ಹಾವೇರಿಯಲ್ಲಿ ರಾಜ್ಯಮಟ್ಟದ ಬಂಡಿ ಓಡಿಸೋ ಸ್ಪರ್ಧೆ; ಪೊಗರದಸ್ತು ಎತ್ತುಗಳ ರೇಸ್ ಹೇಗಿತ್ತು?

author-image
Gopal Kulkarni
Updated On
ಹಾವೇರಿಯಲ್ಲಿ ರಾಜ್ಯಮಟ್ಟದ ಬಂಡಿ ಓಡಿಸೋ ಸ್ಪರ್ಧೆ; ಪೊಗರದಸ್ತು ಎತ್ತುಗಳ ರೇಸ್ ಹೇಗಿತ್ತು?
Advertisment
  • ಹಾವೇರಿಯಲ್ಲಿ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಕಟ್ಟು ಮಸ್ತಾದ ಗೂಳಿಗಳು
  • ಸಾವನ್ನಪ್ಪಿದ ಕೊಬ್ಬರಿ ಹೋರಿಗಳ ಸವಿನೆನಪಿಗಾಗಿ ಏರ್ಪಡಿಸಿದ್ದ ಸ್ಪರ್ಧೆ
  • ಕೇಕೆ, ಸಿಳ್ಳೆ, ಚಪ್ಪಾಳೆಗಳ ಆರ್ಭಟದಲ್ಲಿ ಓಡಿದ ಎತ್ತಗಳ ಓಟು ಸೂಪರ್

ಅಲ್ಲಿ ಜನರ ಕೇಕೆ, ಸಿಳ್ಳೆ, ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತ್ತು. ಗೆಲುವು ನಂದೆ ಹವಾ ಅಂತಾ ಧೂಳೆಬ್ಬಿಸಿಕೊಂಡು ಓಡ್ತಿದ್ದ ಅವರ ಓಟ ನೋಡಿ ಕೆಲವರು ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಹುಮ್ಮಸ್ಸು ನೀಡ್ತಿದ್ರು. ಕಟ್ ಮಸ್ತಾಗಿದ್ದ ಅವರ ಶರವೇಗದ ಓಟ ಎಂಥವರೂ ವ್ಹಾವ್​ ಅನ್ನುವಂತಿತ್ತು. ಎತ್ತುಗಳ ಬಂಡಿ ಓಟ ಭರ್ಜರಿಯಾಗಿತ್ತು.

ಅಖಾಡದಲ್ಲಿ ಜಿದ್ದಿಗೆ ಬಿದ್ದಂತೆ ಓಡುತ್ತಿರುವ ಕಟ್ ಮಸ್ತಾದ ಎತ್ತುಗಳು. ಗೆಲ್ಲಲೇಬೇಕೆಂದು ಬಾರುಕೋಲಿನಿಂದ ನೆಚ್ಚಿನ ಹೋರಿಗಳನ್ನು ಒಡಿಸುತ್ತಿರುವ ಮಾಲೀಕರು.. ಕೇಕೆ, ಸಿಳ್ಳೆ ನಡುವೆ ನೋಡುತ್ತಾ ನಿಂತ ಜನರು.. ಮತ್ತೊಂದೆಡೆ ನಿಯಂತ್ರಣಕ್ಕೆ ಸಿಗದೇ ಗುದ್ದಲು ಯತ್ನಿಸಿ ಅಖಾಡದಿಂದಲೇ ಗದ್ದೆಯತ್ತ ಓಡಿ ಹೋದ ಗೂಳಿ. ಜಬರದಸ್ತ್​ ಗ್ರಾಮೀಣ ಕ್ರೀಡೆಯ ಈ ಝಲಕ್ ಕಂಡುಬಂದಿದ್ದು ಹಾವೇರಿಯ ಹೊರವಲಯದಲ್ಲಿ.

publive-image

ಹಾವೇರಿಯಲ್ಲಿ ರಾಜ್ಯಮಟ್ಟದ ಖಾಲಿ ಎತ್ತಿನ ಬಂಡಿ ಓಡಿಸುವ ಸ್ಪರ್ಧೆ ಭರ್ಜರಿಯಾಗಿತ್ತು. ಹೋರಿಗಳು ನಾ ಮುಂದು ತಾ ಮುಂದು ಓಡ್ತಿದ್ರೆ ಮಾಲೀಕ ಸ್ಪರ್ಧೆ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದವನಂತೆ ಅವುಗಳನ್ನು ಒಡಿಸುತ್ತಿದ್ದ. ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ ಸಾವನ್ನಪ್ಪಿದ ಕೊಬ್ಬರಿ ಹೋರಿಗಳ ಸವಿನೆನಪಿಗಾಗಿ ಈ ರಾಜ್ಯಮಟ್ಟದ ಖಾಲಿ ಬಂಡಿ ಓಡಿಸೋ ಸ್ಪರ್ಧೆ ಆಯೋಜಿಸಲಾಗಿತ್ತು. ಹಬ್ಬದಂತೆ ರೈತರೆಲ್ಲ ಸೇರಿಕೊಂಡು ಸಂಭ್ರಮದಿಂದ ಸ್ಪರ್ಧೆಯಲ್ಲಿ ಭಾಗಿಯಾಗಿ 2 ಬೈಕ್ ಸೇರಿ ಹಲವು ನಗದು ಬಹುಮಾನಗಳನ್ನು ಮನೆಗೆ ಕೊಂಡೊಯ್ದರು.

publive-image

ಧಾರವಾಡ, ಬೆಳಗಾವಿ, ಗದಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಎಂಬತ್ತಕ್ಕೂ ಅಧಿಕ ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಮಿಂಚಿನಂತೆ ರೇಸ್​ಗಿಳಿದಿದ್ದವು. ಒಂದೊಂದು ಜೋಡಿ ಎತ್ತಿಗೂ ಒಂದು ನಿಮಿಷ ಸಮಯ ನಿಗದಿ ಮಾಡಲಾಗಿತ್ತು. ಈ ಸಮಯದಲ್ಲಿ ಅತೀ ಹೆಚ್ಚು ದೂರ ಓಡಿದ ಎತ್ತುಗಳು ಗೆಲುವು ನಮ್ಮದೇ ಅಂತ ಬೀಗಿದವು. ಅಭಿಮಾನಿಗಳು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಭರ್ಜರಿ ಖುಷಿಯಲ್ಲಿ ತೇಲಿದ್ರು.

ಇದನ್ನೂ ಓದಿ: ಡ್ಯಾನ್ಸರ್ ಆಗುವ ಕನಸು ಕಂಡಿದ್ದ ಬಾಲಕಿಯ ದುರಂತ ಅಂತ್ಯ.. ಸೆಂಟ್ರಿಂಗ್ ಮರದ ತುಂಡು ಬಿದ್ದು ಕೊನೆಯುಸಿರು

ಕೆಲವು ಹೋರಿಗಳಂತೂ ಮಾಲೀಕರಿಗೂ ಕೇರೇ ಮಾಡದೇ ಅಖಾಡ ಬಿಟ್ಟು ಹೊರಗೆ ಓಡಿ ಹಾವಳಿ ಎಬ್ಬಿಸಿದವು. ಮತ್ತೊಂದೆಡೆ ನಾ ರೇಸ್​ಗೆ ಬರಲ್ಲ ಅಂತ ಒಂದು ಗೂಳಿ ವ್ಯಕ್ತಿಯೊಬ್ಬನಿಗೆ ತಿವಿಯಲು ಯತ್ನಿಸಿ ಗದ್ದೆಯೊಳಗೆ ಓಡಿತು.

publive-image

ಅಂದಾಗೆ ಎತ್ತಿನ ಬಂಡಿ ಓಟಕ್ಕೆ ಅಂತಲೆ ರೈತರು ವಿಶೇಷವಾಗಿ ಎತ್ತುಗಳನ್ನ ಕಟ್ಟುಮಸ್ತಾಗಿ ಬೆಳೆಸ್ತಾರೆ. ಶೇಂಗಾ ಹೊಟ್ಟು, ಮೊಟ್ಟೆ, ಹಿಂಡಿ, ನುಚ್ಚು ಸೇರಿದಂತೆ ವಿವಿಧ ರೀತಿಯ ಪೌಷ್ಠಿಕಾಂಶ ಭರಿತ ಪದಾರ್ಥಗಳನ್ನು ತಿನ್ನಿಸಿ ತಯಾರು ಮಾಡಿದ್ರು. ಹೀಗೆ ಕಟ್ ಮಸ್ತಾಗಿ ತಯಾರಾಗಿದ್ದ ಎತ್ತುಗಳು ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಶರವೇಗದಲ್ಲಿ ಓಡಿ ನೆರೆದವರನ್ನು ರಂಜಿಸಿದವು.

ಇದನ್ನೂ ಓದಿ:ಟೆಕ್ಕಿ ಅತುಲ್ ಸುಭಾಷ್ ಪತ್ನಿಗೆ ಬಿಗ್ ರಿಲೀಫ್‌.. ಮೂವರಿಗೂ ಕೋರ್ಟ್‌ ಜಾಮೀನು ಮಂಜೂರು

ಜಾನಪದ ಕ್ರೀಡೆಗಳೇ ಮಾಯವಾಗುತ್ತಿರುವ ಈಗಿನ ಕಾಲಘಟ್ಟದಲ್ಲಿ ಹಳ್ಳಿ ಜನರು ಅವನ್ನು ಈಗಲೂ ಚಾಚೂ ತಪ್ಪದೇ ಸಂಭ್ರಮದಿಂದ ನಡೆಸಿಕೊಂಡು ಬರುತ್ತಿದ್ದಾರೆ. ರೈತರು ಬಿಡುವಿರೋ ಸಮಯದಲ್ಲಿ ಎತ್ತಿನ ಬಂಡಿ ಓಡಿಸಿ ಖುಷಿ ಪಟ್ರೆ ನೆರೆದಿದ್ದ ನೂರಾರು ಜನರಿಗೆ ಖಾಲಿ ಬಂಡಿ ಓಡಿಸೋ ಸ್ಪರ್ಧೆ ಭರ್ಜರಿ ಮನರಂಜನೆ ಒದಗಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment