/newsfirstlive-kannada/media/post_attachments/wp-content/uploads/2025/05/Digvesh_Rathi-1.jpg)
ಸನ್ ರೈಸರ್ಸ್ ಹೈದ್ರಾಬಾದ್ ಬ್ಯಾಟರ್ ಅಭಿಷೇಕ್ ಶರ್ಮಾ ಜೊತೆ ವಾಗ್ವಾದಕ್ಕೆ ಇಳಿದಿದ್ದರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿ ಅವರನ್ನು ಐಪಿಎಲ್ನ 1 ಪಂದ್ಯದಿಂದ ಅಮಾನತು ಮಾಡಲಾಗಿದೆ.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ನಡುವೆ ನಡೆದ ಪಂದ್ಯದಲ್ಲಿ ಇಬ್ಬರ ಮಧ್ಯೆ ಘರ್ಷಣೆ ನಡೆದಿತ್ತು. ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಪಡೆಯುತ್ತಿದ್ದಂತೆ ದಿಗ್ವೇಶ್ ರಾಥಿ, ನೋಟ್ ಬುಕ್ ಸೆಲೆಬ್ರೆಷನ್ ಮಾಡಿದ್ದರು. ಇದರಿಂದ ಕೆರಳಿದ್ದ ಅಭಿಷೇಕ್ ಶರ್ಮಾ ಮೈದಾನದಲ್ಲಿ ತಿರುಗೇಟು ನೀಡಿದ್ದರು.
ಈ ವೇಳೆ ಅಭಿಷೇಕ್ ಶರ್ಮಾ ಮತ್ತು ದಿಗ್ವೇಶ್ ರಾಥಿ ನಡುವೆ ವಾಗ್ವಾದ ಜೋರಾಗಿ ನಡೆದಿತ್ತು. ತಕ್ಷಣ ಓಡೋಡಿ ಬಂದ ಅಂಪೈರ್ಗಳು ಹಾಗೂ ಸಹ ಆಟಗಾರರು ಇಬ್ಬರ ಜಗಳ ಬಿಡಿಸಿದ್ದರು. ಈ ವೇಳೆ ವಿಕೆಟ್ ಪಡೆದು ನೋಟ್ ಬುಕ್ ಸೆಲೆಬ್ರೆಷನ್ ಮಾಡಿದ್ದ ಹಾಗೂ ಅಭಿಷೇಕ್ ಶರ್ಮಾ ಜೊತೆ ವಾಗ್ವಾದಕ್ಕೆ ಇಳಿದ ಹಿನ್ನೆಲೆಯಲ್ಲಿ ದಿಗ್ವೇಶ್ ರಾಥಿಗೆ ಇದೀಗ ಶಿಕ್ಷೆ ನೀಡಲಾಗಿದೆ. ಎಲ್ಎಸ್ಜಿ ತಂಡದ ಮುಂದಿನ ಐಪಿಎಲ್ ಪಂದ್ಯದಿಂದ ಸಂಸ್ಪೆಂಡ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಐಪಿಎಲ್ ಆಡಳಿತ ಮಂಡಳಿಯು ದಿಗ್ವೇಶ್ ರಾಥಿಯನ್ನು ಒಂದು ಪಂದ್ಯದಿಂದ ಅಮಾನತು ಮಾಡಿ ಶಿಕ್ಷೆ ವಿಧಿಸಿದೆ. ವಿಕೆಟ್ ಪಡೆದ ಸಂದರ್ಭದಲ್ಲಿ ದಿಗ್ವೇಶ್ ರಾಥಿ ಅತಿಯಾಗಿ ರಂಜಿಸಿದ್ದಕ್ಕಾಗಿ ಈಗಾಗಲೇ ಎರಡು ಬಾರಿ ಶಿಕ್ಷೆಗೆ ಒಳಗಾಗಿದ್ದು ಇದು 3ನೇ ಬಾರಿ ಆಗಿದೆ. ಅದರಂತೆ ಮೇ 22 ರಂದು ಸಂಜೆ 7:30ಕ್ಕೆ ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ಎಲ್ಎಸ್ಜಿಯ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಇದನ್ನೂ ಓದಿ: ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಜೊತೆ ರಾಥಿ ಗಲಾಟೆ.. ಔಟ್ ಆಗ್ತಿದ್ದಂತೆ ಹೀಗೆ ಮಾಡಬಹುದಾ?
ಇದರ ಜೊತೆಗೆ ದಿಗ್ವೇಶ್ ರಾಥಿ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ಕೂಡ ಕಟ್ಟಬೇಕು. ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಜೊತೆ ಆಡುವಾಗಲೂ ಇದೇ ರೀತಿ ಮಾಡಿದಾಗ 3 ಡಿಮೇರಿಟ್ ಪಾಯಿಂಟ್ ಪಡೆದುಕೊಂಡಿದ್ದರು. ಇದೀಗ ಹೈದ್ರಾಬಾದ್ ಬ್ಯಾಟರ್ನನ್ನ ಕೆಣಕಿ 2 ಡಿಮೇರಿಟ್ ಪಾಯಿಂಟ್ ಪಡೆದುಕೊಂಡಿದ್ದು ಈ ಸೀಸನ್ನಲ್ಲಿ ಒಟ್ಟು 5 ಡಿಮೇರಿಟ್ ಪಾಯಿಂಟ್ ಪಡೆದಿದ್ದಾರೆ. ಇನ್ನು ಅಭಿಷೇಕ್ ಶರ್ಮಾಗೂ ಶೇ.25 ರಷ್ಟು ದಂಡ ಹಾಕಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ