/newsfirstlive-kannada/media/post_attachments/wp-content/uploads/2024/08/Tajmahal-Agra.jpg)
ಭಾರತ ಸಾವಿರಾರು ರಾಜರು ಆಳಿ ಹೋದ ಇತಿಹಾಸವಿರುವ ದೇಶ. ಅದೇ ರೀತಿ ಅನೇಕ ಸಾಮ್ರಾಟ ಪ್ರೇಮ ಕತೆಗೆ ಮೂಕ ಸಾಕ್ಷಿಯಾಗಿ ನಿಂತ ದೇಶ. ಈ ದೇಶದಲ್ಲಿ ಅನೇಕ ರಾಜರು ತಮ್ಮ ಪತ್ನಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದಾರೆ. ಅವರಿಗಾಗಿ ಸ್ಮಾರಕವನ್ನೇ ಕಟ್ಟಿದ್ದಾರೆ. ಅಂತಹ ಸ್ಮಾರಕಗಳಲ್ಲಿ ಜಗತ್ ವಿಖ್ಯಾತಿ ಪಡೆದಿದ್ದು ಆಗ್ರಾದಲ್ಲಿರುವ ತಾಜ್ಮಹಲ್. ಶಾಜಹಾನ್ ತನ್ನ ಪ್ರೀತಿಯ ಪತ್ನಿ ಮಮ್ತಾಜ್ಗಾಗಿ ಕಟ್ಟಿದ ಸ್ಮಾರಕವದು. ಇಂದು ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ತಾಜ್ ಮಹಲ್ ಹೊರತುಪಡಿಸಿಯೂ ಪ್ರೇಯಸಿಗಾಗಿ, ಪತ್ನಿಗಾಗಿ ಮಹಾರಾಣಿಯರ ನೆನಪಿಗಾಗಿ ಕಟ್ಟಿಸಿದ ಸ್ಮಾರಕಗಳು ಇವೆ. ಆದ್ರೆ ಕಾಲಗರ್ಭದಲ್ಲಿ ಅವು ಮುನ್ನೆಲೆಗೆ ಬರದಂತೆ ಹುದುಗಿ ಹೋಗಿವೆ. ಅಂತಹ ಸ್ಮಾರಕಗಳ ಬಗ್ಗೆ ನಾವು ನಿಮಗೆ ಇಲ್ಲಿ ವಿವರಣೆ ನೀಡಲಿದ್ದೇವೆ
ಇದನ್ನೂ ಓದಿ:30 ಕೋಟಿ ಗಳಿಸಿದ ಬೋಟ್ಮ್ಯಾನ್ ಕಥೆಗೆ ಹೊಸ ಟ್ವಿಸ್ಟ್; ಸಾಧಕನ ಮೇಲೆ 20 ಕ್ರಿಮಿನಲ್ ಕೇಸ್!
1. ಜೋಧಾಳ ನೆನಪಿಗಾಗಿ ಕಟ್ಟಿಸಿದ ಸ್ಮಾರಕ
ಅಕ್ಬರ್ ಪತ್ನಿಯರಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಮಡದಿಯೂ ಕೂಡ ಇದ್ದಳು. ಅವಳ ಹೆಸರು ಜೋಧಾ. ಜೋಧಾಳ ಮೇಲೆ ಅಕ್ಬರ್ಗೆ ವಿಶೇಷ ಪ್ರೀತಿ. ಅವಳೆಂದರೆ ಎಲ್ಲಿಲ್ಲದ ಸೆಳೆತ. ಅವಳಿಗಾಗಿ ಎಲ್ಲವನ್ನೂ ಧಾರೆಯೆರಬಲ್ಲ ಮಟ್ಟಕ್ಕೆ ಅಕ್ಬರ್ ಜೋಧಾಳನ್ನು ಪ್ರೀತಿಸುತ್ತಿದ್ದ. ಜೋಧಾಳ ನಿಧನದ ನಂತರ ಅಕ್ಬರ್ ಅವಳ ನೆನಪಿಗಾಗಿ ಇದೇ ಆಗ್ರಾದಲ್ಲಿ ಜೋಧಾಬಾಯಿ ಸಮಾಧಿಯನ್ನು ನಿರ್ಮಿಸಿದ. ಇದನ್ನು ಜೋಧಾಬಾಯಿ ಗೃಹ ಎಂದು ಕೂಡ ಕರೆಯಲಾಗುತ್ತದೆ.
ಇದನ್ನೂ ಓದಿ:2 ದೇಶ, 3 ರಾಜ್ಯಗಳೊಂದಿಗೆ ಅಂಟಿಕೊಂಡ ಭಾರತದ ಏಕೈಕ ಜಿಲ್ಲೆ ಇದು.. ಯಾವುದು ಗೊತ್ತಾ?
2. ಪದ್ಮಾವತಿ ಸಮಾಧಿ
ಪದ್ಮಾವತಿ, ಯಾರಿಗೆ ತಾನೆ ಗೊತ್ತಿಲ್ಲ. ರಾಜಸ್ಥಾನದ ಇಡೀ ಮಹಿಳಾ ಕುಲ ಇಂದಿಗೂ ಪೂಜಿಸುವ ದೇವತೆಯಾಗಿ ಹೋದವಳು. ಅಲ್ಲಾವುದ್ಧಿನ್ ಖಿಲ್ಜಿ ಪದ್ಮಾವತಿಯ ಸೌಂದರ್ಯದ ಗುಣಗಾನವನ್ನೇ ಕೇಳಿ ಆಕೆಯನ್ನು ನೋಡಬೇಕು ಎಂದು ಹಪಹಪಪಿಸಿ ಕೊನೆಗೂ ಪದ್ಮಾವತಿಯ ಬೂದಿಯೂ ಕೂಡ ಆತನಿಗೆ ಧಕ್ಕಲಿಲ್ಲ. ಅದಕ್ಕಾಗಿ ಆತ ಮಾಡಿದ ಪ್ರಯತ್ನಗಳು ಒಂದೆರಡಲ್ಲ. ಈ ಖಲ್ಜಿಯ ಸೈತಾನ್ಗಳ ಕೈಗೆ ಸಿಗದೇ ತಮ್ಮನ್ನು ತಾವು ಅಗ್ನಿಗೆ ಅರ್ಪಿಸಿಕೊಳ್ಳುವುದು ಒಳ್ಳೆಯದು ಎಂದು ಪದ್ಮಾವತಿಯ ಜೊತೆ ಒಟ್ಟು 16 ಸಾವಿರ ರಾಜಸ್ಥಾನಿ ಮಹಿಳೆಯರು ಅಗ್ನಿಪ್ರವೇಶ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ಹೀಗೆ ಇಡೀ ಸ್ತ್ರೀ ಕುಲಕ್ಕೆ ಪೂಜಿತಳಾದ ಪದ್ಮಾವತಿಯ ಸಮಾಧಿ ರಾಜಸ್ಥಾನದ ಚಿತ್ತೋಡಗಢನಲ್ಲಿ ಕಾಣಲು ಸಿಗುತ್ತದೆ. ಯಾವ ಅಗ್ನಿಕುಂಡದಲ್ಲಿ ನಾನು ನನ್ನ ಪತಿಗೆ ಮಾತ್ರ ಸಮರ್ಪಿತ ಎಂದು ಪದ್ಮಾವತಿ ನಡೆದು ಹೋದಳೋ ಅದೇ ಸ್ಥಳವನ್ನು ಇಂದು ಪದ್ಮಾವತಿ ಸಮಾಧಿ ಅಥವಾ ಸ್ಮಾರಕವಾಗಿ ಗುರುತಿಸಲಾಗಿದೆ.
3. ರಾಣಿ ಲಕ್ಷ್ಮೀಬಾಯಿ ಸ್ಮಾರಕ
ಗ್ವಾಲಿಯರ್ನ ಫುಲ್ಭಾಗ್ನಲ್ಲಿ ವೀರ ರಾಣಿ ಲಕ್ಷ್ಮೀಬಾಯಿ ಸ್ಮಾರಕವೂ ಕೂಡ ಇದೆ. ಈ ಒಂದು ಸಮಾಧಿಯನ್ನು ಝಾನ್ಸಿ ರಾಣಿ ಲಕ್ಷ್ಮೀಬಾಯಿ ನೆನಪಿಗಾಗಿ ನಿರ್ಮಿಸಲಾಗಿದೆ. ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿ ಆತ್ಮಸಮರ್ಪಣೆ ಮಾಡಿದ ಲಕ್ಷ್ಮೀಬಾಯಿ ರಾಣಿಯ ಸಮಾಧಿ ಗ್ವಾಲುಯರ್ನ ಫುಲ್ಭಾಗ್ನಲ್ಲಿದೆ.
4. ಬಿಬಿ ಕಾ ಮಕಬರ್
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ತಾಜ್ಮಹಲ್ನ್ನೇ ಹೋಲುವ ಹಾಗೂ ಮಹಾರಾಷ್ಟ್ರದ ತಾಜ್ ಮಹಲ್ ಎಂದು ಕರೆಸಿಕೊಳ್ಳುವ ಬಿಬಿ ಕಾ ಮಕಬರ್ ಎಂಬ ಸಮಾಧಿ ಇದೆ. ಇದನ್ನು ಶಾಜಹಾನ್ನ ಮೊಮ್ಮಗ ಅಜಮ್ ಶಾ, ತನ್ನ ಪತ್ನಿ ದಿಲ್ರಾಸ್ ಬಾನೀ ಬೇಗಂ ನೆನಪಿನಲ್ಲಿ ಕಟ್ಟಿಸಿದ್ದಾನೆ.
5. ರಜಿಯಾ ಸುಲ್ತಾನ್ ಸ್ಮಾರಕ
ದೆಹಲಿಯ ಗದ್ದುಗೆಯನ್ನೇರಿದ ಮೊದಲ ಮಹಿಳಾ ಮಹಾರಾಣಿ ರಜಿಯಾ ಸುಲ್ತಾನಳ ಸಮಾಧಿ ಹರಿಯಾಣದ ಕೌತಲ್ ಜಿಲ್ಲೆಯಲ್ಲಿದೆ. ರಜಿಯಾ ಸುಲ್ತಾನಗಳ ನೆನಪಿಗಾಗಿಯೇ ಈ ಒಂದು ಸಮಾಧಿಯನ್ನು ನಿರ್ಮಿಸಲಾಗಿದೆ.
6. ಮಹಾರಾಷ್ಟ್ರದಲ್ಲಿ ಮಸ್ತಾನಿಯ ಸ್ಮಾರಕ
ಬಾಜಿರಾವ್ ಪೇಶ್ವೆಯ ಪ್ರೇಯಸಿ ಮಸ್ತಾನಿ ಬಗ್ಗೆ ಎಲ್ಲರಿಗೂ ಕೂಡ ತಿಳಿದೆ ಇದೆ.ಪೇಶ್ವೆ ಮಹಾರಾಜನ ಮುದ್ದಿನ ಪ್ರೇಯಸಿ ಹೆಸರಿನಲ್ಲೂ ಮಹಾರಾಷ್ಟ್ರದಲ್ಲೊಂದು ಸ್ಮಾರಕವಿದೆ. ಮಹಾರಾಷ್ಟ್ರದ ಪಾಬಲ್ನಲ್ಲಿ ಮಸ್ತಾನಿಯ ಸ್ಮಾರಕವಿದೆ. ಅವಳು ಪೇಶ್ವೆಗಳಲ್ಲಿಯೇ ಅತ್ಯಂತ ಶೂರ ವೀರ ರಾಜನಾಗಿದ್ದ ಬಾಜಿರಾವ್ ಪೇಶ್ವೆಯ ಪ್ರೇಯಸಿಯಾಗಿದ್ದಳು ಬಳಿಕ ಪತ್ನಿಯೂ ಕೂಡ ಆದಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ