/newsfirstlive-kannada/media/post_attachments/wp-content/uploads/2025/06/UDP-CHINAMYA-SHETTY-2.jpg)
ಉಡುಪಿ: ಆರ್ಸಿಬಿ ಸಂಭ್ರಮಾಚರಣೆಯಲ್ಲಿ ಜೀವ ಕಳೆದುಕೊಂಡ ಚಿನ್ಮಯಿ ಶೆಟ್ಟಿ (19) ಕುಟುಂಬಕ್ಕೆ ಸರ್ಕಾರ ಪರಿಹಾರದ ಚೆಕ್ ಹಸ್ತಾಂತರ ಮಾಡಿದೆ. ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರು ರಸ್ತೆಯಲ್ಲಿರುವ ನಿವಾಸಕ್ಕೆ ತೆರಳಿ ಪರಿಹಾರ ನೀಡಿದ್ದಾರೆ.
ಬೆಂಗಳೂರಿನ ತಿಪ್ಪಸಂದ್ರದಲ್ಲಿ ಚಿನ್ಮಯಿ ಕುಟುಂಬ ನೆಲೆಸಿತ್ತು. ಚಿನ್ಮಯಿ ನಿಧನರಾದ ಮೇಲೆ ತಾಯಿ ಪೂಜಾ ಶೆಟ್ಟಿ ಹಾಗೂ ಕರುಣಾಕರ ಶೆಟ್ಟಿ ಅವರು ಉಡುಪಿಯ ಹಿರಿಯರ ಮನೆಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಎಸ್ಪಿ ಹರಿರಾಮ್ ಶಂಕರ್, ಎಸಿ ರಶ್ಮಿ ಮೂಲಕ 25 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿ: ಸರ್ಕಾರಕ್ಕೆ ಕಾಲ್ತುಳಿತದ ಡ್ಯಾಮೇಜ್, ಸಿಎಂ-ಡಿಸಿಎಂಗೆ ದಿಢೀರ್ ಬುಲಾವ್.. ದೆಹಲಿಯಲ್ಲಿ ಇಂದು ‘ಹೈ’ ಟಾಕ್!
ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿರುವ ಡಾ.ವಿದ್ಯಾ ಕುಮಾರಿ, ಸರ್ಕಾರದ ಆದೇಶದಂತೆ 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಸರ್ಕಾರ ಈ ಕುಟುಂಬದ ಜೊತೆ ಇರಲಿದೆ. ಮುಂದೆಯೂ ಜಿಲ್ಲಾಡಳಿತ ಅಗತ್ಯ ನೆರವು ನೀಡಲು ಬದ್ಧವಾಗಿದೆ. ಕುಟುಂಬಕ್ಕೆ ಈ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಮಗಳು ಕ್ರಿಕೆಟ್ ಅಭಿಮಾನಿ ಆಗಿರಲಿಲ್ಲ..
ಸರ್ಕಾರದ ಪರಿಹಾರ ಸ್ವೀಕರಿಸಿ ಮಾತನಾಡಿದ ಚಿನ್ಮಯಿ ಶೆಟ್ಟಿ ತಂದೆ ಕರುಣಾಕರ ಶೆಟ್ಟಿ, ನಾವು ಮಗಳನ್ನು ಕಳೆದುಕೊಂಡಿದ್ದೇವೆ. ಈ ನೋವು ನಮಗೆ ನಿರಂತರ. ಇದು ಮರೆಯಲು ಸಾಧ್ಯವಿಲ್ಲದ ಘಟನೆ. ದುರ್ಘಟನೆಗೆ ಸರ್ಕಾರವೇ ಹೊಣೆ. ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ಮಾಡಿಸಿ. 11 ಸಾವುಗಳು ಹೇಗೆ ಸಂಭವಿಸಿತು ಅನ್ನೋದು ಬೆಳಕಿಗೆ ಬರಲಿ. ಆರ್ಸಿಬಿ ಕೇವಲ ಒಂದು ಫ್ರಾಂಚೈಸಿ. ಇಷ್ಟೊಂದು ಸಂಭ್ರಮದ ಅಗತ್ಯ ಇತ್ತಾ? ಅದು ಕೂಡ ವಿಧಾನಸೌಧದ ಮುಂದೆ ಯಾಕೆ ಮಾಡಿದರು? ಈ ಹಿಂದೆ ಚೆನ್ನೈ, ಮುಂಬೈ ಗೆದ್ದಾಗ ಹೇಗೆ ಮಾಡಿರಲಿಲ್ಲ. ಮೃತ ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ ಕೊಡಿಸಿ. ನನ್ನ ಮಗಳು ಕ್ರಿಕೆಟ್ ಅಭಿಮಾನಿಯಾಗಿರಲಿಲ್ಲ. ಸ್ನೇಹಿತರ ಜೊತೆಗೆ ಹೋಗಿದ್ದಳು. ಇಂಥ ಜನ ಸೇರುವಲ್ಲಿ ಮಕ್ಕಳು ಹೋಗಬಾರದು ಎನ್ನುತ್ತ ಭಾವುಕರಾಗಿದ್ದಾರೆ.
ಇದನ್ನೂ ಓದಿ: ಐಪಿಎಲ್ ಸೆನ್ಸೇಷನಲ್.. ಈ ಸ್ಟಾರ್ ಮೇಲೆ ಕ್ಯಾಪ್ಟನ್, ಕೋಚ್ ಕೃಪೆ ಬೇಕೇಬೇಕು..
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ