/newsfirstlive-kannada/media/post_attachments/wp-content/uploads/2024/11/Gambhir_ROHIT.jpg)
ರೋಹಿತ್ ಶರ್ಮಾ ಭವಿಷ್ಯವೇನು? ವಿರಾಟ್ ಕೊಹ್ಲಿಯನ್ನ ಡ್ರಾಪ್ ಮಾಡ್ಬೇಕಾ? ಬೂಮ್ರಾ ನಾಯಕನಾಗಬೇಕಾ? ಹೀಗೆ ಹಲವಾರು ಪ್ರಶ್ನೆಗಳು ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲಿನ ಬಳಿಕ ಎದ್ದಿದ್ದವು. ಈ ಎಲ್ಲ ಮಹತ್ವದ ವಿಚಾರಗಳ ಬಗ್ಗೆ ಬಿಸಿಸಿಐ ಹೆಡ್ಕ್ವಾಟರ್ಸ್ನಲ್ಲಿ ನಡೆದ ಹೈವೋಲ್ಟೆಜ್ ಸಭೆಯಲ್ಲಿ ಚರ್ಚೆ ನಡೆದಿದೆ. ಬಿಸಿಸಿಐ ಬಾಸ್ಗಳ ಖಡಕ್ ಪ್ರಶ್ನೆಗಳಿಗೆ, ರೋಹಿತ್-ಗಂಭೀರ್ ಆನ್ಸರ್ ಕೊಟ್ಟಿದ್ದಾರೆ.
ಬಾರ್ಡರ್-ಗವಾಸ್ಕರ್ ಸರಣಿಯ ಸೋಲು ಭಾರತೀಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆಟಗಾರರ ಪರ್ಫಾಮೆನ್ಸ್, ರೋಹಿತ್ ಶರ್ಮಾ ನಾಯಕತ್ವ, ಕೋಚ್ ಗಂಭೀರ್ ನಿರ್ಧಾರಗಳ ಬಗ್ಗೆ ಚರ್ಚೆ ಎದ್ದಿತ್ತು. ಇದ್ರ ಬೆನ್ನಲ್ಲೇ ಬಿಸಿಸಿಐ ಬಾಸ್ಗಳು ರಿವ್ಯೂ ಮೀಟಿಂಗ್ಗೆ ಬುಲಾವ್ ನೀಡಿದ್ರು. ಕುತೂಹಲ ಕೆರಳಿಸಿದ್ದ ಹೈವೋಲ್ಟೆಜ್ ಮೀಟಿಂಗ್ ಬಿಸಿಸಿಐ ಹೆಡ್ ಕ್ವಾಟರ್ಸ್ನಲ್ಲಿ ನಡೆದಿದೆ. ಬಿಸಿಸಿಐ ಬಾಸ್ಗಳು, ಸೆಲೆಕ್ಟರ್ಸ್, ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಭಾಗಿಯಾಗಿದ್ದ ಸಭೆಯಲ್ಲಿ ಪ್ರಮುಖ ವಿಚಾರಗಳ ಚರ್ಚೆಯಾಗಿದೆ.
ಚಾಂಪಿಯನ್ಸ್ ಟ್ರೋಫಿ ಅಂತ್ಯದವರೆಗೆ ರೋಹಿತ್ ನಾಯಕ.!
ಆಸ್ಟ್ರೇಲಿಯಾ ಪ್ರವಾಸದ ಸೋಲಿನ ಬಳಿಕ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಪ್ರಶ್ನೆ ಎದ್ದಿತ್ತು. ಸಭೆಯಲ್ಲಿ ಈ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದ್ದು, ಇನ್ನು ಕೆಲ ತಿಂಗಳು ನಾನು ನಾಯಕನಾಗಿ ಮುಂದುವರೆಯುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಕೊಚ್ ಗೌತಮ್ ಗಂಭೀರ್ ಕೂಡ ಚಾಂಪಿಯನ್ಸ್ ಟ್ರೋಫಿ ಅಂತ್ಯದವರೆಗೆ ನಾಯಕತ್ವದಲ್ಲಿ ಬದಲಾವಣೆ ಬೇಡ ಎಂದಿದ್ದಾರೆ. ಇದಕ್ಕೆ ಒಕೆ ಎಂದಿರೋ ಬಿಸಿಸಿಐ ಬಾಸ್ಗಳು ಚಾಂಪಿಯನ್ಸ್ ಟ್ರೋಫಿ ರಿಸಲ್ಟ್ನ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಬೂಮ್ರಾಗೆ ನಾಯಕತ್ವ ನೀಡಲು ಕೆಲವರ ವಿರೋಧ.!
ರೋಹಿತ್ ಶರ್ಮಾ ಬಳಿಕ ಜಸ್ಪ್ರಿತ್ ಬೂಮ್ರಾಗೆ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕತ್ವದ ಜವಾಬ್ಧಾರಿ ನೀಡೋ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಇದಕ್ಕೆ ಕೆಲ ಬಿಸಿಸಿಐ ಅಧಿಕಾರಿಗಳು, ಸೆಲೆಕ್ಟರ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ. ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಾರಣಕ್ಕೆ ಬೂಮ್ರಾಗೆ ವಿಶ್ರಾಂತಿ ನೀಡಬೇಕಾಗುತ್ತೆ. ನಾಯಕನಾಗಿ ಎಲ್ಲಾ ಪಂದ್ಯಗಳಿಗೂ ಬೂಮ್ರಾ ಲಭ್ಯರಿರಲ್ಲ. ಹೀಗಾಗಿ ಬೂಮ್ರಾಗೆ ನಾಯಕತ್ವ ನೀಡೋದು ಬೇಡ ಎನ್ನಲಾಗಿದೆ.
ಕೊಹ್ಲಿಗೆ ಚಾಂಪಿಯನ್ಸ್ ಟ್ರೋಫಿಯೇ ಲಾಸ್ಟ್ ಚಾನ್ಸ್.!
ಕಳಪೆ ಫಾರ್ಮ್ನ ಸುಳಿಗೆ ಸಿಲುಕಿರುವ ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಕೊಹ್ಲಿ ಡ್ರಾಪ್ ಮಾಡೋದ್ರ ಬಗ್ಗೆ ಪರ-ವಿರೋಧದ ಚರ್ಚೆ ನಡೆದಿದೆ. ಅಂತಿಮವಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಅಂತ್ಯದ ಬಳಿಕ ಕೊಹ್ಲಿ ಭವಿಷ್ಯವನ್ನ ನಿರ್ಧರಿಸಲು ತೀರ್ಮಾನಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪರ್ಫಾಮೆನ್ಸ್ ಮೇಲೆ ಕೊಹ್ಲಿ ಭವಿಷ್ಯ ನಿರ್ಧಾರವಾಗಲಿದೆ.
ನೋ ಕಾಂಪ್ರಮೈಸ್.. ಡೊಮೆಸ್ಟಿಕ್ ಕ್ರಿಕೆಟ್ ಕಡ್ಡಾಯ.!
ಬಾರ್ಡರ್-ಗವಾಸ್ಕರ್ ಸರಣಿ ಅಂತ್ಯದ ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್, ಎಲ್ಲಾ ಕ್ರಿಕಟರ್ಸ್ಗೆ ಡೊಮೆಸ್ಟಿಕ್ ಕ್ರಿಕೆಟ್ ಕಡ್ಡಾಯ ಎಂದು ವಾರ್ನಿಂಗ್ ಕೊಟ್ಟಿದ್ರು. ಈ ಬಗ್ಗೆ ಸಭೆಯಲ್ಲೂ ಚರ್ಚೆಯಾಗಿದ್ದು, ಟೀಮ್ ಇಂಡಿಯಾ ಪರ ಆಡದೇ ಇದ್ದ ಸಮಯದಲ್ಲಿ ದೇಶಿ ಕ್ರಿಕೆಟ್ ಆಡಬೇಕು ಎಂದು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಾರಣದಿಂದ ಡೊಮೆಸ್ಟಿಕ್ ಕ್ರಿಕೆಟ್ನಿಂದ ದೂರ ಉಳಿಯೋದಾದ್ರೆ, ಸೆಲೆಕ್ಟರ್ಸ್, ಕೋಚ್ ಒಪ್ಪಿಗೆ ಪಡೆಯೋದು ಕಡ್ಡಾಯ ಎಂಬ ನಿರ್ಧಾರ ಮಾಡಲಾಗಿದೆ.
ಫಿಟ್ನೆಸ್ಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನ.!
ಈ ಸಭೆಯಲ್ಲಿ ಆಟಗಾರರ ಇಂಜುರಿಗಳ ಬಗ್ಗೆಯೂ ಚರ್ಚೆಯಾಗಿದೆ. ಇಂಜುರಿ ಮ್ಯಾನೇಜ್ಮೆಂಟ್ ಹಾಗೂ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಜೊತೆಗೆ ಫಿಟ್ನೆಸ್ಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದೆ. ಯಾವುದೇ ಆಟಗಾರ ತಂಡದಿಂದ ಹೊರಗುಳಿದ್ರೆ, ವಾಪಾಸ್ಸಾಗೋಕು ಮುನ್ನ ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾಗೋದು ಕಡ್ಡಾಯ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ, ಹೀನಾಯ ಮುಖಭಂಗದ ಬಳಿಕ ಎಚ್ಚೆತ್ತುಕೊಂಡಂತೆ ಕಾಣ್ತಿರೋ ಬಿಸಿಸಿಐ ಬಾಸ್ಗಳು, ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದ್ರೆ, ಯಾವುದೇ ಬಿಗ್ ಡಿಶಿಷನ್ ತೆಗೆದುಕೊಳ್ಳದೇ, ಎಲ್ಲದಕ್ಕೂ ಚಾಂಪಿಯನ್ಸ್ ಟ್ರೋಫಿಯನ್ನ ಡೆಡ್ಲೈನ್ ಮಾಡಿಕೊಂಡಿದ್ದಾರೆ. ಹೀಗಾಗಿ, ಮಹತ್ವದ ಐಸಿಸಿ ಟೂರ್ನಿ ಬಳಿಕ ಟೀಮ್ ಇಂಡಿಯಾದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಕಾದು ನೋಡಬೇಕಿದೆ.
ಇದನ್ನೂ ಓದಿ:ಕ್ಯಾಪ್ಟನ್ ಆಗಬೇಕಿದ್ದ ಹಾರ್ದಿಕ್ ಪಾಂಡ್ಯಗೆ ಮತ್ತೆ ಮೋಸ; ಬಿಸಿಸಿಐನಿಂದ ಬಿಗ್ ಶಾಕ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್