/newsfirstlive-kannada/media/post_attachments/wp-content/uploads/2025/04/bng-kamuka.jpg)
ಬೆಂಗಳೂರಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದವರ ಮೇಲೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಬಲೆಗೆ ಬಿದ್ದಿದ್ದಾನೆ. ಕೇರಳದಲ್ಲಿ ಕಾಮುಕ ಸೆರೆಸಿಕ್ಕಿದ್ದಾನೆ. ಒಟ್ಟು 10 ದಿನ, 700 ಸಿಸಿಟಿವಿ, ಹತ್ತಾರು ಪೊಲೀಸರು, ಆಪರೇಷನ್ ಬಳಿಕ ಆರೋಪಿ ಕಾರ್ಯಾಚರಣೆಯೇ ಬಲು ರೋಚಕ ಆಗಿತ್ತು.
ಇದನ್ನೂ ಓದಿ: 3 ಬಾರಿ ಹೃದಯಾಘಾತ.. 500ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದ ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ವಿಧಿವಶ
ಮಾರ್ಚ್ 3ರ ಮಧ್ಯರಾತ್ರಿ 1.50ರ ಸಮಯದಲ್ಲಿ ಸದ್ದುಗುಂಟೆ ಪಾಳ್ಯದಲ್ಲಿ ನಡೆದ ಈ ಭಯಾನಕ ಘಟನೆ ಬೆಂಗಳೂರನ್ನ ಬೆಚ್ಚಿಬೀಳಿಸಿತ್ತು. ಹೆಣ್ಮಕ್ಕಳಿಗೆ ಸಿಲಿಕಾನ್ ಸಿಟಿ ಸೇಫ್ ಅಲ್ವಾ ಅನ್ನೋ ಪ್ರಶ್ನೆ ಹುಟ್ಟು ಹಾಕಿತ್ತು. ಈ ಘಟನೆ ನಡೆದು ವಾರ ಕಳೆದ್ರೂ ಆರೋಪಿ ಸಂತೋಷ್ ಪತ್ತೆಯಾಗದಿರೋದು ಆಕ್ರೋಶಕ್ಕೂ ಕಾರಣವಾಗಿತ್ತು. ಆದ್ರೀಗ ಕೊನೆಗೂ ಕತ್ತಲ ಕಾಮುಕ ಲಾಕ್ ಆಗಿದ್ದಾನೆ.
ತನ್ನ ಸ್ನೇಹಿತೆ ಜೊತೆ ನಡೆದುಕೊಂಡು ಬರ್ತಿದ್ದ ಯುವತಿಯನ್ನ ಹಿಂಬದಿಯಿಂದ ಕಳ್ಳನಂತೆ ಬಂದು ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಬಳಿಕ ಪರಾರಿಯಾಗಿದ್ದ. ಮೂರ್ನಾಲ್ಕು ಸಿಸಿಟಿವಿಯಲ್ಲಿ ಕಾಮುಕನ ಚಲನವಲನ ಸೆರೆಯಾಗಿದ್ರೂ, ಆತ ಎಲ್ಲಿದ್ದಾನೆ ಅನ್ನೋ ಸುಳಿವು ಸಿಕ್ಕಿರಲಿಲ್ಲ. ಈ ಅಸಹ್ಯ ಕೃತ್ಯ ನಡೆಸಿದ ನಂತರ ಬೆಂಗಳೂರು ಬಿಟ್ಟು ಎಸ್ಕೇಪ್ ಆಗಿದ್ದ. ಆಗ ಶುರುವಾಗಿದ್ದೇ ಕಾಮಕ್ರಿಮಿಯ ಹಂಟಿಂಗ್ ಕಾರ್ಯಾಚರಣೆ.
ಸದ್ದುಗುಂಟೆ ಪಾಳ್ಯದಲ್ಲಿ ನಡೆದ ಕಾಮುಕನ ಕೃತ್ಯದ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಗೌಡ ದೂರು ದಾಖಲಿಸಿದ್ರು. ಸಿಸಿಟಿವಿ ದೃಶ್ಯಾವಳಿ ಸಮೇತ ಪೊಲೀಸರಿಗೆ ಕಂಪ್ಲೆಂಟ್ ನೀಡಿದ್ರು. ತಕ್ಷಣ ಆರೋಪಿ ಪತ್ತೆಗಾಗಿ ಎರಡು ಪ್ರತ್ಯೇಕ ತಂಡ ರಚಿಸಿದ್ದ ಡಿಸಿಪಿ ಸಾರಾ ಫಾತೀಮಾ ಶೋಧ ಕಾರ್ಯ ಆರಂಭಿಸಿದ್ರು. ಎರಡು ಪ್ರತ್ಯೇಕ ಪೊಲೀಸ್ ತಂಡ ರಚಿಸಿಕೊಂಡು ಹೊರರಾಜ್ಯದಲ್ಲಿ ಹುಡುಕಾಟ ನಡೆಸಿದ್ರು. ಆರೋಪಿ ಪತ್ತೆಗಾಗಿ ಬರೋಬ್ಬರಿ 700ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿದ್ದರು. ಅಂತಿಮವಾಗಿ ಆರೋಪಿಯ ಗುರುತು ಹಾಗೂ ಮುಖಚಹರೆ ಪತ್ತೆ ಹಚ್ಚಿ ಸರ್ಚಿಂಗ್ ಚುರುಕುಗೊಳಿಸಿದ್ರು. ಇದೀಗ ಕೇರಳದಲ್ಲಿ ಆರೋಪಿಯನ್ನ ಬಂಧಿಸಲಾಗಿದೆ. ಯುವತಿಗೆ ಕಿರುಕುಳ ಕೊಟ್ಟವನನ್ನ ಸಂತೋಷ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:10, 20 ಅಲ್ಲವೇ ಅಲ್ಲ ‘ಕ್ರಿಶ್ 4’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ಕೊನೆಗೂ ಕೃತ್ಯ ನಡೆದು 10 ದಿನಗಳ ಬಳಿಕ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೇರಳದಲ್ಲಿ ಆರೋಪಿ ಅರೆಸ್ಟ್ ಮಾಡಿದ್ದು ಬೆಂಗಳೂರಿಗೆ ಕರೆತರ್ತಿದ್ದಾರೆ. ಬಳಿಕ ಪೊಲೀಸರು ತಮ್ಮ ಸ್ಟೈಲ್ನಲ್ಲಿ ಪ್ರಶ್ನೆ ಮಾಡಲಿದ್ದಾರೆ. ಇನ್ನೊಬ್ಬರು ಈ ರೀತಿ ಮಾಡೋ ಮುನ್ನ ಭಯಪಡ್ಬೇಕು ಅಂತಾ ಶಿಕ್ಷೆಯನ್ನ ಈತನಿಗೆ ನೀಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ