/newsfirstlive-kannada/media/post_attachments/wp-content/uploads/2025/06/Zindagified1.jpg)
ಬೆಂಗಳೂರು: ಬೇರೆ ಬೇರೆ ರಾಜ್ಯದ ಜನರು ಸಿಲಿಕಾನ್ ಸಿಟಿಗೆ ಬಂದು ತಮ್ಮ ಜೀವನವನ್ನು ನಡೆಸುತ್ತಾ ಇರುತ್ತಾರೆ. ಕೆಲವು ಮಂದಿಗೆ ಬೆಂಗಳೂರು ಇಷ್ಟವಾದ್ರೆ, ಇನ್ನೂ ಕೆಲವರಿಗೆ ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಂಡು ಹೋಗಲು ಕಷ್ಟಕರವಾಗಿ ಬಿಡುತ್ತೆ.
ಅದೇ ರೀತಿ ಇಲ್ಲೊಂದು ದಂಪತಿ 2 ವರ್ಷಗಳ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರನ್ನು ತೊರೆಯಲು ಮುಂದಾಗಿದ್ದಾರೆ. ಅಲ್ಲದೇ ದಂಪತಿ ಬೆಂಗಳೂರನ್ನು ಬಿಟ್ಟು ಹೋಗುತ್ತಿರೋದು ಯಾಕೆ ಅಂತ ಕೂಡ ವಿವರಿಸಿದ್ದಾರೆ. ಮೊದಲು ಬೆಂಗಳೂರಿನಲ್ಲಿ ಜೀವನವನ್ನು ಆನಂದಿಸಿದ ಅಶ್ವಿನ್ ಮತ್ತು ಅಪರ್ಣ, ಸಿಲಿಕಾನ್ ಸಿಟಿಯಿಂದ ಹೊರಗೆ ಹೋಗಲು ನಿರ್ಧರಿಸಿದ್ದು ಏಕೆ ಅಂತ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲೇ ವಾಸವಾಗಿದ್ದ ದಂಪತಿ ಇಲ್ಲಿನ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದೇ ತಮ್ಮ ಸ್ಥಳಾಂತರಕ್ಕೆ ಕಾರಣ ಎಂದು ಅಶ್ವಿನ್ ಮತ್ತು ಅಪರ್ಣ ಹೇಳಿದ್ದಾರೆ. ಇದರ ಪರಿಣಾಮವಾಗಿ ನಾವಿಬ್ಬರೂ ಅನಾರೋಗ್ಯಕ್ಕೆ ತುತ್ತಾಗಿದ್ದೇವೆ ಎಂದಿದ್ದಾರೆ. ಬೆಂಗಳೂರಿನ ವಾತಾವರಣ, ಹವಾಮಾನ ಮತ್ತು ಜನರನ್ನು ಇಷ್ಟಪಟ್ಟರೂ, ಈಗ ನಗರವನ್ನು ಬಿಟ್ಟು ಹೋಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
View this post on Instagram
‘ಬೆಂಗಳೂರು ನಿಧಾನವಾಗಿ ನಮ್ಮನ್ನು ಕೊಲ್ಲುತ್ತಿದೆ’
27 ವರ್ಷದ ಅಶ್ವಿನ್ ಮತ್ತು ಅಪರ್ಣ ಇಬ್ಬರೂ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮದೇ ಆದ ವ್ಯವಹಾರವನ್ನು ಸಹ ನಡೆಸುತ್ತಿದ್ದರು, ಮತ್ತು ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಜೀವಿಸಿದ್ದಾರೆ. ನೀವು ನಮ್ಮನ್ನು ದ್ವೇಷಿಸಬಹುದು, ಆದರೆ ಬೆಂಗಳೂರು ನಿಧಾನವಾಗಿ ನಮ್ಮನ್ನು ಕೊಲ್ಲುತ್ತಿದೆ ಎಂದು ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ಹವಾಮಾನ, ಅದರ ವಾತಾವರಣದಿಂದ ನಾವು ಅನಾರೋಗ್ಯಕ್ಕೆ ಒಳಗಾದೆವು. ನನಗೆ ಉಸಿರಾಟದ ತೊಂದರೆ, ಅಲರ್ಜಿ ಮತ್ತು ಶೀತ ಕೂಡ ಬರದ ನನಗೆ ಯಾವಾಗಲೂ ಕೆಮ್ಮು ಮತ್ತು ಸೀನುವಿಕೆಯಿಂದ ಬಳಲುತ್ತಿದ್ದೆ. ಪ್ರತಿದಿನ ಆರೋಗ್ಯಕರವಾಗಿ ಇರಲು ವ್ಯಾಯಾಮ ಮಾಡುವ ಮೂಲಕ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಆದ್ರೆ ಕೊನೆಗೆ ಬೆಂಗಳೂರಿನ ಗಾಳಿಯ ಗುಣಮಟ್ಟವು ನಮ್ಮ ಅನಾರೋಗ್ಯಕ್ಕೆ ಮೂಲ ಕಾರಣವಾಗಿದೆ ಎಂದು ದಂಪತಿ ವಿಡಿಯೋದಲ್ಲಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ತಾಜಾ ಗಾಳಿ ಮತ್ತು ಉತ್ತಮ ಹವಾಮಾನವಿದೆ ಎಂದು ಜನರು ಹೇಳುತ್ತಾರೆ. ಆದರೆ ಅದು ಎಷ್ಟರ ಮಟ್ಟಿಗೆ ಇದೆ ಎಂದು ಅಪರ್ಣಾ ವೀಡಿಯೊದಲ್ಲಿ ಪ್ರಶ್ನೆ ಮಾಡಿದ್ದಾರೆ. ಫೆಬ್ರವರಿಯಲ್ಲಿ, ನಾವು ವಾಯು ಗುಣಮಟ್ಟ ಸೂಚ್ಯಂಕವನ್ನು ಪರಿಶೀಲಿಸಿದಾಗ ಅದು 297ಕ್ಕೆ ತಲುಪಿದೆ. ಇದು 15 ಸಿಗರೇಟ್ ಸೇದುವುದಕ್ಕೆ ಸಮವಾಗಿದೆ. ಬೆಂಗಳೂರು ಅದ್ಭುತ. ವ್ಯವಹಾರವನ್ನು ಪ್ರಾರಂಭಿಸಲು ಸಹ ಚೆನ್ನಾಗಿದೆ. ಇಲ್ಲಿ ವಾಸಿಸಲು ಉತ್ತಮ ಸ್ಥಳವಾಗಿದೆ. ಈ ನಗರವು ನಮ್ಮನ್ನು ಕೊಲ್ಲುವ ಮೊದಲು ನಾವು ಬೆಂಗಳೂರನ್ನು ತೊರೆಯಲು ಮುಂದಾಗಿದ್ದೇವೆ. ಇಲ್ಲಿ ನಮ್ಮ ಕೆಲಸ ಮತ್ತು ನಮ್ಮ ಸ್ನೇಹಿತರು ಇದ್ದಾರೆ. ಆದರೆ ನಮಗೆ ನಮ್ಮ ಆರೋಗ್ಯ ಮುಖ್ಯ. ಇದಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ