/newsfirstlive-kannada/media/post_attachments/wp-content/uploads/2025/02/TRAFFIC_DK_SHIVAKUMAR.jpg)
ಬೆಂಗಳೂರಿನ ಟ್ರಾಫಿಕ್ ಪದೆ ಪದೆ ಸುದ್ದಿಯಾಗ್ತಾನೆ ಇರುತ್ತೆ. ಟ್ರಾಫಿಕ್ ಜಾಮ್ ಅಂತೂ ಕೇಳುವುದೇ ಬೇಡ. ಆದರೆ, ಈಗ ಆಗಿರುವ ಸಮಸ್ಯೆ ಟ್ರಾಫಿಕ್ನಿಂದಲ್ಲ, ಬದಲಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕೊಟ್ಟ ಅದೊಂದು ಹೇಳಿಕೆಯಿಂದ. ಇದೀಗ ಡಿ.ಕೆ ಶಿವಕುಮಾರ್ ಕೊಟ್ಟ ಟ್ರಾಫಿಕ್ ಬಗೆಗಿನ ಹೇಳಿಕೆ ಬಿಜೆಪಿ ನಾಯಕರ ಕಣ್ಣನ್ನ ಕೆಂಪಾಗಿಸಿದೆ. ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿರುವ ಕೈ ನಾಯಕನ ವಿರುದ್ಧ ಗುಡುಗಲು ಕಾರಣವಾಗಿದೆ.
ಟ್ರಾಫಿಕ್.. ಟ್ರಾಫಿಕ್.. ಟ್ರಾಫಿಕ್ ಎಲ್ನೋಡಿ ಟ್ರಾಫಿಕ್.. ಸಿಗ್ನಲ್ನಲ್ಲೇ ಕೆಲಸ ಮಾಡೋ ಅಷ್ಟರ ಮಟ್ಟಿಗೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಕಿರಿಕಿರಿ. ಈ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕಾದ ಡಿಸಿಎಂ ಸಾಹೇಬ್ರು ಕೊಟ್ಟ ಅದೊಂದು ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಭಗವಂತನಿಗೂ ಟ್ರಾಫಿಕ್ ಸಮಸ್ಯೆ ಪರಿಹರಿಸೋಕಾಗಲ್ಲ ಎಂದ ಡಿಕೆ
ದೇವರ ಕೈನಲ್ಲೂ ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹರಿಸಲಾಗಲ್ಲ. ಇದೇ ಡಿಸಿಎಂ ಡಿ.ಕೆ ಶಿವಕುಮಾರ್ ಕೊಟ್ಟ ಅಸಹಾಯಕತೆಯ ಇದೆ ಹೇಳಿಕೆ ಈಗ ಟೀಕೆಗೆ ಗುರಿಯಾಗಿದ್ದು, ಟೀಕಾಸ್ತ್ರಗಳು ಪ್ರಯೋಗವಾಗ್ತಿದೆ.
ಮೋಸದ ಕಲೆ ಕಾಂಗ್ರೆಸ್ಗೆ ಕರಗತ ಎಂದ ಅಶೋಕ್!
ಭಗವಂತನಿಗೂ ಬೆಂಗಳೂರು ಟ್ರಾಫಿಕ್ ಬಗೆಹರಿಸೋಕಾಗಲ್ಲ ಎಂಬ ಡಿ.ಕೆ ಶಿವಕುಮಾರ್ ಅಸಹಾಯಕತೆ ಮಾತಿಗೆ ಬಿಜೆಪಿ ನಾಯಕರು ಕೆಂಡವಾಗಿದ್ದಾರೆ. ಡಿಸಿಎಂ ಮಾತಿಗೆ ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಸಿಎಂ- ಡಿಸಿಎಂ ಪೈಪೋಟಿ ನಡೀತಿದೆ. ಅಭಿವೃದ್ಧಿ ಮಾಡೋದನ್ನೇ ಕಾಂಗ್ರೆಸ್ ಮರೆತ್ತಿದ್ದಾರೆ ಅಂತ ಮಾಜಿ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್ ಲೇವಡಿ ಮಾಡಿದ್ದಾರೆ. ಜನರಿಗೆ ಹೇಗೆ ಮೋಸ ಮಾಡಬೇಕು ಅನ್ನೋ ಕಲೆ ಕಾಂಗ್ರೆಸ್ನವರಿಗೆ ಕರಗತ ಆಗಿದೆ ಅಂತ ವಿಪಕ್ಷನಾಯಕ ಆರ್. ಅಶೋಕ್ ಗುಡುಗಿದ್ದಾರೆ.
‘ಬ್ಯಾಡ್ ಬೆಂಗಳೂರು ಆಗಿದೆ’
ಬೆಂಗಳೂರನ್ನು ಉನ್ನತ ದರ್ಜೆಗೆ ಏರಿಸುತ್ತೀರಿ, ಸಾವಿರಾರು ಕೋಟಿ ಹಣ ಕೊಡುತ್ತೀರಿ. ನಗರವನ್ನು ಉದ್ಧಾರ ಮಾಡುತ್ತೀನಿ ಎಂದು ಶಿವಕುಮಾರ್ ಅವರು ಬಂದರು. ಆದರೆ ಇನ್ನು 3 ವರ್ಷ ಬೆಂಗಳೂರನ್ನು ಯಾರ ಕೈಯಲ್ಲೂ ಉದ್ಧಾರ ಮಾಡೋಕೆ ಆಗಲ್ಲ. ದೇವರೇ ಬಂದರೆ ಉದ್ಧಾರ ಮಾಡೋಕೆ ಆಗಲ್ಲ ಎಂದಿದ್ದಾರೆ. ವೋಟ್ಗಾಗಿ ಈ ಕಾಂಗ್ರೆಸ್ನವರು ಏನೇನು ನಾಟಕ ಆಡಬೇಕೋ ಅದನ್ನೆಲ್ಲಾ ಆಡಿದ್ದಾರೆ. ಬ್ಯಾಡ್ ಬೆಂಗಳೂರು ಆಗಿದೆ ಎಂದು ಅವರ ಒಪ್ಪಿಕೊಂಡಿದ್ದಾರೆ.
ಆರ್. ಅಶೋಕ್, ವಿಪಕ್ಷ ನಾಯಕ
ಇದನ್ನೂ ಓದಿ: ಕನ್ನಡ ಮಾತಾಡಿದ್ದಕ್ಕೆ KSRTC ಕಂಡಕ್ಟರ್ ಮೇಲೆ ಹಲ್ಲೆ.. ಕರ್ನಾಟಕ ಸೇನೆಯಿಂದ ಪಾಠ
‘ಕಾಂಗ್ರೆಸ್ ಅಭಿವೃದ್ಧಿ ಮರೆತಿದೆ’
ಸಿಎಂ- ಡಿಸಿಎಂ ಗುದ್ದಾಟದಿಂದ ಬೆಂಗಳೂರು ಬಡವಾಗಿದೆ. ಇವರಿಗೆ ಹಣ ಕೊಡಬಾರದು, ಇವರನ್ನು ತೆಗೆದು ಹಾಕಬೇಕು ಎನ್ನುವುದು ಅವರಲ್ಲಿದೆ. ಎಲ್ಲಿವರೆಗೆ ಬೆಂಗಳೂರು ಅಭಿವೃದ್ಧಿ ಸಚಿವರು ಇರುತ್ತಾರೋ ಅಲ್ಲಿವರೆಗೆ ಒಂದು ರೂಪಾಯಿ ಹಣ ಸಿಗಲ್ಲ.
ಸಿ.ಎನ್. ಅಶ್ವತ್ಥ್ ನಾರಾಯಣ್, ಮಾಜಿ ಸಚಿವ
ಡಿಸಿಎಂ ವಿರುದ್ಧ ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ
ಕಾಂಗ್ರೆಸ್ನವರಿಗೆ ಲೂಟಿ ಮಾಡೋದೇ ಕೆಲಸ ಆಗಿದೆ. ಹೀಗಾದ್ರೆ ಯಾವ ದೇವರೂ ಏನೂ ಮಾಡಲು ಆಗಲ್ಲ ಅಂತ ಪರಿಷತ್ ಸದಸ್ಯ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.
ಬ್ರಾಂಡ್ ಬೆಂಗಳೂರು ಮಾಡೋಕೆ ಹೊರಟ ಸಚಿವರ ಬಾಯಲ್ಲೇ ಇಂಥಾ ಹೇಳಿಕೆ ಕೇಳಿ ವಿಪಕ್ಷ ವ್ಯಂಗ್ಯವಾಡ್ತಿದೆ. ಹಾಗಾದ್ರೆ ಸಿಲಿಕಾನ್ ಸಿಟಿ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ವಾ? ಸರ್ಕಾರ ಸಮಸ್ಯೆ ಬಗೆಹರಿಸೋದು ಬಿಟ್ಟು ಕೈಚೆಲಿತಾ?.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ