/newsfirstlive-kannada/media/post_attachments/wp-content/uploads/2024/12/DARSHAN-1.jpg)
ಬೆಂಗಳೂರು: ಮಧ್ಯಂತರ ಜಾಮೀನೆಂಬ ತೂಗುಗತ್ತಿಯಿಂದ ರೆಗ್ಯೂಲರ್ ಬೇಲ್ ನಟ ದರ್ಶನ್ ಅವರನ್ನು ಪಾರು ಮಾಡಿದೆ. ಈ ಬೆನ್ನಲ್ಲೇ ಇವತ್ತು ತಿಂಗಳ ಬಳಿಕ ಆಸ್ಪತ್ರೆಯಿಂದ ಹೊರ ಬಂದ ನಟ ಜಾಮೀನು ಬಾಂಡ್ಗೆ ಸಹಿ ಹಾಕಿ ಮತ್ತೆ ಬಿಜಿಎಸ್ಗೆ ಹಿಂದಿರುಗಿದ್ದಾರೆ. ಮತ್ತೊಂದೆಡೆ ಪವಿತ್ರಾ ಸೇರಿ ಬೇಲ್ ಸಿಕ್ಕಿರೋ ಎಲ್ಲಾ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಸೇರಿದ್ದ ದರ್ಶನ್ಗೆ ರೆಗ್ಯೂಲರ್ ಜಾಮೀನು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಅದೇ ಇವತ್ತು ದರ್ಶನ್ನ ಒಂದೂ ತಿಂಗಳ ಬಳಿಕ ಆಸ್ಪತ್ರೆಯಿಂದಲೂ ಹೊರ ಕರೆದುಕೊಂಡು ಬಂದಿತ್ತು.
ಸೆಷನ್ಸ್ ಕೋರ್ಟ್ನಲ್ಲಿ 1 ಲಕ್ಷ ರೂಪಾಯಿ ಬಾಂಡ್ಗೆ ದರ್ಶನ್ ಸಹಿ!
ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಹೊರ ಬಂದಿದ್ರು. ಕಳೆದ ಶುಕ್ರವಾರವಷ್ಟೇ ರೆಗ್ಯುಲರ್ ಬೇಲ್ ಸಿಕ್ಕ ಹಿನ್ನೆಲೆ ಇವತ್ತು ತಮ್ಮ ಆಪ್ತ ಧನ್ವೀರ್ ಸೇರಿದಂತೆ ಇತರರ ಜೊತೆ ಬಿಜಿಎಸ್ನಿಂದ ನೇರವಾಗಿ ಸೆಷನ್ ಕೋರ್ಟ್ಗೆ ತೆರಳಿದ್ದರು. ಬಳಿಕ ಅಲ್ಲಿ 1 ಲಕ್ಷ ರೂಪಾಯಿ ಜಾಮೀನು ಬಾಂಡ್ಗೆ ಸಹಿ ಹಾಕಿದ ದರ್ಶನ್, ಕಾನೂನು ಪ್ರಕ್ರಿಯೆಗಳನ್ನ ಪೂರೈಸಿದ್ರು.
ಇದೇ ವೇಳೆ ಜಾಮೀನು ಕಂಡೀಷನ್ನಲ್ಲಿ ಪಾಸ್ಪೋರ್ಟ್ ಹಸ್ತಾಂತರಿಸಬೇಕು ಅನ್ನೋ ಕಂಡೀಷನ್ ಇಲ್ಲ. ಹೀಗಾಗಿ ಈಗಾಗಲೇ ವಶಕ್ಕೆ ಪಡೆಯಲಾಗಿರೋ ಪಾಸ್ಪೋರ್ಟ್ನ ಮರಳಿ ನೀಡುವಂತೆ ದರ್ಶನ್ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ರು. ಇದಕ್ಕೆ ಕೋರ್ಟ್ ಅನುಮತಿ ನೀಡಿದೆ. ಇನ್ನು ಬೇಲ್ ಪ್ರಕ್ರಿಯೆ ಮುಗಿಸಿದ ದರ್ಶನ್ ಈ ಮೂಲಕ ಅಧಿಕೃತವಾಗಿ ರಿಲೀಸ್ ಆದಂತಾಗಿದೆ.
ಜಾಮೀನು ಪ್ರಕ್ರಿಯೆ ಮುಗಿಯುತ್ತಿದ್ದಂತೆ ದರ್ಶನ್ ವಾಪಸ್ ಬಿಜಿಎಸ್ಗೆ ಮರಳಿದ್ದಾರೆ. ಗುರುವಾರದವರೆಗೂ ಆಸ್ಪತ್ರೆಯಲ್ಲಿ ದರ್ಶನ್ಗೆ ಚಿಕಿತ್ಸೆ ಮುಂದುವರೆಯಲಿದೆ. ಆದ್ರೆ, ಬೆನ್ನು ನೋವಿನ ಕಾರಣಕ್ಕೆ ಸರ್ಜರಿ ನೆಪ ಹೇಳಿ ಮಧ್ಯಂತರ ಜಾಮೀನು ಪಡೆದಿದ್ದ ದರ್ಶನ್, ಒಂದೂವರೆ ತಿಂಗಳಾದ್ರೂ ಇನ್ನೂ ಸರ್ಜರಿ ಮಾಡಿಸಿಕೊಂಡಿಲ್ಲ. ಸರ್ಜರಿ ಮಾಡಿಸಿಕೊಳ್ಳೋ ಬಗ್ಗೆಯೂ ಯಾವ ಮಾಹಿತಿ ಇಲ್ಲ. ಆದ್ರೆ, ಆಸ್ಪತ್ರೆ ಸೇರಿದಾಗಿನಿಂದ ದರ್ಶನ್, ಫಿಜಿಯೋಥೆರಪಿ ಮಾಡಿಸಿಕೊಂಡಿದ್ದು, ಇದ್ರಲ್ಲೇ ಬೆನ್ನು ನೋವು ಕಡಿಮೆಯಾಯ್ತಾ ಇಲ್ವಾ ಅನ್ನೋ ಬಗ್ಗೆಯೂ ಸದ್ಯಕ್ಕೆ ಮಾಹಿತಿ ಇಲ್ಲ. ಸದ್ಯ ಗುರುವಾರದವರೆಗಂತೂ ದರ್ಶನ್ ಬಿಜಿಎಸ್ನಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ.
ಇದನ್ನೂ ಓದಿ: 113 ವರ್ಷದ ಸಾಲು ಮರದ ತಿಮ್ಮಕ್ಕನ ಆರೋಗ್ಯ ಸ್ಥಿತಿ ಗಂಭೀರ; ಏನಂದ್ರು ಪುತ್ರ ಉಮೇಶ್?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ