/newsfirstlive-kannada/media/post_attachments/wp-content/uploads/2025/01/ALLU_ARJUN-8.jpg)
ಹೈದರಾಬಾದ್: ಪುಷ್ಪ2 ಸಿನಿಮಾ ರಿಲೀಸ್ ವೇಳೆ ಸಂಧ್ಯಾ ಥಿಯೇಟರ್ಗೆ ಅಲ್ಲು ಅರ್ಜುನ್ ಬಂದಿದ್ದಕ್ಕೆ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಜೀವ ಕಳೆದುಕೊಂಡಿದ್ದರು. ಇದರ ಜೊತೆಗೆ ಈಕೆಯ ಮಗ ಕೂಡ ಗಂಭೀರವಾಗಿ ಗಾಯಗೊಂಡಿದ್ದನು. ಸದ್ಯ ಇದೀಗ ನಟ ಅಲ್ಲು ಅರ್ಜುನ್ ಅವರು ಬಾಲಕನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಹೈದರಾಬಾದ್ನಲ್ಲಿನ ಬೇಗಂಪೇಟೆಯ ಕೆಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಶ್ರೀತೇಜ್ನನ್ನು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಭೇಟಿ ಮಾಡಿದ್ದಾರೆ. ಇದೇ ವೇಳೆ ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್ಡಿಸಿ) ಅಧ್ಯಕ್ಷ ದಿಲ್ ರಾಜು ಅವರು ಅಲ್ಲು ಅರ್ಜುನ್ ಜೊತೆ ಇದ್ದರು. ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ನಟ ಆಸ್ಪತ್ರೆಯಲ್ಲಿ ಬಾಲಕನನ್ನ ಭೇಟಿ ಮಾಡಿದ್ದು ಅವರ ತಂದೆ ಭಾಸ್ಕರ್ ಬಳಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಜನವರಿ 5ರಂದೇ ಬಾಲಕನನ್ನು ಮೀಟ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪೂರ್ವ ಯೋಜನೆ ಇಲ್ಲದೇ ಭದ್ರತೆ ಕಾರಣದಿಂದ ಪೊಲೀಸರು ಅನುಮತಿ ಕೊಟ್ಟಿರಲಿಲ್ಲ. ಹೀಗಾಗಿ ಇಂದು ಆಸ್ಪತ್ರೆ ಸುತ್ತ ಪೊಲೀಸ್ ಬಿಗಿ ಭದ್ರತೆಯಲ್ಲಿ ಘಟನೆ ನಡೆದ 33 ದಿನಗಳ ಬಳಿಕ ಬಾಲಕನನ್ನು ಭೇಟಿ ಮಾಡಿದರು. ಯಾವುದೇ ಅಹಿತಕರ ಘಟನೆ ಹಾಗೂ ಹೆಚ್ಚು ಜನರು ಸೇರದಂತೆ ಪೊಲೀಸರು ಕ್ರಮ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದೆ.
ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ಕಾಲ್ತುಳಿದಲ್ಲಿ ರೇವತಿ ಎಂಬ ಮಹಿಳೆ ಜೀವ ಕಳೆದುಕೊಂಡಿದ್ದು ಆಕೆಯ ಎಂಟು ವರ್ಷದ ಮಗ ಗಂಭೀರವಾಗಿದ್ದನು. ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಮೇಲೆ ಪೊಲೀಸರು ನಿವಾಸಕ್ಕೆ ಬಂದು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿ ಒಂದು ರಾತ್ರಿ ಜೈಲಿಗೆ ಕಳುಹಿಸಿದ್ದರು. ಸದ್ಯ ಜಾಮೀನಿನ ಮೇಲೆ ನಟ ಹೊರಗಡೆ ಇದ್ದಾರೆ.
ಇದನ್ನೂ ಓದಿ: KGF2, RRR ರೆಕಾರ್ಡ್ ಬ್ರೇಕ್ ಮಾಡಿದ ಪುಷ್ಪ2.. ಅಲ್ಲು ಅರ್ಜುನ್ ಮುಂದಿನ ಟಾರ್ಗೆಟ್ ಪ್ರಭಾಸ್
ಅಲ್ಲು ಅರ್ಜುನ್ ಅವರು ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಅವರ ಬಾಲಕನ ತಂದೆ ಭಾಸ್ಕರ್ ಅವರು ಮಾತನಾಡಿ, ಘಟನೆ ನಡೆದು 20 ದಿನಗಳ ಬಳಿಕ ನನ್ನ ಮಗ ಮಾತನಾಡಿದ್ದಾನೆ. ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡಿದ್ದಾನೆ. ಸದ್ಯ ಯಾವುದೇ ಸಮಸ್ಯೆ ಇಲ್ಲ. ಸಹಾಯ ಮಾಡಿದ ತೆಲಂಗಾಣ ಸರ್ಕಾರ ಹಾಗೂ ನಟ ಅಲ್ಲು ಅರ್ಜುನ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ