/newsfirstlive-kannada/media/post_attachments/wp-content/uploads/2024/12/soldier-army.jpg)
ದೇಶಕ್ಕಾಗಿ ಬಲಿದಾನ ಮಾಡೋದು ನಿಜಕ್ಕೂ ಸಾರ್ಥಕ. ಜಮ್ಮು ಕಾಶ್ಮೀರದ ದುರಂತದಲ್ಲಿ ಹುತಾತ್ಮರಾಗಿದ್ದ ರಾಜ್ಯದ ಮೂವರು ಯೋಧರ ಅಂತ್ಯಕ್ರಿಯೆ ನಡೀತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ರೆ ವೀರಯೋಧರಿಗೆ ಜನ ಕಂಬನಿ ಮಿಡಿದರು. ಭಾರತ್ ಮಾತಾ ಕೀ ಜೈ, ಅಮರ್ ರಹೇ ಘೋಷಣೆ ಮೊಳಗಿದೆ.
ಒಂದು ಕಡೆ ದೇಶಕ್ಕಾಗಿ ಬಲಿದಾನಗೈದ ಹೆಮ್ಮೆ. ಮತ್ತೊಂದೆಡೆ ಮನೆ ಮಕ್ಕಳನ್ನು ಕಳೆದುಕೊಂಡು ಆಘಾತ. ವೀರಯೋಧರು ಅಮರ್ ರಹೇ. ಇದು ನಿಜಕ್ಕೂ ಹೃದಯ ಭಾರವಾದ ಸನ್ನಿವೇಶ. ಮಡುಗಟ್ಟಿದ ಶೋಕ. ಮುಗಿಲು ಮುಟ್ಟಿದ ಆಕ್ರಂದನ.
ಬೀಜಾಡಿಯ ಯೋಧ ಅನೂಪ್ ಪೂಜಾರಿಗೆ ಕಣ್ಣೀರ ವಿದಾಯ
ಹುಟ್ಟೂರಲ್ಲಿ ಅಂತ್ಯಕ್ರಿಯೆ.. ಅನೂಪ್ ಪೂಜಾರಿ ಅಮರ್ ರಹೇ
ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಕಂದಕಕ್ಕೆ ಸೇನಾ ವಾಹನ ಉರುಳಿ ಹುತಾತ್ಮರಾದ ಐವರು ಯೋಧರಲ್ಲಿ ಕುಂದಾಪುರದ ಬೀಜಾಡಿಯ ಯೋಧ ಅನೂಪ್ ಪೂಜಾರಿ ಒಬ್ಬರು. ವೀರಯೋಧ ಅನೂಪ್ ಪೂಜಾರಿ ಪಾರ್ಥಿವ ಶರೀರ ಇಂದು ಹುಟ್ಟೂರಿಗೆ ತಲುಪಿತ್ತು. ಮನೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಪತಿಯ ಅಕಾಲಿಕ ಸಾವಿನಿಂದ ಪತ್ನಿ ಮಂಜುಶ್ರೀಗೆ ಬರಸಿಡಿಲು ಬಡಿದಂತಾಗಿದೆ. ಗ್ರಾಮದ ನೂರಾರು ಮಂದಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಆಘಾತಕಾರಿ ಸುದ್ದಿ; ಹುತಾತ್ಮರಾದ ಐವರಲ್ಲಿ ಮೂವರು ಕನ್ನಡಿಗರು
ಸಂಜೆ ವೇಳೆಗೆ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಅಂತ್ಯಕ್ರಿಯೆ ವೇಳೆ ಭೋಲೋ ಭಾರತ್ ಮಾತಾ ಕೀ ಜೈ ವೀರಯೋಧ ಅನೂಪ್ ಪೂಜಾರಿಗೆ ಜೈಕಾರ ಮೊಳಗಿದವು. ಅಂತ್ಯಕ್ರಿಯೆಯಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.
ಬೆಳಗಾವಿಯಲ್ಲಿ ಯೋಧ ದಯಾನಂದ್ ಅಂತ್ಯಕ್ರಿಯೆ
ಮತ್ತೊಂದೆಡೆ ದುರಂತದಲ್ಲಿ ಹುತಾತ್ಮರಾದ ಬೆಳಗಾವಿಯ ಸಾಂಬ್ರಾ ಗ್ರಾಮದ ಯೋಧ 45 ವರ್ಷ ದಯಾನಂದ್ ತಿರಕಣ್ಣವರ್ ಪಾರ್ಥಿವ ಶರೀರ ಹುಟ್ಟೂರಿಗೆ ತಂದಾಗ ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು. ಪತಿಯ ಮೃತದೇಹ ಕಂಡು ಪತ್ನಿ ಶ್ರದ್ಧಾ ಕಣ್ಣೀರಿಟ್ಟಿದ್ದು ಮನಕಲಕುವಂತಿತ್ತು. ಇಬ್ಬರು ಗಂಡುಮಕ್ಕಳನ್ನು ಹೊಂದಿದ್ದ ದಯಾನಂದ್ ಮುಂದಿನ ಫೆಬ್ರವರಿಗೆ ನಿವೃತ್ತಿಯಾಗಬೇಕಿತ್ತು. ಗ್ರಾಮದ ಸ್ಮಶಾನದಲ್ಲಿ ಲಿಂಗಾಯತ ಸಂಪ್ರದಾಯದಂತೆ ಯೋಧನ ಅಂತ್ಯಕ್ರಿಯೆ ನಡೀತು. ವೀರಯೋಧನಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯ್ತು. ಮರಾಠ ಲಘು ಪದಾತಿದಳ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಬಾಗಲಕೋಟೆಯ ಮಹೇಶ್ ಮರೆಗೊಂಡಗೆ ಅಂತಿಮ ನಮನ
ಜಮ್ಮುಕಾಶ್ಮೀರದಲ್ಲಿ ಹುತಾತ್ಮರಾದ ಮತ್ತೋರ್ವ ಯೋಧ ಬಾಗಲಕೋಟೆಯ ಮಹೇಶ್ ಮರೆಗೊಂಡ ಹುಟ್ಟೂರು ಮಹಾಲಿಂಗಪುರದಲ್ಲಿ ಅಂತಿಮಯಾತ್ರೆ ನಡೆಸಲಾಯ್ತು.. ಬಳಿಕ ಮಹಾಲಿಂಗಪುರದ ಕೆಂಗೇರಿಮಡ್ಡಿ ಸರ್ಕಾರಿ ಜಾಗದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿ, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಇನ್ನು ಹುತಾತ್ಮ ಯೋಧ ಮಹೇಶ್ ಕಥೆ ಕೇಳಿದ್ರೆ ಎಂಥವರ ಕರಳು ಚುರುಕ್ ಎನ್ನದು, ಕೇವಲ 25ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣತೆತ್ತ ಯೋಧನಿಗೆ ಜನತೆ ಮಮ್ಮಲ ಮರುಗಿದ್ರೆ ಕುಟುಂಬಸ್ಥರು, ಸಂಬಂಧಿಕರು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.
ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದು!
ಸಾಂಬ್ರಾ ಗ್ರಾಮದ ಯೋಧ ದಯಾನಂದ್ ಹಾಗೂ ಮಹಾಲಿಂಗಪುರದ ಯೋಧ ಮಹೇಶ್ಗೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸಿದರು. ಹುತಾತ್ಮ ಯೋಧರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡುವ ಭರವಸೆ ನೀಡಿದರು.
ದೇಶಸೇವೆಯೇ ಈಶ ಸೇವೆ, ದೇಶ ಸೇವೆ ದೇವರ ಸೇವೆಯಾಗಿದೆ. ದೇಶದ ರಕ್ಷಣೆಗಾಗಿ ಮಡಿದ ವೀರಯೋಧರಿಗೆ ನಮ್ಮದೊಂದು ಸಲಾಂ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ