/newsfirstlive-kannada/media/post_attachments/wp-content/uploads/2024/12/FENGAL_2.jpg)
ಬಿಸಿಲು ಕಾಣದಾಗಿದೆ. ಮಳೆ ಮಾತ್ರ ಫೆಂಗಲ್ ಚಂಡಮಾರುತ ರೂಪ ತಾಳಿ ಅಬ್ಬರಿಸುತ್ತಿದೆ. ತಮಿಳುನಾಡು-ಪಾಂಡಿಚೇರಿ ಸೇರದಂತೆ ಕೆಲ ರಾಜ್ಯಗಳಲ್ಲಿ ಫೆಂಗಲ್ ಚಂಡಮಾರುತ ಭಾರಿ ಮಳೆಯನ್ನೇ ಸೃಷ್ಟಿಸಿದೆ. ಇದರ ಪರಿಣಾಮ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಎಲ್ಲಿ ಏನೇನು ಆಗಿದೆ ಎಂದು ಮಾಹಿತಿ ಇಲ್ಲಿದೆ.
ಫೆಂಗಲ್ ವೇಷದಲ್ಲಿ ಎಂಟ್ರಿ ಕೊಟ್ಟ ವರುಣ ತಮಿಳುನಾಡು, ಪುದುಚೇರಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾನೆ. ಪುದುಚೇರಿ ಮತ್ತು ತಮಿಳುನಾಡಿನ ಉತ್ತರ ಕರಾವಳಿಯಲ್ಲಿ ಫೆಂಗಲ್ ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಫೆಂಗಲ್ ಸೈಕ್ಲೋನ್ನಿಂದ ಭಾರೀ ಮಳೆಯಾಗಿದ್ದು, ತಮಿಳುನಾಡು ತತ್ತರಿಸಿ ಹೋಗಿದೆ.
ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಳು.. ಮನೆ ನೆಲಸಮ!
ತಿರುವಣ್ಣಾಮಲೈ ಜಿಲ್ಲೆಯ ಅಣ್ಣಾಮಲೈಯಾರ್ ಬೆಟ್ಟದಿಂದ ಬೃಹತ್ ಬಂಡೆಗಳು ಉರುಳಿವೆ. ಪರಿಣಾಮ ಮನೆಯೊಂದು ನೆಲಸಮವಾಗಿದ್ದು, ಸುಮಾರು 5 ಮಕ್ಕಳು ಒಳಗೆ ಸಿಲುಕಿರೋ ಶಂಕೆ ವ್ಯಕ್ತವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ತಿರುವಣ್ಣಾಮಲೈನ ಪಲ್ಲಿಯಂಬಟ್ಟು ಬಳಿ ಸಿಡಿಲು ಬಡಿದು ರಸ್ತೆ ಬಿರುಕು ಬಿಟ್ಟ ಘಟನೆ ಸಂಭವಿಸಿದೆ.
ಇದೇ ಜಿಲ್ಲೆಯ ಕಡಲೂರಿನಲ್ಲಿ ಮಳೆ ಅಬ್ಬರಕ್ಕೆ ರಸ್ತೆ ಯಾವುದು, ಕೆರೆ ಯಾವುದು ಎಂದು ತಿಳಿಯದಂತೆ ಆಗಿದೆ. ಮಳೆಯಲ್ಲಿ ನೆಡದು ಬರುತ್ತಿದ್ದ ಮಹಿಳೆ ರಸ್ತೆಯಲ್ಲಿ ಹಳ್ಳ ಇರೋದು ತಿಳಿಯದೆ ನೀರಿಗೆ ಬಿದ್ದಿದ್ದು ಕೂಡಲೇ ಎಚ್ಚೆತ್ತ ಸ್ಥಳೀಯರು ಓಡಿ ಬಂದು ಆಕೆಯನ್ನ ಕಾಪಾಡಿದ್ದಾರೆ.
ಕಡಲೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಕಡಲೂರಿನ ಉಚ್ಚಿಮೇಡು ಪ್ರದೇಶದ ಸುತ್ತಮುತ್ತ ನಗರಗಳಲ್ಲೂ ಪ್ರವಾಹ ಪರಿಸ್ಥಿತಿ ಇದೆ. ಕಡಲೂರು ಪ್ರವಾಹದಲ್ಲಿ ಸಿಲುಕಿರೋ ಜನರನ್ನ ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.
ವಿಲ್ಲುಪುರಂ ಜಿಲ್ಲೆಯ ಮೈಲಂ ಎಂಬಲ್ಲಿ ಪ್ರವಾಹ ಪರಿಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಗಳಿಗೆ ಸಂರ್ಪಕಿಸೋ ರಸ್ತೆಗಳು ಮಳೆ ನೀರಲ್ಲಿ ಮರೆಯಾಗಿದೆ. ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿಲ್ಲುಪುರಂ ಜಿಲ್ಲೆಯ ಸೆಂಗಮೇಡು ಭಾಗದಲ್ಲಿ ಸುಮಾರು 2,000 ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ.
ಕಲ್ಲಕುರಿಚಿ ಜಿಲ್ಲೆಯಲ್ಲಿರೋ ಕೋಮುಕಿ ಅಣೆಕಟ್ಟು ಸಂಪೂರ್ಣ ಭರ್ತಿ ಹಂತ ತಲುಪಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದ ಗ್ರಾಮಸ್ಥರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.
ಇದನ್ನೂ ಓದಿ: ಕರ್ಣಾಟಕ ಬ್ಯಾಂಕ್ನಿಂದ ಗುಡ್ನ್ಯೂಸ್; ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಪುದುವೇರಿಯಲ್ಲಿ 30 ವರ್ಷಗಳಲ್ಲೇ ದಾಖಲೆಯ ಮಳೆ
ಇನ್ನು ತಮಿಳುನಾಡು ಮಾತ್ರವಲ್ಲ ಪುದುಚೇರಿಯಲ್ಲೂ ಫೆಂಗಲ್ ಚಂಡಮಾರುತ ಅಬ್ಬರಿಸಿ ಬೊಬ್ಬಿರಿದಿದೆ. ಚಂಡಮಾರುತದಿಂದಾಗಿ, ಪುದುಚೇರಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಕಳೆದ 30 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣ ಮಳೆಯಾಗಿಲ್ಲ ಎಂದು ತಿಳಿದು ಬಂದಿದೆ. ಮಳೆ ನೀರಿನಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಲ್ಲಿರೋ ಸಿಲುಕಿರೋ ಸಂತ್ರಸ್ತರನ್ನ ಎನ್ಡಿಆರ್ಎಫ್ ಯೋಧರು ರಕ್ಷಣೆ ಮಾಡುತ್ತಿರುವ ದೃಶ್ಯಗಳು ಮೈ ಜುಮ್ ಎನಿಸುವಂತಿವೆ. ಪುದುಚೇರಿಗೆ ಇವತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು ಚೆನ್ನೈ, ಪಾಂಡಿಚೇರಿ ಮೂಲಕ ಹಾದು ಹೋಗುವ ರೈಲುಗಳು ಸಂಚಾರದಲ್ಲಿ ವ್ಯತ್ಯಯವಾಗಿದೆ. ಮುಂದಿನ ಸೂಚನೆ ವರೆಗೆ ಸೇವೆ ಇರಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅಬ್ಬರದ ಮಳೆಯಿಂದಾಗಿ ಇವತ್ತು ನಡೆಯಬೇಕಿದ್ದ ಸೇಲಂ ಪೆರಿಯಾರ್ ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಫೆಂಗಲ್ ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿಯನ್ನು ಹಿಂಡಿ ಹಿಪ್ಪೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ