/newsfirstlive-kannada/media/post_attachments/wp-content/uploads/2025/07/AMARANATH-YATRE-2.jpg)
ಇಂದಿನಿಂದ ಪ್ರಸಿದ್ಧ ಅಮರನಾಥ ಯಾತ್ರೆ-2025 (Amarnath Yatra- 2025) ಆರಂಭವಾಗಿದೆ. ‘ಬಾಬಾ ಬರ್ಫಾನಿ’ಯ ದರ್ಶನ ಪಡೆಯಲು ಸಾವಿರಾರು ಭಕ್ತರು ಜಮ್ಮು ಮತ್ತು ಕಾಶ್ಮೀರದ ಕಠಿಣ ಪರ್ವತ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ.
ಸುಮಾರು 13,000 ಅಡಿ ಎತ್ತರದಲ್ಲಿರುವ ಅಮರನಾಥ ಗುಹೆಯನ್ನು ತಲುಪಲು ಭಕ್ತರು ದೀರ್ಘ ಮತ್ತು ಸವಾಲಿನ ಪಾದಯಾತ್ರೆ ಮಾಡ್ತಾರೆ. ಪಹಲ್ಗಾಮ್ ಮತ್ತು ಬಾಲ್ಟಾಲ್ ಎಂಬ ಎರಡು ಮಾರ್ಗಗಳ ಮೂಲಕ ಅಮರನಾಥ ಇದ್ದಲ್ಲಿಗೆ ಭಕ್ತರು ತಲುಪುತ್ತಾರೆ. ಕೆಲವು ತಿಂಗಳ ಹಿಂದೆ ಪಹಲ್ಗಾಮ್​​ನಲ್ಲಿ ಉಗ್ರರ ದಾಳಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಯೋಗ ಗುರು ವಚನಾನಂದ ಸ್ವಾಮೀಜಿ ಪೂರ್ವಾಶ್ರಮದ ಸಹೋದರ ಅಶೋಕ್ ರಸ್ತೆ ಅಪಘಾತದಲ್ಲಿ ನಿಧನ
ಅಮರನಾಥ ಯಾತ್ರೆಗೆ ಸಂಬಂಧಿಸಿದ ಕೆಲ ವಿಚಾರಗಳು..!
ಅಮರನಾಥ ಗುಹೆ ತಲುಪಲು ಎರಡು ಮುಖ್ಯ ಮಾರ್ಗಗಳು ಇವೆ
- ಪಹಲ್ಗಾಮ್ ಮಾರ್ಗ: ಇದು ಸುಮಾರು 48 ಕಿ.ಮೀ. ಉದ್ದವಿದೆ.
- ಬಾಲ್ಟಾಲ್ ಮಾರ್ಗ: ಇದು ಸುಮಾರು 14 ಕಿಲೋಮೀಟರ್ ಉದ್ದವಾಗಿದೆ.
ಪಹಲ್ಗಾಮ್ ಮಾರ್ಗದಿಂದ ಎಷ್ಟು ಸಮಯ ಬೇಕು..?
ಪಹಲ್ಗಾಮ್ ಮಾರ್ಗದಿಂದ ಬಾಬಾ ಬರ್ಫಾನಿಗೆ ಭೇಟಿ ನೀಡಲು 3 ರಿಂದ 4 ದಿನ ಬೇಕು. ಇದು ಸುಮಾರು 48 ಕಿ.ಮೀ ಉದ್ದವಿದೆ. ನೈಸರ್ಗಿಕ ಸೌಂದರ್ಯದಿಂದ ತುಂಬಿದ್ದು, ಕಡಿಮೆ ಕಡಿದಾದ ಹತ್ತುವಿಕೆ ಹೊಂದಿದೆ. ಧಾರ್ಮಿಕ ಮಹತ್ವದ ವಿಚಾರದಲ್ಲಿ ಇದೇ ಹಾದಿಯನ್ನು ಭಕ್ತರು ಹೆಚ್ಚಾಗಿ ಆರಿಸಿಕೊಳ್ತಾರೆ.
ಬಾಲ್ಟಾಲ್ ಮಾರ್ಗದಿಂದ ಎಷ್ಟು ಸಮಯ..?
ಬಾಲ್ಟಾಲ್ ಮಾರ್ಗದಿಂದ 1 ರಿಂದ 2 ದಿನಗಳು ಬೇಕು. ಈ ಮಾರ್ಗವು ಸುಮಾರು 14 ಕಿ.ಮೀ ಉದ್ದವಾಗಿದೆ. ಇದು ತುಂಬಾನೆ ಚಿಕ್ಕದಾದ ಮಾರ್ಗ. ಆದರೆ ಅಷ್ಟೇ ಅಪಾಯಕಾರಿ ಕೂಡ ಹೌದು. ಕಡಿದಾದ ರಸ್ತೆ, ಕಿರಿದಾದ ಮತ್ತು ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಇಲ್ಲಿ ನಡೆದುಕೊಂಡು ಹೋಗುವುದು ಸವಾಲಿನ ಕೆಲಸ. ಯುವ ಮತ್ತು ಉತ್ಸಾಹಿ ಆರೋಗ್ಯವಂತ ಭಕ್ತರಿಗೆ ಈ ಮಾರ್ಗ ಸೂಕ್ತ.
ಅಮರನಾಥ ಯಾತ್ರೆಗೆ ಟೋಕನ್ ವ್ಯವಸ್ಥೆ
ಆನ್ಲೈನ್ನಲ್ಲಿ ನೋಂದಾಯಿಸಲು ಸಾಧ್ಯವಾಗದ ಭಕ್ತರಿಗಾಗಿ ಜೂನ್ 30 ರಿಂದ ಆಫ್ಲೈನ್ ಪ್ರಕ್ರಿಯೆಯು ನಡೆಯುತ್ತಿದೆ. ಜಮ್ಮು ರೈಲು ನಿಲ್ದಾಣದ ಬಳಿಯ ಸರಸ್ವತಿ ಧಾಮ, ಜಮ್ಮುವಿನ ವೈಷ್ಣವಿ ಧಾಮ ಮತ್ತು ಪಂಚಾಯತ್ ಭವನ ಮಹಾಜನ್, ಇ-ಕೆವೈಸಿ ಕೇಂದ್ರ, ರೈಲ್ವೆ ನಿಲ್ದಾಣ ಮತ್ತು ಬೇಸ್ ಕ್ಯಾಂಪ್ ಭಗವತಿ ನಗರ, ಜೊತೆಗೆ ಗೊತ್ತುಪಡಿಸಿದ ಬ್ಯಾಂಕ್ಗಳ 533+ ಶಾಖೆಗಳಲ್ಲಿ ಟೋಕನ್ ಕೇಂದ್ರ ಸ್ಥಾಪಿಸಲಾಗಿದೆ.
ಕುದುರೆ ಮೂಲಕ ಹೋಗೋರಿಗೆ..
- ಕುದುರೆಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅವುಗಳಿಗೆ ಜಿಐ ಟ್ಯಾಗ್ ನೀಡಲಾಗುತ್ತದೆ. ಅವುಗಳ ಗುರುತು, ಮಾಲೀಕರು ಮತ್ತು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
- ಕುದುರೆಗಳಿಗೆ ಇಡೀ ವರ್ಷ ವಿಮೆ ಇರುತ್ತದೆ. ಇದು ಕಾಲಕಾಲಕ್ಕೆ ಬದಲಾಗುತ್ತದೆ. ಕುದುರೆಗಳು ಸತ್ತರೆ, ಮಾಲೀಕರಿಗೆ ₹60,000-₹1,00,000 ಸಿಗುತ್ತದೆ.
- ಪ್ರತಿಯೊಂದು ಕುದುರೆಯೊಂದಿಗೆ ಒಬ್ಬ ಸಹಾಯಕ ಇರುತ್ತಾನೆ. ಅವರು ಗುರುತಿನ ಚೀಟಿಯನ್ನು ಹೊಂದಿದ್ದು, ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ. ಭದ್ರತಾ ಕಾರಣಗಳಿಗಾಗಿ ಪ್ರಯಾಣ ಆರಂಭಿಸುವ ಮೊದಲು ಸಹಾಯಕನ ಬದಲಾಯಿಸಲಾಗುವುದಿಲ್ಲ.
- ಎರಡು ದಿನಗಳವರೆಗೆ ಕುದುರೆ ಸವಾರಿಗೆ ₹8,000-₹10,000 ಎಂದು ಸರ್ಕಾರಿ ದರ ನಿಗದಿಪಡಿಸಲಾಗಿದೆ. ಆಹಾರ ಮತ್ತು ಪಾನೀಯಗಳು ಇದರಲ್ಲಿ ಸೇರಿವೆ.
ವಿಶೇಷ ವ್ಯವಸ್ಥೆಗಳು ಏನೇನು..?
ಯಾತ್ರಾರ್ಥಿಗಳ ಅನುಕೂಲತೆ ಮತ್ತು ಸುರಕ್ಷತೆಗಾಗಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ವ್ಯಾಪಕವಾದ ವ್ಯವಸ್ಥೆಗಳನ್ನು ಮಾಡಿದೆ. ಮೂಲ ಶಿಬಿರಗಳು, ವೈದ್ಯಕೀಯ ಶಿಬಿರಗಳು, ಆಮ್ಲಜನಕ ಬೂತ್ಗಳು ಮತ್ತು ಆಹಾರ ವ್ಯವಸ್ಥೆಗಳು ಸೇರಿವೆ. ಸಿಆರ್ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳನ್ನು ನಿಯೋಜಿಸಲಾಗಿದೆ. ಹವಾಮಾನ ಮಾಹಿತಿ ಮತ್ತು ತುರ್ತು ಸೇವೆಗಳಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಲಾಗಿದೆ.
ಇದನ್ನೂ ಓದಿ: ಕಾರವಾರದಲ್ಲಿ ಮತ್ತೆ ಗುಡ್ಡ ಕುಸಿತ.. ರಾಜ್ಯದಲ್ಲಿ ಮಳೆಯಿಂದ ಏನೆಲ್ಲ ಆಗುತ್ತಿದೆ..? Photos
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ