/newsfirstlive-kannada/media/post_attachments/wp-content/uploads/2024/09/CM_SIDDU.jpg)
ಮುಡಾ ಕೇಸ್ನಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದರಾಮಯ್ಯಗೆ ಹೇಗಾದರೂ ಪಾರಾಗಬೇಕು ಎನ್ನುವ ಬಯಕೆ. ಈ ಕೇಸ್ನಿಂದ ಸಿದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ನಾನು ಕೂತ್ಕೋಬೇಕು ಅನ್ನೋದು ಹಲವರ ಬಯಕೆ. ಇದೇ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ:ಸ್ವಾತಂತ್ರ್ಯ ಬಂದು 76 ವರ್ಷಗಳದ್ರೂ ಬಸ್ ಕಂಡಿರದ ಗ್ರಾಮಕ್ಕೆ ಬಂತು KSRTC.. ನ್ಯೂಸ್ಫಸ್ಟ್ ವರದಿಗೆ ಭಾರೀ ಮೆಚ್ಚುಗೆ
ಸದ್ಯಕ್ಕೆ ಸಿಎಂ ಪೋಸ್ಟ್ ಖಾಲಿ ಇಲ್ಲ ಎಂದ ಡಿ.ಕೆ ಶಿವಕುಮಾರ್
ಮುಡಾ ಕೇಸ್ನಲ್ಲಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ತಾರೆ. ಸಿಎಂ ಸ್ಥಾನದಿಂದ ಕೆಳಗಿಳೀತಾರೆ ಅಂತ ಫಿಕ್ಸ್ ಆಗಿರೋ ‘ಕೈ’ ಸಚಿವರು, ನಾಯಕರು ಮುಂದಿನ ಮುಖ್ಯಮಂತ್ರಿ ನಾನಾಗ್ತೀನಿ, ನಾನಾಗ್ತೀನಿ ಅನ್ನೋ ರಾಜಕೀಯ ಕಾಮೆಂಟ್ರಿ ಕೊಡೋದಕ್ಕೆ ಶುರುಮಾಡಿದ್ದಾರೆ. ಅತ್ತ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ಹೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಿ ಬಂದಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಜಿ. ಪರಮೇಶ್ವರ ಕೂಡ ನಾನು ಸಹ ಸಿದ್ಧನಿದ್ದೇನೆ ಎಂದಿದ್ದಾರೆ. ಇದೀಗ ಕಾಂಗ್ರೆಸ್ನ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಕೂಡ ಮೀಟೂ ಎಂದಿದ್ದಾರೆ. ಸಿದ್ದರಾಮಯ್ಯ ಸಮ್ಮತಿ ಸೂಚನೆ ನೀಡಿದರೆ, ನಾನು ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಜೊತೆಗೆ ವರ್ಷದಿಂದಲೂ ಫೈಟ್ ಮಾಡ್ತಿರೋ ಡಿಸಿಎಂ ಡಿ.ಕೆ ಶಿವಕುಮಾರ್, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ, ಸಿದ್ದರಾಮಯ್ಯನೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಆರ್.ವಿ. ದೇಶಪಾಂಡೆ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
‘ಮುಖ್ಯಮಂತ್ರಿ ಆಗಬೇಕು ಅಷ್ಟೇ’
ನಾನು ಸಚಿವ ಆಗಿ ದಣಿದಿದ್ದೀನಿ. ಮುಂದೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಆಗಿದೆ. ಲೈಫ್ನಲ್ಲಿ ಎಲ್ಲರಿಗೂ ಮಹತ್ವಾಕಾಂಕ್ಷೆಗಳು ಇರುತ್ತವೆ. ನಾನು ಸಿಎಂ ಆಗಬೇಕು ಎಂದು ಆಸೆ ಆಗಿದೆ.
ಆರ್.ವಿ. ದೇಶಪಾಂಡೆ, ‘ಕೈ’ ಹಿರಿಯ ನಾಯಕ
‘ಸಿಎಂ ಪೋಸ್ಟ್ ಖಾಲಿ ಇಲ್ಲ’
ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಮುಂದೆ ನಡೆಯುತ್ತಿದೆ. ಒಂದು ವೇಳೆ ಸಿಎಂ ಸ್ಥಾನ ಖಾಲಿ ಇದ್ದರೆ ಮಾತನಾಡಬಹುದಿತ್ತು. ಸಿದ್ದರಾಮಯ್ಯ ಅವರು ತಮ್ಮ ಅವಕಾಶದಲ್ಲಿ ಮುಂದುವರೆಯುತ್ತಾರೆ.
ಡಿ.ಕೆ ಶಿವಕುಮಾರ್, ಡಿಸಿಎಂ
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರೆಬೆಲ್ ಶಾಸಕ ಶಿವರಾಮ್ ಹೆಬ್ಬಾರ್, ರಾಮಕೃಷ್ಣ ಹೆಗಡೆ ನಂತರ ಜಿಲ್ಲೆಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಬರೋದಾದ್ರೆ ಸ್ವಾಗತ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಆರ್.ವಿ ದೇಶಪಾಂಡೆ ಪರ ಬ್ಯಾಟ್ ಬೀಸಿದ್ದಾರೆ. ಅವರು ಸಿಎಂ ಆದರೆ ಖುಷಿಪಡುವ ಮೊದಲಿಗರಲ್ಲಿ ನಾನೂ ಒಬ್ಬ ಎಂದಿದ್ದಾರೆ.
‘ಜಿಲ್ಲೆಯಿಂದ ಮತ್ತೆ ಸಿಎಂ ಆದ್ರೆ ಸ್ವಾಗತ’
ಉತ್ತರ ಕನ್ನಡ ಜಿಲ್ಲೆಗೆ ದಿವಂಗತ ರಾಮಕೃಷ್ಣ ಹೆಗಡೆ ನಂತರ ಮತ್ತೆ ಮುಖ್ಯಮಂತ್ರಿ ಸ್ಥಾನ ಒಲಿದು ಬರೋದಾದರೆ ನಾನು ಸ್ವಾಗತಿಸುತ್ತೇನೆ. ಇದನ್ನು ತುಂಬಾ ಸಂತೋಷದಿಂದ ಸ್ವಾಗತ ಮಾಡುತ್ತೇವೆ.
ಶಿವರಾಮ್ ಹೆಬ್ಬಾರ್, ಶಾಸಕ
‘ಫಸ್ಟ್ ಖುಷಿ ಪಡುವವನು ನಾನು’
ನಾಳೆನೂ ಅವರೇ, ಮುಂದನೂ ಅವರೇ ಎಂದು ಹೇಳಿದ್ದಾರೆ. ಅವರವರ ಸ್ನೇಹಿತರು ಆಗಿದ್ದರೇ ಸ್ಥಾನ ಬಿಟ್ಟುಕೊಟ್ಟರೆ ಆರ್.ವಿ ದೇಶಪಾಂಡೆ ಸಿಎಂ ಆಗಬಹುದು. ಅದರಲ್ಲಿ ಫಸ್ಟ್ ಸಂತೋಷ ಪಡುವವನು ನಾನು. ನಮ್ಮ ಜಿಲ್ಲೆಗೆ ಸಿಎಂ ಸ್ಥಾನ ಸಿಕ್ಕಿತು ಎಂದು ಖುಷಿ ಆಗುತ್ತದೆ. ಫಸ್ಟ್ ಸಿದ್ದರಾಮಯ್ಯಗೆ ಅಭಿನಂದನೆ ತಿಳಿಸೋನೂ ನಾನು.
ಮಂಕಾಳ್ ವೈದ್ಯ, ಸಚಿವ
ಇದನ್ನೂ ಓದಿ: ಮಳೆ ಆರ್ಭಟಕ್ಕೆ 30ಕ್ಕೂ ಹೆಚ್ಚು ಜನ ಸಾವು, ಮುಂದಿನ 3 ದಿನ ವರುಣಾರ್ಭಟ ಫಿಕ್ಸ್; ಡ್ರೋನ್ನಿಂದ ಆಹಾರ ವಿತರಣೆ
ಕಾಂಗ್ರೆಸ್ಗೆ ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್, ಡಾ ಜಿ.ಪರಮೇಶ್ವರ್, ಈಗ ಆರ್.ವಿ ದೇಶಪಾಂಡೆ ಇದ್ದಾರೆ. ಸಿದ್ದರಾಮಯ್ಯ ಅವರನ್ನ ಬದಲಿಸಿ ಹೊಸ ಸಿಎಂ ಆಗುವ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಲಿದೆ. ರಾಜ್ಯದ ಅಭಿವೃದ್ಧಿಗೆ ದುಡಿಯುವುದಕ್ಕಿಂತ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಕಥೆ, ವ್ಯಥೆ ಬಗ್ಗೆ ದಿನೇ ದಿನೇ ವ್ಯಂಗ್ಯ ಕೂಡ ಜಾಸ್ತಿಯಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ