/newsfirstlive-kannada/media/post_attachments/wp-content/uploads/2025/04/anant_ambani.jpg)
ಅಂಬಾನಿ ಕುಟುಂಬ ದೇಶದ ಅತ್ಯಂತ ಶ್ರೀಮಂತ ಕುಟುಂಬ. ಕೇವಲ ದುಡ್ಡು, ಶ್ರೀಮಂತಿಕೆ ವಿಚಾರವಷ್ಟೇ ಅಲ್ಲ, ಇನ್ನೂ ಹತ್ತಾರು ಒಳ್ಳೆಯ ವಿಚಾರಗಳಿಗೆ ಈ ಕುಟುಂಬ ಹೆಸರುವಾಸಿ. ಈಗ್ಲೂ ಅಂಥಾದ್ದೇ ಒಂದು ವಿಚಾರ ದೇಶದ ಜನರು ಹುಬ್ಬೇರಿಸುವಂತೆ ಮಾಡಿದೆ. ಕಳೆದ ವರ್ಷ ವಿಶ್ವವೇ ಬೆರಗಾಗುವಂತೆ ಮದುವೆಯಾದ ಅನಂತ್ ಅಂಬಾನಿ ಇಟ್ಟಿರೋ ಹೆಜ್ಜೆ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ.
ಶ್ರೀಮಂತರ ಮಕ್ಕಳು ಅಂದ್ರೆ ಅವರ ಬರ್ತ್ಡೇನಾ ಗ್ರ್ಯಾಂಡ್ ಆಗಿ ಹೋಟೆಲ್ಗಳಲ್ಲಿ ಪಾರ್ಟಿ ಮಾಡ್ಕೊಂಡು, ಕುಡ್ಕೊಂಡು ತಿನ್ಕೊಂಡು ಎಂಜಾಯ್ ಮಾಡ್ತಾರೆ. ಆದ್ರೆ, ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ 30ನೇ ವರ್ಷದ ಹುಟ್ಟು ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಲು ಪಾದಯಾತ್ರೆ ಮಾಡ್ತಿದ್ದಾರೆ.
ಜಾಮ್ನಗರದಿಂದ ದ್ವಾರಕಾವರೆಗೆ ‘ಅನಂತ’ ಕಾಲ್ನಡಿಗೆ!
ಅನಂತ್ ಅಂಬಾನಿ ತಮ್ಮ 30ನೇ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಧಾರ್ಮಿಕವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಶ್ರೀರಾಮ ಹಾಗೂ ಶ್ರೀಕೃಷ್ಣನ ಪರಮ ಭಕ್ತರಾಗಿರೋ ಅನಂತ್, ಜಾಮ್ನಗರದಿಂದ ದ್ವಾರಕಾ ನಗರಿಗೆ ಪಾದಯಾತ್ರೆ ಮಾಡ್ತಿದ್ದಾರೆ. ಬರೋಬ್ಬರಿ ಒಟ್ಟು 140 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಅನಂತ್ ಕ್ರಮಿಸುತ್ತಿದ್ದಾರೆ. ಈ ಮೂಲಕ ತಮ್ಮ ಹಬ್ಬವನ್ನ ದೈವ ಭಕ್ತಿಯ ಮೂಲಕ ಆಚರಿಸುತ್ತಿದ್ದಾರೆ. ಯುವ ಉದ್ಯಮಿಯ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಾದಯಾತ್ರೆ ವೇಳೆ 250 ಕೋಳಿಗಳನ್ನ ಖರೀದಿಸಿದ ಅನಂತ್ ಅಂಬಾನಿ
ಅನಂತ್ ಅಂಬಾನಿ ತಮ್ಮ ಪಾದಯಾತ್ರೆ ಮಾಡುವಾಗ ರಸ್ತೆಯಲ್ಲಿ ಟ್ರಕ್ವೊಂದು 250 ಕೋಳಿಗಳನ್ನು ತೆಗೆದುಕೊಂಡು ಹೋಗುತ್ತಿತ್ತು. ಬಳಿಕ ಅವುಗಳನ್ನು ವಧೆ ಮಾಡಲಾಗುತ್ತಿತ್ತು. ಆದರೆ ಕೋಳಿಗಳನ್ನು ನೋಡಿದ ಅನಂತ್, ತಕ್ಷಣ ಆ ಟ್ರಕ್ ಅನ್ನು ನಿಲ್ಲಿಸಿ, ಚಾಲಕನೊಂದಿಗೆ ಮಾತನಾಡಿದ್ದಾರೆ. ಒಂದೊಂದು ಕೋಳಿಗೆ ದುಪ್ಪಟ್ಟು ಬೆಲೆ ಕೊಟ್ಟು ಎಲ್ಲ 250 ಕೋಳಿಗಳನ್ನು ಖರೀದಿಸಿ ಅವುಗಳನ್ನು ರಕ್ಷಣೆ ಮಾಡಲೆಂದು ಕನಸಿನ ಕೂಸು ಆದ ವಂತರಾಗೆ ಕಳುಹಿಸಿಕೊಟ್ಟಿದ್ದಾರೆ. ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿ ಹಿನ್ನೆಲೆಯಲ್ಲಿ ಅನಂತ್ ಒಂದು ಕೋಳಿಯನ್ನ ಕೈಯಲ್ಲಿಡಿದು, ಜೈ ದ್ವಾರಕಾಧೀಶ ಎನ್ನುತ್ತಾ ತಮ್ಮ ಪಾದಯಾತ್ರೆ ಮುಂದುವರೆಸಿದರು.
‘ಅನಂತ’ ಪಾದಯಾತ್ರೆ
- ಏ.10 ರಂದು ಹುಟ್ಟುಹಬ್ಬ, ಅನಂತ್ ಅಂಬಾನಿ ಪಾದಯಾತ್ರೆ
- ಮಾ. 27 ರಂದು ಅನಂತ್ ಅಂಬಾನಿ ಪಾದಯಾತ್ರೆ ಆರಂಭ
- ಜಾಮ್ ನಗರದಿಂದ ದ್ವಾರಕಾಗೆ 140 ಕಿ.ಮೀ. ಪಾದಯಾತ್ರೆ
- ನಿತ್ಯ 20 ಕಿ.ಮೀ, 12 ರಿಂದ 13 ದಿನ ಅನಂತ್ ಪಾದಯಾತ್ರೆ
- ಹೈವೇ ಪಕ್ಕದಲ್ಲೇ ರಾತ್ರಿ ಹೊತ್ತು ಅನಂತ್ ಅಂಬಾನಿ ಕಾಲ್ನಡಿಗೆ
- ಏಪ್ರಿಲ್ 8 ರಂದು ದ್ವಾರಕ ತಲುಪಲಿರುವ ಅನಂತ್ ಅಂಬಾನಿ
- ಏಪ್ರಿಲ್ 10ರಂದು ಪತ್ನಿ ರಾಧಿಕಾ ಜೊತೆ ಶ್ರೀಕೃಷ್ಣನ ದರ್ಶನ
ಇದನ್ನೂ ಓದಿ: LSGಗೆ ಬಿಗ್ ಶಾಕ್ ಕೊಟ್ಟ ಕ್ಯಾಪ್ಟನ್ ರಿಷಭ್ ಪಂತ್.. ಭಾರೀ ಅವಮಾನ, ಯಾಕೆ?
‘Z+’ ಭದ್ರತೆಯಲ್ಲಿ ಅನಂತ್ ಅಂಬಾನಿ ನಡಿಗೆ!
ಅನಂತ್ ಅಂಬಾನಿ ಪಾದಯಾತ್ರೆಯಲ್ಲಿ ಕೆಲ ವಿಶೇಷತೆಗಳೂ ಇವೆ. ಅನಂತ್ ಅಂಬಾನಿಗೆ ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ. ಜಾಮ್ನಗರದಿಂದ ದ್ವಾರಕ ಮಾರ್ಗ ಮಧ್ಯೆ ಯಾವುದೇ ಉತ್ತಮ ಹೊಟೆಲ್ಗಳಿಲ್ಲ. ಜೊತೆಗೆ ಸುರಕ್ಷತಾ ಕಾರಣದಿಂದ ಪ್ರತಿ ದಿನದ ಪಾದಯಾತ್ರೆ ಅಂತ್ಯಗೊಂಡ ಬಳಿಕ ಅನಂತ್ ಅಂಬಾನಿ ವಾಹನದ ಮೂಲಕ ಜಾಮ್ನಗರದ ರಿಲಯನ್ಸ್ ಟೌನ್ಶಿಪ್ಗೆ ಮರಳುತ್ತಾರೆ. ಬಳಿಕ ಮುಂದಿನ ದಿನ ಪಾದಯಾತ್ರೆ ಅಂತ್ಯಗೊಳಿಸಿದ ಜಾಗದಿಂದ ಮತ್ತೆ ಪಾದಯಾತ್ರೆ ಆರಂಭಿಸುತ್ತಿದ್ದಾರೆ.
ಪಾದಯಾತ್ರೆ ವೇಳೆ ಅನಂತ್ ಅಂಬಾನಿ ಅತೀ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ಜೈ ದ್ವಾರಕಾದೀಶ್ ಎಂದು ಘೋಷಣೆ ಕೂಗುತ್ತಾ ಅಂಬಾನಿ ತೆರಳುತ್ತಿದ್ದಾರೆ. ವಿಶೇಷ ಅಂದರೆ ಅಂಬಾನಿ ಕುಟುಂಬದ ವ್ಯಕ್ತಿಯೊಬ್ಬರು ಪಾದಯಾತ್ರೆ ಮಾಡುತ್ತಿರುವುದು ಇದೇ ಮೊದಲು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ