/newsfirstlive-kannada/media/post_attachments/wp-content/uploads/2024/12/Darshan-Discharge-2.jpg)
ಬೆಂಗಳೂರು: ದಾಸನ ಸೆರೆಮನೆ ವಾಸ ಹಾಗೂ ದವಾಖಾನೆ ವಾಸ ಅಂತ್ಯವಾಗಿದೆ. ವಾಪಸ್ ಅರಮನೆಯ ಜೀವನಕ್ಕೆ ಮರಳಿದ್ದಾರೆ. ಇಂದು ಆಸ್ಪತ್ರೆಯಿಂದ ದರ್ಶನ್ ಬಿಡುಗಡೆಯಾಗಿದ್ದಾರೆ. ಇಲ್ಲಿ ವಿಶೇಷ ಅಂದ್ರೆ ಬೆನ್ನು ನೋವು ಅಂತಾನೇ ಮಧ್ಯಂತರ ಜಾಮೀನು ಪಡೆದಿದ್ದ ಆರೋಪಿ ಸರ್ಜರಿ ಮಾಡಿಸದೇ ಆಸ್ಪತ್ರೆಯಿಂದ ರಿಲೀಸ್ ಆಗಿದ್ದಾರೆ.
ಸುಮಾರು 150 ದಿನ ಸೆರೆಮನೆ ವಾಸ. 45 ದಿನ ಆಸ್ಪತ್ರೆಯ ಹಾಸಿಗೆಯ ಮೇಲೆ ವಾಸ. ಮಧ್ಯದಲ್ಲಿ ಜಾಮೀನು ಸಿಕ್ಕಾಗ ಎರಡು ದಿನ ಮನೆಗೆ ತೆರಳಿದ್ದು ಬಿಟ್ರೆ ದರ್ಶನ್ ಮನೆ ನೋಡದೇ 6 ತಿಂಗಳು ಅಂದ್ರೆ ಅರ್ಧ ವರ್ಷ. ಕೊನೆಗೂ ಈ ಸೆರೆಮನೆ, ದವಾಖಾನೆ ವಾಸ ಅಂತ್ಯವಾಗಿದ್ದು ಅರಮನೆ ವಾಸಕ್ಕೆ ಕಾಲಿಟ್ಟಿದ್ದಾರೆ.
ಬಿಜಿಎಸ್ ಆಸ್ಪತ್ರೆಯಿಂದ A2 ದರ್ಶನ್ ಡಿಸ್ಚಾರ್ಜ್
ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ, ನಟ ದರ್ಶನ್ ಕೊನೆಗೂ ಆಸ್ಪತ್ರೆಯಿಂದ ಇಂದು ಬೆಳಗ್ಗೆ ಬಿಡುಗಡೆಯಾಗಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್, ಬೆನ್ನುನೋವು ಹಿನ್ನೆಲೆ ಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದು ನವೆಂಬರ್ 1 ರಂದು ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆದಿದ್ದ ದಾಸನಿಗೆ ಡಿಸೆಂಬರ್ 13ರಂದು ರೆಗ್ಯೂಲರ್ ಬೇಲ್ ಸಿಕ್ಕಿತ್ತು. ಬೇಲ್ ಸಿಕ್ಕ 5 ದಿನಗಳ ಬಳಿಕ ದರ್ಶನ್ ಆಸ್ಪತ್ರೆಯಿಂದ ಸರ್ಜರಿ ಮಾಡಿಸಿಕೊಳ್ಳದೆ ಡಿಸ್ಚಾರ್ಜ್ ಆಗಿದ್ದಾರೆ.
ಕುಂಟುತ್ತಿದ್ದ ದರ್ಶನ್ಗೆ ಹೆಗಲು ಕೊಟ್ಟ ಪುತ್ರ ವಿನೀಶ್
ದರ್ಶನ್ನನ್ನು ಕರೆದೊಯ್ಯಲು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಮತ್ತು ಕುಟುಂಬಸ್ಥರು, ಆಪ್ತರು ಆಗಮಿಸಿದ್ದರು. ಪುತ್ರ ವಿನೀಶ್ ತಂದೆಗೆ ಹೆಗಲು ಕೊಟ್ಟಿದ್ದು ದರ್ಶನ್ ಕುಟುಂತ್ತಲೇ ಆಸ್ಪತ್ರೆಯಿಂದ ಹೊರ ಬಂದರು. ಬಳಿಕ ಕಾರ್ ಹತ್ತಿ ಆಸ್ಪತ್ರೆಯಿಂದ ನೇರವಾಗಿ ಹೊಸಕೆರೆಹಳ್ಳಿಯ ವಿಜಯಲಕ್ಷ್ಮಿ ವಾಸವಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ಗೆ ತೆರಳಿದ್ದಾರೆ.
ಸರ್ಜರಿ ಇಲ್ಲದೇ ‘ಡಿ’ಸ್ಚಾರ್ಜ್!
ಸರ್ಜರಿ ಮಾಡಿಸಿಕೊಳ್ಳದೆ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ. ಕೇವಲ ಫಿಸಿಯೋಥೆರಪಿ ಮಾಡಿಸಿ ಬಿಡುಗಡೆಯಾಗಿದ್ದಾರೆ. ದರ್ಶನ್ಗೆ ಆಸ್ಪತ್ರೆಯಲ್ಲಿ ಕೌನ್ಸೆಲಿಂಗ್ ಮಾಡಿ ಡಿಸ್ಚಾರ್ಜ್ ಮಾಡಿದ್ದಾರೆ. ಮತ್ತೆ ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಬರುವಂತೆ ವೈದ್ಯರು ಸೂಚಿಸಿದ್ದಾರೆ. ಇನ್ನು ಡಿಸ್ಚಾರ್ಜ್ ವೇಳೆ ವಿಜಯಲಕ್ಷ್ಮೀ, ವಿನೀಶ್, ದಿನಕರ್, ಧನ್ವೀರ್ ಹಾಜರಿದ್ದರು.
ಒಟ್ಟಾರೆ ಬೆನ್ನು ನೋವಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಫಿಸಿಯೋ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಆಸ್ಪತ್ರೆಯಿಂದ ಸರ್ಜರಿ ಮಾಡಿಸಿಕೊಳ್ಳದೇ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ ಆರ್.ಆರ್ ನಗರ ನಿವಾಸಕ್ಕೆ ದರ್ಶನ್ ಹೋಗೋದು ಡೌಟ್ ಇದ್ದು, ಪತ್ನಿ ಪ್ಲಾಟ್ಗೆ ತೆರಳಿದ್ದಾರೆ. ಅಲ್ಲಿ ಮನೆಯಲ್ಲಿಯೇ ಎಲ್ಲಾ ಚಿಕಿತ್ಸೆ ನೀಡಲು ವಿಜಯಲಕ್ಷ್ಮಿ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: R ಅಶ್ವಿನ್ಗೆ ಮೊದಲೇ ಎಚ್ಚರಿಸಿದ್ದ BCCI; ಬಲವಂತಕ್ಕೆ ಮಣಿದು ನಿವೃತ್ತಿ ಘೋಷಿಸಿದ ಸ್ಟಾರ್ ಪ್ಲೇಯರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ