/newsfirstlive-kannada/media/post_attachments/wp-content/uploads/2025/06/RCB_FANS_1-1.jpg)
17 ವರ್ಷಗಳ ಕಪ್ ಕೊರಗು ನೀಗಿದ ಸಂಭ್ರಮವನ್ನ ಸೂತಕದ ಛಾಯೆ ಆವರಿಸಿದೆ. ಬೆಂಗಳೂರಿನಲ್ಲಿ ಲಾಯಲ್ ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಮಾಡಿದ ಪ್ಲ್ಯಾನ್ ಸಾವುಗಳೊಂದಿಗೆ ಅಂತ್ಯಕಂಡಿದೆ. ಭೀಕರ ಕಾಲ್ತುಳಿತಕ್ಕೆ ಸಿಕ್ಕು ಅಮಾಯಕ ಅಭಿಮಾನಿಗಳು ಕೊನೆಯುಸಿರೆಳೆದಿದ್ದಾರೆ. ಅಷ್ಟಕ್ಕೂ ಈ ಕಾಲ್ತುಳಿತ ನಡೆದಿದ್ದೇಕೆ, ಇದಕ್ಕೆ ಕಾರಣ ಏನು, ಕಾರ್ಯಕ್ರಮದ ಆಯೋಜನೆಯಲ್ಲಿ ಯಡವಟ್ಟಾಗಿದ್ದು ಎಲ್ಲಿ?.
ಸುದೀರ್ಘ ವನವಾಸದ ಬಳಿಕ ಕನಸು ನನಸಾದ ಅವಿಸ್ಮರಣೀಯ ಕ್ಷಣವನ್ನ ಸಂಭ್ರಮಿಸಲು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ದೌಡಾಯಿಸಿದ್ದರು. ಸಂಭ್ರಮಿಸಲು ಬಂದ ಆ ಅಭಿಮಾನಿಗಳ ಪೈಕಿ ಕೆಲವರು ಸೇರಿದ್ದು ಮಸಣಕ್ಕೆ. ಇನ್ನು ಕೆಲವರು ಆಸ್ಪತ್ರೆಯಲ್ಲಿ ನೋವಿನಲ್ಲಿ ನರಳಾಡ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೀತಿರೋರು ಇದ್ದಾರೆ. ಸಂಭ್ರಮ ಸೂತಕಕ್ಕೆ ದಾರಿ ಮಾಡಿಕೊಟ್ಟಿದ್ದೆಲ್ಲಿ?.
ಕಾರಣ- 1 ಟಿಕೆಟ್ ವಿಚಾರದಲ್ಲಿ ಗೊಂದಲ
ಭೀಕರ ಕಾಲ್ತುಳಿತಕ್ಕೆ ಇದೇ ಬಹುಮುಖ್ಯವಾದ ಕಾರಣ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಇವೆಂಟ್ ಟಿಕೆಟ್ ಇರುತ್ತಾ, ಇಲ್ವಾ ಫ್ರಿ ಎಂಟ್ರಿ ಇರುತ್ತಾ ಎಂಬ ಬಗ್ಗೆಯೇ ಗೊಂದಲ ಇತ್ತು. ಆದ್ರೂ ಅಭಿಮಾನಿಗಳು ಸ್ಟೇಡಿಯಂನತ್ತ ದೌಡಾಯಿಸಿದ್ರು. ಮಧ್ಯಾಹ್ನ 3.14ಕ್ಕೆ ಈ ಬಗ್ಗೆ ಟ್ವೀಟ್ ಮಾಡಿದ ಆರ್ಸಿಬಿ ಫ್ರಾಂಚೈಸಿ ಫ್ರಿ ಎಂಟ್ರಿ ಎಂದು ತಿಳಿಸಿತು. ಆದ್ರೆ, ಲಿಮಿಟಿಡ್ ಎಂಟ್ರಿ ಎಂದೂ ಸ್ಪಷ್ಟಪಡಿಸಿತ್ತು. ಫ್ರಾಂಚೈಸಿ ಲಿಮಿಟೆಡ್ ಎಂಟ್ರಿ ಎಂದು ಹೇಳಿದ್ದೇ ಹೇಳಿದ್ದು ಅಭಿಮಾನಿಗಳು ಸ್ಟೇಡಿಯಂ ಒಳಗೆ ನುಗ್ಗಲು ಆರಂಭಿಸಿದರು. ಈ ವೇಳೆ ಉಂಟಾದ ನೂಕು ನುಗ್ಗಲು ದುರ್ಘಟನೆಗೆ ಕಾರಣವಾಯ್ತು.
ಕಾರಣ- 2 ತುರಾತುರಿಯಲ್ಲಿ ಕಾರ್ಯಕ್ರಮಕ್ಕೆ ಪ್ಲಾನ್
17 ವರ್ಷಗಳ ಕನಸು ನನಸಾದ ಸಂಭ್ರಮವನ್ನ ಲಾಯಲ್ ಅಭಿಮಾನಿಗಳ ಎದುರು ಸಂಭ್ರಮಿಸಬೇಕು ಅನ್ನೋದು ಇಡೀ ಆರ್ಸಿಬಿ ತಂಡದ ತುಡಿತವಾಗಿತ್ತು. ಹೀಗಾಗಿ ನಿನ್ನೆ ಪಂದ್ಯ ಮುಗಿದ ಬೆನ್ನಲ್ಲೇ, ವಿಜಯಯಾತ್ರೆಗೆ ಮ್ಯಾನೇಜ್ಮೆಂಟ್ ಪ್ಲಾನ್ ಮಾಡ್ತು. ಸರ್ಕಾರ ಕೂಡ ಹಿಂದೆ ಮುಂದೆ ಯೋಚಿಸದೇ ಗ್ರೀನ್ಸಿಗ್ನಲ್ ಕೊಟ್ ಬಿಡ್ತು. ತುರಾತುರಿಯಲ್ಲಿ ಮುಂದಾಲೋಚನೆ ಇಲ್ಲದೆ, ಸರಿಯಾದ ಪ್ಲಾನ್ ಇಲ್ಲದೇ ಕಾರ್ಯಕ್ರಮ ಆಯೋಜಿಸಿದ್ದೇ ಸಂಭ್ರಮದ ಕಾರ್ಯಕ್ರಮಕ್ಕೆ ಸೂತಕವನ್ನ ಆಹ್ವಾನಿಸಿದಂತಾಯ್ತು.
ಕಾರಣ- 3 ಸಾಗರದಂತೆ ಹರಿದು ಬಂದ ಅಭಿಮಾನಿಗಳು
17 ವರ್ಷಗಳಿಂದ ಆರ್ಸಿಬಿ ಅಭಿಮಾನಿಗಳು ಅನುಭವಿಸಿದ್ದು ಒಂದಾ? ಎರಡಾ.? ನೋವು, ಯಾತನೆ, ಟೀಕೆ, ನಿಂದನೆ.. ಈ ಎಲ್ಲವೂ ದೂರಾಗಿ ನಿನ್ನೆ ಕಪ್ ಅನ್ನೋ ಗಗನಕುಸುಮ ಕೊನೆಗೂ ಕೈಗೆಟುಕಿಬಿಡ್ತು. 17 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಸಿಕ್ಕ ಕಪ್ ಅಭಿಮಾನಿಗಳ ಎಕ್ಸೈಟ್ಮೆಂಟ್ ಅನ್ನ ಸಹಜವಾಗಿಯೇ ಹೆಚ್ಚಿಸಿತ್ತು. ಈ ಎಕ್ಸೈಟ್ಮೆಂಟ್ನಲ್ಲಿ ನೆಚ್ಚಿನ ಆಟಗಾರರು, ಚೊಚ್ಚಲ ಐಪಿಎಲ್ ಟ್ರೋಫಿಯನ್ನ ಕಣ್ತುಂಬಿಕೊಳ್ಳಲು ಸಾಗರದಂತೆ ಅಭಿಮಾನಿಗಳು ಹರಿದು ಬಂದರು. 32 ಸಾವಿರ ಆಸನ ಸಾಮರ್ಥ್ಯದ ಸ್ಟೇಡಿಯಂ ಆದ್ರೆ, ಅಲ್ಲಿ ಬಂದಿದ್ದು 2 ರಿಂದ 3 ಲಕ್ಷ ಜನ ಅಭಿಮಾನಿಗಳು. ಇಷ್ಟೆಲ್ಲಾ ಅಭಿಮಾನಿಗಳು ಬರ್ತಾರೆ ಎಂಬ ಗೆಸ್ ಫ್ರಾಂಚೈಸಿ ಮತ್ತು ಗೌರ್ಮೆಂಟ್ ಇಬ್ಬರಿಗೂ ಇರಲೇ ಇಲ್ಲ ಅನ್ಸುತ್ತೆ. ನಿಯಂತ್ರಿಸೋಕೆ ಆಗಲೇ ಇಲ್ಲ.
ಕಾರಣ- 4 ಆಟಗಾರರನ್ನ ಹತ್ತಿರದಿಂದ ನೋಡೋ ಧಾವಂತ
ಆರ್ಸಿಬಿ ಆಟಗಾರರನ್ನ ಹತ್ತಿರದಿಂದ ನೋಡಬೇಕು ಅನ್ನೋದು ಪ್ರತಿಯೊಬ್ಬ ಅಭಿಮಾನಿಯಲ್ಲೂ ಇರೋ ಆಸೆ. ಮ್ಯಾಚ್ ಟೈಮ್ನಲ್ಲಾದ್ರೆ ಹತ್ತಿರದಿಂದ ಕುಳಿತೂ ನೋಡೋ ಅವಕಾಶ ಎಲ್ಲರಿಗೂ ಸಿಗಲ್ಲ. ಟಿಕೆಟ್ ಪ್ರೈಸ್ ಜಾಸ್ತಿ ಒಂದಾದ್ರೆ, ದುಡ್ಡಿಕೊಡ್ತಿನಿ ಅಂದ್ರೂ ಆ ಟಿಕೆಟ್ ಸಿಗಲ್ಲ. ಆದ್ರೆ, ನಿನ್ನೆ ಫ್ರಿ ಎಂಟ್ರಿ ಇದ್ದಿದ್ದರಿಂದ ಅಭಿಮಾನಿಗಳು ಹತ್ತಿರದಿಂದ ಆಟಗಾರರನ್ನ ಕಣ್ತುಂಬಿಕೊಳ್ಳೋ ಧಾವಂತಕ್ಕೆ ಬಿದ್ರು. ತಮ್ಮ ಕನಸನ್ನ ನನಸು ಮಾಡಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಡೆಗೋಡೆಗಳ ಮೇಲೆ ಎಗರಿದರು. ಈ ಪ್ರಕ್ರಿಯೆ ಇಲ್ಲ ಮುಳ್ಳು ತಂತಿಗಳನ್ನೂ ಕೇರ್ ಮಾಡಲಿಲ್ಲ. ಅಭಿಮಾನಿಗಳ ಈ ಧಾವಂತ ದುರ್ಘಟನೆಗೆ ದಾರಿ ಮಾಡಿಕೊಡ್ತು.
ಇದನ್ನೂ ಓದಿ: ಮಗ ಕ್ರಿಕೆಟ್ ಆಡ್ತಿರಲಿಲ್ಲ, ಮ್ಯಾಚ್, RCB ಅಂತ ಎಲ್ಲಿಗೂ ಹೋಗ್ತಿರಲಿಲ್ಲ.. ತಂದೆ ಮಾತು ಕರುಳು ಹಿಂಡುತ್ತೆ
ಕಾರಣ- 5 ಭದ್ರತಾ ವ್ಯವಸ್ಥೆ ವೈಫಲ್ಯ
ಭದ್ರತಾ ವ್ಯವಸ್ಥೆ ನಿನ್ನೆ ಸಂಪೂರ್ಣ ವೈಫಲ್ಯ ಕಂಡಿತ್ತು. 5 ಸಾವಿರ ಪೋಲಿಸರನ್ನ ನಿಯೋಜನೆ ಮಾಡಿದ್ದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಆದ್ರೆ, ವಿಧಾನಸೌದದ ಮುಂಭಾಗ ಹಾಗೂ ಚಿನ್ನಸ್ವಾಮಿ ಮೈದಾನ ಎರಡೂ ಕಡೆ ಸೇರಿ ಅಲ್ಲಿ ನೆರೆದಿದ್ದು ಲಕ್ಷಕ್ಕೂ ಅಧಿಕ ಜನ. ಇಷ್ಟೊಂದು ಅಭಿಮಾನಿಗಳನ್ನ 5 ಸಾವಿರ ಮಂದಿ ಫೋಲಿಸರು ಹೇಗೆ ನಿಯಂತ್ರಿಸೋಕೆ ಸಾಧ್ಯ. ಇದನ್ನ ಭದ್ರತಾ ವೈಫಲ್ಯ ಅನ್ನದೇ ಮತ್ತೇನು ಅನ್ನೋಕಾಗುತ್ತೆ.?
ಕಾರಣ- 6 ಕೆಲ ಅಭಿಮಾನಿಗಳ ಅತಿರೇಕದ ನಡೆ
ನಿನ್ನೆ ಸಂಭ್ರಮಾಚರಣೆ ವೇಳೆ ಕೆಲ ಅಭಿಮಾನಿಗಳು ಅತಿರೇಕದಲ್ಲಿ ವರ್ತಿಸಿದರು. ಅಪಾಯಕಾರಿ ಅನ್ನೋದನ್ನೂ ಲೆಕ್ಕಿಸದೇ ಮಿತಿಮೀರಿದ ವರ್ತನೆ ಮಾಡಿದರು. ಪೋಲಿಸರು ಮಾತು, ಎಚ್ಚರಿಕೆಗೂ ಕೆಲ ಫ್ಯಾನ್ಸ್ಗಳು ಡೋಂಟ್ಕೇರ್ ಅಂದರು. ವಿಧಾನಸೌದದ ಎದುರು ಕೆಲ ಅಭಿಮಾನಿಗಳು ಪ್ರಾಣವನ್ನೂ ಲೆಕ್ಕಿಸದೇ ಮರಗಳ ಮೇಲೆ ಹತ್ತಿದ್ದು, ಮೊದಲು ಸ್ಟೇಡಿಯಂ ಒಳಗೆ ಪ್ರವೇಶಿಸಬೇಕು ಅನ್ನೋ ದಾವಂತದಲ್ಲಿ ಅಕ್ಕಪಕ್ಕ ಇದ್ದವರನ್ನ ಲೆಕ್ಕಸದೇ ನುಗ್ಗಿದ್ದು ಕಂಡು ಬಂತು. ಇದೇ ರೀತಿ ಕೆಲ ಫ್ಯಾನ್ಸ್ ಮೆರೆದ ಹುಚ್ಚಾಟಗಳು ಒಂದು ರೀತಿಯಲ್ಲಿ ಸಾವು, ನೋವಿಗೆ ಕಾರಣವಾದವು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ