/newsfirstlive-kannada/media/post_attachments/wp-content/uploads/2024/11/Delhi-Doctor.jpg)
ಸುಮಾರು 5 ತಿಂಗಳ ಹಿಂದೆ ಅಂದ್ರೆ ಮೇ ತಿಂಗಳಲ್ಲಿ ದೆಹಲಿಯಲ್ಲಿ 63 ವರ್ಷ ವಯಸ್ಸಿನ ವೈದ್ಯರೊಬ್ಬರ ಭೀಕರ ಹತ್ಯೆ ಆಗಿತ್ತು. ಈ ಕೇಸ್ನಲ್ಲಿ ಹಲವು ಆರೋಪಿಗಳ ಬಂಧಿಸಿದ್ದ ಪೊಲೀಸರಿಗೆ ಮಾಸ್ಟರ್ ಮೈಂಡ್ ಆಗಿದ್ದವನನ್ನು ಹಿಡಿಯುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಆದ್ರೆ ದೆಹಲಿ ಪೊಲೀಸರು ಕೊನೆಗೂ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಆರೋಪಿಯನ್ನು ಬಂಧಿಸಿದ್ದೇ ಒಂದು ರೋಚಕ ಕಥೆ.
ಇದು ತಮಿಳಿನ ಖಾಕಿ ಚಿತ್ರದ ದೃಶ್ಯ. ಖತರ್ನಾಕ್ ಗ್ಯಾಂಗೊಂದು ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ, ಮನೆಯಲ್ಲಿದ್ದವರನ್ನು ಸಾಯಿಸಿ, ದರೋಡೆ ಮಾಡ್ತಿತ್ತು. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಆರೋಪಿಗಳನ್ನು ಹಿಡಿಯಲೇ ಬೇಕೆಂದು ಪಣ ತಟ್ಟ ಪೊಲೀಸ್ ತಂಡ. ರಹಸ್ಯವಾಗಿ ಕಾರ್ಯಾಚರಣೆ ನಡೆಸಿ, ಬಸ್ನಲ್ಲಿ ಹೋಗ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ, ಹಿಡಿದಿತ್ತು. ಇದೀಗ ನಾವು ಹೇಳ್ತಿರುವ ಸ್ಟೋರಿ ಕೂಡ ಒಂದು ರೀತಿ ಅದೇ ಥರ ಇದೆ.
ತಲೆಮರೆಸಿಕೊಳ್ಳಲು 8 ಮೊಬೈಲ್, 20 ಸಿಮ್, 6 ನಕಲಿ ಹೆಸರು
ಬಂಧಿತ ಆರೋಪಿ ಹಾಗೂ ಆತನ ಸಹಚರರು ವೈದ್ಯ ಯೋಗೀಶ್ ಚಂದ್ರ ಪಾಲ್ ಅವರನ್ನು ಜಂಗ್ಪುರದ ಅವರ ಮನೆಯಲ್ಲಿ ಈ ವರ್ಷ ಮೇ ತಿಂಗಳಲ್ಲಿ ಹತ್ಯೆಗೈದಿದ್ದರು. ಕೊಲೆಗೂ ಮುನ್ನ ಆರೋಪಿಗಳು ಮನೆಯನ್ನು ಲೂಟಿ ಮಾಡಿದ್ದರು. ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎಂದು ತನಿಖೆಗೆ ಇಳಿದಾಗ ಈತನ ಬಗ್ಗೆ ಮಾಹಿತಿ ಸಿಕ್ಕಿತ್ತು. ಪೊಲೀಸರಿಂದ ಬಚಾವ್ ಆಗಲು ಆರೋಪಿ ಮಾಡಿದ್ದ ಖತರ್ನಾಕ್ ಪ್ಲಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಮದುವೆಗಾಗಿ IPS ನಾಟಕ; ತಾನೇ ತೋಡಿದ ಹಳ್ಳಕ್ಕೆ ಯುವಕ ಬಿದ್ದಿದ್ದು ಹೇಗೆ?
6 ನಕಲಿ ಹೆಸರುಗಳನ್ನು ಬಳಸಿಕೊಂಡಿದ್ದ
ಪ್ರಕರಣದಿಂದ ತಪ್ಪಿಸಿಕೊಳ್ಳಲು 8 ಮೊಬೈಲ್ ಹಾಗೂ 20 ಸಿಮ್ ಕಾರ್ಡ್ಗಳನ್ನು ಬದಲಾಯಿಸಿದ್ದ. ಅಲ್ಲದೇ ಸುಮಾರು 6 ನಕಲಿ ಹೆಸರುಗಳನ್ನು ಬಳಸಿಕೊಂಡಿದ್ದ. ಈತ ಹೋದಲ್ಲೆಲ್ಲಾ ನಕಲಿ ಗುರುತಿನ ಚೀಟಿ ಹಾಗೂ ನಕಲಿ ಹೆಸರನ್ನು ಬಳಸುತ್ತಿದ್ದ. ವಿಷ್ಣು ಸ್ವರೂಪ್ ಶಾಹಿ, ಶಕ್ತಿ ಸಾಯಿ, ಸತ್ಯ ಸಾಯಿ, ಸೂರ್ಯ ಪ್ರಕಾಶ್ ಶಾಹಿ, ಗಗನ್ ಓಲಿ, ಕೃಷ್ಣ ಶಾಹಿ ಎಂಬ ಹೆಸರಿನ ಗುರುತಿನ ಚೀಟಿಗಳನ್ನು ಹೊಂದಿದ್ದ ಆತನನ್ನು ಬಂಧಿಸುವಾಗ ಗಗನ್ ಒಲಿ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬರೋಬ್ಬರಿ 44 ದಿನ ವೈದ್ಯರ ನಿಗಾದಲ್ಲಿ ದರ್ಶನ್; ಕಾಟೇರನ ಆರೋಗ್ಯದ ಸ್ಥಿತಿ ಹೇಗಿದೆ ಗೊತ್ತಾ?
ನೇಪಾಳಕ್ಕೆ ಪರಾರಿಯಾಗುತ್ತಿದ್ದಾಗ ಆರೋಪಿಯ ಬಂಧನ
ಬಂಧಿತ ವಿಷ್ಣು ಸ್ವರೂಪ್ ಶಾಹಿ ಈ ಮೊದಲು ಡೆಹ್ರಾಡೂನ್ನಲ್ಲಿ ತಲೆ ಮರೆಸಿಕೊಂಡಿದ್ದ, ಪೊಲೀಸರು ಅಲ್ಲಿಗೆ ತೆರಳುವ ಮುನ್ನ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದ. ಅದರಂತೆಯೇ ವಿಷ್ಣುಸ್ವರೂಪ್ ಶಾಹಿ ಭಾರತ-ನೇಪಾಳ ಗಡಿಯತ್ತ ಧಾವಿಸುತ್ತಿದ್ದಂತೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಮಾಹಿತಿ ಸಿಕ್ಕಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರ ತಂಡ ಕೇವಲ 24 ಗಂಟೆಯಲ್ಲಿ 1,600 ಕಿಮೀ ಆತನ ಬೆನ್ನಟ್ಟಿ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಒಟ್ಟಾರೆ ಕಳೆದ ಐದು ತಿಂಗಳಿಂದ ಪೊಲೀಸರ ಕೈಗೆ ಸಿಗದೇ, ನಿತ್ಯ ಒಂದೊಂದು ವೇಷ. ಹೆಸರು ಹಾಕಿಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿ ಅಂದರ್ ಆಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ