ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತೊಂದು ಯಡವಟ್ಟು; ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಆಕ್ರೋಶ

author-image
Ganesh
Updated On
ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತೊಂದು ಯಡವಟ್ಟು; ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಆಕ್ರೋಶ
Advertisment
  • ಆಟಗಾರರ ವಿಚಾರದಲ್ಲಿ ಮ್ಯಾನೇಜ್​ಮೆಂಟ್​ ‘ಆಟ’.?
  • ಟೀಮ್​ ಮ್ಯಾನೇಜ್​ಮೆಂಟ್​ ಮಾಡಿರೋ ತಪ್ಪೇನು?
  • T20 ವಿಶ್ವಕಪ್​ಗೂ ಮುನ್ನ ಎಚ್ಚೆತ್ತುಕೊಳ್ಳುತ್ತಾ ತಂಡ.?

ವಿಶ್ವಕಪ್​ನಲ್ಲಿ ಎಡವಿದ್ರೂ ಟೀಮ್​ ಇಂಡಿಯಾ ಮಾತ್ರ ಪಾಠ ಕಲಿತಿಲ್ಲ. ಆಸಿಸ್​ ವಿರುದ್ಧದ ಸರಣಿಯಲ್ಲೂ ಟೀಮ್ ಮ್ಯಾನೇಜ್​ಮೆಂಟ್​​ ಹಳೆ ತಪ್ಪನ್ನೇ ಮತ್ತೆ ಮಾಡಿದೆ. ಇದನ್ನು ನೋಡಿರೋ ಮಾಜಿ ಕ್ಯಾಪ್ಟನ್​ ತಂಡದ ವಿರುದ್ಧ ಕೆಂಡ ಕಾರ್ತಿದ್ದಾರೆ.

ಇಂಡೋ-ಆಸಿಸ್​ ಟಿ20 ಸರಣಿ ಈಗ ಮುಗಿದ ಅಧ್ಯಾಯ. ಸರಣಿ ಮುಗಿದಿದ್ದೂ ಆಯ್ತು. 4-1 ಅಂತರದಲ್ಲಿ ಸೂರ್ಯಕುಮಾರ್​ ಯಾದವ್​ ಸೈನ್ಯ ಸರಣಿ ಜಯಿಸಿದ್ದೂ ಆಯ್ತು. ಟೀಮ್​ ಮ್ಯಾನೇಜ್​ಮೆಂಟ್​ ಮಾಡಿದ ಒಂದು ಮಿಸ್ಟೇಕ್​ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಂಗ್​ ವಿಕೆಟ್​ ಕೀಪರ್​​ ಬ್ಯಾಟ್ಸ್​ಮನ್​ ಇಶಾನ್​ ಕಿಶನ್​ ವಿಚಾರದಲ್ಲಿ ಮ್ಯಾನೇಜ್​ಮೆಂಟ್​​ನ ನಡೆ ಸದ್ಯ ಟೀಕೆಗೆ ಗುರಿಯಾಗಿದೆ.

ಮೊದಲ 3 ಪಂದ್ಯದಲ್ಲಿ ಅವಕಾಶ.. ಕೊನೆ 2 ರಿಂದ ವಿಶ್ರಾಂತಿ

ಇಂಡೋ-ಆಸಿಸ್​ ಸರಣಿಯ ಮೊದಲ 2 ಪಂದ್ಯದಲ್ಲಿ ಇಶಾನ್​ ಕಿಶನ್​ ಸಾಲಿಡ್ ಬ್ಯಾಟಿಂಗ್​ ನಡೆಸಿದ್ರು. ಕಾಂಗರೂಗಳ ಬೆವರಿಳಿಸಿದ ಕಿಶನ್​, ಸತತ 2 ಹಾಫ್​ ಸೆಂಚುರಿ ಇನ್ನಿಂಗ್ಸ್​ ಕಟ್ಟಿದ್ರು. ದುರಾದೃಷ್ಟವಶಾತ್​​, 3ನೇ ಪಂದ್ಯದಲ್ಲಿ ಡಕೌಟ್​ ಆಗಿ ನಿರ್ಗಮಿಸಿದ್ರು. ನಂತರದ 2 ಪಂದ್ಯಗಳಿಂದ ಕಿಶನ್​​ಗೆ ಗೇಟ್​​ ಪಾಸ್​ ನೀಡಲಾಯ್ತು. ಇದಕ್ಕೆ ನೀಡಿದ ಉತ್ತರ ಮಾತ್ರ ರೆಸ್ಟ್​.

publive-image

ವಿಶ್ವಕಪ್​ನಲ್ಲಿ ಆಡಿದ್ದು ಎರಡೇ ಎರಡು ಪಂದ್ಯ ಮಾತ್ರ

ಬ್ಯಾಟ್ಸ್​​ಮನ್​ ಇಶಾನ್​ ಕಿಶನ್​ ಈ ಬಾರಿಯ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ರು. ಆಡಿದ್ದು ಮಾತ್ರ 2 ಪಂದ್ಯಗಳಲ್ಲಿ ಮಾತ್ರ. ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಆಡಿದ ಕಿಶನ್​ ನಂತರದ 9 ಪಂದ್ಯಗಳಲ್ಲಿ ಬೆಂಚ್​ ಕಾದರು. ಆ ಬಳಿಕ ಆಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೊದಲ 3 ಪಂದ್ಯಗಳನ್ನು ಮಾತ್ರ. ಇಷ್ಟಕ್ಕೆ ಇಶಾನ್​ ಕಿಶನ್​ ಸುಸ್ತಾದ್ರಾ? ಅಥವಾ ಮ್ಯಾನೇಜ್​ಮೆಂಟ್​ ಬಲವಂತವಾಗಿ ಕಿಶನ್​ಗೆ ರೆಸ್ಟ್​ ನೀಡಿತಾ ಅನ್ನೋದು ಸದ್ಯ ಹುಟ್ಟಿರುವ ಪ್ರಶ್ನೆ.

ಇಶಾನ್​ ಕಿಶನ್.. ನಾನು ಮೊದಲೇ ಹೇಳಿದ್ದೆ ನನಗೆ ಆ ಯುವ ಆಟಗಾರ ತುಂಬಾ ಚನ್ನಾಗಿ ಅನ್ನಿಸುತ್ತಾನೆ. ಒಬ್ಬೊಬ್ಬರಿಗೆ ಒಬ್ಬರು ಇಷ್ಟ ಆಗ್ತಾರೆ. ಆತನನ್ನು 3 ಪಂದ್ಯಗಳಲ್ಲಿ ನೀವು ಆಡಿಸಿದ್ರಿ. ಆ 3 ಪಂದ್ಯಗಳ ಬಳಿಕ ಆತ ತಂಡದಿಂದ ಡ್ರಾಪ್​ ಮಾಡುವಷ್ಟು ಸುಸ್ತಾದ್ರಾ? ಆತ ವಿಶ್ವಕಪ್​ನಲ್ಲೂ ಆಡಿಲ್ಲ. ಮೊದಲ 2 ಪಂದ್ಯದಲ್ಲಿ ಚಾನ್ಸ್​ ಸಿಕ್ಕಿತ್ತು. ಅದೇನು ಫ್ರಿ ಆಗಿ ಸಿಕ್ಕ ಅವಕಾಶವಲ್ಲ. ಭಾರತ ತಂಡದಲ್ಲಿ ಎಷ್ಟು ಜನ ಇದ್ದಾರೆ. ಏಕದಿನ ಮಾದರಿಯಲ್ಲಿ ಒಂದೇ ಇನ್ನಿಂಗ್ಸ್​ನಲ್ಲಿ ಉತ್ತಮ ದಿನದಲ್ಲಿ ಆತ 200 ರನ್​ ಹೊಡೆದಿದ್ದಾನೆ. ಆತ ಯಾವಾಗ ರೆಡಿಯಾಗ್ತಾನೆ-ಅಜಯ್​ ಜಡೇಜಾ, ಮಾಜಿ ಕ್ರಿಕೆಟಿಗ

ಆಟಗಾರರ ವಿಚಾರದಲ್ಲಿ ‘ಆಟ’ ಆಡ್ತಿದ್ಯಾ ಮ್ಯಾನೇಜ್​ಮೆಂಟ್​?

ಇಶಾನ್​ ಕಿಶನ್​​ಗೆ ರೆಸ್ಟ್ ನೀಡಿದ ವಿಚಾರದಲ್ಲಿ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ಅಜಯ್​ ಜಡೇಜಾ ನೀಡಿರುವ ಹೇಳಿಕೆ ಸದ್ಯ ಬಿರುಗಾಳಿ ಎಬ್ಬಿಸಿದೆ. ಇಶಾನ್​ ಕಿಶನ್ ವಿಚಾರದಲ್ಲಿ​ ಮಾತ್ರವಲ್ಲ.. ಕಳೆದ 2 ವರ್ಷಗಳಿಂದ ಟೀಮ್​ ಇಂಡಿಯಾ ಬಹುತೇಕ ಪ್ರಯೋಗಶಾಲೆಯಾಗಿ ಬದಲಾಗಿದೆ. ಸಾಲು-ಸಾಲು ಆಟಗಾರರು ತಂಡಕ್ಕೆ ಬಂದು ಬಂದು ಹೋಗಿದ್ದಾರೆ. ಯಾರಿಗೂ ಸ್ಥಾನ ಸೇಫ್​ ಅನ್ನೋ ಫೀಲ್​ ಮಾತ್ರ ಸಿಕ್ಕಿಲ್ಲ.

ನೀವು ಕೇವಲ ಟ್ರಯಲ್​ ತೆಗೆದುಕೊಳ್ತಾ ಇರ್ತಿರಾ? ಕಳೆದ 2 ವರ್ಷದಿಂದಲೂ ಇದೆ ಆಗಿದೆ. ಕಳೆದ 2 ವರ್ಷದಿಂದ ಎಷ್ಟು ಜನ ಆಡಿದ್ರು. ಭಾರತೀಯ ಕ್ರಿಕೆಟ್​ನ ಸಮಸ್ಯೆ ಈಗಿನದಲ್ಲ. ತುಂಬಾ ಹಿಂದಿನದ್ದು. ಇಲ್ಲಿ ಸೆಲೆಕ್ಷನ್​ ಮಾಡಲ್ಲ-ಅಜಯ್​ ಜಡೇಜಾ, ಮಾಜಿ ಕ್ರಿಕೆಟಿಗ

ಆಟಗಾರರಿಗೆ ಐಪಿಎಲ್​ ಟೂರ್ನಿ ವೇಳೆ ರೆಸ್ಟ್ ಯಾಕೆ ಬೇಡ?

ಏಕದಿನ ವಿಶ್ವಕಪ್​ ಮುಗಿದ ಬೆನ್ನಲ್ಲೇ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಸೇರಿದಂತೆ ಟೀಮ್​ ಇಂಡಿಯಾದ ಬಹುತೇಕ ಸೀನಿಯರ್​​ ಆಟಗಾರರು ವಿಶ್ರಾಂತಿ ತೆಗೆದುಕೊಂಡಿದ್ದಾರೆ. ವಿಶ್ವಕಪ್​ನಲ್ಲಿ ಆಡಿದ 10 ಪಂದ್ಯಗಳಿಗೆ ರೆಸ್ಟ್​ ಬಯಸಿರೋ ಇವರು ಐಪಿಎಲ್​ ಆಡುವಾಗ ಮಾತ್ರ ವಿಶ್ರಾಂತಿಯ ಬಗ್ಗೆ ತುಟಿ ಬಿಚ್ಚಲ್ಲ. ಐಪಿಎಲ್​ ಟೂರ್ನಿಯಲ್ಲಿ 2-3 ದಿನ ಅಂತರದಲ್ಲಿ ಪಂದ್ಯಗಳಿರುತ್ತೆ. ಹಾಗಿದ್ರೂ ಸತತ 14 ಪಂದ್ಯಗಳನ್ನ ಆಡ್ತಾರೆ. ಟೀಮ್​ ಇಂಡಿಯಾ ಪರ ಆಡೋವಾಗ ಮಾತ್ರ ಪದೇಪದೆ ವಿಶ್ರಾಂತಿ ಕೇಳೋದು ಇತ್ತೀಚೆಗಂತೂ ಮಾಮೂಲಿಯಾಗಿದೆ.

T20 ವಿಶ್ವಕಪ್​ಗೂ ಮುನ್ನ ಎಚ್ಚೆತ್ತುಕೊಳ್ಳುತ್ತಾ ತಂಡ?

ಈ ಬಾರಿಯ ಏಕದಿನ ವಿಶ್ವಕಪ್​ನಲ್ಲೂ ಟೀಮ್​ ಇಂಡಿಯಾ ಟ್ರೋಪಿ ಗೆಲ್ಲುವಲ್ಲಿ ಯಡವಿದೆ. ಸಾಲು ಸಾಲು ಐಸಿಸಿ ಟೂರ್ನಿಗಳಲ್ಲಿ ಮುಗ್ಗರಿಸಿರುವ ಟೀಮ್​ ಇಂಡಿಯಾ, ಮುಂಬರುವ ಟಿ20 ವಿಶ್ವಕಪ್​ನಲ್ಲಿ ಟ್ರೋಫಿ ಬರಕ್ಕೆ ಬ್ರೇಕ್​ ಹಾಕುತ್ತೆ ಅನ್ನೋದು ಫ್ಯಾನ್ಸ್ ಮಹದಾಸೆಯಾಗಿದೆ. ಟೀಮ್​ ಮ್ಯಾನೇಜ್​ಮೆಂಟ್​​ ಇಂತದ್ದೇ ನಡೆಯನ್ನ ಮುಂದುವರೆಸಿ, ಸಮರ್ಥ ತಂಡವನ್ನ ಕಟ್ಟದಿದ್ರೆ ಫ್ಯಾನ್ಸ್​​ಗೆ ಮತ್ತೆ ನಿರಾಸೆಯಾಗೋದು ಪಕ್ಕಾ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment