/newsfirstlive-kannada/media/post_attachments/wp-content/uploads/2024/12/BGM_MAHAVEER.jpg)
ಬೆಳಗಾವಿ: ರಾಜಕಾರಣಿಗಳು ಎಂದಿಗೂ ಬಕಾಸುರರಂತೆ ಎಷ್ಟು ಹಣ, ಆಸ್ತಿ ಇದ್ದರೂ ಇನ್ನು ಬೇಕೆಂದು ಕುಳಿತಿರುತ್ತಾರೆ. ಎಂದಿಗೂ ತಮ್ಮ ಖಾತೆಯಿಂದ ಒಂದು ರೂಪಾಯಿ ಕಳೆದುಕೊಳ್ಳಲ್ಲ. ಅವರು ಏನು ಕೊಟ್ಟರೂ ಸರ್ಕಾರದ ಯೋಜನೆಗಳಿಂದ ಕೊಟ್ಟು ಅದರ ಮೇಲೆ ತಮ್ಮ ಹೆಸರು ಬರೆಯಿಸಿಕೊಳ್ಳುತ್ತಾರೆ. ರಾಜಕಾರಣಿ- ರೈತ ಈ ಇಬ್ಬರನ್ನೂ ಹೋಲಿಕೆ ಸಾಧ್ಯವಿಲ್ಲ ಏಕೆಂದರೆ ರಾಜಕಾರಣಿ ಬೇಕು ಅಂತಾನೆ, ಆದರೆ ರೈತ ನೀಡುತ್ತಿರುತ್ತಾನೆ. ಇದನ್ನೆಲ್ಲಾ ಹೇಳುವುದಕ್ಕೂ ಇಲ್ಲೊಬ್ಬ ಕೃಷಿಕರು ಮಾಡುತ್ತಿರುವ ದಾನ, ಧರ್ಮಗಳನ್ನ ಕೇಳಿದ್ರೆ ಅಬ್ಬಾಬ್ಬ!! ಎಂದು ಹೇಳುತ್ತೀರಾ ನೀವು.
ನಾವು ದುಡಿದಿರೋದರಲ್ಲಿ ಒಂದು ಪಾಲು ಬಡವರಿಗೆ ದಾನ ಮಾಡಬೇಕೆಂದು ಹೇಳುತ್ತಾರೆ. ಅದರಂತೆ ಇಲ್ಲೊಬ್ಬ ಆಧುನಿಕ ಕಾಲದ ಕರ್ಣರೊಬ್ಬರು ಮದುವೆಗೆ ಹಾಕುವಂತೆ ಸ್ಟೇಜ್ ಹಾಕಿದ್ದಾರೆ. ಅದನ್ನು ಬಣ್ಣ ಬಣ್ಣದ ಹೂವುಗಳಿಂದ ಸಿ0ಗಾರ ಮಾಡಿ, ಬಳಿಕ ಸಮಾರಂಭದಂತೆ ಬಡವರಿಗೆ ಬಂಗಾರ, ಬೆಳ್ಳಿ, ಹಣ, ಲ್ಯಾಪ್ಟ್ಯಾಪ್, ಬಟ್ಟೆಗಳನ್ನು ದಾನ ಮಾಡಿದ್ದಾರೆ.
ಎಷ್ಟು ವರ್ಷದಿಂದ ದಾನ-ಧರ್ಮ ಮಾಡುತ್ತಾರೆ?
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಕೃಷಿಕ ಮಹಾವೀರ ಪಡನಾಡ ಇವರು ಏನು ದೊಡ್ಡ ರಾಜಕಾರಣಿ, ಉದ್ಯಮಿ ಅಲ್ಲ. ಸಾಮಾನ್ಯ ಕೃಷಿಕ. ತಮ್ಮ ಕೃಷಿ ಭೂಮಿಯಲ್ಲಿ ದುಡಿದು ಗಳಿಸಿರುವ ಒಂದು ಪಾಲನ್ನು ಬಡ ಕುಟುಂಬಗಳಿಗೆ ದಾನ ಮಾಡುತ್ತಾರೆ. ಇದು ಏನು ಒಂದು ವರ್ಷದಿಂದಲೋ ಎರಡು ವರ್ಷದಿಂದನೋ ನಡೆದುಕೊಂಡು ಬರುತ್ತಿಲ್ಲ. ಪ್ರಚಾರಕ್ಕಂತೂ ಮಾಡುತ್ತಿಲ್ಲ. ಸುಮಾರು 30 ವರ್ಷಗಳಿಂದ ಮಹಾವೀರ ಪಡನಾಡ ಅವರು ಈ ದಾನ ಧರ್ಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.
ಐನಾಪೂರ ಪಟ್ಟಣದಲ್ಲಿ ದಾನ ನೀಡುವ ಕಾರ್ಯಕ್ರಮದಲ್ಲಿ ಮಹಾವೀರ ಪಡನಾಡ ಅವರು 40 ಲಕ್ಷ ರೂಪಾಯಿಗಳನ್ನು ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ಇದರಲ್ಲಿ ಕಾಗವಾಡ ವಿದ್ಯಾಸಾಗರ ಶಾಲೆಗೆ ₹25 ಲಕ್ಷ ದಾನ, ಬೆಳಗಾವಿಯ ಭಗವಾನ ಆಂಗ್ಲ ಮಾಧ್ಯಮ ಶಾಲೆಗೆ ₹11 ಲಕ್ಷ, ಹುದ್ದಾರ ಶಿಕ್ಷಣ ಸಂಸ್ಥೆಗೆ 1 ಲಕ್ಷ ಸೇರಿ ಇತರೆ ಶಿಕ್ಷಣ ಸಂಸ್ಥೆಗಳಿಗೆ ₹3 ಲಕ್ಷ ದಾನ ಮಾಡಿದ್ದಾರೆ. ಇದರ ಜೊತೆಗೆ ಸುಮಾರು 180 ಜೈನ ಪಂಡಿತರಿಗೆ ಹಣ ಹಾಗೂ ಬಟ್ಟೆಗಳನ್ನು ದಾನ ಮಾಡಿದ್ದಾರೆ. ಇವರಷ್ಟೇ ಅಲ್ಲ ಮಹಿಳೆಯರು, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ವೃದ್ಧರಿಗೆ ದಾನ ಮಾಡಿದ್ದಾರೆ. ಅಲ್ಲದೇ ಶಿಕ್ಷಣ ಸಂಸ್ಥೆಯೊಂದಕ್ಕೆ ಸುಮಾರು 50 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಸದ್ಯ ಈ ಬಗ್ಗೆ ಮಹಾವೀರ ಪಡನಾಡರು ಮಾತನಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ಹೈವೇಯಲ್ಲಿ ಕಾರಿಗೆ ಮೊಟ್ಟೆ ಒಡೆದು, ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ
ಸುಮಾರು 30 ವರ್ಷಗಳಿಂದ ದಾನ ಮಾಡಿಕೊಂಡು ಬರುತ್ತಿದ್ದೇನೆ. ಪ್ರತಿ ವರ್ಷ 150 ಜನ ಪಂಡಿತರಿಗೆ, ಶಾಲಾ-ಕಾಲೇಜುಗಳಿಗೆ, ದೇವಾಲಯಗಳಿಗೆ ದಾನಗಳನ್ನು ಮಾಡಿದ್ದೇನೆ. ಮೊದಲಿನಿಂದಲೂ ನಮ್ಮದು ಒಕ್ಕಲುತನದ ಕುಟುಂಬ. ಅದರಲ್ಲಿಯೇ ಸ್ವಲ್ಪ ಉಳಿತಾಯ ಮಾಡಿ, ಅದನ್ನು ದಾನ ರೀತಿ ಕೊಡುತ್ತಿದ್ದೇವೆ. ಎಲ್ಲಿವರೆಗೂ ಸಾಧ್ಯ ಆಗುತ್ತೋ ಅಲ್ಲಿವರೆಗೆ ನಡೆಸಿಕೊಂಡು ಹೋಗುತ್ತೇನೆ. ಕೆಲವೊಂದು ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿರುತ್ತವೆ. ಶಿಕ್ಷಕರಿಗೆ ಸಂಬಳ ಇರುವುದಿಲ್ಲ. ಅಲ್ಲಿ ಪ್ರೋತ್ಸಾಹ ಧನ ನೀಡುತ್ತೇವೆ.
ಎಷ್ಟೋ ಬಡಜನರಿಗೆ ಬಂಗಾರ ಎಂದರೆ ಮರಿಚೀಕೆ ಆಗಿದೆ. ಹೀಗಾಗಿ ಬಂಗಾರ, ಬೆಳ್ಳಿ ಕೊಟ್ಟಿದ್ದೇನೆ. ಕಿವಿಯೋಲೆ, ಮೂಗುತಿ ಇಂತಹವುಗಳನ್ನೆಲ್ಲಾ ಕೊಡುತ್ತೇವೆ. ಮನೆಯಲ್ಲಿ ದಾನ ಮಾಡಿದಗಿನಿಂದ ಎಲ್ಲ ಚೆನ್ನಾಗಿ ನಡೆಯುತ್ತಿದೆ. ಇದಕ್ಕೆ ಮನೆಯವರೆಲ್ಲ ಸಪೋರ್ಟ್ ಮಾಡುತ್ತಿದ್ದಾರೆ.
ಮಹಾವೀರ ಪಡನಾಡ, ಕೃಷಿಕ
ದುಡಿಯುವುದು ಒಂದೇ ಅಲ್ಲ, ಇದರ ಜೊತೆ ಕೊಡುವುದಕ್ಕೂ ನಮ್ಮಲ್ಲಿ ಉದಾರ ಭಾವ ಇರಬೇಕು ಎನ್ನುವುದು ಮಹಾವೀರ ಪಡನಾಡರಿಂದ ನಮಗೆ ಗೊತ್ತಾಗುತ್ತದೆ. ಕೋಟಿ ಕೋಟಿ ಇದ್ದರೂ ನಾವು ಕೊಟ್ಟಿದ್ದು ನೆನಪು ಮಾಡಿಕೊಳ್ಳುವವರು ಇದ್ದಾಗ ಗಳಿಸಿದವನಿಗೆ ಸಂತೃಪ್ತಿಯಂತೆ. ಇದು ಮಹಾವೀರ ಪಡನಾಡರಿಗೆ ಲಭಿಸಿರಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ