/newsfirstlive-kannada/media/post_attachments/wp-content/uploads/2024/07/Renukaswamy-Mother-on-Darshan.jpg)
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳು ಜೈಲು ಸೇರಿದ್ದಾರೆ. ಆರೋಪಿಗಳ ತಂದೆ, ತಾಯಿಗಳು, ಸಂಬಂಧಿಕರು, ಅಭಿಮಾನಿಗಳು ಜೈಲಿಗೆ ಹೋಗಿ ಅವರ ಯೋಗ-ಕ್ಷೇಮ ವಿಚಾರಿಸಿಕೊಂಡು ಬರುತ್ತಿದ್ದಾರೆ. ಹಲವು ನಟ, ನಟಿಯರು ಜೈಲಿಗೆ ಹೋಗಿ ಬರುತ್ತಿರುವುದಕ್ಕೆ ಕೊಲೆಯಾದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ತಂದೆ, ತಾಯಿ ಈಗ ತಮ್ಮ ಮಕ್ಕಳನ್ನು ನೋಡೋಕೆ ಜೈಲಿಗೆ ಹೋಗ್ತಿದ್ದಾರೆ. ನಾವು ಈಗ ಮಗನ ನೋಡೋಕೆ ಎಲ್ಲಿಗೆ ಹೋಗ್ಬೇಕು. ರೇಣುಕಾಸ್ವಾಮಿ ನಮಗೆ ಮಣ್ಣು ಹಾಕಬೇಕಿತ್ತು. ಆದರೆ ನಾವೇ ಅವನಿಗೆ ಮಣ್ಣು ಹಾಕುವ ಹಾಗೆ ಮಾಡಿಬಿಟ್ಟಿದ್ದಾರೆ ಎಂದು ರತ್ನಪ್ರಭಾ ತಮ್ಮ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಯಾಕೆ? ಬರೋಬ್ಬರಿ 15 ಕಾರಣಗಳು; ಏನದು?
ಕೊಲೆಯಾಗಿ ಒಂದು ತಿಂಗಳಾಗುತ್ತಿದ್ದರೂ ರೇಣುಕಾಸ್ವಾಮಿ ಹೆಂಡತಿ ಇನ್ನೂ ಗಂಡನ ನೆನಪಲ್ಲಿಯೇ ಆಕೆ ಕಾಲ ಕಳೆಯುತ್ತಿದ್ದಾರೆ. ಊಟ, ನಿದ್ದೆ ಎಲ್ಲಾ ಬಿಟ್ಟಿದ್ದಾರೆ. ಅವಳ ಮಗುವಿಗೆ ಏನು ಆಗುತ್ತೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ನನ್ನ ಮಗನ ನೋಡ್ಬೇಕು ಅಂದ್ರೆ ಈಗ ಸಿಗ್ತಾ ಇಲ್ಲ.
ಇದನ್ನೂ ಓದಿ: ‘ನಾನು ಬದುಕಿರೋ ತನಕ ದರ್ಶನ್ ನನ್ನ ಹಿರಿಯ ಮಗನೇ’- ನೋವು ತೋಡಿಕೊಂಡ ಸುಮಲತಾ!
ರೇಣುಕಾಸ್ವಾಮಿ ತಪ್ಪು ಮಾಡಿದ್ರೆ ಶಿಕ್ಷೆ ಕೊಡಬಹುದಿತ್ತು. ಕಂಪ್ಲೇಂಟ್ ಕೊಟ್ಟಿದ್ರೆ ಅವನು ಅನುಭವಿಸುತ್ತಿದ್ದ. ಆದ್ರೆ ಭೀಕರವಾಗಿ ಹತ್ಯೆ ಮಾಡುವ ಅವಶ್ಯಕತೆ ಇರಲಿಲ್ಲ. ಸತ್ತ ಮೇಲೆ ಈಗ ಬಂದು ನಮಗೂ ಮೆಸೇಜ್ ಮಾಡ್ತಿದ್ದ ಅಂತ ಹೇಳ್ತಾರೆ. ಇಷ್ಟು ದಿನ ಅವ್ರು ಬಾಯಿಗೆ ಕಡುಬು ಇಟ್ಟುಕೊಂಡಿದ್ರಾ? ಅವ್ರು ಆಗಲೇ ದೂರು ಕೊಟ್ಟು ಸರಿ ಮಾಡಬಹುದಿತ್ತಲ್ಲಾ? ನಟ, ನಟಿಯರಿಗೆ ನನ್ನ ಮಗ ಸತ್ತ ಮೇಲೆ ಈಗ ಬಾಯಿ ಬಂತಾ? ನನ್ನ ಮಗನ ವಿರುದ್ಧ ಕಾಮೆಂಟ್ ಮಾಡುವವರಿಗೆ ಬುದ್ಧಿ ಇಲ್ಲ. ಆಗಲೇ ಹೇಳಿದ್ರೆ ಮಗನಿಗೆ ಬುದ್ಧಿ ಹೇಳ್ತಿದ್ವಿ. ಅವ್ರೆ ಶಿಕ್ಷೆ ಕೊಡಿಸಬಹುದಿತ್ತಲ್ವಾ ಎಂದು ರೇಣುಕಾಸ್ವಾಮಿ ತಾಯಿ ರತ್ನ ಪ್ರಭಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ