/newsfirstlive-kannada/media/post_attachments/wp-content/uploads/2025/02/CYBER.jpg)
ವೇಗದ ಜೀವನ! ಬದುಕಿನ ಆಸರೆಗೆ ಹಣದ ಭರವಸೆ. ಅದಕ್ಕಾಗಿ ಹಗಲಿರುಳು ದುಡಿಯುವವರ ಮಧ್ಯೆ ರಾತ್ರೋರಾತ್ರಿ ಅಂಬಾನಿ ಆಗಲು ಕನಸು ಕಾಣುವ ಮನಸುಗಳು. ಹಳ್ಳಿಯಿಂದ ಸಿಟಿಗೆ ಬಂದು ಊಟ, ತಿಂಡಿ, ನಿದ್ರೆ ಬಿಟ್ಟು ದುಡ್ಡು ಉಳಿಸಬೇಕು ಅಂತಾ ಅಗತ್ಯವಿದ್ದರೂ ಸಂಪಾದನೆಯಾದ ಹಣ ಖರ್ಚು ಮಾಡದೆ ಬ್ಯಾಂಕ್ನಲ್ಲಿ ಕೂಡಿಟ್ಟು ಆಸೆಗಳ ಗೋಪುರ ಕಟ್ಟುವ ಜೀವಗಳು ಅದೇಷ್ಟೋ. ಇಂಥ ಮುಗ್ಧ, ಪ್ರಾಮಾಣಿಕ ಕನಸುಗಳನ್ನ, ಆಸೆಗಳನ್ನು ಬಂಡವಾಳ ಮಾಡಿಕೊಂಡು ಹಣ ಲಪಾಟಾಯಿಸಿಲು ದೊಡ್ಡ ಜಾಲವೇ ಈ ಸಮಾಜದಲ್ಲಿ ಕೆಲಸ ಮಾಡ್ತಿದೆ. ಅವರಲ್ಲಿ ಸೈಬರ್ ಅಪರಾಧಿಗಳು ಕೂಡ ಒಬ್ಬರು.
ಈ ಸೈಬರ್ ಕ್ರಿಮಿನಲ್ಗಳು ಹೇಗೆಲ್ಲ ನಮ್ಮನ್ನು ವಂಚಿಸುತ್ತಿದ್ದಾರೆ ಅನ್ನೋದನ್ನು ಬೆಂಗಳೂರಿನ ವೈಟ್ಫೀಲ್ಡ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶೋಕ್ ಮದ್ಯಾಲ್ ಎಳೆ ಎಳೆಯಾಗಿ ವಿವರಿಸಿದ್ದಾರೆ. ಶಾಲಾ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಹೋದ ಸಂದರ್ಭದಲ್ಲಿ ‘ಸೈಬರ್ ಜಾಗೃತಿ’ ಬಗ್ಗೆ ಅರಿವು ಮೂಡಿಸಿದ್ದಾರೆ. ಸೈಬರ್ ವಂಚನೆಯಿಂದ ಹೇಗೆ ದೂರ ಇರಬೇಕು. ಮೋಸ ಹೋದಾಗ ಏನು ಮಾಡಬೇಕು ಮತ್ತು ನಮ್ಮನ್ನು ಯಾವೆಲ್ಲ ರೀತಿ ವಂಚಿಸುತ್ತಾರೆ ಅನ್ನೋದನ್ನು ವಿವರವಾಗಿ ತಿಳಿಸಿದ್ದಾರೆ.
ಪೊಲೀಸರ ಹೆಸರು ಹೇಳಿ ವಂಚನೆ!
ಅಧಿಕಾರಿ ಅಶೋಕ್ ಅವರೇ ಹೇಳುವಂತೆ.. ವಂಚಕರು ನಿಮಗೆ ಕರೆ ಮಾಡಿ ಮುಂಬೈ, ಬೆಂಗಳೂರು, ಹೈದರಾಬಾದ್ ಪೊಲೀಸರು ಎನ್ನುತ್ತಾರೆ. ವಿಡಿಯೋ ಕಾಲ್, ನಾರ್ಮಲ್ ಕಾಲ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾರೆ. ಬೆನ್ನಲ್ಲೇ ನಿಮ್ಮನ್ನು ನಾವು ಅರೆಸ್ಟ್ ಮಾಡುತ್ತಿದ್ದೇವೆ ಎಂದು ಹೆದರಿಸುತ್ತಾರೆ. ನಂತರ ಕತೆ ಹೇಳಲು ಶುರು ಮಾಡುತ್ತಾರೆ. ಯಾರೋ ಸೈಬರ್ ಫ್ರಾಡ್ಗಳು ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಮನಿ ಲೆಂಡರಿಂಗ್ ಮಾಡಿದ್ದಾರೆ. ನಿಮ್ಮ ಖಾತೆಯಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಅಥವಾ ನಿಮ್ಮ ಖಾತೆಗೆ ಬೇರೆ ಬೇರೆ ಮೂಲಗಳಿಂದ ಹಣ ಬಂದಿದೆ. ನಾವು ನಿಮ್ಮನ್ನು ವಿಚಾರಣೆಗೆ ಒಳಪಡಿಸಬೇಕು. ತನಿಖೆಯು ಆನ್ಲೈನ್ನಲ್ಲಿಯೇ ನಡೆಯಲಿದೆ. ಅದಕ್ಕಾಗಿ ನೀವು ಸಹಕರಿಸಿ. ನಮ್ಮೊಂದಿಗೆ ಆನ್ಲೈನ್ನಲ್ಲಿ ಕನೆಕ್ಟ್ ಆಗುವಂತೆ ಸೂಚಿಸುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ ಹೆಚ್ಚಾಗುತ್ತಿದೆ ಮುಹೂರ್ತಕ್ಕೆ ಸರಿಯಾಗಿ ಹೆರಿಗೆ ಮಾಡಿಸುವ ಹುಚ್ಚು: ಶಾಕಿಂಗ್ ವಿಚಾರ ಬಯಲು!
ನಂತರ ನೀವು ಇಲ್ಲಿಂದ ಎಲ್ಲಿಗೂ ಹೋಗುವಂತಿಲ್ಲ. ತನಿಖೆ ಮುಗಿಯವವರೆಗೂ ಊಟ, ನೀರು, ಎಲ್ಲವೂ ಇಲ್ಲಿಯೇ ಮುಗಿಸಬೇಕು. ವಿಡಿಯೋ ಕಾಲ್ ಕನೆಕ್ಟ್ ಆಗಿಯೇ ಇರಬೇಕು ಎನ್ನುತ್ತಾರೆ. ಆ ಮೂಲಕ ಕನೆಕ್ಟ್ ಆಗುವ ವಂಚಕರು, ಹೆದರಿಸಿ ಬ್ಯಾಂಕ್ನಿಂದ ಅಷ್ಟೂ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದಾರೆ.
ಅದಕ್ಕೆ ಪರಿಹಾರ ಏನು..?
- ಅಂತಹ ಸಂದರ್ಭದಲ್ಲಿ ನೀವು ಕರೆಯನ್ನು ಕಟ್ ಮಾಡಬೇಕು
- ಪೊಲೀಸ್ ಅಂದ್ಹಾಗೆ ತಲೆಯಲ್ಲಿ ಲೋಕಲ್ ಪೊಲೀಸರು ಮಾತ್ರ ಬರಬೇಕು
- ನೀವು ತಪ್ಪು ಮಾಡಿಲ್ಲ ಅಂದರೆ ಯಾರಿಗೂ ಹೆದರಬಾರದು
- ಆಧಾರ್ ಕಾರ್ಡ್ ಬಳಸಿಕೊಂಡು ಹಣದ ದುರ್ಬಳಕೆ ಅಷ್ಟೊಂದು ಸಾಧ್ಯವಿಲ್ಲ
- ಯಾಕೆಂದರೆ ಆಧಾರ್ ಕಾರ್ಡ್ ಜೊತೆಗೆ ಥಂಬ್ ನೀಡಬೇಕು
- ನೇರವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ
ಷೇರು ಹೆಸರಲ್ಲಿ ವಂಚನೆ
ಯಾರೂ ಕೂಡ ರಾತ್ರೋರಾತ್ರಿ ಅಂಬಾನಿ ಆಗಲು ಸಾಧ್ಯವಿಲ್ಲ. ಇಂಥ ಡೋಂಗಿ ಆಫರ್ಗಳ ಬಗ್ಗೆ ಎಚ್ಚರ ಇರಬೇಕು. ಮನಿ ಡಬ್ಲಿಂಗ್ ಮಾಡಿ ಕೊಡ್ತೀವಿ ಎಂದು ನಂಬಿಸಿ ನಿಮ್ಮಿಂದ ಷೇರು ಹಣ ಅಂತಾ ಹೂಡಿಸಿಕೊಂಡು ಮೋಸ ಮಾಡ್ತಾರೆ. ಮನಿ ಡಬ್ಲಿಂಗ್ ಆಫರ್ ಬಂದಾಗ ನೀವು ಎಚ್ಚರವಿರಿ ಎಂದು ಅಧಿಕಾರಿ ಅಶೋಕ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಅಮ್ಮನ ಸಾಯಿಸಿದ್ದು ಹೀಗೆ.. 4 ವರ್ಷದ ಮಗಳ ಡ್ರಾಯಿಂಗ್ ಸ್ಕೆಚ್ನಿಂದ ಪೊಲೀಸರಿಗೆ ಸ್ಫೋಟಕ ಸುಳಿವು
ಫೆಡೆಕ್ಸ್ ಕೊರಿಯರ್ (Fedex courier):
ಕೊರಿಯರ್ ಹೆಸರಲ್ಲಿ ಕರೆ ಮಾಡುವ ಕಿಡಿಗೇಡಿಗಳು, ‘ನಾವು ಪೊಲೀಸರು. ನಿಮ್ಮ ಹೆಸರಲ್ಲಿ ಕೊರಿಯರ್ ಬಂದಿದೆ. ಅದರಲ್ಲಿ ಡ್ರಗ್ಸ್ ಇದೆ. ನಿಮ್ಮನ್ನು ಈ ಕೂಡಲೇ ಬಂಧಿಸುತ್ತೇವೆ. ಯಾಕೆಂದರೆ ಇಲ್ಲಿಗೆ ಬಂದಿರುವ ಕೊರಿಯರ್ ನಿಮಗೆ ಸಂಬಂಧಿಸಿದೆ ಎಂದು ಎಚ್ಚರಿಸುತ್ತಾರೆ. ಈ ಅವಧಿಯಲ್ಲೂ ಕೂಡ ನೀವು ಕರೆಯನ್ನು ಡಿಸ್ ಕನೆಕ್ಟ್ ಮಾಡಬೇಕು.
ಪಾರ್ಟ್ ಟೈಂ ಜಾಬ್
ಇತ್ತೀಚಿನ ದಿನಗಳಲ್ಲಿ ಪಾರ್ಟ್ ಟೈಂ ಜಾಬ್ ಹೆಸರಲ್ಲೂ ಮೋಸ ಮಾಡುತ್ತಿದ್ದಾರೆ. ಮನೆಯಲ್ಲೇ ಕೂತು ತಿಂಗಳಿಗೆ 20, 30 ಸಾವಿರ ದುಡಿಯಬಹುದು ಎಂದು ಆಸೆ ಹುಟ್ಟಿಸುತ್ತಾರೆ. ಅದೆಲ್ಲ ಸುಳ್ಳು. ಯಾರೂ ನಂಬಲು ಹೋಗಬೇಡಿ. ಪಾರ್ಟ್ಟೈಂ ಜಾಬ್ ನೀಡುತ್ತೀವಿ ಎಂದು ಆಫರ್ ಮಾಡಿದ್ರೆ ಅದನ್ನು ನಿರಾಕರಿಸಿ.
ಫೇಕ್ ಇನ್ಶೂರೆನ್ಸ್, ವೆಬ್ಲಿಂಕ್
ಮೊಬೈಲ್ಗಳಿಗೆ ಸ್ಕ್ಯಾಮರ್ಗಳು ಸುಲಭವಾಗಿ ಮೆಸೇಜ್ ಕಳುಹಿಸಿ ಮೋಸ ಮಾಡುತ್ತಿದ್ದಾರೆ. ಇನ್ಶೂರೆನ್ಸ್ ವೆಬ್ಲಿಂಕ್ ಹೆಸರಲ್ಲಿ ನಿಮ್ಮನ್ನು ಮೋಸ ಮಾಡುತ್ತಿದ್ದಾರೆ. APK ಫೈಲ್ ಎಂದು ಮೆಸೇಜ್ ಬರುತ್ತೆ. ಯಾವುದೇ ಕಾರಣಕ್ಕೂ ಅದನ್ನೂ ಡೌನ್ಲೋಡ್ ಮಾಡಿಕೊಳ್ಳಲು ಹೋಗಬೇಡಿ. ನಿಮಗೆ ಯಾವುದಾದರೂ ಆ್ಯಪ್ಗಳ ಅಗತ್ಯವಿದ್ದರೆ ಪ್ಲೇಸ್ಟೋರ್ನಲ್ಲಿ ಸತ್ಯಾಂಶಗಳಿಂದ ಕೂಡಿದ ಆ್ಯಪ್ಗಳನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ. ಯಾರಾದರೂ APK ಫೈಲ್ ಡೌನ್ಲೋಡ್ ಮಾಡಿದ್ರೆ ನಿಮ್ಮೆಲ್ಲ ಮಾಹಿತಿ ಸ್ಕ್ಯಾಮರ್ ಕೈ ಸೇರುತ್ತೆ. ಹುಷಾರಾಗಿರಿ.
ಮೊಬೈಲ್ ಮೂಲಕ:
ಕೆಲವೊಮ್ಮೆ ಮೊಬೈಲ್ ಮೂಲಕವೂ ಸ್ಕ್ಯಾಮ್ಗಳು ನಡೆಯುತ್ತವೆ. ಕೆಲವು ಸ್ಥಳಗಳಲ್ಲಿ ಸಿಗುವ ಉಚಿತ ಇಂಟರ್ನೆಟ್ಗಳನ್ನು ಬಳಸಬೇಡಿ. ಯಾವುದೇ ಮೊಬೈಲ್ಗೆ ಇಂಟರ್ನೆಟ್ ಕನೆಕ್ಟ್ ಆದಾಗ, ಆ್ಯಪ್ಗಳ ಮೂಲಕ ನಿಮ್ಮ ಗೌಪ್ಯ ಮಾಹಿತಿ ಬಹಿರಂಗ ಆಗುತ್ತದೆ. ಹೀಗಾಗಿ ಕೆಲ ವಿಚಾರಗಳಿಂದ ಹುಷಾರಾಗಿರಿ.
ಇದನ್ನೂ ಓದಿ: ನಿಮಗೆ ನಾಚಿಕೆ ಆಗಬೇಕು.. ಹುಷಾರ್! ರಣವೀರ್ ಅಲಹಾಬಾದಿಯಾಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ
ಮ್ಯಾಟ್ರಿಮೋನಿ ಫ್ರಾಡ್:
ಮ್ಯಾಟ್ರಿಮೋನಿ ಫ್ರಾಡ್ ಬಗ್ಗೆ ವಿವರಿಸುವಾಗ ಅಧಿಕಾರಿ ಅಶೋಕ್ ಅವರು ಇತ್ತೀಚೆಗೆ ನಡೆದ ಪ್ರಕರಣವನ್ನು ಎಕ್ಸಾಂಪಲ್ ಆಗಿ ತೆಗೆದುಕೊಂಡರು. ಅವರೇ ಹೇಳುವಂತೆ.. ‘ಮೊನ್ನೆ ನಡೆದ ಫ್ರಾಡ್ ಒಂದನ್ನು ನಿಮ್ಮ ಮುಂದೆ ಹೇಳುತ್ತೇನೆ. 60 ವರ್ಷದ ವೃದ್ಧೆ. ಆಕೆಯ ಮಕ್ಕಳೆಲ್ಲ ವಿದೇಶದಲ್ಲಿ ದುಡಿಯುತ್ತಿದ್ದಾರೆ. ಈಕೆಯ ಬ್ಯಾಂಕ್ ಅಕೌಂಟ್ನಲ್ಲಿ 7 ಕೋಟಿ ಹಣ ಇದೆ. ಅವಳಿಗೆ ಡೆವಿಡ್ ಎಂಬಾತ ಪರಿಚಯ ಆಗುತ್ತಾನೆ. ಪರಿಚಯವಾಗಿ ಮೆಸೇಜ್ ಮಾಡಲು ಶುರು ಮಾಡುತ್ತಾನೆ. ಒಂಟಿಯಾಗಿದ್ದ ಈಕೆ, ಆತನ ಮೇಲೆ ಸಂಪೂರ್ಣ ಅಟ್ಯಾಚ್ ಆಗುತ್ತಾಳೆ.
ಮಕ್ಕಳು ದುಡಿದ ಹಣ, ಆಕೆ ಜೀವನ ಪರ್ಯಂತ ದುಡಿದ ಹಣ ಎಲ್ಲವೂ ಅದೇ ಅಕೌಂಟ್ನಲ್ಲಿತ್ತು. ಆ ಹಣದ ಮೇಲೆ ಡೆವಿಡ್ ಕಣ್ಣು ಬಿದ್ದಿತ್ತು. ಆತ ಆಕೆಗೆ ಬರೀ ಡಾರ್ಲಿಂಗ್ ಎಂದು ಮೆಸೇಜ್ ಕಳುಹಿಸಿದ್ದ. ಅಷ್ಟಕ್ಕೆ ವೃದ್ಧೆ ಒಂಟಿತನದಿಂದಾಗಿ ಆತನಿಗೆ ಬಿದ್ದಿದ್ದಳು. ಇಬ್ಬರ ನಡುವೆ ಮಾತುಕತೆ ನಂತರ ಭೇಟಿಗೆ ಬರ್ತೀನಿ ಎಂದು ನಾಟಕವಾಡಿದ್ದಾನೆ.
ಒಂದು ದಿನ ಕಾಲ್ ಮಾಡಿದಾತ, ಡಾರ್ಲಿಂಗ್ ನಾನು ಭಾರತಕ್ಕೆ ಬರುವಾಗ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ. ನನ್ನ ಪಾಸ್ಪೋರ್ಟ್ ಕಿತ್ಕೊಂಡಿದ್ದಾರೆ. ಈಗ ಕಷ್ಟ ಆಗ್ತಿದೆ ಅಂತಾ ಸುಳ್ಳು ಹೇಳಿ, ಒಂದೊಂದು ವಿಚಾರಕ್ಕೆ ತಲಾ 25 ಲಕ್ಷ ರೂಪಾಯಿ ಆಕೆಯಿಂದ ಪಾವತಿಸಿಕೊಂಡಿದ್ದಾನೆ. ಆ ಮೂಲಕ ಬರೋಬ್ಬರಿ 3.5 ಕೋಟಿ ಹಣವನ್ನು ಲಪಟಾಯಿಸಿದ್ದ. ಈ ವಿಚಾರ ಬ್ಯಾಂಕ್ನವರಿಗೆ ಗೊತ್ತಾಗಿದೆ. ಕೂಡಲೇ ಈಕೆಯ ಅಕೌಂಟ್ ಫ್ರೀಜ್ ಮಾಡಿದ್ದಾರೆ.
ಇದನ್ನೂ ಓದಿ: ಯಾವ ದೇಶದಲ್ಲಿ ಅತಿಹೆಚ್ಚು ದೀರ್ಘಾಯುಷಿಗಳು ಇದ್ದಾರೆ; ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?
ಠಾಣೆಯಲ್ಲಿ ನಾನಿದ್ದಾಗ ಆಕೆ ಬಂದಳು. ಸಾರ್, ಎಂದಳು. ನಾನು ವಿಚಾರಿಸಿದಾಗ, ನನ್ನ ಫಿಯಾನ್ಸಿ ಭಾರತಕ್ಕೆ ಬರುತ್ತಿದ್ದಾರೆ. ಆದರೆ ಆತನಿಗೆ ಹಣದ ಅಗತ್ಯ ಇದೆ. ಬ್ಯಾಂಕ್ನವರು ನನ್ನ ಅಕೌಂಟ್ ಫ್ರೀಸ್ ಮಾಡಿದ್ದಾರೆ ಎಂದು ದೂರುತ್ತಾಳೆ. ಅಲ್ಲದೇ ಆತ, ಅವಳಿಗೆ ಕಳುಹಿಸಿದ್ದ ಮೆಸೇಜ್ ತೋರಿಸುತ್ತಾಳೆ. ಅದರಲ್ಲಿ ಆಕೆ ಮೋಸ ಹೋಗಿರುವ ಬಗ್ಗೆ ಗೊತ್ತಾಗುತ್ತದೆ. ಆಕೆಯ ಅಕೌಂಟ್ನಲ್ಲಿ ಇನ್ನೂ ಮೂರೂವರೆ ಕೋಟಿ ಇತ್ತು. ಆ ಹಣದ ಮೇಲೂ ಕಣ್ಣು ಹಾಕಿದ್ದ. ನಮಗೆ ಐದೂವರೆ ಲಕ್ಷದವರೆಗೆ ಫ್ರಾಡ್ ನಡೆದರೆ ಮಾತ್ರ ತನಿಖೆಗೆ ಅವಕಾಶ ಇದೆ. ಆದರೆ ಅದು ಕೋಟಿ ವ್ಯವಹಾರದಲ್ಲಿ ನಡೆದಿದ್ದರಿಂದ ಹಿರಿಯ ಅಧಿಕಾರಿಗಳಿಗೆ ಪ್ರಕರಣ ವರ್ಗಾಯಿಸಿದೆ ಎಂದಿದ್ದಾರೆ.
ಅದೇ ರೀತಿ ಇನ್ನೊಬ್ಬಳು ಬಂದಿದ್ದಳು. ಸರ್ ನಾನು 50 ಸಾವಿರ ಹಾಕಿದ್ರೆ ನನಗೆ 2.5 ಕೋಟಿ ಹಣ ಬರುತ್ತದೆ ಅಂದ್ಕೊಂಡು ಬಂದಿದ್ದರು. ಅದಕ್ಕೆ ನಾನು ಹೇಳಿದೆ ಹಣ ಹಾಕಬೇಡ. ಅದು ಫ್ರಾಡ್ ಅಂತಾ. ಆಕೆ ನಾನೇ ಸುಳ್ಳು ಹೇಳ್ತೀನಿ ಅನ್ಕೊಂಡು ಹೋದಳು. ಮಾರನೇಯ ದಿನ 50 ಸಾವಿರ ಹಣ ಹಾಕಿ ಮೋಸ ಹೋದ್ಮೇಲೆ ನನ್ನ ಬಳಿ ಮತ್ತೆ ಬಂದಳು. ಆಗ ನಾನು ಅಸಹಾಯಕನಾದೆ.
ಸಮಸ್ಯೆಯಿಂದ ಪಾರಾಗಲು ಏನು ಮಾಡಬೇಕು?
ಯಾರೂ ಕೂಡ ಮೋಸ ಹೋಗಬೇಡಿ. ನೀವು 1930 ನಂಬರ್ ಸೇವ್ ಮಾಡಿಕೊಳ್ಳಿ. ಯಾರೇ ಮೋಸ ಹೋದರೂ 1930 ನಂಬರ್ಗೆ ಕೂಡಲೇ ಫೋನ್ ಮಾಡಿ. ಮೋಸ ಹೋದ ಒಂದು ಗಂಟೆಯೊಳಗೆ ಕರೆ ಮಾಡಿ. ಅದುವೇ ಗೋಲ್ಡನ್ ಅವರ್! ನೀವು ಫೋನ್ ಮಾಡಿದರೆ, ನಿಮ್ಮ ಅಕೌಂಟ್ನಿಂದ ಆ ಅವಧಿಯಲ್ಲಿ ಯಾರಿಗೆಲ್ಲ ದುಡ್ಡು ಹೋಗಿದೆಯೋ, ಅವರೆಲ್ಲರ ಅಕೌಂಟ್ ಬಂದ್ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ನಿಮ್ಮ ಅಕೌಂಟ್ ಸಿಗುವ ಚಾನ್ಸ್ ಇರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಹಾಲಿನ ದರ ಮತ್ತಷ್ಟು ಏರಿಕೆ ಆತಂಕ; KMF ಎಷ್ಟು ರೂಪಾಯಿ ಹೆಚ್ಚಿಸಲು ಹೊರಟಿದೆ ಗೊತ್ತಾ?
ಮೋಸ ಹೋದಾಗ ಯಾವುದೇ ಕಾರಣಕ್ಕೂ ಆಘಾತಕ್ಕೆ ಒಳಗಾಗಬಾರದು. ಕೂಡಲೇ ಪೊಲೀಸ್ ಠಾಣೆಗೆ ಬನ್ನಿ. ಠಾಣೆಗೆ ಬರಲು ಇಷ್ಟವಾಗಲಿಲ್ಲ ಅಂದರೆ 112 ನಂಬರ್ಗೆ ಕರೆ ಮಾಡಿ. 112 ನಂಬರ್ ಪ್ರಮುಖ ಪಾತ್ರವಹಿಸುತ್ತೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ, 112ಗೆ ಕರೆ ಮಾಡಿ. ಬೆಂಗಳೂರು ಅಂತಹ ನಗರಗಳಲ್ಲಿ ಐದೇ ನಿಮಿಷದಲ್ಲಿ ನಿಮ್ಮ ಮನೆಗೆ ಪೊಲೀಸರು ಬರುತ್ತಾರೆ. ಪೊಲೀಸರು ಬಂದ ಕೂಡಲೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದಿದ್ದಾಗ ಸ್ಟೇಷನ್ಗೆ ಕರೆದುಕೊಂಡು ಹೋಗ್ತಾರೆ. ಪೊಲೀಸರು ಅಂದರೆ ಭಯ ಅಲ್ಲ. ಭರವಸೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ