/newsfirstlive-kannada/media/post_attachments/wp-content/uploads/2025/02/DAALI_DHANANJAYA-1.jpg)
ಹಾಸನ: ನಟ ಡಾಲಿ ಧನಂಜಯ ಅವರ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿದ್ದು ಒಂದೊಂದೆ ಕಾರ್ಯಗಳನ್ನು ಮಾಡಲಾಗುತ್ತಿದೆ. ಸಂಪ್ರದಾಯದಂತೆ ಡಾಲಿ ಧನಂಜಯ ಅವರು ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ.
ಡಾಲಿ ಧನಂಜಯ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಅರಸಿಕೆರೆಯ ಪ್ರಸಿದ್ಧ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡವನ್ನು ಡಾಲಿ ಧನಂಜಯ ತುಳಿದಿದ್ದಾರೆ. ಶರ್ಟ್, ಪಂಚೆ ಧರಿಸಿದ್ದ ಧನಂಜಯ ಅವರು ಬೆಂಕಿಯ ಕೆಂಡಗಳಲ್ಲಿ ಬರಿಗಾಲಿನಲ್ಲೇ ಓಡಿದ್ದಾರೆ. ಈ ವೇಳೆ ಸಾಕಷ್ಟು ಜನರು ಧನಂಜಯ ಅವರ ಕೆಂಡ ಹಾಯುವಿಕೆಯನ್ನು ನೋಡುತ್ತಿದ್ದರು.
ಕೊಂಡ ತುಳಿದ ನಂತರ ಜೇನುಕಲ್ಲು ಸಿದ್ದೇಶ್ವರ ದೇವರ ದರ್ಶನ ಪಡೆದುಕೊಂಡ ಅವರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಇದಾದ ಮೇಲೆ ಮನೆಯಲ್ಲಿ ಮನೆ ದೇವರ ಪೂಜೆಯನ್ನು ಭಕ್ತಿಭಾವದಿಂದ ಮಾಡಿದ್ದಾರೆ. ಇದೇ ಶನಿವಾರ ಹಾಗೂ ಭಾನುವಾರ ಅಂದರೆ ಫೆ. 15, 16 ರಂದು ಮೈಸೂರಿನಲ್ಲಿ ಡಾಲಿ ಹಾಗೂ ಧನ್ಯತಾ ಅವರು ವಿವಾಹವಾಗಲಿದ್ದಾರೆ.
ಮದುವೆಗೆ ಎಲ್ಲರಿಗೂ ಆಹ್ವಾನ
ಮದುವೆಗೆ ಸ್ಯಾಂಡಲ್ವುಡ್ ಸ್ಟಾರ್ಸ್, ರಾಜಕಾರಣಿಗಳು, ಗಣ್ಯರು ಸೇರಿದಂತೆ ಎಲ್ಲರನ್ನೂ ಆಹ್ವಾನಿಸಲಾಗಿದೆ. ಅಭಿಮಾನಿಗಳಿಗೂ ಮದುವೆಗೆ ಬರುವ ಅವಕಾಶವಿದೆ. ಅಭಿಮಾನಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು ವಿದ್ಯಾಪತಿ ದ್ವಾರದ ಮೂಲಕ ಆಗಮಿಸಿ ನೇರವಾಗಿ ಸ್ಟೇಜ್ ಬಳಿ ಬಂದು ನೋಡಿಕೊಂಡು ಹೋಗಬಹುದು. ಸುಮಾರು 25-30 ಸಾವಿರ ಜನ ಆಗಮಿಸುವ ನಿರೀಕ್ಷೆ ಇದೆ. ಎಲ್ಲ ತರದ ವ್ಯವಸ್ಥೆ ಮಾಡಲಾಗಿದೆ.
ಚಾಮುಂಡಿ ಬೆಟ್ಟದ ಅಮ್ಮ ಚಾಮುಂಡೇಶ್ವರಿಯ ಆಶೀರ್ವಾದ ಇರಲಿ ಎಂಬ ಕಾರಣಕ್ಕೆ ಚಾಮುಂಡೇಶ್ವರಿ ದೇವಸ್ಥಾನದ ಮಾದರಿಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಇದೇ ಮದುವೆಯಲ್ಲಿ ಪ್ರಮುಖ ಆಕರ್ಷಣೆ ಆಗಿರಲಿದೆ. ವಿದ್ಯಾಭ್ಯಾಸ ಎಲ್ಲ ನಾನು ಮೈಸೂರಿನಲ್ಲೇ ಮುಗಿಸಿದ್ದರಿಂದ ಮದುವೆ ಕೂಡ ಇಲ್ಲೇ ಮಾಡಿಕೊಳ್ಳುತ್ತಿದ್ದೇನೆ ಎಂದು ಡಾಲಿ ಧನಂಜಯ ಅವರು ಈ ಹಿಂದೆ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ