/newsfirstlive-kannada/media/post_attachments/wp-content/uploads/2025/05/KERALA_elephant.jpg)
ಲಕ್ಸುರಿ ಬಸ್ಗಳು, ಟ್ರೈನ್, ಬುಲೆಟ್ ಟ್ರೈನ್, ಬಣ್ಣಬಣ್ಣದ ವಿಧ ವಿಧವಾದ ಕಾರು, ಬೈಕ್ಗಳು ಈಗಿನ ಸಂಪರ್ಕ ಸಾರಿಗೆಯನ್ನು ಉನ್ನತ ಮಟ್ಟಕ್ಕೆ ಏರಿಸಿವೆ. ಕಂಪ್ಯೂಟರ್ಸ್, ಸಿಸಿಟಿವಿ ಕ್ಯಾಮೆರಾ, ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ಗಳು ಎಲ್ಲವೂ ಮಾಹಿತಿಗಳನ್ನು ಕ್ಷಣದಲ್ಲೇ ತಿಳಿಸಿಕೊಡಬಲ್ಲವು. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೆಲವೊಮ್ಮೆ ನಾವು ಯಾವುದನ್ನು ಬಳಸಲಾಗದೇ ಪ್ರಾಣಿಗಳನ್ನು ಅವಲಂಬಿಸಬೇಕಾಗುತ್ತದೆ. ಇದಕ್ಕೆ ಉದಾಹರಣ ಎಂಬಂತೆ ಇಲ್ಲೊಂದು ಸಂಗತಿ ನಡೆದಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಲಂ ಬಳಿಯ ನದಿಯಲ್ಲಿ ಟೊಯೋಟೊ ಫಾರ್ಚುನರ್ ಎಸ್ಯುವಿ ಕಾರು ಸಿಲುಕಿಕೊಂಡಿರುತ್ತದೆ. ವಿಡಿಯೋದಲ್ಲಿ ತೋರಿಸಿರುವಂತೆ ಆಳವಿಲ್ಲದ ನದಿಯ ದಡದಲ್ಲಿ ಕಾರಿನ ಎಡಭಾಗದ ಗಾಲಿಗಳು ಮಾತ್ರ ಸಿಕ್ಕಿಕೊಂಡಿವೆ. ಮಾಲೀಕ, ಡ್ರೈವರ್ ಎಷ್ಟೇ ಪ್ರಯತ್ನ ಪಟ್ಟರೂ ಕಾರು ನದಿ ನೀರಿನಿಂದ ಹೊರಗಡೆ ಬರಲು ಆಗದೇ ಗಾಲಿಗಳು ಇನ್ನಷ್ಟು ಆಳಕ್ಕೆ ಹೋಗಿರುತ್ತವೆ. ಈ ಕಾರನ್ನು ಇಲ್ಲೊಂದು ವಾಹನಕ್ಕೆ ಕಟ್ಟಿ ಎಳೆಯಬೇಕು ಎಂದರೆ ಆ ಸ್ಥಳಕ್ಕೆ ಯಾವುದೇ ವಾಹನ ಹೋಗುವಂತೆ ಇರಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:RCB ಜೊತೆ ಹೋರಾಟ ನಡೆಸೋ ಪಂಜಾಬ್ ಕಿಂಗ್ಸ್ನ ಸ್ಟ್ರೆಂಥ್, ವೀಕ್ನೆಸ್ ಏನೇನು..?
ಹೀಗಾಗಿ ವಾಹನ ಚಲಿಸದೇ ಇರುವ ಸ್ಥಳಕ್ಕೆ ಆನೆಯನ್ನು ಕರೆಸಿದರೆ ಟೊಯೋಟೊ ಫಾರ್ಚುನರ್ ಎಸ್ಯುವಿ ಕಾರನ್ನು ಹೊರ ತರಬಹುದೆಂದು ಮಾಲೀಕನಿಗೆ ಯೋಚನೆ ಬಂದಿದೆ. ಅದರಂತೆ ಕೇರಳದ ತಿರುವೇಗಪುರದಲ್ಲಿರುವ ತಿರುವೇಗಪುರ ಶಂಕರನಾರಾಯಣನ್ ಎನ್ನುವ ಆನೆಯ ಮಾಲೀಕನನ್ನು, ಕಾರಿನ ಓನರ್ ಸಂಪರ್ಕ ಮಾಡಿ ಮಾತನಾಡಿದ್ದಾರೆ. ಇದಕ್ಕೆ ಆನೆಯ ಮಾಲೀಕ ಒಪ್ಪಿಗೆ ಸೂಚಿಸಿದ್ದಾರೆ.
ನದಿಯಲ್ಲಿ ಸಿಲುಕಿಕೊಂಡಿದ್ದ ಟೊಯೋಟೊ ಫಾರ್ಚುನರ್ ಎಸ್ಯುವಿ ಕಾರನ್ನು ಕ್ಷಣ ಮಾತ್ರದಲ್ಲೇ ಆನೆಯು ಹೊರಗೆ ಎಳೆದಿದೆ. ಮೊದಲು ಕಾರಿಗೆ ಹಗ್ಗವನ್ನು ಕಟ್ಟಲಾಗಿತ್ತು. ಹಗ್ಗವನ್ನು ಸೊಂಡಿಲಿನಲ್ಲಿ ಹಿಡಿದ ಆನೆ ಒಂದೇ ಬಾರಿಗೆ ಕಾರನ್ನು ಹೊರಗೆ ಎಳೆದು ತಂದಿದೆ. ಇದರಿಂದ ಮಾಲೀಕ ಸೇರಿದಂತೆ ಸ್ಥಳದಲ್ಲಿದ್ದ ಎಲ್ಲರೂ ಖುಷಿ ಪಟ್ಟಿದ್ದಾರೆ.
ಇನ್ನೊಂದು ವಿಷಯ ಎಂದರೆ ಟೊಯೋಟೊ ಫಾರ್ಚುನರ್ ಎಸ್ಯುವಿ ಕಾರಿನ ತೂಕ 2,105 ಕೆಜಿಯಿಂದ 2,135 ಕೆಜಿ ಇರುತ್ತದೆ ಎನ್ನಲಾಗಿದೆ. ಇಷ್ಟೊಂದು ಭಾರವನ್ನು ತನಗೆ ಏನೂ ಲೆಕ್ಕವಿಲ್ಲ ಎನ್ನುವಂತೆ ಆನೆ ಎಳೆದಿದೆ. ಈಗ ನಮ್ಮ ಜೊತೆ ತಂತ್ರಜ್ಞಾನ ಇದ್ದರೂ ಕೆಲವೊಮ್ಮೆ ಪ್ರಾಣಿಗಳನ್ನು ಸಹಾಯಕ್ಕೆ ತರಲೇಬೇಕು ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನಬಹುದು.
View this post on Instagram
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ