/newsfirstlive-kannada/media/post_attachments/wp-content/uploads/2024/10/Mandya-2.jpg)
ಎಲ್ಲಿ ನೋಡಿದ್ರೂ ಅವ್ಯವಹಾರ. ಅಕ್ರಮ ಹಗರಣಗಳದ್ದೇ ದರ್ಬಾರಾಗೋಗಿದೆ. ಮೈ ಬಗ್ಗಿಸಿ ದುಡಿದು ತಿನ್ನಲಾರದ ಎಮ್ಮೆ ತಿಮ್ಮಣ್ಣನಂತವರು ಬೇರೆಯವರ ದುಡ್ಡನ್ನ ಅದರಲ್ಲೂ ರೈತರ ದುಡ್ಡು ಹೊಡೆಯಲು ಕಾಯ್ತಿರ್ತಾರೆ. ಸಹಕಾರ ಸಂಘದಲ್ಲಿ ಕಷ್ಟಪಟ್ಟು ದುಡಿದು ಕೂಡಿಟ್ಟ ರೈತರ ಬೆವರಿನ ಹಣವನ್ನೇ ಲಜ್ಜೆಗೇಡಿ ಅಧಿಕಾರಿಗಳು ನುಂಗಿ ಹಾಕಿದ ಆರೋಪ ಕೇಳಿಬಂದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರೋ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಆರೋಪ ಕೇಳಿಬಂದಿದೆ. ಈ ಸಹಕಾರ ಸಂಘದಿಂದ ಕೋಟಿ ಕೋಟಿ ಹಣ ಗುಳುಂ ಆಗಿದೆ. ಠೇವಣಿ ಹಣ ಹಾಗೂ ಅಡವಿಟ್ಟಿದ್ದ ಚಿನ್ನಾಭರಣವೇ ಮಂಗಮಾಯವಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೇ ರೈತರಿಗೆ ದೋಖಾ ಮಾಡಿದ್ದಾರೆ. ಲಕ್ಷಲಕ್ಷ ಅಲ್ಲ ಬರೋಬ್ಬರಿ 5 ಕೋಟಿ ರೂಪಾಯಿಗೂ ಅಧಿಕ ದೋಖಾ ಮಾಡಲಾಗಿದೆ.
‘ಸಹಕಾರ’ದ ಅವ್ಯವಹಾರ!
ರೈತರು ಅಡವಿಟ್ಟಿದ್ದ 8 ಕೆ.ಜಿ ಚಿನ್ನವನ್ನು ನುಂಗಣ್ಣರು ಅದ್ಯಾವ ಬಾಯಿಯಿಂದ ನುಂಗಿದ್ದಾರೋ, ಸಂಪೂರ್ಣ ಮಾಯ ಮಾಡಿದ್ದಾರೆ. ಲಾಕರ್ನಲ್ಲಿರಬೇಕಿದ್ದ ರೈತರ ಚಿನ್ನಾಭರಣ ಮಂಗಮಾಯವಾಗಿದೆ. ಖಾಸಗಿ ಫೈನಾನ್ಸ್ನಲ್ಲಿ ಚಿನ್ನಾಭರಣ ಅಡವಿಟ್ಟು ಮೋಸ ಹೋಗಿದ್ದಾರೆ. 8 ಕೆ.ಜಿ ಚಿನ್ನಾಭರಣಗಳನ್ನ ಬೇರೆಡೆ ಅಡವಿಟ್ಟು ಹಣ ಸಾಲ ಪಡೆದಿದ್ದರು. ಈಗ ಒಡವೆ ಬಿಡಿಸಿಕೊಡುವವರು ಯಾರು ಅಂತ ರೈತರು ಕಂಗಾಲಾಗಿದ್ದಾರೆ. ಕೂಲಿ ನಾಲಿ ಮಾಡಿ ಬಡವರು ಕಟ್ಟಿದ್ದ ಪಿಗ್ಮಿ ಹಣಕ್ಕೂ ಕನ್ನ ಹಾಕಿದ್ದಾರೆ. ಬರೋಬ್ಬರಿ 5 ಕೋಟಿ ರೂಪಾಯಿಗೂ ಅಧಿಕ ದೋಖಾ ಮಾಡಲಾಗಿದೆ.
ಇದನ್ನೂ ಓದಿ: ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ದಳಪತಿ ವಿಜಯ್.. ಶಕ್ತಿ ತುಂಬಿದ ಲಕ್ಷಾಂತರ ಫ್ಯಾನ್ಸ್!
ಕೋಟಿ ಕೋಟಿ ಅವ್ಯವಹಾರವನ್ನು ಕಂಡು ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಾಕ್ ಆಗಿದ್ದಾರೆ. ಲೂಟಿಯಾದ ಕೋಟಿ ಕೋಟಿ ಹಣ ವಸೂಲಿಯೇ ಸವಾಲ್ ಆಗಿದೆ. ಹೀಗಾಗಿ ಹಣ ವಸೂಲಿ ಮಾಡಲು ಶಾಸಕರು ಸರ್ಕಸ್ ಮಾಡ್ತಿದ್ದಾರೆ. ಶಾಸಕ ದರ್ಶನ್ ಪುಟ್ಟಣಯ್ಯ ಈ ಬಗ್ಗೆ ಪರಿಶೀಲನೆ ನಡೆಸಿದ್ದು ಮೇಲಾಧಿಕಾರಿಗಳ ಸಹಕಾರದಿಂದ ಹಣ ವಸೂಲಿಗೆ ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬ ಆಗ್ರಹ ಕೇಳಿಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ