/newsfirstlive-kannada/media/post_attachments/wp-content/uploads/2023/05/Bhavani-Revanna.jpg)
ಬೆಂಗಳೂರು: ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗಿದೆ. ಗೆದ್ದ ಕಾಂಗ್ರೆಸ್ ನಾಯಕರು ಅಧಿಕಾರ ಹಿಡಿಯೋ ಹಠದಲ್ಲಿದ್ದಾರೆ. ಬಿಜೆಪಿ, ಜೆಡಿಎಸ್ ಪಕ್ಷ ಸೋಲಿನ ಪರಾಮರ್ಶೆಯಲ್ಲಿದ್ದು ಮುಂದಿನ ಚುನಾವಣೆಯಲ್ಲಿ ಗೆಲ್ಲೋ ರಣತಂತ್ರಗಳ ಬಗ್ಗೆ ಚಿಂತಿಸುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ದಳಪತಿಗಳ ಲೆಕ್ಕಾಚಾರಗಳೆಲ್ಲಾ ಉಲ್ಟಾ ಹೊಡೆದಿದೆ. ಮಂಡ್ಯ, ಮೈಸೂರು, ರಾಮನಗರ ಅಷ್ಟೇ ಯಾಕೆ ಹಾಸನದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಬಹುತೇಕ ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್ ಅಭ್ಯರ್ಥಿಗಳು ಮುಗ್ಗರಿಸಿದ್ದಾರೆ. ಸಾಂಪ್ರದಾಯಿಕ ಮತಗಳು ದಳಪತಿಗಳಿಗೆ ಕೈ ಕೊಟ್ಟ ಹಿನ್ನೆಲೆ ಹೀನಾಯ ಸೋಲು ಅನುಭವಿಸಿದ್ದಾರೆ.
ಎಲೆಕ್ಷನ್ಗೂ ಮುಂಚೆಯೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಿ.ಎಂ. ಇಬ್ರಾಹಿಂ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷರ ಪಟ್ಟ ಕಟ್ಟಿದ್ರು. ಆದರೂ ಈ ಬಾರಿ ಮುಸ್ಲಿಂ ಮತಗಳನ್ನು ಪಡೆಯವಲ್ಲಿ ತೆನೆ ಪಾರ್ಟಿ ವಿಫಲವಾಗಿದೆ. ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಶುರುವಾಗಿದೆ. ಈ ರಾಜ್ಯಾಧ್ಯಕ್ಷರ ಹುದ್ದೆಗೆ ಭವಾನಿ ರೇವಣ್ಣ ಅವರ ಹೆಸರು ಮುನ್ನೆಲೆಗೆ ಬಂದಿದೆ.
ಹೀನಾಯ ಸೋಲು ಕಂಡಿರುವ ಜೆಡಿಎಸ್ ಪಕ್ಷ ಪುಟಿದೇಳಬೇಕು. ಇನ್ನೊಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತೆ. ಜೊತೆಗೆ ಬಿಬಿಎಂಪಿ, ಸ್ಥಳೀಯ ಸಂಸ್ಥೆಯ ಚುನಾವಣೆಗಳೂ ಇವೆ. ಹೀಗಾಗಿ ಪಕ್ಷವನ್ನ ಬಲಿಷ್ಠಗೊಳಿಸುವ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಜೆಡಿಎಸ್ ಪಕ್ಷದಲ್ಲಿ, ದೇವೇಗೌಡರ ಕುಟುಂಬದಲ್ಲಿ ರಾಜ್ಯಾಧ್ಯಕ್ಷರನ್ನ ಬದಲಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಭವಾನಿ ರೇವಣ್ಣ ಅವರು ತೆನೆ ಭಾರ ಹೊರುವ ಕುರಿತು ಖುದ್ದು ಸಂಸದ ಪ್ರಜ್ವಲ್ ರೇವಣ್ಣ ಅವರು ಕುಟುಂಬದ ಎದುರು ಪ್ರಸ್ತಾಪ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಭವಾನಿ ರೇವಣ್ಣ ಅವರಿಗೆ ಯಾಕೆ ರಾಜ್ಯಾಧ್ಯಕ್ಷ ಪಟ್ಟ ಕೊಡಬೇಕು ಅನ್ನೋ ಚರ್ಚೆಗಳು ಜೋರಾಗಿದೆ.
ಭವಾನಿ ರೇವಣ್ಣ ಮೇಲೆ ಭರವಸೆ
- ಜೆಡಿಎಸ್ನಲ್ಲಿ ಭವಾನಿ ರೇವಣ್ಣ ತಮ್ಮದೇ ಪ್ರಭಾವ ಹೊಂದಿದ್ದಾರೆ
- ಪಕ್ಷ ಸಂಘಟನೆಯಲ್ಲಿ ತಮ್ಮ ಸಾಮರ್ಥ್ಯವನ್ನ ಸಾಬೀತು ಮಾಡಿದ್ದಾರೆ
- ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನ ಜೆಡಿಎಸ್ ತೆಕ್ಕೆಗೆ ತಂದಿದ್ದಾರೆ
- ತಮಗೆ ಟಿಕೆಟ್ ಸಿಗದಿದ್ದಾಗಲೂ ಸ್ವರೂಪ್ ಪ್ರಕಾಶ್ ಬೆನ್ನಿಗೆ ನಿಂತಿದ್ರು
- ಪಕ್ಷ ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ್ಯ ಇದೆ ಅಂತಾ ತೋರಿಸಿದ್ದಾರೆ
- ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧ ಎಂಬುದನ್ನ ಈಗಾಗಲೇ ಸಾಬೀತು ಮಾಡಿದ್ದಾರೆ
- ಭವಾನಿ ರೇವಣ್ಣ ಅಧ್ಯಕ್ಷರಾದ್ರೆ ಜೆಡಿಎಸ್ ಕಾರ್ಯಕರ್ತರನ್ನ ಒಗ್ಗೂಡಿಸಬಹುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ