/newsfirstlive-kannada/media/post_attachments/wp-content/uploads/2024/11/WAQF_1-2.jpg)
ವಕ್ಫ್ ವಿಚಾರದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದೆ. ರೈತರು ಕಂಗಾಲಾಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ವಕ್ಫ್ ಬಗ್ಗೆ ವಿಪಕ್ಷಗಳು ಧ್ವನಿ ಎತ್ತುವ ಜೊತೆಗೆ ಹೋರಾಟ ಮಾಡುತ್ತಿದೆ. ಮಠ ಹಾಗೂ ರೈತರ ಜಮೀನಿನ ಮೇಲೆ ಕಣ್ಣಾಕಿರುವ ವಕ್ಫ್ ಬಗ್ಗೆ ಹಾಗೂ ಸರ್ಕಾರದ ನಡೆ ಬಗ್ಗೆ ಸ್ವಾಮೀಜಿಗಳು ಕಿಡಿಕಾರಿದ್ದಾರೆ.
ವಕ್ಫ್ ಪೆಡಂಭೂತ ರಾಜ್ಯದ ರೈತರನ್ನು ಬೆಚ್ಚಿ ಬೀಳಿಸಿದೆ. ಕಲ್ಲೆಸೆದ ಜಾಗವೆಲ್ಲ ನಂದೇ ಅಂತಿರುವ ವಕ್ಫ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದ್ರೂ ಕೂಡ ಅಲ್ಲಲ್ಲಿ ವಕ್ಫ್ ಭೂಮಿಯನ್ನು ನುಂಗುತ್ತಲೇ ಸಾಗುತ್ತಿದೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ರೈತರಿಗೆ ಕೊಟ್ಟ ಎಲ್ಲಾ ನೋಟಿಸ್ ಹಿಂಪಡೆಯುತ್ತೇವೆ ಎಂದಿದ್ದರು. ಈಗ ಇದೇ ಮಾತನ್ನೇ ಸಚಿವ ಜಮೀರ್ ಅಹ್ಮದ್ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ:24 ವರ್ಷದ ನಂತರ ಗುಡ್ಡದ ಕೋಲ ಸಂಭ್ರಮ.. ದೀಪಾವಳಿ ಬೆನ್ನಲ್ಲೇ ಬಲಿಂದ್ರನ ಪೂಜಾ ಸಡಗರ
‘ರೈತರಿಗೆ ಯಾವುದೇ ಕಾರಣಕ್ಕೂ ಸಮಸ್ಯೆ ಮಾಡಲ್ಲ’
ಶಿಗ್ಗಾಂವಿ ಎಲೆಕ್ಷನ್ ರೌಂಡ್ಸ್ನಲ್ಲಿದ್ದ ಸಚಿವ ಜಮೀರ್ ಅಹ್ಮದ್ ಸಾಹೇಬ್ರು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸಭೆ ಮಾಡಿದರು. ಬಳಿಕ ಮಾತನಾಡಿದ ಅವರು, ಯಾರಿಗಾದ್ರೂ ನೋಟಿಸ್ ಕೊಟ್ಟಿದ್ರೆ ವಾಪಾಸ್ ಪಡೀತಿವಿ. ರೈತರಿಗೆ ಯಾವುದೇ ಕಾರಣಕ್ಕೂ ಸಮಸ್ಯೆ ಮಾಡಲ್ಲ ಎಂದರು.
ರೈತರಿಗೆ ನೋಟಿಸ್ ಕೊಟ್ಟಿದ್ದರೇ ಈಗಾಗಲೇ ಸಿಎಂ ಹೇಳಿದ್ದಾರೆ, ನಾನು ಹೇಳುತ್ತಿದ್ದೇನೆ ಆ ನೋಟಿಸ್ಗಳನ್ನ ಹಿಂದಕ್ಕೆ ಪಡೆಯುತ್ತೇವೆ. ಇದರಿಂದ ರೈತರಿಗೆ ಕಷ್ಟ ಕೊಡಲ್ಲ. ನಮಗೆ ಅನ್ನ ಕೊಡುವ ಅನ್ನದಾತರಿಗೆ ತೊಂದರೆ ಕೊಡಲ್ಲ.
ಜಮೀರ್ ಅಹ್ಮದ್, ಸಚಿವ
ರೈತರ ಆಸ್ತಿ ಕಬಳಿಕೆ ವಿಷಾದನೀಯ ಎಂದ ಬಾಳೆಹೊನ್ನೂರು ಶ್ರೀ
ಇನ್ನು ವಕ್ಫ್ ಸಂಸ್ಥೆ ರಾಜ್ಯದ ಅನೇಕ ಭಾಗಗಳಲ್ಲಿ ರೈತರ ಆಸ್ತಿಗಳ ಮೇಲೆ ತಮ್ಮ ಹಕ್ಕು ಚಲಾಯಿಸುತ್ತಿರೋ ಬಗ್ಗೆ ಬಾಳೆಹೊನ್ನೂರು ಶ್ರೀ ಕೆಂಡಕಾರಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ನಗರಕ್ಕೆ ಆಗಮಿಸಿದಾಗ ಮಾತನಾಡಿರುವ ಅವರು, ರೈತರ ಆಸ್ತಿಗಳ ಮೇಲೆ ವಕ್ಫ್ ಹಕ್ಕು ಚಲಾಯಿಸುತ್ತಿರುವುದು ಬಹಳ ವಿಷಾದಕರ ಎಂದಿದ್ದಾರೆ.
ನೋಟಿಸ್ ವಾಪಸ್ ಪಡೆದಿದ್ದೇವೆ ಎಂದು ಹೇಳುವುದು ಸುಲಭ. ಚುನಾವಣೆ ದೃಷ್ಟಿಯಿಂದ ಈ ಮಾತನ್ನು ಹೇಳಿದ್ದಾರೆ ಎಂದು ಅನಿಸುತ್ತಿದೆ. ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರಿನಲ್ಲಿ ಉಪ ಚುನಾವಣೆ ಇದೆ. ಹೀಗಾಗಿ ನೋಟಿಸ್ ಹಿಂಪಡೆಯುತ್ತೇವೆ ಎಂದು ಹೇಳಿರಬಹುದು.
ಬಾಳೆಹೊನ್ನೂರು ಶ್ರೀ
ಇದನ್ನೂ ಓದಿ: BMTC ಬಸ್ ಚಾಲನೆಯಲ್ಲಿ ಇರುವಾಗಲೇ ಡ್ರೈವರ್ಗೆ ಹೃದಯಾಘಾತ, ಸಾ*ವು
ಸರ್ಕಾರಿ ಸ್ಮಶಾನವಾಗಿದ್ದ ಜಾಗ ಈಗ ಸುನ್ನಿ ಖಬ್ರಸ್ತಾನ್
ತಲೆ ತಲಾಂತರದಿಂದ ಸರ್ಕಾರಿ ಸ್ಮಶಾನವಾಗಿದ್ದ ಜಾಗದ ಮೇಲೂ ಸುನ್ನಿ ಖಬ್ರಸ್ತಾನ್ ಕಣ್ಣು ಬಿದ್ದಿದೆ. ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕಿನ ನಂದನಹೊಸೂರ ಗ್ರಾಮದ ಮಾರಮ್ಮ ದೇವಸ್ಥಾನ, ಮೈಲಾರಲಿಂಗೇಶ್ವರಕಟ್ಟೆ ಈಗ ಖಬ್ರಸ್ತಾನ್ದಲ್ಲಿರೋ ದಾಖಲೆ ನೋಡಿ ಗ್ರಾಮಸ್ಥರು ಹೌಹಾರಿದ್ದಾರೆ.
ವಕ್ಫ್ ಬಗ್ಗೆ ಜನರಲ್ಲಿ ಮೂಡಿರುವ ಆತಂಕವನ್ನು ಸರ್ಕಾರ ಶಾಶ್ವತವಾಗಿ ನಿವಾರಿಸಬೇಕಿದೆ. ಸಿಎಂ ಸಿದ್ದರಾಮಯ್ಯ ನೋಟಿಸ್ ಹಿಂಪಡೆಯುತ್ತೇವೆ ಅಂತ ಹೇಳಿದ್ದೇನೋ ನಿಜ. ಆದ್ರೆ ಅದು ಶಾಶ್ವತ ಪರಿಹಾರವಾಗಬೇಕು. ಇಲ್ಲದಿದ್ರೆ ಮುಂದೆ ಮತ್ತೆ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ