ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ಮಳೆ.. ಅಪಾರ್ಟ್​ಮೆಂಟ್​​ಗೆ ನುಗ್ಗಿದ ನೀರು, ನಗರದಲ್ಲಿ ಅವಾಂತರಗಳು..!

author-image
Bheemappa
Updated On
ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ಮಳೆ.. ಅಪಾರ್ಟ್​ಮೆಂಟ್​​ಗೆ ನುಗ್ಗಿದ ನೀರು, ನಗರದಲ್ಲಿ ಅವಾಂತರಗಳು..!
Advertisment
  • ಮೆಜೆಸ್ಟಿಕ್, ಮಲ್ಲೇಶ್ವರಂ, ಬನಶಂಕರಿ, ಹೆಬ್ಬಾಳ ಸೇರಿ ಎಲ್ಲ ಕಡೆ ಮಳೆ
  • ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ
  • ಮಡಿವಾಳ ಸೇತುವೆ ಜಲಾವೃತವಾಗಿ ಪ್ರಯಾಣಿಕರು ಅಕ್ಷರಶಃ ಸಂಕಷ್ಟ

ಭಾರೀ ಹಿಂಗಾರು ಮಳೆಗೆ ಬೆಂಗಳೂರು ತೊಪ್ಪನೆ ತೊಯ್ದಿದೆ. ರಸ್ತೆಗಳೆಲ್ಲ ಹಳ್ಳಗಳಂತಾಗಿ ವಾಹನ ಸವಾರರು ಪರದಾಡಿದರು. ಇತ್ತ ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ. ತಡರಾತ್ರಿವರೆಗೂ ಮಳೆ ಸುರಿದಿದ್ದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು. ಅಲ್ಲದೇ ಕೆಲವು ಕಡೆ ಟ್ರಾಫಿಕ್ ಆಗಿ ಡ್ರೈವರ್​ಗಳು ಸಮಸ್ಯೆ ಅನುಭವಿಸಿದರು.

ವರುಣನ ಅಬ್ಬರಕ್ಕೆ ಸಿಲಿಕಾನ್​ ಸಿಟಿ ತತ್ತರಿಸಿದೆ. ರಾತ್ರಿಯಿಂದ ಸುರಿದ ಭಾರೀ ಮಳೆಗೆ ಬೆಂಗಳೂರು ಸ್ತಬ್ಧವಾಗಿದೆ. ಸಂಜೆಯಿಂದ ಜೋರು ಮಳೆ ಬಿದ್ದಿದ್ದು ಹಲವು ಕಡೆ ಜನಜೀವನ ತೀವ್ರ ಸಂಕಷ್ಟಕ್ಕೆ ಒಳಗಾದರು.

publive-image

ಹಿಂಗಾರು ಆರ್ಭಟಕ್ಕೆ ಬೆಚ್ಚಿಬಿದ್ದ ಬೆಂಗಳೂರು ಜನತೆ

ಹಿಂಗಾರು ಆರ್ಭಟಕ್ಕೆ ಬೆಂಗಳೂರು ಜನತೆ ಬೆಚ್ಚಿಬಿದ್ದಿದೆ. ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಅವಾಂತರವೇ ಸೃಷ್ಟಿಯಾಗಿದೆ. ಕೆ.ಆರ್ ಮಾರುಕಟ್ಟೆ, ರಾಜಾಜಿನಗರ, ವಿಜಯನಗರ, ಬನಶಂಕರಿ, ಮೆಜೆಸ್ಟಿಕ್, ಮಲ್ಲೇಶ್ವರಂ, ವೈಟ್ ಫೀಲ್ಡ್‌, ಹೆಬ್ಬಾಳ, ಕಾರ್ಪೊರೇಷನ್, ಕೋರಮಂಗಲ, ಸೇರಿ ಹಲವು ಕಡೆ ಭಾರಿ ಮಳೆಯಾಗಿದೆ.

ರಸ್ತೆಗಳು ಜಲಾವೃತ.. ವಾಹನ ಸವಾರರ ಪರದಾಟ

ಇನ್ನು ಭಾರೀ ಮಳೆಗೆ ಬೆಂಗಳೂರಿನ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಮಲ್ಲೇಶ್ವರಂ, ಶಾಂತಿನಗರ, ರಾಜಾಜಿನಗರ, ವೈಟ್​ಫೀಲ್ಡ್​, ಮೆಜೆಸ್ಟಿಕ್​, ಕೆಆರ್​ ಮಾರ್ಕೆಟ್​ ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದರು. ಮಡಿವಾಳ ಕೆಳಸೇತುವೆ ಜಲಾವೃತವಾಗಿದ್ದರಿಂದ ಜನರು ಅಕ್ಷರಶಃ ಸಂಕಷ್ಟ ಅನುಭವಿಸಿದರು. ವಿವೇಕ ನಗರದಲ್ಲಂತೂ ಎಲ್ಲಿ ನೋಡಿದರು ಮಳೆ ನೀರು ನಿಂತಿದ್ದರಿಂದ ದ್ವಿಚಕ್ರ ಸವಾರರು ಪರದಾಡಿದರು. ಇನ್ನು ಪಣತ್ತೂರು ರೈಲ್ವೆ ಬ್ರಿಡ್ಜ್ ಕೆಳಗೆ ನೀರು‌ ನಿಂತಿದ್ದು ಡ್ರೈವರ್​ಗಳಿಗೆ ತಲೆನೋವು ಎನಿಸಿತು.

ಧಾರಾಕಾರ ಮಳೆಗೆ ಕೆರೆಯಂತಾದ ಕೆ.ಆರ್ ಮಾರ್ಕೆಟ್

ಧಾರಾಕಾರವಾಗಿ ಸುರಿದ ಮಳೆಗೆ ಕೆ.ಆರ್ ಮಾರ್ಕೆಟ್ ಕೆರೆಯಂತಾಗಿದೆ. ತರಕಾರಿ ಹಾಗೂ ಹೂಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ವ್ಯಾಪಾರಸ್ಥರನ್ನು ಕಂಗಾಲಾಗಿಸಿದೆ. ಪ್ರತಿ ಬಾರಿ ಮಳೆ ಬಂದ್ರೂ ಇದೇ ಸಮಸ್ಯೆ ಪುನರಾವರ್ತನೆಯಾಗ್ತಿದ್ದು ಬಿಬಿಎಂಪಿ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

publive-image

ಸರ್ಜಾಪುರ ರಸ್ತೆಯಲ್ಲಿ ಹೋಟೆಲ್​ಗೆ ನುಗ್ಗಿದ ನೀರು

ಸರ್ಜಾಪುರ ರಸ್ತೆಯಲ್ಲಿ ಮಳೆ ನೀರು ಹೋಟೆಲ್​ಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಹೋಟೆಲ್ ಮಾಲೀಕರು ಕಂಗಾಲಾಗಿದ್ರು.

ಯಲಹಂಕದಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್​ಮೆಂಟ್​ಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನೆಲ ಮಹಡಿಯಲ್ಲಿ ಪಾರ್ಕಿಂಗ್​ ಸಂಪೂರ್ಣ ಜಲಾವೃತವಾಗಿದ್ದು ಮಳೆ ನೀರಿನಲ್ಲಿ ವಾಹನಗಳು ಅರ್ಧದಷ್ಟು ಮುಳುಗಿವೆ. ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ. ಮಳೆಗೆ ರಸ್ತೆಗಳು ಹೊಳೆಯಂತಾಗಿ ನೀರು ತುಂಬಿದ ರಸ್ತೆಯಲ್ಲೇ ವಾಹನ ಸವಾರರು ಪರದಾಡುತ್ತಾ ಸಂಚಾರ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment