/newsfirstlive-kannada/media/post_attachments/wp-content/uploads/2024/07/Bumrah_Rohit.jpg)
ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋತಿರುವ ಟೀಮ್ ಇಂಡಿಯಾ, ಈಗ ಮುಂದಿನ ಚಾಂಪಿಯನ್ಸ್ ಟ್ರೋಫಿಯತ್ತ ದೃಷ್ಟಿ ನೆಟ್ಟಿದೆ. ಟಿ20 ವಿಶ್ವಕಪ್ನಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲೋ ಕಾನ್ಫಿಡೆನ್ಸ್ನಲ್ಲಿ ಸಿದ್ಧತೆಯನ್ನೂ ಆರಂಭಿಸಿದೆ. ಇದ್ರ ನಡುವೆಯೇ ಆಘಾತಕಾರಿ ಸುದ್ದಿ ಟೀಮ್ ಇಂಡಿಯಾಗೆ ಬರ ಸಿಡಿಲನಂತೆ ಅಪ್ಪಳಿಸಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮ್ಯಾಚ್ ವಿನ್ನರ್ ಜಸ್ಪ್ರೀತ್ ಬುಮ್ರಾ ಆಡೋದು ಅನುಮಾನವಾಗಿದೆ.
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬ್ಯಾಕ್ ಇಂಜುರಿಗೆ ತುತ್ತಾಗಿದ್ದ ಜಸ್ಪ್ರೀತ್ ಬುಮ್ರಾ, ಮುಂದಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡೋದು ಅನುಮಾನವಾಗಿದೆ. ಸದ್ಯ ಫುಲ್ ಫಿಟ್ ಆಗದ ಬುಮ್ರಾ ಬೆಂಗಳೂರಿನ ಎನ್ಸಿಎಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಬ್ಯಾಕ್ ಇಂಜುರಿಗೆ ತುತ್ತಾದಾಗ ಮೇಜರ್ ಬ್ಯಾಕ್ ಸರ್ಜರಿ ಮಾಡಿದ್ದ ನ್ಯೂಜಿಲೆಂಡ್ನ ತಜ್ಞ ವೈದ್ಯ ರೋವನ್ ಅವರನ್ನ ಈಗಾಗಲೇ ಬೂಮ್ರಾ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಫುಲ್ ಫಿಟ್ ಆಗಲು ಹೆಚ್ಚಿನ ಸಮಯಾವಕಾಶ ಬೇಕು ಎನ್ನಲಾಗಿದೆ.
ಇಂಗ್ಲೆಂಡ್ ಸರಣಿಯಿಂದ ಹೊರಗುಳಿಯಲಿರೋ ಬುಮ್ರಾ, ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯಗಳನ್ನ ಬಹುತೇಕ ಅನುಮಾನವೇ! ನಾಕೌಟ್ ಪಂದ್ಯಗಳಿಗೆ ಲಭ್ಯರಾಗೋ ಸಾಧ್ಯತೆಯಿದೆ. ಪ್ರಮುಖ ಟೂರ್ನಿ ಬುಮ್ರಾ ಅಲಭ್ಯತೆ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ತಂದಿಟ್ಟಿದೆ. ಜೊತೆಗೆ ಬುಮ್ರಾ ಇಂಜುರಿ ಬಿಸಿಸಿಐನ ಕಾರ್ಯವೈಖರಿಯನ್ನ ಪ್ರಶ್ನೆ ಮಾಡುವಂತೆ ಮಾಡಿದೆ. ಜಸ್ಪ್ರೀತ್ ಬುಮ್ರಾ ಕರಿಯರ್ ಜೊತೆ ಚೆಲ್ಲಾಟವಾಡ್ತಿದೆಯಾ ಎಂಬ ಅನುಮಾನವನ್ನು ಹುಟ್ಟಿಸಿದೆ.
2022ರಿಂದ ಬುಮ್ರಾಗೆ ಕಾಡ್ತಿದೆ ಬೆನ್ನು ನೋವಿನ ಸಮಸ್ಯೆ!
2018ರಿಂದ ಜಸ್ಪ್ರೀತ್ ಬುಮ್ರಾಗೆ ಇಂಜುರಿ ಕಾಟ ಇದ್ದೇ ಇದೆ. ಆದ್ರೆ, ಈ ಬ್ಯಾಕ್ ಇಂಜುರಿ ಕಾಣಿಸಿಕೊಂಡಿದ್ದು 2022ರ ಆಗಸ್ಟ್ನಲ್ಲಿ. ಬೆನ್ನು ನೋವಿನಿಂದ ಬಳಲಿದ ಬುಮ್ರಾ 2022ರ ಏಷ್ಯಾಕಪ್ನಿಂದ ಹೊರಗುಳಿದ್ರು. ಬಳಿಕ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲಿ 2 ಪಂದ್ಯಗಳನ್ನಾಡಿದ್ರು. 2 ಪಂದ್ಯ ಆಡಿದ ಬೆನ್ನಲ್ಲೇ ಮತ್ತೆ ಬ್ಯಾಕ್ ಇಂಜುರಿ ಕಾಣಿಸಿಕೊಳ್ತು. 2022ರ ಟಿ20 ವಿಶ್ವಕಪ್ನಿಂದ ಔಟ್ ಆದ್ರು. ಅಂತಿಮವಾಗಿ 2023ರಲ್ಲಿ ಬ್ಯಾಕ್ ಸರ್ಜರಿಗೆ ಒಳಗಾದ ಬುಮ್ರಾ, ವಿಶ್ರಾಂತಿಯ ಕಾರಣಕ್ಕೆ 2023ರ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ನಿಂದ ದೂರ ಉಳಿದಿದ್ರು.
2023ರಲ್ಲಿ ಐರ್ಲೆಂಡ್ ಸರಣಿಯೊಂದಿಗೆ ಕಮ್ಬ್ಯಾಕ್ ಮಾಡಿದ ಬುಮ್ರಾ, 2023 ಏಕದಿನ ವಿಶ್ವಕಪ್ನಲ್ಲಿ ಹಾಗೂ 2024 ಟಿ20 ವಿಶ್ವಕಪ್ನಲ್ಲಾಡಿ ಮಿಂಚಿದರು. ಜೂನ್ನಲ್ಲಿ ವಿಶ್ವಕಪ್ ಆಡಿದ ಬಳಿಕ ವಿಶ್ರಾಂತಿಯ ಮೊರೆ ಹೋಗಿದ್ದ ಬುಮ್ರಾ, ಬಾಂಗ್ಲಾ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲಿ ಆಡಿದ್ರು. ಇತ್ತೀಚೆಗೆ ಮುಕ್ತಾಯವಾದ ಆಸಿಸ್ ಪ್ರವಾಸದಲ್ಲಂತೂ ಇಡೀ ತಂಡವನ್ನ ಹೆಗಲಮೇಲೆ ಹೊತ್ತುಕೊಂಡು ಸಾಗಿದ್ರು. ಅದ್ಭುತ ಆಟದಿಂದ ಮಿಂಚಿದ್ರು. ಸತತ ಪಂದ್ಯವನ್ನಾಡಿ ದಣಿದ ಬೆನ್ನಲ್ಲೇ, ಮತ್ತೆ ಬೆನ್ನುನೋವು ಕಾಣಿಸಿಕೊಂಡಿದೆ. ಇದು ಜಸ್ಪ್ರೀತ್ ಬುಮ್ರಾ ವಿಚಾರದಲ್ಲಿ ಬಿಸಿಸಿಐ ಕೇರ್ಲೆಸ್ ಆಗಿದ್ಯಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿಗೆ ಮುನ್ನವೇ ಟೀಮ್ ಇಂಡಿಯಾಗೆ ಬಿಗ್ ಶಾಕ್; ಕೈ ಕೊಟ್ಟ ಸ್ಟಾರ್ ಪ್ಲೇಯರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ