/newsfirstlive-kannada/media/post_attachments/wp-content/uploads/2025/06/Siddaramaiah-on-Cast-Survey-1.jpg)
ಮಹತ್ವದ ಬೆಳವಣಿಗೆಯಲ್ಲಿ ಇಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ನಡೆದಿರುವ ಜಾತಿ ಜನಗಣತಿಗೆ ಮರು ಸರ್ವೇ ಮಾಡಲು ನಿರ್ಧಾರ ಮಾಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಮರು ಸರ್ವೇಗೆ ಕಾರಣಗಳೇನು?
ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಪ್ರಬಲ ಸಮುದಾಯಗಳ ವಿರೋಧಕ್ಕೆ ಮಣಿದು ಮರು ಸರ್ವೇಗೆ ಮುಂದಾಗಿದೆ. ಅಂದ್ರೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಕರ್ನಾಟಕದ ಪ್ರಬಲ ಜಾತಿಗಳ ವಿರೋಧ ಕಟ್ಟಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಜಾತಿ ಗಣತಿಯನ್ನು ಮತ್ತೊಮ್ಮೆ ಹೊಸದಾಗಿ ನಡೆಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ?
ಸಿಎಂ ಸಿದ್ದರಾಮಯ್ಯನವರು ಹಳೆಯ ಜಾತಿಗಣತಿಯನ್ನೇ ಯಥಾವತ್ತಾಗಿ ಶತಾಯಗತಾಯ ಜಾರಿಗೊಳಿಸಲು ಮುಂದಾಗಿದ್ದರು. ಆದರೆ ಸಿಎಂಗೆ ಬ್ರೇಕ್ ಹಾಕಲಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದರಿಂದ ಹಿನ್ನಡೆಯಾಗಿದೆ.
ಇದನ್ನೂ ಓದಿ: BREAKING: ರಾಜ್ಯದಲ್ಲಿ ಜಾತಿ ಜನಗಣತಿ ಮರು ಸರ್ವೇ.. ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಘೋಷಣೆ
ಹಳೆಯ ಜಾತಿ ಜನಗಣತಿ ಸರ್ವೇಯಲ್ಲಿ ಪ್ರಬಲ ಸಮುದಾಯಗಳ ಜನಸಂಖ್ಯೆ ಕಡಿಮೆ ಇತ್ತು. ಇದು ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ 2 ಸಮುದಾಯಗಳ ಅಸಮಾಧಾನ ತಣಿಸಲು ಇದೀಗ ಹೊಸ ಸರ್ವೇ ಮಾಡಲಾಗುತ್ತಿದೆ.
ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ ಸೇರಿ ಒಕ್ಕಲಿಗ, ಲಿಂಗಾಯತ ನಾಯಕರ ಒತ್ತಡಕ್ಕೆ ಜಯ ಸಿಕ್ಕಿದೆ. ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿ ಬರೆದ ಪತ್ರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸಹಿ ಹಾಕಿದ್ರು. ವೀರಶೈವ ಲಿಂಗಾಯತ ಮಹಾಸಭಾದಿಂದ ಮೊದಲಿನಿಂದಲೂ ಹಳೇ ಸರ್ವೇಗೆ ವಿರೋಧ ಇತ್ತು. ರಾಜ್ಯ ಒಕ್ಕಲಿಗರ ಸಂಘ ಕೂಡ ಹಳೇ ಸರ್ವೇಯನ್ನು ತೀವ್ರವಾಗಿ ವಿರೋಧಿಸಿತ್ತು. ಈಗ ಈ ಪ್ರಬಲ ಸಮುದಾಯಗಳ ಒತ್ತಾಯ, ಒತ್ತಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿದಿದೆ.
ಹೊಸ ಸರ್ವೇ.. ಮುಂದೇನು?
ಜಾತಿ ಜನಗಣತಿಯ ಮರುಸರ್ವೇಯನ್ನು 90 ದಿನಗಳ ಒಳಗಾಗಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಹೊಸದಾಗಿ ಸರ್ವೇ ನಡೆಸುವುದರಿಂದ ಎಲ್ಲಾ ಸಮುದಾಯಗಳು ಜಾಗೃತವಾಗುತ್ತವೆ.
ಜನರ ಮನೆ ಮನೆ ಬಾಗಿಲಿಗೆ ಹೋಗಿ ಸರ್ವೇ ನಡೆಸದೇ ಇದ್ದರೆ ಜನರೇ ರೊಚ್ಚಿಗೇಳುವ ಸಾಧ್ಯತೆ ಇದೆ. ಹೀಗಾಗಿ ಹೊಸ ಸರ್ವೇಯನ್ನು ಎಚ್ಚರಿಕೆಯಿಂದ ಜನರ ಮನೆ ಮನೆ ಬಾಗಿಲಿಗೆ ಹೋಗಿ ನಡೆಸಲೇಬೇಕು. ಕಚೇರಿಯಲ್ಲೇ ಕುಳಿತು ಜಾತಿ ಗಣತಿಯ ಅಂಕಿ ಅಂಶ ನೀಡಿದರೆ ಮತ್ತೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ