/newsfirstlive-kannada/media/post_attachments/wp-content/uploads/2023/09/Modi-and-Bangladesh-PM.jpg)
ಢಾಕಾ: ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ನಡೆದ ಹಿಂಸಾಚಾರದಲ್ಲಿ ಕೊನೆಗೂ ಬಾಂಗ್ಲಾದೇಶ ಪ್ರಧಾನಮಂತ್ರಿ ತಲೆದಂಡವಾಗಿದೆ. ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: 93ಕ್ಕೆ ಏರಿದ ಸಾವಿನ ಸಂಖ್ಯೆ; ಬಾಂಗ್ಲಾದೇಶದ ಹಿಂಸಾಚಾರಕ್ಕೆ ಅಸಲಿ ಕಾರಣವೇನು?
ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವುದನ್ನು ಘೋಷಣೆ ಮಾಡಿದ್ದಾರೆ. ಮೀಸಲಾತಿಗೆ ಹೋರಾಟ ನಡೆಸುತ್ತಿದ್ದ ಉದ್ರಿಕ್ತರು ಪ್ರಧಾನಿ ನಿವಾಸಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಬಾಂಗ್ಲಾ ಸೇನೆ ಗಡುವು ನೀಡಿತ್ತು.
ದೇಶ ಬಿಟ್ಟು ಬಂದ ಶೇಖ್ ಹಸೀನಾ!
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಭದ್ರತಾ ದೃಷ್ಟಿಯಿಂದ ಶೇಖ್ ಹಸೀನಾ ಹಾಗೂ ಅವರ ಸಹೋದರಿ ಢಾಕಾ ಬಿಟ್ಟು ವಿದೇಶಕ್ಕೆ ತೆರಳಿದ್ದಾರೆ. ಶೇಖ್ ಹಸೀನಾ ಅವರ ತಂದೆ ಮುಜೀಬುರ್ ರೆಹಮಾನ್ ಹತ್ಯೆಯ ಬಳಿಕ ಭಾರತದಲ್ಲಿ ಆಶ್ರಯ ಪಡೆದಿದ್ದರು. ಈಗ ಮತ್ತೆ ಶೇಖ್ ಹಸೀನಾ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಸಾಧ್ಯತೆ ಇದೆ. ಈ ಹಿಂದೆ ಭಾರತದಲ್ಲೇ ವಾಸವಿದ್ದ ಶೇಖ್ ಹಸೀನಾ ಅವರು ಮತ್ತೆ ಆಶ್ರಯ ಪಡೆಯಲು ಮುಂದಾಗಿದ್ದಾರೆ.
ಬಾಂಗ್ಲಾದಲ್ಲಿ ಅಸಲಿಗೆ ಆಗಿದ್ದೇನು?
ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಸರ್ಕಾರಿ ಹುದ್ದೆಗಳಲ್ಲಿ ಶೇ.30ರಷ್ಟು ಹುದ್ದೆಗಳನ್ನು 1971ರ ಯುದ್ಧದ ಯೋಧರು, ಕುಟುಂಬಕ್ಕೆ ನೀಡಲು ನಿರ್ಧಾರ ಮಾಡಿದ್ದರು. ಈ ನಿರ್ಧಾರಕ್ಕೆ ಬಾಂಗ್ಲಾದೇಶದ ಯುವಜನತೆಯಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮೀಸಲಾತಿಯನ್ನು ಜಾರಿಗೊಳಿಸಿದರೆ ಹೊಸ ತಲೆಮಾರಿನ ಯುವಜನತೆಗೆ ಉದ್ಯೋಗ ಸಿಗಲ್ಲ ಎಂದು ಆಕ್ರೋಶ ಜೋರಾಗಿತ್ತು.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಹಿಂಸಾಚಾರ, 72 ಸಾವು.. ಪ್ರಧಾನಿ ರಾಜೀನಾಮೆಗೆ ಆಗ್ರಹ; ಭಾರತೀಯರಿಗೆ ಹೇಳಿದ್ದೇನು?
ಕಳೆದ ಒಂದು ತಿಂಗಳಿಂದ ಬಾಂಗ್ಲಾ ಯುವಜನತೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ಈ ಹೋರಾಟ ಹಿಂಸಾಚಾರಕ್ಕೆ ತಿರುಗಿ ನಿನ್ನೆಗೆ 92 ಮಂದಿ ಸಾವನ್ನಪ್ಪಿದ್ದರು. ಅಂತಿಮವಾಗಿ ಬಾಂಗ್ಲಾ ದೇಶದಲ್ಲಿ ಶಾಂತಿ ಸ್ಥಾಪನೆಗೆ ಸೇನೆ ಮಧ್ಯಪ್ರವೇಶಿಸಿತ್ತು. ಸೇನೆಯ ಸೂಚನೆ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ.
ಭಾರತಕ್ಕೆ ಬಂದ ಶೇಖ್ ಹಸೀನಾ!
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಶೇಖ್ ಹಸೀನಾ ಅವರು ಸಹೋದರಿಯ ಜೊತೆ ಸೇನಾ ಹೆಲಿಕಾಪ್ಟರ್ನಲ್ಲೇ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಭಾರತಕ್ಕೆ ಬಂದಿರುವ ಶೇಖ್ ಹಸೀನಾ ಅವರು ಸ್ವಲ್ಪ ದಿನಗಳ ಕಾಲ ಭಾರತದಲ್ಲೇ ವಾಸ್ತವ್ಯ ಹೂಡಬಹುದು. ಇಲ್ಲವೇ ಲಂಡನ್ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ಬಾಂಗ್ಲಾದೇಶದ ಆಂತರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ಸೇನೆಯಿಂದ ಗಡಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಾಂಗ್ಲಾದೇಶದ ಬೆಳವಣಿಗೆ ಮೇಲೆ ಭಾರತದ ಸೇನೆ ತೀವ್ರ ನಿಗಾ ವಹಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ