/newsfirstlive-kannada/media/post_attachments/wp-content/uploads/2024/10/SATISH-vijayendra.jpg)
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿಯನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದಿಢೀರ್ ಭೇಟಿಯಾಗಿದ್ದಾರೆ. ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ವಿಜಯೇಂದ್ರ-ಜಾರಕಿಹೊಳಿ ಭೇಟಿ ಆಗಿದ್ದಾರೆ.
ಇಬ್ಬರು ನಾಯಕರ ಭೇಟಿ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಮುಡಾ ಕೇಸ್ನಲ್ಲಿ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆಯೇ, ಸಿಎಂ ಬದಲಾವಣೆಯ ಕೂಗು ಕೇಳಿಬಂದಿತ್ತು. ಅಲ್ಲಿವರೆಗೆ ಸೈಲೆಂಟ್ ಆಗಿದ್ದ ಸತೀಶ್ ಜಾರಕಿಹೊಳಿ ದಿಢೀರ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಇತ್ತ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಮೊನ್ನೆಯಷ್ಟೇ ತುಮಕೂರಲ್ಲಿ ಪರಮೇಶ್ವರ್ ಅವರನ್ನು ಭೇಟಿಯಾಗಿದ್ದರು.
ಇದನ್ನೂ ಓದಿ:ದಲಿತ ಸಿಎಂ ದಾಳ.. ದಿಢೀರ್ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ; ಏನಿದರ ರಹಸ್ಯ?
ಅದಕ್ಕೂ ಮೊದಲು, ಸಮಾಜ ಕಲ್ಯಾಣ ಸಚಿವ ಎಚ್ಸಿ ಮಹದೇವಪ್ಪ ನಿವಾಸದಲ್ಲಿ ಪರಮೇಶ್ವರ್, ಸತೀಶ್ ಜಾರಿಕಿಹೊಳಿ ಗೌಪ್ಯ ಸಭೆಯನ್ನು ನಡೆಸಿದ್ದರು. ದಲಿತ ಸಮುದಾಯದ ಮೂವರು ಸಚಿವರ ಈ ಭೇಟಿ ನಾನಾ ಆಯಾಮದ ಚರ್ಚೆಗೆ ಗ್ರಾಸವಾಗಿತ್ತು.
ವಿಜಯೇಂದ್ರ ಏನಂದ್ರು..?
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ದಸರಾ ಮುಗಿದ ಬಳಿಕ ಮತ್ತೆ ಡಿಕೆ ಬ್ರದರ್ಸ್, ದೆಹಲಿಗೆ ತೆರುವ ಪ್ಲಾನ್ನಲ್ಲಿ ಇದ್ದಾರೆ ಎನ್ನಲಾಗಿದೆ. ಇದೀಗ ಸತೀಶ್ ಜಾರಕಿಹೊಳಿಯನ್ನು ಬಿವೈ ವಿಜಯೇಂದ್ರ ಭೇಟಿ ಮಾಡಿರೋದು ಕುತೂಹಲ ಮೂಡಿಸಿದೆ. ಇನ್ನು ತಮ್ಮ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯೇಂದ್ರ.. ಶಿವಮೊಗ್ಗ-ಶಿಕಾರಿಪುರ ಮಾರ್ಗದಲ್ಲಿರುವ ಕುಟ್ರಳ್ಳಿ ಬಳಿ ಟೋಲ್ ಗೇಟ್ ತೆರವು ಮಾಡುವಂತೆ ಮನವಿ ಮಾಡಿದ್ದೇನೆ. ಈ ಟೋಲ್ ಬೇರೆಡೆ ಶಿಫ್ಟ್ ಮಾಡಲು ಮನವಿ ಮಾಡಿದ್ದೇವೆ. ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಬರುತ್ತವೆ. ಇದರಿಂದ ರೈತರಿಗೆ ಅನಾನುಕೂಲವಾಗಿದೆ. ಮಕ್ಕಳು ಶಾಲೆಗೆ ಹೋಗುವುದು ತೊಂದರೆ ಆಗಿದೆ. ಟೋಲ್ ಶಿಫ್ಟ್ಗೆ ಹೋರಾಟಗಳು ನಡೆದಿವೆ. ಸಚಿವರು ಸಕಾರಾತ್ಮಕವಾಗಿ ಭರವಸೆ ಕೊಟ್ಟಿದ್ದಾರೆ. ಶೀಘ್ರದಲ್ಲೇ ಸಭೆ ಕರೆಯುವುದಾಗಿ ಹೇಳಿದ್ದಾರೆ ಎಂದರು.
ಇದನ್ನೂ ಓದಿ:ಜಾರಕಿಹೊಳಿ ಖರ್ಗೆ ಭೇಟಿ ಬೆನ್ನಲ್ಲೇ ಡಿಕೆ ಬ್ರದರ್ಸ್ ಅಲರ್ಟ್; ಕಾಂಗ್ರೆಸ್ನಲ್ಲಿ ಕುತೂಹಲ ಮೂಡಿಸಿದ ನಾಯಕರ ನಡೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ