/newsfirstlive-kannada/media/post_attachments/wp-content/uploads/2024/10/CHANNAPATTANA-BY-POLLS.jpg)
ರಾಜಕೀಯದಲ್ಲಿ ಮಾತೇ ಬಂಡವಾಳ, ಮಾತೇ ಬ್ರಹ್ಮಾಸ್ತ್ರ ಅನ್ನೋದ್ ಸತ್ಯ. ಆದ್ರೆ, ಅದೇ ಮಾತು ಲಯ ತಪ್ಪಿದರೆ ಕಿಚ್ಚೆಬ್ಬಿಸುತ್ತೆ. ಎದುರಾಳಿಗೆ ಬಹುದೊಡ್ಡ ಯುದ್ಧಾಸ್ತ್ರವನ್ನೇ ನೀಡುತ್ತೆ. ಅಷ್ಟಕ್ಕೂ ಈ ಮಾತನ್ನ ನಾವ್ ಹೇಳಲು ಕಾರಣವೇ ಚನ್ನಪಟ್ಟಣ ಅಖಾಡ. ದೇವೇಗೌಡರ ಕುಟುಂಬ, ಡಿಕೆಶಿ ಕುಟುಂಬ ನಾವಾ ನೀವಾ ಅನ್ನೋ ರೀತಿಯಲ್ಲಿ ಜಿದ್ದಿಗೆ ಬಿದ್ದು ಯುದ್ಧ ಮಾಡ್ತಿದ್ದಾರೆ. ಆದ್ರೆ, ದೇವೇಗೌಡರ ಆರೋಗ್ಯದ ಬಗ್ಗೆ ಡಿಕೆ ಸುರೇಶ್ ಆಡಿರೋ ಅದೊಂದು ಮಾತು ಕಿಚ್ಚೆಬ್ಬಿಸಿದೆ. ದಳಪತಿಗಳಿಗೆ ಅದುವೇ ಅಸ್ತ್ರವಾಗಿದೆ.
ಎರಡು ಕುಟುಂಬಗಳು, ದಶಕಗಳ ಸೇಡು. ಮತ್ತೊಂದು ಜಿದ್ದಾಜಿದ್ದಿನ ಕದನಕ್ಕೆ ಹೋರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ..ಪ್ರಿಯ ವೀಕ್ಷಕರೇ...ನೀವ್ ಯಾವಾಗಲೂ ನೋಡಿರಬಹುದು..ಡಿಕೆ ಬ್ರದರ್ಸ್ಗೂ, ಹೆಚ್ಡಿಡಿ ಫ್ಯಾಮಿಲಿಗೂ ಮಾತಿನ ಮಲ್ಲಯುದ್ಧ ನಡೆದ್ರೆ, ಅದು ತೀರ ಅತಿರೇಕದ ಹಂತ ತಲುಪಿಬಿಡುತ್ತೆ..ತುಂಬಾನೇ ವೈಯಕ್ತಿಕವಾಗಿ ವಾಗ್ದಾಳಿಗಳನ್ನ ಆಗಾಗ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಮಾಡಿಕೊಳ್ತಿರ್ತಾರೆ.. ಆದ್ರೆ, ಡಿಕೆ ಸುರೇಶ್ ಏನಿದ್ದಾರಲ್ಲ, ಅವ್ರು ಸುಖಾಸುಮ್ಮನೆ ಯಾರ ಮಾತಿಗೂ ಹೋಗೋದಿಲ್ಲ, ಮಾತಾಡಿದ್ರೂ ಪರ್ಸನಲ್ ಅಟ್ಯಾಕೆಲ್ಲಾ ಮಾಡೋದಿಲ್ಲ.. ತುಂಬಾನೇ ಯೋಚಿಸಿ, ನಾಜೂಕಾಗಿ ಮಾತಿನ ಬಾಣ ಪ್ರಯೋಗ ಮಾಡುವ ನಾಯಕ.. ಹೀಗಿರುವ ಡಿಕೆ ಸುರೇಶ್ ನಾಲಿಗೆ ಅದ್ಯಾಕೋ ಈ ಬಾರಿ ಸ್ವಲ್ಪ ಜಾರಿದಂತೆ ಕಾಣ್ತಿದೆ. ಚನ್ನಪಟ್ಟಣ ರಣಕಣದಲ್ಲಿ ಸೈನಿಕನ ಗೆಲುವಿಗೆ ಹೋರಾಡ್ತಿರೋ ಸುರೇಶ್ ದೊಡ್ಡಗೌಡರನ್ನ ಎಳೆತಂದಿದ್ದಾರೆ. ದೇವೇಗೌಡರ ಆರೋಗ್ಯದ ಬಗ್ಗೆ ಸುರೇಶ್ ಲಘುವಾಗಿ ಮಾತನಾಡಿದ್ದು ಹೊಸ ಬೆಂಕಿ ಹೊತ್ತಿಸಿದೆ..
ಎಲೆಕ್ಷನ್ ಅಂದಾಕ್ಷಣ ಅಲ್ಲಿ ನಡೆಯೋದೇ ಬೇರೆ. ಅಭ್ಯರ್ಥಿ ಯಾರಿರುತ್ತಾರೋ ಅವರ ವಿರುದ್ಧ ಎದುರಾಳಿಗಳು, ಎದುರಾಳಿ ಪಡೆಯ ನಾಯಕರು ಉರಿದುಬೀಳೋದು ಕಾಮನ್. ಆದರೆ, ಚನ್ನಪಟ್ಟಣ ಬೈ ಎಲೆಕ್ಷನ್ನಲ್ಲಿ ಸದ್ಯಕ್ಕೆ ಹಾಗಾಗುತ್ತಿಲ್ಲ. ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರವನ್ನೇನೋ ಸಲ್ಲಿಸಿದ್ದಾರೆ. ಬಟ್, ಅವರಿಗೆ ಎದುರಾಳಿಯಾಗಿರೋ ಕಾಂಗ್ರೆಸ್ ನಾಯಕರು ಮಾತ್ರ ನಿಖಿಲ್ನ ಬಿಟ್ಟು ಅವರಿಗೆ ಶಕ್ತಿಯಾಗಿರೋರ ಮೇಲೆ ದಾಳಿ ಮಾಡ್ತಿದ್ದಾರೆ. ಕುಮಾರಸ್ವಾಮಿಯವರನ್ನೇ ನೇರವಾಗಿ ಅಟ್ಯಾಕ್ ಮಾಡ್ತಿದ್ದಾರೆ. ಬಟ್, ಕುಮಾರಸ್ವಾಮಿಯವ್ರು ಚನ್ನಪಟ್ಟಣದ ಶಾಸಕರಾಗಿದ್ದರಿಂದ ಅವರ ವಿರುದ್ಧ ಮಾತನಾಡೋದ್ರಲ್ಲಿ ಅರ್ಥವಿದೆ ಸರಿ. ಆದ್ರೆ, ಡಿಕೆ ಸುರೇಶ್ ಮಾತನಾಡೋ ಭರದಲ್ಲಿ ದೇವೇಗೌಡರನ್ನೂ ಟಾರ್ಗೆಟ್ ಮಾಡಿದ್ದಾರೆ. ದೇವೇಗೌಡರು ಌಂಬುಲೆನ್ಸ್ನಲ್ಲಿ ಬಂದು ಪ್ರಚಾರ ಮಾಡ್ತಾರಂತೆ ಅಂತಾ ಹೇಳುವ ಮೂಲಕ ಅವರ ಆರೋಗ್ಯದ ಬಗ್ಗೆ ಟೀಕಿಸಿದ್ದು.
ಇದನ್ನೂ ಓದಿ:VIDEO: ಕೇರಳ ಸಿಎಂ ಚಲಿಸುತ್ತಿದ್ದ ಕಾರಿಗೆ ಬೆಂಗಾವಲು ವಾಹನಗಳ ಡಿಕ್ಕಿ; ಭಯಾನಕ ದೃಶ್ಯ ಸೆರೆ!
ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಿನೇಷನ್ ಮಾಡಿ ನಾಲ್ಕೈದು ದಿನವೇ ಆಯ್ತು. ಆದ್ರೂ ನಿಖಿಲ್ ಬಗ್ಗೆ ಕಾಂಗ್ರೆಸ್ ನಾಯಕರು ತುಟಿಕ್ ಪಿಟಿಕ್ ಅಂತಿಲ್ಲ. ಆದ್ರೆ, ಅಖಾಡದಲ್ಲಿ ನಿಖಿಲ್ಗಿಂತ ಹೆಚ್ಚಾಗಿ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡ್ತಿರೋದು ಸತ್ಯ. ಅಷ್ಟಕ್ಕೂ ಇಲ್ಲಿ ಗೌಡರ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡೋದಕ್ಕೆ ಕಾರಣಗಳಿವೆಯಂತೆ.
ಟಾರ್ಗೆಟ್ ಸೀಕ್ರೆಟ್-01: ಮೊಮ್ಮಗನಿಗಾಗಿ ಕ್ಯಾಂಪೇನ್ ಅಖಾಡಕ್ಕೆ ಗೌಡರು!
ದೇವೇಗೌಡ್ರಿಗೆ 90 ಕ್ರಾಸ್ ಆಯ್ತು, ಈ ವಯಸ್ಸಲ್ಲಿ ಕ್ಯಾಂಪೇನ್ ಮಾಡೋದು, ಪ್ರವಾಸ ಮಾಡೋದು ಅಂದ್ರೆ ನಿಜಕ್ಕೂ ಕಷ್ಟ. ಆದ್ರೆ, ಈಗಲೂ ದೇವೇಗೌಡ್ರ ಹಠ, ಛಲ ನೋಡ್ತಿದ್ರೆ ವಯಸ್ಸು ಲೆಕ್ಕಕ್ಕೆ ಇಲ್ವೇನೋ ಅಂತಾ ಅನ್ಸುತ್ತೆ. ಯಾಕಂದ್ರೆ, ಅವ್ರು ಇವತ್ತಿಗೂ ದೆಹಲಿಗೆ ಹೋಗ್ತಾರೆ, ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಾರೆ. ಚುನಾವಣೆ ಟೈಮಲ್ಲಿ ಜೆಡಿಎಸ್ ಪರ ಮತ ಕೇಳ್ತಾರೆ. ಅದೇ ರೀತಿ ಈಗ ಚನ್ನಪಟ್ಟಣದಲ್ಲಿ ಮೊಮ್ಮಗನಿಗಾಗಿಯೂ ಈ ವಯಸ್ಸಿನಲ್ಲೂ ದೇವೇಗೌಡರು ಅಖಾಡಕ್ಕೆ ಇಳೀತಾರೆ ಅನ್ನೋ ಮಾತುಗಳು ಕೇಳಿಬರ್ತಿದೆ. ಮೊಮ್ಮಗನ ಗೆಲ್ಲಿಸಿಕೊಂಡು ಬರೋದಕ್ಕೆ ಅಂತಾ ಪಂಚಾಯಿತಿ ಮಟ್ಟದಲ್ಲೂ ಕ್ಯಾಂಪೇನ್ ಮಾಡಲಿದ್ದಾರಂತೆ. ಇದನ್ನ ಸ್ವತಃ ಕುಮಾರಸ್ವಾಮಿ ಅವ್ರೇ ಹೇಳ್ಕೊಂಡಿದ್ದಾರೆ.
ಇದನ್ನೂ ಓದಿ:C295 ಯುದ್ಧ ವಿಮಾನ, ಭಾರತಕ್ಕೆ ಹೇಗೆ ಗೇಮ್ ಚೇಂಜರ್ ಆಗಿ ಬದಲಾಗಲಿದೆ? ಇಲ್ಲಿವೆ ಪ್ರಮುಖ ಐದು ಅಂಶಗಳು
ದೇವೇಗೌಡರು ಮತ ಕೇಳೋದಕ್ಕೆ ಬರುತ್ತಿದ್ದಾರೆ ಅನ್ನೋ ವಿಚಾರ ಕಾಂಗ್ರೆಸ್ ನಾಯಕರು ಕೊಂಚ ಶೇಕ್ ಆಗುವಂತೆ ಮಾಡಿದೆಯಾ? ಈ ಪ್ರಶ್ನೆ ಹುಟ್ಟದೇ ಇರೋದಿಲ್ಲ. ಯಾಕಂದ್ರೆ, ಚನ್ನಪಟ್ಟಣ ಹೇಳಿ ಕೇಳಿ ಒಕ್ಕಲಿಗ ಸಾಮ್ರಾಜ್ಯ, ಅಲ್ಲಿ ಒಕ್ಕಲಿಗ ಮತದಾರರದ್ದೇ ಅಧಿಪತ್ಯ. ಹೀಗಿರೋವಾಗ, ಒಕ್ಕಲಿಗರ ಚಾಂಪಿಯನ್ ಅಂತಾ ಕರೆಸಿಕೊಳ್ಳುವ ದೇವೇಗೌಡರು, ಮೊಮ್ಮಗನಿಗಾಗಿ ಮತಬೇಟೆಗೆ ಇಳೀತಾರೆ ಅಂದ್ರೆ ಎದುರಾಳಿಗೆ ಕೊಂಚ ಅಳುಕು ಉಂಟಾಗದೇ ಇರೋದಿಲ್ಲ. ಈಗಾಗಲೇ ಮೈತ್ರಿ ಬಲದಲ್ಲಿ ರೇಸ್ನಲ್ಲಿ ಮುನ್ನುಗ್ಗುತ್ತಿರುವ ನಿಖಿಲ್ಗೆ ತಾತನ ಪ್ರಚಾರ ಬಲ ತುಂಬಿಯೇ ತುಂಬುತ್ತೆ. ಈ ಕಾರಣದಿಂದಾನೇ ಕಾಂಗ್ರೆಸ್ ನಾಯಕರು ದೇವೇಗೌಡರನ್ನ ಟೀಕಿಸಿ ಶಕ್ತಿಕುಂದಿಸಿ ಬಲಕುಗ್ಗಿಸೋ ಪ್ರಯತ್ನ ಮಾಡ್ತಿದ್ದಾರೆ ಅನ್ನೋದು ಅಖಾಡದಲ್ಲಿ ಕೇಳಿಬರ್ತಿರೋ ಮಾತು.
ಟಾರ್ಗೆಟ್ ಸೀಕ್ರೆಟ್-02 ಅಖಾಡದಲ್ಲಿ ಗೌಡ್ರಿಂದ ಭಾವನಾತ್ಮಕ ಅಸ್ತ್ರದ ಭೀತಿ!
ಹೇಳಿ ಕೇಳಿ ರಾಮನಗರ ಜಿಲ್ಲೆಯ ಜನರು ಭಾವುಕರು, ಮುಗ್ಧರು ಅನ್ನೋದನ್ನ ಆಗಾಗ ಡಿಕೆ ಶಿವಕುಮಾರ್ರವರೇ ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ್ರು ಆರೇಳು ದಶಕಗಳ ಕಾಲ ರಾಜಕೀಯ ಮಾಡಿದ್ದಾರೆ. ಅವರಿಗೆ ಯಾವ ಕ್ಷೇತ್ರದಲ್ಲಿ ಯಾವ ರೀತಿಯ ವಾತಾವರಣ ಇರುತ್ತೆ. ಅಲ್ಲಿಯ ವೋಟರ್ಗಳ ನಾಡಿಮಿಡಿತ ಏನು ಅನ್ನೋದು ಪಕ್ಕಾ ಗೊತ್ತು. ಹೀಗಾಗಿ ಚನ್ನಪಟ್ಟಣದಲ್ಲಿ ಬಂದು ದೇವೇಗೌಡ್ರು ಭಾವನಾತ್ಮಕ ಭಾಷಣ ಮಾಡ್ತಾ ತನ್ನ ಮೊಮ್ಮಗ ಗೆಲ್ಲಿಸಿಕೊಡಿ ಅಂತಾ ಕೇಳಿಕೊಂಡ್ರು ಅಂದ್ರೆ ಚಿತ್ರಣವೇ ಬದಲಾಗುವ ಸಾಧ್ಯತೆ ಇರುತ್ತೆ. ಹೌದು, ಅಪ್ಪಿ ತಪ್ಪಿ ಏನಾದ್ರೂ ದೇವೇಗೌಡ್ರು ಕ್ಯಾಂಪೇನ್ ವೇಳೆ ಭಾವನಾತ್ಮಕವಾದ್ರು ಅಂತಾದ್ರೆ ವೋಟ್ಗಳು ಟರ್ನ್ ಆಗೋ ಚಾನ್ಸಸ್ ಕೂಡ ಇರುತ್ತೆ. ಇದುವೇ ಕಾಂಗ್ರೆಸ್ಗೆ ಇರೋ ಅತೀ ದೊಡ್ಡ ಭಯ. ಇಂತಾವೊಂದು ಭಯ ಇರೋದರಿಂದಲೇ ಯಾವುದೇ ಕಾರಣಕ್ಕೂ ದೊಡ್ಡಗೌಡ್ರು ಕ್ಷೇತ್ರಕ್ಕೆ ಎಂಟ್ರಿಯಾಗದಂತೆ ನೋಡಿಕೊಳ್ಳಬೇಕು ಅನ್ನೋದು ಕಾಂಗ್ರೆಸ್ ಧುರೀಣರ ಲೆಕ್ಕಾಚಾರ ಇದ್ದಂತೆ ಕಾಣಿಸ್ತಿದೆ.
ಟಾರ್ಗೆಟ್ ರಹಸ್ಯ-03; ನಿಖಿಲ್ ಪರ ಅನುಕಂಪದ ಅಲೆ ಎಬ್ಬಿಸುವ ಸಾಧ್ಯತೆ
Vo: ದೇವೇಗೌಡ್ರು ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು. ಕುಮಾರಸ್ವಾಮಿ ದಳವನ್ನು ಸಮರ್ಥವಾಗಿ ಮುನ್ನಡೆಸುತ್ತಾ ಇರೋರು. ಇನ್ನು ಆ ಪಕ್ಷಕ್ಕೆ ಉತ್ತರಾಧಿಕಾರಿ ಯಾರು ಅಂದ್ರೆ ಕೇಳಿ ಬರೋ ಉತ್ತರ ನಿಖಿಲ್ ಕುಮಾರಸ್ವಾಮಿ. ನಿಖಿಲ್ ಹೆಸ್ರು ಜೋರಾಗಿರೋದು. ಬಟ್, ನಿಖಿಲ್ಗೆ ಒಂದು ಗೆಲುವು ಬೇಕು. ಈಗಾಗಲೇ ಎರಡು ಬಾರಿ ಅಗ್ನಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಬಟ್, ಇದನ್ನೇ ದೇವೇಗೌಡ್ರು ಚುನಾವಣಾ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇದೆ. ತನ್ನ ಮೊಮ್ಮಗನನ್ನ ಎರಡು ಬಾರಿ ಸಂಚು ಮಾಡಿ ಸೋಲಿಸಿದರು. ಈ ಬಾರಿ ನಿಮ್ಮ ಮಡಿಲಿಗೆ ಹಾಕಿದ್ದೀನಿ ನೀವು ಆಶೀರ್ವಾದ ಮಾಡಬೇಕು ಅಂತಾ ಕೇಳಿಕೊಳ್ಳೋದು ಕೂಡ ಪಕ್ಕಾ. ಇನ್ನು ದೇವೇಗೌಡ್ರು ಹಾಗೇ ಹೇಳೋದರಿಂದ ಕ್ಷೇತ್ರದಲ್ಲಿ ನಿಖಿಲ್ ಪರ ಅಲೆ ಭುಗಿಲೇಳುವ ಸಾಧ್ಯತೆ ಇದೆ. ಈಗಾಗಲೇ ನಿಖಿಲ್ ಎರಡು ಬಾರಿ ಸೋತಿದ್ದಾರೆ. ಆದ್ರೆ ತಾವು ಕೈ ಬಿಡಬಾರದು ಅನ್ನೋದು ಚನ್ನಪಟ್ಟಣ ಜನರಲ್ಲಿದೆ ಅನ್ನೋದು ಕಾಣಿಸ್ತಿದೆ. ದೇವೇಗೌಡ್ರ ಎಂಟ್ರಿಯಿಂದ ಅದು ಇನ್ನಷ್ಟು ಭುಗಿಲೇಳುತ್ತೆ. ಇದು ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿಯೇ ದೇವೇಗೌಡರ ಮೇಲೆ ವಾಗ್ಬಾಣಗಳನ್ನು ಬಿಡ್ತಿದ್ದಾರೆ.
ಟಾರ್ಗೆಟ್ ರಹಸ್ಯ-04 :ದೇವೇಗೌಡರಿಂದ ಒಕ್ಕಲಿಗ ವೋಟ್ ಟರ್ನ್!?
ಯೋಗೇಶ್ವರ್ ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ಗೆ ಹೋಗ್ತಾ ಇದ್ದಂತೆ ಈ ಬಾರಿ ಕೈ ಗೆಲುವು ಪಕ್ಕಾ ಅನ್ನೋ ಮಾತುಗಳು ಕೇಳಿಬರುತ್ತಿದ್ದವು. ಆದ್ರೆ, ಜೆಡಿಎಸ್ನಿಂದ ನಿಖಿಲ್ ಅಭ್ಯರ್ಥಿ ಅಂತಾ ಘೋಷಣೆಯಾಗ್ತಾ ಇದ್ದಂತೆ ಚನ್ನಪಟ್ಟಣದ ಅಖಾಡ ಚೇಂಜ್ ಆಗೋದಕ್ಕೆ ಶುರುವಾಯ್ತು. ಸದ್ಯ ಕಾಂಗ್ರೆಸ್ಗೂ? ಜೆಡಿಎಸ್ಗೂ? ಫಿಫ್ಟಿ ಫಿಫ್ಟಿ ಫೈಟ್ ಅನ್ನೋ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಆದ್ರೆ, ದೇವೇಗೌಡ್ರು ಮೊಮ್ಮಗನ ಪರ ಪ್ರಚಾರಕ್ಕೆ ಇಳಿದಮೇಲೆ ವಾತಾವರಣ ಚೇಂಜ್ ಆಗುತ್ತೆ ಅನ್ನೋ ಭಯ ಕಾಂಗ್ರೆಸ್ ನಾಯಕರದಲ್ಲಿದೆ.
ಚನ್ನಪಟ್ಟಣ ಅಖಾಡದಲ್ಲಿ ದೇವೇಗೌಡರ ಕ್ಯಾಂಪೇನ್ ಯಾಕೆ ಅಷ್ಟೊಂದ್ ಪ್ರಭಾವ ಬೀರುತ್ತೆ ಅಂದ್ರೆ, ಚನ್ನಪಟ್ಟಣದಲ್ಲಿ ಇರೋ 2.28 ಲಕ್ಷ ವೋಟ್ಗಳಲ್ಲಿ 1.15 ಲಕ್ಷ ವೋಟ್ ಒಕ್ಕಲಿಗ ಸಮುದಾಯದಾಗಿದೆ. ಇದೊಂದು ಸಮುದಾಯವೇ ಯಾರು ಗೆಲ್ಲಬೇಕು? ಯಾರು ಸೋಲಬೇಕು? ಅನ್ನೋದನ್ನು ನಿರ್ಧಾರ ಮಾಡುತ್ತೆ. ಹಾಗೇ ಒಕ್ಕಲಿಗ ಸಮುದಾಯಕ್ಕೆ ದೇವೇಗೌಡ್ರು ಅಂದ್ರೆ ಗೌರವ, ಪ್ರೀತಿ. ಹೀಗಾಗಿ ದೇವೇಗೌಡ್ರು ಮೊಮ್ಮಗನ ಪರ ಅಖಾಡಕ್ಕಿಳಿಯೋದು ಒಕ್ಕಲಿಗ ವೋಟ್ಗಳನ್ನು ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್ನತ್ತ ಕ್ರೋಢೀಕರಣ ಮಾಡುತ್ತೆ ಅನ್ನೋ ಲೆಕ್ಕಾಚಾರ ಕಾಂಗ್ರೆಸ್ ನಾಯಕರಲ್ಲಿ ಭಯ ಹುಟ್ಟಿಸ್ತಿದೆ ಅಂತಾ ಹೇಳ್ತಿದ್ದಾರೆ.
ಮೊಮ್ಮಗನ ಗೆಲ್ಲಿಸಲು ದೇವೇಗೌಡರು ಅಖಾಡಕ್ಕಿಳಿಯಲು ರೆಡಿಯಾಗಿದ್ದಾರೆ. ಆದ್ರೆ, ಅದಕ್ಕೆ ಬ್ರೇಕ್ ಹಾಕೋ ತಂತ್ರಕ್ಕೆ ಹೋಗಿ ಕಾಂಗ್ರೆಸ್ ನಾಯಕರು ಎಡವಟ್ಟು ಮಾಡಿಕೊಂಡಂತೆ ಕಾಣಿಸ್ತಿದೆ. ಹಾಗಾದ್ರೆ, ಇದನ್ನು ಜೆಡಿಎಸ್ನವರು ಯಾವ ರೀತಿಯಲ್ಲಿ ಯುದ್ಧಾಸ್ತ್ರ ರೆಡಿ ಮಾಡಿಕೊಳ್ಳುತ್ತಿದ್ದಾರೆ? ಗೌಡರ ಮೇಲಿನ ಟೀಕೆ ಕಾಂಗ್ರೆಸ್ಗೆ ಮುಳುವಾಗುತ್ತಾ? ನೋಡಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ