/newsfirstlive-kannada/media/post_attachments/wp-content/uploads/2025/02/BHAGWANT-MANN.jpg)
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಹೀನಾಯವಾಗಿ ಸೋಲುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿದ್ದ ತನ್ನ ಅಧಿಪತ್ಯವನ್ನು ದಶಕಗಳ ಬಳಿಕ ಕಳೆದುಕೊಂಡಿದೆ. ದೇಶದ ಎಲ್ಲಾ ಚುನಾವಣೆಗಳಲ್ಲೂ ಸ್ಪರ್ಧೆ ಮಾಡುವ ಇರಾದೆಯನ್ನು ಹೊಂದಿದ್ದ. ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷ ಎಂದು ಗುರುತಿಸಿಕೊಂಡಿದ್ದ ಆಪ್ ಪಕ್ಷದ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರ ಬೆನ್ನಲ್ಲೆ ಪಂಜಾಬ್ನ ಕಾಂಗ್ರೆಸ್ ನಾಯಕ ಶಾಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಪಂಜಾಬ್ನಲ್ಲಿ ಮೊದಲ ಬಾರಿ ಅಧಿಕಾರ ಹಿಡಿದಿರುವ ಆಪ್ನ ಗದ್ದುಗೆ ಅಲುಗಾಡುವ ಸಮಯ ಬಂದಿದೆ. ಆಮ್ ಆದ್ಮಿ ಪಕ್ಷ ಮಹಾರಾಷ್ಟ್ರದಲ್ಲಿ ಶಿವಸೇನೆ ಒಡೆದು ಎರಡು ಹೋಳಾದಂತೆ ಆಗಲಿದೆ. ಸಿಎಂ ಭಗವಂತ್ ಮಾನ್ ಪಂಜಾಬ್ನ ಏಕನಾಥ್ ಶಿಂಧೆ ಆಗಲಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಅಂಶವನ್ನು ತೆರೆದಿಟ್ಟಿದ್ದಾರೆ.
ಪಂಜಾಬ್ನ ಕಾಂಗ್ರೆಸ್ ನಾಯಕ ಪರ್ತಾಪ್ ಸಿಂಗ್ ಭಜ್ವಾ ಇಂತಹದೊಂದು ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. . ಈಗಾಗಲೇ ಆಪ್ ಪಕ್ಷದ 30 ಶಾಸಕರು ಕಾಂಗ್ರೆಸ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಯಾವಾಗ ಬೇಕಾದರು ಅವರು ಬೇರೆ ಕಡೆ ವಾಲುವ ಸಾಧ್ಯತೆ ಇದೆ. ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಒಡೆದು ಎರಡು ಹೋಳಾಗುವ ದಿನ ಬಹಳ ದೂರವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 27 ವರ್ಷದ ಬಳಿಕ ಬಿಜೆಪಿ ಗೆಲ್ಲಲು ಇಲ್ಲಿದೆ 7 ಕಾರಣ; ದೆಹಲಿ ದಿಗ್ವಜಯಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?
ನನ್ನ ಜೊತೆ ಆಮ್ ಆದ್ಮಿ ಪಕ್ಷದ ಶಾಸಕರು ಬಹಳ ದಿನದಿಂದಲೂ ಸಂಪರ್ಕದಲ್ಲಿದ್ದಾರೆ. ನಾನು ಪಂಜಾಬ್ನ ಕಾಂಗ್ರೆಸ್ ಅಧ್ಯಕ್ಷನಾದ ಸಮಯದಲ್ಲಿ ಅಮರಿಂದರ್ ಸಿಂಗ್ ಅವರು 28 ಕಾಂಗ್ರೆಸ್ ನಾಯಕರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರು. ಅವರಿಗೆ ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂತು. ಅವರಿಗೆ ಗೊತ್ತು ನಾವು ವಾಪಸ್ ಕಾಂಗ್ರೆಸ್ಗೆ ಬರುವುದಿಲ್ಲ ಎಂದು. ಆದ್ರೆ ಸದ್ಯ ಪಂಜಾಬ್ನ ಆಮ್ ಆದ್ಮಿ ಪಕ್ಷದಲ್ಲಿ ದೆಹಲಿಯ ನಾಯಕರ ಬಗ್ಗೆ ಅಸಮಾಧಾನವಿದೆ.
ದೆಹಲಿ ಆಪ್ ಹಾಗೂ ಪಂಜಾಬ್ ಆಪ್ಗಳ ನಡುವೆ ಸಂಘರ್ಷಗಳು ಶುರುವಾಗಿವೆ. ಪಂಜಾಬ್ನ ಮುಖ್ಯಮಂತ್ರಿ ಭಗವಂತ್ ಮಾನ್ ಈಗಾಗಲೇ ಕೇಂದ್ರ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದಾರೆ. ಯಾವಾಗ ಮಹಾರಾಷ್ಟ್ರ ವಿಮಾನ ಚಂಡಿಗಢನಲ್ಲಿ ಲ್ಯಾಂಡ್ ಆಗುತ್ತೋ ಆವತ್ತೆ ಭಗವಂತ ಮಾನ್ ಪಂಜಾಬ್ನ ಏಕನಾಥ ಶಿಂಧೆಯಾಗಿ ಆ ವಿಮಾನದಲ್ಲಿ ಮೊದಲ ಪ್ರಯಾಣಿಕರಾಗಿ ಹೊರಡಲಿದ್ದಾರೆ ಎಂದು ಭಜ್ವಾ ಹೇಳಿದ್ದಾರೆ.
ಇದನ್ನೂ ಓದಿ:ಕೇಜ್ರಿವಾಲ್ಗೆ ಮಣ್ಣು ಮುಕ್ಕಿಸಿದ ‘ದೈತ್ಯ ವಿಜಯಿ’.. ದೆಹಲಿ ಸಿಎಂ ಆಗುವ ಬಗ್ಗೆ ಪರ್ವೇಶ್ ವರ್ಮಾ ದೊಡ್ಡ ಸುಳಿವು!
ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಭಜ್ವಾ,ಪಂಜಾಬ್ನ ಆಮ್ ಆದ್ಮಿ ಪಾರ್ಟಿಯಲ್ಲಿ ಘರ್ಷಣೆಗಳು ಶುರುವಾಗಿವೆ ಎನ್ನುವುದಕ್ಕೆ ನೇರ ಸಾಕ್ಷಿಯೇ ಅಮನ್ ಅರೋರಾ. ಈಗಾಗಲೇ ಅಮನ್ ಅರೋರಾ ಒಂದು ಹೇಳಿಕೆ ನೀಡುವ ಮೂಲಕ ಸೂಚನೆಯನ್ನು ಹರಿಬಿಟ್ಟಿದ್ದಾರೆ. ಪಂಜಾಬ್ನಲ್ಲಿ ಸಿಖ್ಖರೇ ಮುಖ್ಯಮಂತ್ರಿಯಾಗಬೇಕು ಅಂತ ಏನಿಲ್ಲ ಎಂದು ಹೇಳಿದ್ದಾರೆ. ಇದು ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿಯಿಂದ ಪಂಜಾಬ್ಗೆ ರಿಲೋಕೆಷನ್ ಮಾಡುವ ಒಂದು ಹುನ್ನಾರ ಎಂಬುದು ಸ್ಪಷ್ಟವಾಗುತ್ತಿದೆ.
ಸದ್ಯ ಪಂಜಾಬ್ನ ಆಪ್ ಸರ್ಕಾರ ಅಲ್ಲಾಡುತ್ತಿರುವ ಭೂಮಿಯ ಮೆಲೆ ನಿಂತಿದೆ. ಪಕ್ಷದ ಪ್ರತಿ ಶಾಸಕನಿಗೂ ಗೊತ್ತು ಇಲ್ಲಿ ನಮಗೆ ಭವಿಷ್ಯವಿಲ್ಲ ಅಂತ. ನನಗೆ ಹಲವಾರು ಶಾಸಕರು ಈಗಲೂ ಕೂಡ ಸಂಪರ್ಕದಲ್ಲಿದ್ದಾರೆ. ಸುಮಾರು ಒಂದು ವರ್ಷದಿಂದ ಸಂಪರ್ಕದಲ್ಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ವಿಜಯ ಸಾಧಿಸಿದ ಕೇಂದ್ರ ಸರ್ಕಾರ ಇದನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಮುಂದೆ ದೊಡ್ಡ ದೊಡ್ಡ ಸಂಗತಿಗಳು ಪಂಜಾಬ್ನಲ್ಲಿ ಘಟಿಸಲಿವೆ ಬೇಕಿದ್ದರೆ ಕಾದು ನೋಡಿ ಎಂದು ಪರ್ತಾಪ್ ಸಿಂಗ್ ಭಜ್ವಾ ಹೇಳಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ