Advertisment

ಕನ್ನಡದ ಏಕೈಕ 365 ದಿನವೂ ಆರಾಧಿಸಲ್ಪಡುವ ಕನ್ನಡಾಂಬೆ ‘ಭುವನಗಿರಿಯ ಭುವನೇಶ್ವರಿ’ ಬಗ್ಗೆ ನಿಮಗೆಷ್ಟು ಗೊತ್ತು..?

author-image
Ganesh
Updated On
ರಾಜ್ಯದ ಏಕೈಕ ಕನ್ನಡಾಂಬೆ ಎಲ್ಲಿದ್ದಾಳೆ ಗೊತ್ತಾ? 365 ದಿನ, ತ್ರಿಕಾಲ ಪೂಜೆ, ಭುವನಗಿರಿಯ ಭುವನೇಶ್ವರಿಗೆ ಬಗ್ಗೆ ಇಲ್ಲಿದೆ ಮಾಹಿತಿ 
Advertisment
  • ಮಲೆನಾಡಿನ ಹಚ್ಚಹಸಿರ ಕಾನನದ ಮಧ್ಯೆ ನೆಲೆಸಿದ್ದಾಳೆ ಭುವನೇಶ್ವರಿ
  • ಸರ್ಕಾರದ ಕಣ್ಣಿಗೆ ಕಾಣದೇ ಅನಾಥವಾಗಿದೆ ಕನ್ನಡ ತಾಯಿಯ ದೇಗುಲ
  • ಕನ್ನಡದ ಮೊದಲ ಅರಸರಾದ ಕದಂಬರಿಂದ ಆರಾಧಿಸಲ್ಪಟ್ಟ ಕನ್ನಡಾಂಬೆ

ರಾಜ್ಯದ ಏಕೈಕ ಕನ್ನಡಾಂಬೆಗೆ ನಿತ್ಯವೂ ತ್ರಿಕಾಲ ಪೂಜೆ. ಮಲೆನಾಡಿನ ಹಚ್ಚಹಸಿರ ಕಾನನದ ನಡುವೆ ತಲೆ ಎತ್ತಿ ನಿಂತಿದ್ದಾಳೆ ಕನ್ನಡ ದೇವತೆ. ಆದ್ರೆ ಕನ್ನಡ ತಾಯಿಯಾಗಿ ರಾಜ್ಯದ ಹೆಮ್ಮೆಯಾಗಿ ಮೆರೆಯಬೇಕಿದ್ದ ತಾಯಿಯ ದೇಗುಲ ಸರ್ಕಾರದ ಕಣ್ಣಿಗೆ ಕಾಣದೇ ಅನಾಥವಾಗಿದೆ.

Advertisment

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ನೆಲೆಸಿದ್ದಾಳೆ ತಾಯಿ ಭುವನೇಶ್ವರಿ. ನಾಡಿಗೊಂದು ಅಧಿದೇವತೆ, ಭಾಷೆಗೊಂದು ಸುಂದರ ಲಾಂಛನವನ್ನು ಹೊಂದಿರುವ ಅಪರೂಪದ ಭಾಷೆ ಕನ್ನಡ. ಕನ್ನಡಿಗರೆಲ್ಲ ಹೆಮ್ಮೆಪಡಬಹುದಾದ ವಿಷಯ. ಕನ್ನಡ ಭಾಷೆಯ ನೆಲ, ಜಲ, ನುಡಿಗಾಗಿ ಕದಂಬರ ಅರಸ ವೀರ ಮಯೂರನಿಂದಾಗಿ ಸ್ವಾಭಿಮಾನಿ ರಾಜ್ಯ ನಿರ್ಮಾಣವೇ ನಡೆದು ಹೋದ ಅಪರೂಪದ ಇತಿಹಾಸ ಕನ್ನಡ ನಾಡಿನದ್ದು. ಇಂತಹ ಹೆಮ್ಮೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ ನಿಂತಿದೆ ಉತ್ತರ ಕನ್ನಡ ಜಿಲ್ಲೆ.

publive-image

ಇಂದಿಗೂ ಈ ನೆಲ ಕನ್ನಡದ ಕುಲದೇವಿಯನ್ನ ಮಡಿಲಲ್ಲಿಟ್ಟುಕೊಂಡು, ಕನ್ನಡತನವನ್ನು ಎದೆಯ ಗುಂಡಿಗೆಯಲ್ಲಿ ತುಂಬಿಟ್ಟು ಉಸಿರಾಡುತ್ತಿದೆ. ತಾಯಿ ಭುವನೇಶ್ವರಿ ದೇವಿ ನೆಲೆನಿಂತಿರುವ, ಕನ್ನಡ ಸಾಮ್ರಾಜ್ಯ ಕಟ್ಟಲ್ಪಟ್ಟ ಕನ್ನಡಿಗರ ಇತಿಹಾಸ ಕಾಶಿಯಿದು. ಇಂತಹ ನೆಲವಾದ ಉತ್ತರ ಕನ್ನಡದ ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ ಎಂಟು ಕಿಲೋ ಮೀಟರ್ ದೂರವಿರುವ ಭುವನಗಿರಿ ಕನ್ನಡಿಗರ ಸಿರಿಯನ್ನು ಶಿರದಲ್ಲಿ ಹೊತ್ತು ನಿಂತ ನೆಲ. ಅಪ್ಪಟ ಮಲೆನಾಡ ಹಸಿರು ಸೊಬಗಿನ ನಡುವೆ ಕನ್ನಡಿಗರೊಡತಿ ತಾಯಿ ಭುವನೇಶ್ವರೀ ದೇವಿ ನೆಲೆನಿಂತಿದ್ದಾಳೆ. ದಟ್ಟ ಹಸಿರು ಬೆಟ್ಟದ ಮೇಲೆ ಕುಳಿತು ಕನ್ನಡಿಗರನ್ನು ಹರಸುತ್ತಿದ್ದಾಳೆ.

ಮೂರು ಶತಮಾನಗಳಿಗೂ ಮೊದಲೇ ಬಿಳಗಿಯ ಅರಸರು ತಾಯಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಾಣದ ಮೂಲಕ ಕನ್ನಡತಿಯ ತೇರನ್ನು ಎಳೆದಿದ್ದರು. ತಾಯ್ನುಡಿಯ ಪೂಜೆಗೆ ಅಧಿಕೃತ ಮುನ್ನುಡಿ ಬರೆದಿದ್ದರು. ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವನ್ನು ಕಾಣಬಹುದಾಗಿದೆ. ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಹದಿನೇಳನೆಯ ಶತಮಾನದವರೆಗಿನ ದಾಖಲೆಗಳು ಲಭ್ಯವಿಲ್ಲ. ಮದ್ರಾಸ್ ರೆಸಿಡೆನ್ಸಿಗೆ ಸೇರಿದ್ದ ದಾಖಲೆಯ ಕಡತಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕ್ರಿ.ಶ. 1600ರ ನಂತರದ ಇತಿಹಾಸವಿದೆ ಎನ್ನಲಾಗಿದೆ.

Advertisment

ಈಸೂರು ಮಹಾರಾಜರ ಕಾಲದಿಂದ ಬಿಳಗಿಯ ಸಂಸ್ಥಾನಿಕರ ಕಾಲದಿಂದಲೂ ಕನ್ನಡಾಂಬೆಗೆ ಪೂಜೆ ನಡೆದುಕೊಂಡು ಬರುತ್ತಿದೆ. ಈ ದೇಗುಲದಲ್ಲಿ ಪ್ರತಿ ವರ್ಷ ಅನೇಕ ಸಾಹಿತಿಕ ಕಾರ್ಯಕ್ರಮಗಳು ನಡೆಯುತ್ತಿಲೇ ಇದೆ. ಶ್ರೇಷ್ಠ ದೇಗುಲದಲ್ಲಿ ಸರ್ಕಾರ ಇಂಥ ಕಾರ್ಯಕ್ರಮವನ್ನು ಹೆಚ್ಚೆಚ್ಚು ಆಯೋಜನೆ ಮಾಡಬೇಕು ಎಂದು ಚಿಂತಕ ಆರ್.ಜಿ.ಪೈ ಅಭಿಪ್ರಾಯಪಟ್ಟಿದ್ದಾರೆ.

publive-image

ಕನ್ನಡದ ಮೊದಲ ಅರಸರಾದ ಕದಂಬರು ಈ ದೇವಿಯನ್ನು ಆರಾಧಿಸಿದ್ದರೆಂಬುದಕ್ಕೆ ಭುವನಗಿರಿ ಭುವನೇಶ್ವರೀ ದೇವಿಯ ದೇವಾಲಯಗಳೇ ಸಾಕ್ಷಿ. ಅದಕ್ಕಾಗಿಯೇ ಆಕೆಯನ್ನು ಕನ್ನಡದ ಕುಲದೇವಿ ಎಂದು ಕರೆದು ಗೌರವಿಸಲಾಗುತ್ತದೆ. ಒಟ್ಟಾರೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಭುವನಗಿರಿಯೆಡೆ ಕನ್ನಡಿಗರ ಆಸಕ್ತಿ ಬೆಳೆಯಬೇಕಿದೆ. ಕನ್ನಡ ರಾಜ್ಯೋತ್ಸವದಂದು ರಾಜ್ಯೋತ್ಸವ ಪ್ರಶಸ್ತಿಯನ್ನ ತಾಯಿಯ ಸನ್ನಿಧಿಯಲ್ಲಿ ನೀಡುವಂತಾಗಬೇಕಿದೆ. ಕನ್ನಡ ನಾಡು, ನುಡಿಯ ಸಂಕೇತವಾದ ಭುವನಗಿರಿಯನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಲು ಪ್ರತಿಯೊಬ್ಬ ಕನ್ನಡಿಗ ಪಣ ತೊಡುವಂತಾಗಲಿ ಅನ್ನೋದೇ ಕನ್ನಡಿಗರ ಆಶಯ.

ವಿಶೇಷ ವರದಿ: ಶ್ರೀಧರ್ ಜಿ.ಹೆಚ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment