/newsfirstlive-kannada/media/post_attachments/wp-content/uploads/2025/03/Ranya-roa-father.jpg)
ನಟಿ ರನ್ಯಾ ರಾವ್ ಚಿನ್ನ ಸಾಗಾಟ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ಅಕ್ರಮ ಚಿನ್ನದ ಕೇಸ್ನ ಗಣಿಗೆ ಇಳಿದಿರುವ ಅಧಿಕಾರಿಗಳಿಗೆ ಆಳಕ್ಕಿಳಿದಂತೆ ಹಲವು ವಿಚಾರಗಳು ಬಹಿರಂಗವಾಗುತ್ತಿವೆ. ಜೈಲಿನಲ್ಲಿರುವ ರನ್ಯಾ ರಾವ್ ನನ್ನ ಮೇಲೆ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆಂದು ಸ್ಫೋಟಕ ಆರೋಪ ಮಾಡಿದ್ರೆ ಇತ್ತ ಮಲತಂದೆ ಡಿಜಿಪಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದೆ.
ಐಷಾರಾಮಿ ಜೀವನ.. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತ ಲೈಫ್ ಲೀಡ್ ಮಾಡ್ತಿದ್ರೂ ನಟಿ ರನ್ಯಾ ರಾವ್. ಚಿನ್ನದ ಅಂಬಾರಿಯಲ್ಲಿ ಹೋಗೋ ಕನಸು ಕಂಡು ಸದ್ಯ ಕಬ್ಬಿಣದ ಕಂಬಿ ಎಣಿಸುವಂತಾಗಿದೆ. ಅಕ್ರಮ ಚಿನ್ನ ಸಾಗಾಟ ಕೇಸ್ನಲ್ಲಿ ಲಾಕ್ ಆಗಿರುವ ರನ್ಯಾ ಪ್ರಕರಣದ ತನಿಖೆಗೆ ಇಳಿದಿರುವ DRI ತನಿಖಾಧಿಕಾರಿಗಳಿಂದ ಸ್ಫೋಟಕ ಅಂಶಗಳು ಬಯಲಾಗ್ತಿವೆ. ಈ ನಡುವೆ ಜೈಲಿನಿಂದಲೇ ಆರೋಪಿ ರನ್ಯಾ ಸ್ಫೋಟಕ ಆರೋಪ ಮಾಡಿದ್ದಾರೆ.
‘ಡಿಆರ್ಐ ಅಧಿಕಾರಿಗಳು ಹಲ್ಲೆ ಮಾಡಿ ಬಲವಂತವಾಗಿ ಸಹಿ ಹಾಕಿಸಿದ್ದಾರೆ’
‘ಸರಿಯಾಗಿ ಊಟ ಕೊಟ್ಟಿಲ್ಲ, ನಿದ್ದೆ ಮಾಡಲು ಬಿಟ್ಟಿಲ್ಲ’.. ರನ್ಯಾ ಬಾಂಬ್
ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಲಾಕ್ ಆಗಿರುವ ರನ್ಯಾ ತನಿಖೆ ಮಾಡ್ತಿರುವ ಡಿಆರ್ಐ ಅಧಿಕಾರಿಗಳ ವಿರುದ್ಧವೇ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದಲೇ ಡಿಆರ್ಐ ಎಡಿಜಿಗೆ ಪತ್ರ ಬರೆದ ನಟಿ, ಅಧಿಕಾರಿಗಳು ನನಗೆ ಮಾತನಾಡಲು ಬಿಡದೇ 10 ರಿಂದ 15 ಬಾರಿ ನನ್ನ ಮೇಲೆ ಕೈ ಮಾಡಿದ್ದಾರೆ. ಕೇಸ್ನಲ್ಲಿ ತಂದೆ ಹೆಸ್ರು ಸಿಲುಕಿಸ್ತೀವಿ ಅಂತ ಬೆದರಿಸಿ ಹೊಡೆದು ಸ್ಟೇಟ್ಮೆಂಟ್ಗೆ 40 ಬಿಳಿ ಹಾಗೂ ಟೈಪಿಂಗ್ ಇರುವ ಹಾಳೆ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. 14 ಕೆಜಿ ಚಿನ್ನ ತಂದಿದ್ದಾಗಿ ಸುಳ್ಳು ಕೇಸ್ ದಾಖಲಿಸಿದ್ದು ಪ್ರಕರಣದಲ್ಲಿ ನಾನು ಅಮಾಯಕಿ ಅಂತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಏರ್ಪೋರ್ಟ್ ಅಧಿಕಾರಿಗಳು, ಸಿಬ್ಬಂದಿಗೂ ಢವಢವ ಶುರು
ರನ್ಯಾ ರಾವ್ ಕೇಸ್ನಿಂದ ಏರ್ಪೋರ್ಟ್ ಅಧಿಕಾರಿಗಳು, ಸಿಬ್ಬಂದಿಗೂ ಢವಢವ ಶುರುವಾಗಿದೆ. ಈಗಿರುವ, ಹಿಂದೆ ಕೆಲಸದಲ್ಲಿದ್ದವರಿಗೂ ಚಿನ್ನದ ಕಂಟಕ ಎದುರಾಗಿದೆ. ರನ್ಯಾ ಟ್ರಾವೆಲ್ ವೇಳೆ ಚೆಕ್ ಮಾಡಿರಲಿಲ್ವಾ? ಅಥವಾ ಯಾರಾದ್ರೂ ಚೆಕ್ ಮಾಡದಂತೆ ನಿರ್ದೇಶಿಸಿದ್ರಾ? ಅನ್ನೋ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ.
ಸ್ಮಗ್ಲಿಂಗ್ ಕೇಸ್ನಲ್ಲಿ ಡಿಜಿಪಿ ವಿಚಾರಣೆ ಫಿಕ್ಸ್!
ಇನ್ನು ಸ್ಮಗ್ಲಿಂಗ್ ಕೇಸ್ನಲ್ಲಿ ಡಿಜಿಪಿ ರಾಮಚಂದ್ರರಾವ್ ವಿಚಾರಣೆ ನಡೆಯೋ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಈ ಕೇಸ್ನಲ್ಲಿ ತನಿಖಾಧಿಕಾರಿ ಆಗಿರುವ ಗೌರವ್ ಗುಪ್ತಾ, DIG ವಂಶಿಕೃಷ್ಣ ವಿಚಾರಣೆ ಮಾಡಲಿದ್ದಾರೆ. ಒಂದು ವಾರದಲ್ಲಿ ವರದಿ ನೀಡುವಂತೆ ಸರ್ಕಾರ ಆದೇಶ ಮಾಡಿ ಈಗಾಗಲೇ 5 ದಿನ ಕಳೆದಿವೆ. ಹೀಗಾಗಿ ಇಂದು & ನಾಳೆ ವಿಚಾರಣೆ ಫಿಕ್ಸ್ ಆಗಿದೆ. ವಿಚಾರಣೆ ಮಾಡಿ ಗೌರವ್ ಗುಪ್ತಾ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಹೆತ್ತ ಮಕ್ಕಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಪ್ರಾಣ ಬಿಟ್ಟ ಅಪ್ಪ.. ಶಾಕಿಂಗ್ ಸತ್ಯ ಬಯಲು; ಆಗಿದ್ದೇನು?
ಡಿಜಿಪಿ ರಾಮಚಂದ್ರರಾವ್ ಈ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಕಡ್ಡಾಯ ರಜೆ ಮೇಲೆ ತೆರಳಲು ಸರ್ಕಾರ ಸೂಚನೆ ನೀಡಿದೆ. ತನಿಖೆ ಮುಗಿಯುವವರೆಗೂ ರಜೆ ಮೇಲೆ ತೆರಳಲು ಸೂಚಿಸಿದ್ದು, ಎಡಿಜಿಪಿ ಶರತ್ ಚಂದ್ರ ಅವರಿಗೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿರ್ಮಾಣ ಸಂಸ್ಥೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.
ಇದೇ ವೇಳೆ ರನ್ಯಾ ಚಿನ್ನ ಸಾಗಾಟದಲ್ಲಿ ಕಿಂಗ್ಪಿನ್ ಆಗಿದ್ದ ತರುಣ್ ಕೊಂಡೂರು ರಾಜ್ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಿತು. ಈ ವೇಳೆ ಜಾಮೀನಿಗೆ ಡಿಆರ್ಐ ಪರ ವಕೀಲ ಪಿಪಿ ಮಧು ರಾವ್ ಆಕ್ಷೇಪಣೆ ಸಲ್ಲಿಸಿದ್ದಾರೆ. ತರುಣ್ ರಾಜು ವಿಚಾರಣಾಧೀನ ಕೈದಿ 2487 ಅಂತ ನಂಬರ್ ನೀಡಲಾಗಿದೆ.
ರನ್ಯಾ ರಾವ್ ಕೇಸ್ನಲ್ಲಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇಂದು ಅಥವಾ ನಾಳೆ ಡಿಜಿಪಿ ರಾಮಚಂದ್ರರಾವ್ ವಿಚಾರಣೆ ನಡೆಯೋ ಸಾಧ್ಯತೆ ಇದೆ. ಮಾತ್ರವಲ್ಲದೇ ಈ ಪ್ರಕರಣ ಹಲವು ಅಧಿಕಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದು ಈಗಾಗಲೇ ನಡುಕ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ