/newsfirstlive-kannada/media/post_attachments/wp-content/uploads/2025/07/CM_SIDDARAMAIH.jpg)
ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಕೊರೆಸುತ್ತಿರುವ ನೀರಾವರಿ ಪಂಪ್ ಸೆಟ್ಗಳಿಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಂಪರ್ಕವನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ. ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಿಗೆ ಕುಸುಮ್ ಬಿ ಯೋಜನೆಯಡಿ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸಿಕೊಂಡು ನೀರಾವರಿ ಪಂಪ್ ಸೆಟ್ ಚಲಾಯಿಸುವಂತೆ ರಾಜ್ಯ ಸರ್ಕಾರ ರೈತರಿಗೆ ಸೂಚಿಸಿದೆ.
ಈ ರೈತರೇ ಈಗ ಅದೃಷ್ಟವಂತರು
ಕಳೆದ ವರ್ಷದ ಆಕ್ಟೋಬರ್ವರೆಗೂ ತತ್ಕಾಲ್ ಸ್ಕೀಮ್ ನಡಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೋರಿ ಅರ್ಜಿ ಸಲ್ಲಿಸಿದವರಿಗೆ ಮಾತ್ರವೇ ಟ್ರಾನ್ಸ್ ಫಾರ್ಮರ್ ಸಂಪರ್ಕ ನೀಡಲಾಗಿದೆ. ಈಗ ಕುಸುಮ್ ಬಿ ಯೋಜನೆಯೇ ನೀರಾವರಿ ಪಂಪ್ ಸೆಟ್ ಚಲಾಯಿಸಲು ಇರುವ ಮಾರ್ಗವಾಗಿದೆ. ಈ ಹಿಂದೆ ತಮ್ಮ ಜಮೀನುಗಳಲ್ಲಿ ನೀರಾವರಿ ಪಂಪ್ ಸೆಟ್ಗಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಕಿಸಿಕೊಂಡಿದ್ದ ರೈತರೇ ಈಗ ಅದೃಷ್ಟವಂತರು. ಕುಸುಮ್ ಬಿ ಯೋಜನೆಯಡಿ ನೀರಾವರಿ ಪಂಪ್ ಸೆಟ್ಗೆ ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಬ್ಸಿಡಿ ನೀಡುತ್ತಿವೆ. ಈ ಸಬ್ಸಿಡಿ ಹಣ ಬಳಸಿಕೊಂಡು ರೈತರು ತಮ್ಮ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದಿಸಿಕೊಂಡು ನೀರಾವರಿ ಪಂಪ್ ಸೆಟ್ ಚಲಾಯಿಸಬೇಕಾಗಿದೆ. ಕುಸುಮ್ ಬಿ ಯೋಜನೆಯಡಿ ನೀರಾವರಿ ಪಂಪ್ ಸೆಟ್ಗೆ ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳಲು ಕೇಂದ್ರ ಸರ್ಕಾರವು ಶೇ.30 ರಷ್ಟು ಹಣ ನೀಡಿದರೇ, ರಾಜ್ಯ ಸರ್ಕಾರ ಶೇ.50 ರಷ್ಟು ಹಣ ನೀಡಲಿದೆ. ಇನ್ನೂಳಿದ ಶೇ.20 ರಷ್ಟು ಹಣವನ್ನು ಫಲಾನುಭವಿ ರೈತರೇ ತಮ್ಮ ಜೇಬಿನಿಂದ ಭರಿಸಬೇಕಾಗಿದೆ.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕುಸುಮ್ ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಕುಸುಮ್ ಬಿ ಯೋಜನೆಯಡಿ ಸೋಲಾರ್ ಕೃಷಿ ಪಂಪ್ ಸೆಟ್ ಅಳವಡಿಸಲು, ಕೇಂದ್ರ ಸರ್ಕಾರ ಶೇ.30, ರಾಜ್ಯ ಸರ್ಕಾರ ಶೇ.50ರಷ್ಟು ಸಬ್ಸಿಡಿ ಒದಗಿಸುತ್ತಿದ್ದು, ಫಲಾನುಭವಿಗಳು ಶೇ.20ರಷ್ಟು ಭರಿಸಬೇಕಿದೆ. ಈ ಯೋಜನೆಯಡಿ 40 ಸಾವಿರ ಪಂಪ್ ಸೆಟ್ಗಳಿಗೆ ಅನುಮೋದನೆ ನೀಡಲಾಗಿದ್ದು, ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಅವರು ಸೂಚಿಸಿದರು.
ಸ್ವಯಂ ವಿದ್ಯುತ್ ಮೂಲಸೌಕರ್ಯ ಕಲ್ಪಿಸಲು ಅವಕಾಶ
25 ಸಾವಿರ ರೈತರು ಹೆಚ್ಚುವರಿಯಾಗಿ ಕುಸುಮ್ ಬಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಯೋಜನೆಯಡಿ ರಾಜ್ಯ ಸರ್ಕಾರ 752 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ಮೊತ್ತ ಕಡಿಮೆಯಾಗಲಿದೆ. ರಾಜ್ಯದಲ್ಲಿ 4.5 ಲಕ್ಷ ಅನಧಿಕೃತ ಐಪಿ ಸೆಟ್ಗಳ ಪೈಕಿ 2 ಲಕ್ಷ ಐಪಿ ಸೆಟ್ ಸಂಪರ್ಕ ಅಧಿಕೃತಗೊಳಿಸಲಾಗಿದೆ. ಈ ಅನಧಿಕೃತ ಐಪಿ ಸೆಟ್ಗಳನ್ನು ಕುಸುಮ್ ಬಿ ಯೋಜನೆಯಡಿ ಆದ್ಯತೆ ಮೇರೆಗೆ ತರುವ ಬಗ್ಗೆ ಚರ್ಚೆ ನಡೆದಿದೆ. ರೈತರಿಗೆ ಸ್ವಯಂ ವಿದ್ಯುತ್ ಮೂಲಸೌಕರ್ಯ ಕಲ್ಪಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಟ್ರಾನ್ಸ್ ಫಾರ್ಮರ್ ಗಳನ್ನು ಇಲಾಖೆ ಒದಗಿಸಲಿದೆ.
ಇದನ್ನೂ ಓದಿ: ಕೇವಲ 18 ತಿಂಗಳಿಗೆ 18 ಕೋಟಿ ಜೀವನಾಂಶ ಕೇಳಿದ ಪತ್ನಿ.. ದುಡಿದು ತಿನ್ನಿ- ಸುಪ್ರೀಂಕೋರ್ಟ್ CJI
ನೀರಾವರಿ ಪಂಪ್ ಸೆಟ್ಗಳಿಗೆ 2024-25ರ ಸಾಲಿನಲ್ಲಿ 12,785 ಕೋಟಿ ರೂಪಾಯಿಗಳ ಅನುದಾನ ಹಂಚಿಕೆ ಆಗಿದ್ದು ಫೆಬ್ರವರಿ 2025 ವರೆಗೆ ರೂಪಾಯಿ 11,720 ಕೋಟಿ ಬಿಡುಗಡೆ ಆಗಿದೆ. 2025-26ರಲ್ಲಿ 16,021 ಕೋಟಿ ರೂಪಾಯಿಗಳ ಆಯವ್ಯಯ ಹಂಚಿಕೆ ಆಗಿದೆ. ಇಂಧನ ಸಚಿವ ಕೆ.ಜೆ ಜಾರ್ಜ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ