/newsfirstlive-kannada/media/post_attachments/wp-content/uploads/2025/07/JOB_NEWS.jpg)
ರಾಜ್ಯ, ದೇಶದಲ್ಲಿ ಒಂದೆಡೆ ಇಂಜಿನಿಯರಿಂಗ್ ಕೋರ್ಸ್ ಅಧ್ಯಯನ ಮಾಡಿದವರಿಗೆ ಉದ್ಯೋಗಗಳೇ ಸಿಗುತ್ತಿಲ್ಲ. ಜಾಗತಿಕ ಮಟ್ಟದಲ್ಲೂ ಐಟಿ ಹಾಗೂ ಟೆಕ್ ಕಂಪನಿಗಳು ಉದ್ಯೋಗಿಗಳಿಗೆ ಲೇ ಆಫ್ (ಹುದ್ದೆಯಿಂದ ವಜಾಗೊಳಿಸುವುದು) ನೀಡುತ್ತಿವೆ. ಈ ವರ್ಷದ ಮೊದಲಾರ್ಧದಲ್ಲೇ 1 ಲಕ್ಷ ಉದ್ಯೋಗಿಗಳು ವಿವಿಧ ಕಂಪನಿಗಳಲ್ಲಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಇಂಜಿನಿಯರಿಂಗ್ ಕೋರ್ಸ್ಗಳಿಗೆ ಅಡ್ಮಿಷನ್ ಆಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಕುಸಿತವಾಗಿದೆ. ನಮ್ಮ ರಾಜ್ಯದಲ್ಲೂ ಕಳೆದ ವರ್ಷ ಕೆಲ ಕೋರ್ಸ್ ಗಳ ಸೀಟುಗಳೇ ಖಾಲಿ ಉಳಿದಿದ್ದವು.
ಹೀಗಾಗಿ ಈಗ ಬೇಡಿಕೆ ಇಲ್ಲದ ಇಂಜಿನಿಯರಿಂಗ್ ಕೋರ್ಸ್ಗಳ ಶುಲ್ಕಕ್ಕೆ ಶೇ.50 ರಷ್ಟು ವಿನಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ರಾಜ್ಯದಲ್ಲಿ 5 ಇಂಜಿನಿಯರಿಂಗ್ ಕೋರ್ಸ್ಗಳಿಗೆ ಶೇ.50 ಕ್ಕಿಂತ ಕಡಿಮೆ ಅಡ್ಮಿಷನ್ ಆಗಿವೆ. ಆ 5 ಇಂಜಿನಿಯರಿಂಗ್ ಕೋರ್ಸ್ಗಳಿಗೆ ಶೇ.50 ರಷ್ಟು ಶುಲ್ಕ ವಿನಾಯಿತಿ ನೀಡಲಾಗಿದೆ. ಮೆಕ್ಯಾನಿಕಲ್, ಸಿವಿಲ್ ಇಂಜಿನಿಯರಿಂಗ್, ಆಟೋಮೊಬೈಲ್, ಟೆಕ್ಸ್ ಟೈಲ್ಸ್ ಟೆಕ್ನಾಲಜಿ, ಸಿಲ್ಕ್ ಟೆಕ್ನಾಲಜಿ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಶುಲ್ಕ ವಿನಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಈ ಐದು ಕೋರ್ಸ್ ಗಳಿಗೆ ಮಾತ್ರವೇ 2025-26ನೇ ಶೈಕ್ಷಣಿಕ ಸಾಲಿನಿಂದ ಶೇ.50 ರಷ್ಟು ಶುಲ್ಕ ವಿನಾಯಿತಿ ಸಿಗಲಿದೆ. ಶುಲ್ಕ ವಿನಾಯತಿ ಪಡೆಯಲು ಇಂಜಿನಿಯರಿಂಗ್ ಕಾಲೇಜುಗಳು ಕೆಇಎಗೆ ಮನವಿ ಸಲ್ಲಿಸಬೇಕು. ಕಳೆದ ವರ್ಷ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 5,723 ಸೀಟುಗಳು ಲಭ್ಯ ಇದ್ದವು. ಇವುಗಳ ಪೈಕಿ 2,883 ಸೀಟುಗಳು ಮಾತ್ರ ಭರ್ತಿ ಆಗಿದ್ದವು. ಉಳಿದ ಸೀಟುಗಳು ಅಭ್ಯರ್ಥಿಗಳಿಲ್ಲದೇ, ಖಾಲಿ ಇದ್ದವು. ಇನ್ನೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 5,977 ಸೀಟುಗಳು ಲಭ್ಯ ಇದ್ದವು. ಇವುಗಳ ಪೈಕಿ 2,783 ಸೀಟುಗಳು ಮಾತ್ರ ಭರ್ತಿಯಾಗಿದ್ದವು.
ಬೇಡಿಕೆ ಇರುವ ಕೋರ್ಸ್ ಗಳ ಶುಲ್ಕ ಹೆಚ್ಚಳ
ಆದರೇ, ಬೇಡಿಕೆ ಇರುವ ಇಂಜಿನಿಯರಿಂಗ್ ಕೋರ್ಸ್ ಶುಲ್ಕ ಹೆಚ್ಚಳ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಾಸ್ತುಶಿಲ್ಪ ಶಾಸ್ತ್ರ ಸೇರಿದಂತೆ ಕೆಲ ಕೋರ್ಸ್ಗಳಿಗೆ ಶೇ.7.5 ರಷ್ಟು ಶುಲ್ಕ ಖಾಸಗಿ ಕಾಲೇಜುಗಳಲ್ಲಿ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಶೇ.5 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಶುಲ್ಕವು ವಿಶ್ವವಿದ್ಯಾಲಯ ನೋಂದಾಣಿ ಮತ್ತು ಇತರೆ ಸಂಸ್ಕರಣಾ ಶುಲ್ಕಗಳನ್ನು ಹೊರತುಪಡಿಸಿದೆ.
ಇದನ್ನೂ ಓದಿ:‘ಬಾ ಹುಡುಗಿ ಪಂಚಮಿಗೆ’ ಹಿಟ್ ಸಾಂಗ್ ಹಾಡಿದ್ದ ಜಾನಪದ ಗಾಯಕ ಇನ್ನಿಲ್ಲ
ಈ ವರ್ಷದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ
ಇನ್ನೂ ಇಂಜಿನಿಯರಿಂಗ್, ಪಶುವೈದ್ಯಕೀಯ, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 9 ರಿಂದ ಆರಂಭಿಸಿದೆ. ಯಾವ ಕಾಲೇಜು ಬೇಕೆಂದು ಆಪ್ಷನ್ (ಆಯ್ಕೆ ) ದಾಖಲಿಸಲು ಜುಲೈ 15ರವರೆಗೆ ಕಾಲಾವಕಾಶ ನೀಡಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ಯುನಾನಿ, ಬಿಎಸ್ಸಿ ನರ್ಸಿಂಗ್, ವಾಸ್ತುಶಿಲ್ಪ ಶಾಸ್ತ್ರ, ಯೋಗ, ನ್ಯಾಚೋರೋಪತಿ ಕೋರ್ಸ್ಗಳ ಸೀಟ್ ಮ್ಯಾಟ್ರಿಕ್ಸ್ ಲಭ್ಯವಾಗುವುದು ತಡವಾಗಿದ್ದು, ಪಟ್ಟಿ ದೊರೆತ ನಂತರ ಆ ಕೋರ್ಸ್ಗಳ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೆಇಎ ಹೇಳಿದೆ.
ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಜುಲೈ 19 ರಂದು ಪ್ರಕಟಿಸಲಾಗುತ್ತೆ. ಆದ್ಯತೆಗಳನ್ನು ಅದಲು ಬದಲು ಮಾಡಿಕೊಳ್ಳಲು ಜುಲೈ 22 ರವರೆಗೆ ಕಾಲಾವಕಾಶ ಇರುತ್ತೆ. ಜುಲೈ 25 ರಂದು ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತೆ ಎಂದು ಕೆಇಎ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ