೂರು ಏರ್ಪೋರ್ಟ್ ತಲುಪಿದ ಕನ್ನಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದರಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ನರಮೇಧವನ್ನು ಕಣ್ಣಾರೆ ಕಂಡವರು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ. ನಮಗೆ ಬಹಳಷ್ಟು ಜೀವ ಭಯ ಇತ್ತು. ಆದರೂ ಬದುಕಿ ಬಂದಿದ್ದೇವೆ ಅನ್ನೋ ತಮ್ಮ ಅನುಭವನ್ನು ನ್ಯೂಸ್ ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ.
ಉಗ್ರರ ದಾಳಿ ನಡೆದ ಪಹಲ್ಗಾಮ್ನಲ್ಲೇ ಕನ್ನಡಿಗರು ಪ್ರವಾಸ ಕೈಗೊಂಡಿದ್ದರು. ಆದರೆ ಅದೃಷ್ಟವಶಾತ್ ಉಗ್ರರ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡಿದ್ದಾರೆ. ಇದರ ಜೊತೆಗೆ ಕಾಶ್ಮೀರದ ವಿವಿಧೆಡೆ ಸಮಸ್ಯೆಗೆ ಸಿಲುಕಿದ್ದವರು ಸಚಿವ ಸಂತೋಷ್ ಲಾಡ್ ಅವರ ನೆರವಿನಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ರಾಜ್ಯ ಸರ್ಕಾರ ಇಂದು ಶ್ರೀನಗರದಲ್ಲಿ ಸಿಲುಕಿದ್ದ ಕೆಲವು ಕನ್ನಡಿಗರನ್ನ ವಿಶೇಷ ವಿಮಾನದ ಮೂಲಕ ರಾಜ್ಯಕ್ಕೆ ವಾಪಸ್ ಕರೆ ತಂದಿದೆ. 6E9198 ಇಂಡಿಗೋ ವಿಮಾನದಲ್ಲಿ 178 ಕನ್ನಡಿಗರು ರಾಜ್ಯಕ್ಕೆ ಮರಳಿದ್ದಾರೆ.
ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಆಗಮಿಸಿದ ಕನ್ನಡಿಗರು ವಿಮಾನ ನಿಲ್ದಾಣದಲ್ಲೇ ಸಂತೋಷ ವ್ಯಕ್ತಪಡಿಸಿದ್ದು, ನಾವು ಸುರಕ್ಷಿತವಾಗಿ ವಾಪಸ್ ಬರಲು ಸಹಕರಿಸಿದ ಸಚಿವ ಸಂತೋಷ್ ಲಾಡ್ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ.. ದೆಹಲಿ ಪಾಕಿಸ್ತಾನ ಹೈ ಕಮಿಷನ್ ಕಚೇರಿಗೆ ಕೇಕ್; ವಿಡಿಯೋ ಇಲ್ಲಿದೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ