/newsfirstlive-kannada/media/post_attachments/wp-content/uploads/2023/12/Team-India-6.jpg)
ಬಹುನಿರೀಕ್ಷಿತ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಮಹತ್ವದ ಟಿ20 ಸರಣಿ ಆಡಲಿದೆ.
ಇನ್ನು, ಮುಂದಿನ ತಿಂಗಳು ನವೆಂಬರ್ 8ನೇ ತಾರೀಕಿನಿಂದ ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಶುರುವಾಗಲಿದೆ. ಈಗಾಗಲೇ ಬಿಸಿಸಿಐ ಸೆಲೆಕ್ಷನ್ ಕಮಿಟಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟಿಸಿದೆ. ಆದರೆ, ಈ ಸಲ ಟೀಮ್ ಇಂಡಿಯಾ ಜೊತೆ ಹೆಡ್ ಕೋಚ್ ಗೌತಮ್ ಗಂಭೀರ್ ದಕ್ಷಿಣ ಆಫ್ರಿಕಾಗೆ ಹೋಗುತ್ತಿಲ್ಲ. ಇವರ ಬದಲಿಗೆ ಲಕ್ಷ್ಮಣ್ ಅವರು ತಂಡದೊಂದಿಗೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.
ವಿವಿಎಸ್ ಲಕ್ಷ್ಮಣ್ಗೆ ಕೋಚ್ ಜವಾಬ್ದಾರಿ!
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ನವೆಂಬರ್ 8 ರಂದು ಶುರುವಾಗಲಿದೆ. ಇದಾದ ನಂತರ ಮುಂದಿನ 3 ಪಂದ್ಯಗಳು ಕ್ರಮವಾಗಿ ನವೆಂಬರ್ 10, 13 ಮತ್ತು 15 ರಂದು ನಡೆಯಲಿದೆ. ಈ ಸರಣಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದು, ಸಾಯಿರಾಜ್ ಬಹುತುಲೆ, ಹೃಷಿಕೇಶ್ ಕಾನಿಟ್ಕರ್ ಮತ್ತು ಸುಭದೀಪ್ ಘೋಷ್ ಕೋಚಿಂಗ್ ಸಿಬ್ಬಂದಿ ಭಾಗವಾಗಿರಲಿದ್ದಾರೆ.
ಗಂಭೀರ್ ಗೈರಾಗಲು ಕಾರಣವೇನು?
ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ನೇತೃತ್ವದಲ್ಲೇ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಲಿದೆ. ಹೇಗಾದ್ರೂ ಮಾಡಿ ಹ್ಯಾಟ್ರಿಕ್ ಟಿ20 ಸರಣಿ ಗೆಲ್ಲಲೇಬೇಕು ಎಂದು ಸೂರ್ಯಕುಮಾರ್ ಯಾದವ್ ಪಣತೊಟ್ಟಿದ್ದಾರೆ. ಈ ಹೊತ್ತಲ್ಲೇ ಗಂಭೀರ್ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಜತೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ. ಹೀಗಾಗಿ ವಿವಿಎಸ್ ಲಕ್ಷ್ಮಣ್ಗೆ ಈ ಜವಾಬ್ದಾರಿ ಹೊರಿಸಲಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಯಾವಾಗ?
ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನವೆಂಬರ್ 22 ರಿಂದ 5 ಟೆಸ್ಟ್ಗಳ ಸರಣಿ ಶುರುವಾಗಲಿದೆ. ಆಸೀಸ್ ನೆಲದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಟೀಮ್ ಇಂಡಿಯಾಗೆ ಹೆಡ್ ಕೋಚ್ ಗಂಭೀರ್ ಅಗತ್ಯ ಇದೆ. ಹೀಗಾಗಿ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಜೊತೆ ಹೋಗಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಹೀಗಿದೆ..!
ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಖ್, ಅವೇಶ್ ಖಾನ್ , ಯಶ್ ದಯಾಳ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ