/newsfirstlive-kannada/media/post_attachments/wp-content/uploads/2025/01/Maha-Kumbh-Mela-Fire.jpg)
ಪ್ರಯಾಗ್ರಾಜ್: ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಶತಮಾನದ ಮಹಾ ಕುಂಭಮೇಳದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸಿಲಿಂಡರ್ ಬ್ಲಾಸ್ಟ್ನಿಂದ ಒಂದು ಟೆಂಟ್ನಲ್ಲಿ ಹೊತ್ತಿದ ಬೆಂಕಿ 300ಕ್ಕೂ ಹೆಚ್ಚು ಟೆಂಟ್ಗಳು ಧಗಧಗಿಸುವಂತೆ ಮಾಡಿದೆ. ಪ್ರಯಾಗ್ರಾಜ್ನ 4 ದಿಕ್ಕುಗಳಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಕೋಟ್ಯಂತರ ಜನ ಸೇರುತ್ತಿರುವ ಜಾಗದಲ್ಲಿ ಭಯಭೀತ ವಾತಾವರಣ ಮೂಡಿಸಿದೆ.
ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿಯುತ್ತಿರುವ ಟೆಂಟ್ಗಳು
ಇನ್ನು, ಇಂದು ಸಂಜೆ 4 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಧಗಧಗಿಸುವಂತೆ ಮಾಡಿದೆ. ಮಹಾಕುಂಭಮೇಳದ ಸೆಕ್ಟರ್-19ರಲ್ಲಿ ಕಬ್ಬಿಣದ ಸೇತುವೆ ಬಳಿ ಘಟನೆ ಸಂಭವಿಸಿದೆ. ಮಹಾಕುಂಭಮೇಳಕ್ಕೆ ಬರುವ ಜನರಿಗಾಗಿ ಟೆಂಟ್ಗಳನ್ನು ನಿರ್ಮಿಸಲಾಗಿದ್ದು ಒಂದು ಟೆಂಟ್ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು ಅದು ಎಲ್ಲೆಡೆ ವ್ಯಾಪಿಸಿದೆ. ಟೆಂಟ್ಗಳಲ್ಲಿದ್ದ 6 ಅಡುಗೆ ಸಿಲಿಂಡರ್ಗಳು ಸಹ ಸ್ಫೋಟಗೊಂಡಿವೆ. ಶಾಸ್ತ್ರೀ ಸೇತುವೆ ಹಾಗೂ ರೇಲ್ವೆ ಸೇತುವೆ ನಡುವೆ ಇರುವ ಸ್ಥಳದಲ್ಲಿ ದುರಂತ ನಡೆದಿದ್ದು 300ಕ್ಕೂ ಹೆಚ್ಚು ಟೆಂಟ್ಗಳು ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ.
ಮಹಾಕುಂಭಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸನ್ನದ್ಧರಾಗಿ ನಿಂತಿದ್ದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ 6 ಅಗ್ನಿಶಾಮಕದ ದಳ ವಾಹನ ಸಿಬ್ಬಂದಿ ಕೇವಲ ಅರ್ಧಗಂಟೆಯಲ್ಲೇ ಬೆಂಕಿ ನಿಯಂತ್ರಿಸಿದ್ದಾರೆ. ಅಷ್ಟರಲ್ಲಾಗಲೇ 300 ಟೆಂಟ್ಗಳು ದಹಿಸಿ ಹೋಗಿವೆ.
ಎಡಿಜಿ ಭಾನು ಭಾಸ್ಕರ್ ಏನಂದ್ರು?
300 ಟೆಂಟ್ಗಳು ಸುಟ್ಟು ಭಸ್ಮವಾದ್ರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆಚ್ಚಿನ ಹಾನಿಯಾಗಿಲ್ಲ. ಟೆಂಟ್ಗಳಲ್ಲಿ ತಂಗಿದ್ದ ಸಾಧು-ಸಂಂತರು ಬಚಾವ್ ಆಗಿದ್ದಾರೆ. ಅವರು ತಂದಿದ್ದ ಬಟ್ಟೆಗಳು, ವಸ್ತುಗಳು ಮಾತ್ರ ಸುಟ್ಟು ಕರಕಲಾಗಿವೆ. ಇನ್ನು ಊಟಕ್ಕಾಗಿ ತಂದಿದ್ದ ಸಾಮಾಗ್ರಿಗಳು ಸಹ ಬೆಂಕಿಗಾಹುತಿಯಾಗಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ಬಗ್ಗೆ ಎಡಿಜಿ ಭಾನು ಭಾಸ್ಕರ್ ಮಾಹಿತಿ ನೀಡಿದ್ದಾರೆ.
ಬೆಂಕಿ ಅವಘಡ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಅಗ್ನಿ ಅವಘಡದ ಸುದ್ದಿ ತಿಳಿದ ಸಿಎಂ ಯೋಗಿ ಆದಿತ್ಯನಾಥ್ ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಕ್ತರು, ನಾಗಾಸಾಧುಗಳ ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಿದೆ. ಹೀಗಾಗಿ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ರು.ಈ ಬೆನ್ನಲ್ಲೇ ಸಿಎಂ ಯೋಗಿಗೆ ಕರೆ ಮಾಡಿರುವ ಪ್ರಧಾನಿ ಮೋದಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಸಿಲಿಂಡರ್ ಸ್ಫೋಟಕ್ಕೆ ಕಾರಣ ಏನು, ಯಾರಾದ್ರೂ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಪ್ರಯಾಗ್ರಾಜ್ನ 4 ದಿಕ್ಕುಗಳಿಂದ ಅಗ್ನಿಶಾಮಕ ಸಿಬ್ಬಂದಿ ಕರೆಸಿಕೊಂಡು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗಿದೆ. ಮಹಾಕುಂಭಮೇಳದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಇದನ್ನೂ ಓದಿ:ಬಿಸಿಸಿಐನಿಂದ ಮಹತ್ವದ ನಿರ್ಧಾರ; ಕೊನೆಗೂ ತಲೆ ಬಾಗಿದ ಸ್ಟಾರ್ ಆಲ್ರೌಂಡರ್ ಜಡೇಜಾ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ