/newsfirstlive-kannada/media/post_attachments/wp-content/uploads/2024/06/Hemavathy-Water-Row-1.jpg)
ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇದರ ಮಧ್ಯೆ ಈಗ ನಮ್ಮ ರಾಜ್ಯದಲ್ಲೇ ಜಿಲ್ಲೆ-ಜಿಲ್ಲೆಗಳ ನಡುವೆ ಹೇಮಾವತಿ ನದಿ ನೀರಿಗಾಗಿ ಕಿತ್ತಾಟ ಶುರುವಾಗಿದೆ. ಹೇಮಾವತಿ ನದಿಯ ಗೊರೂರು ಡ್ಯಾಮ್ ನೀರಿಗಾಗಿ ತುಮಕೂರು ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ನಡುವೆ ಕಿತ್ತಾಟ ಶುರುವಾಗಿದೆ. ಮುಂದೆ ನೀರಿಗಾಗಿ ತಾಲ್ಲೂಕು- ತಾಲ್ಲೂಕು, ಹಳ್ಳಿ-ಹಳ್ಳಿಗಳ ನಡುವೆಯೂ ಜಲಯುದ್ಧ ಶುರುವಾಗಬಹುದು.
ಕರ್ನಾಟಕ ರಾಜ್ಯ ಸರ್ಕಾರ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮೂಲಕ ಹೇಮಾವತಿ ನದಿ ನೀರನ್ನು ತುಮಕೂರಿನ ಗುಬ್ಬಿಯಿಂದ ಸೀದಾ ಕುಣಿಗಲ್ ಮೂಲಕ ಮಾಗಡಿ ತಾಲೂಕಿಗೆ ಹರಿಸಲು ನಿರ್ಧರಿಸಿದೆ. ಇದು ತುಮಕೂರು ಜಿಲ್ಲೆಯ ರಾಜಕಾರಣಿಗಳು ರಾಮನಗರ ಜಿಲ್ಲೆಯ ಮುಖಂಡರು, ಜನರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಹೇಮಾವತಿಯ ಗೊರೂರು ಡ್ಯಾಮ್ ನೀರನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿಗೆ ಹರಿಸಲು ರಾಜ್ಯದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಾಗಡಿ ತಾಲ್ಲೂಕಿನ ಶ್ರೀರಂಗ ಏತ ನೀರಾವತಿ ಯೋಜನೆಗೆ ಬಜೆಟ್ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಕ್ಯಾಬಿನೆಟ್ನಲ್ಲೂ ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗಿದೆ. ಬಳಿಕ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಿಂದ ಪೈಪ್ಲೈನ್ ಕಾಮಗಾರಿ ಆರಂಭಿಸಲಾಗಿದೆ. ಅತ್ತ ಕುಣಿಗಲ್ ತಾಲ್ಲೂಕಿನ ಡಿ.ರಾಮಪುರ ಬಳಿಯಿಂದಲೂ ಪೈಪ್ಲೇನ್ ಕಾಮಗಾರಿ ಆರಂಭಿಸಲಾಗಿದೆ.
ಇದನ್ನೂ ಓದಿ: 50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಕೇಸ್.. ಇಬ್ಬರ ಮೃತದೇಹಗಳು ಪತ್ತೆ
ತುಮಕೂರು ಜಿಲ್ಲೆಯ ವಿರೋಧ ಯಾಕೆ?
ಈ ಯೋಜನೆಗೆ ತುಮಕೂರು ಜಿಲ್ಲೆಯ ರಾಜಕಾರಣಿಗಳು, ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಏನಂದ್ರೆ ಗೊರೂರು ಡ್ಯಾಂನಿಂದ ವರ್ಷಕ್ಕೆ 24 TMC ನೀರನ್ನು ತುಮಕೂರು ಜಿಲ್ಲೆಗೆ ಹರಿಸಬೇಕೆಂದು ರಾಜ್ಯ ಸರ್ಕಾರ ನೀರು ಹಂಚಿಕೆ ಮಾಡಿದೆ. ಈಗ ಮಾಗಡಿ ತಾಲ್ಲೂಕಿಗೆ ಪ್ರತ್ಯೇಕವಾಗಿ ಹೊಸದಾಗಿ ನೀರು ಹಂಚಿಕೆ ಮಾಡಿಸಿಕೊಳ್ಳದೇ 0.75 ಟಿಎಂಸಿ ನೀರನ್ನು ಹರಿಸಲು ಪೈಪ್ಲೇನ್ ಕಾಮಗಾರಿ ನಡೆಸಲಾಗುತ್ತಿದೆ ಅನ್ನೋದು ತುಮಕೂರು ಜಿಲ್ಲೆಯ ರಾಜಕಾರಣಿಗಳ ಆಕ್ಷೇಪ.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಘೀ ಜ್ವರ.. ಬೆಂಗಳೂರು, ಮೈಸೂರಿನಲ್ಲಿ ಎಷ್ಟು ಪ್ರಕರಣಗಳು ಪತ್ತೆಯಾಗಿವೆ ಗೊತ್ತಾ?
ಇದರ ಜೊತೆಗೆ ನೈಸರ್ಗಿಕವಾಗಿ ನಾಲೆಯ ಮೂಲಕವೇ ಕುಣಿಗಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಬಹುದಿತ್ತು. ಇದರ ಬದಲು ಸ್ಟೀಲ್ ಪೈಪ್ಗಳನ್ನು ಹಾಕಿ ಮಾಗಡಿಗೆ ಹೇಮಾವತಿ ನೀರು ಹರಿಸಿದರೆ ಕುಣಿಗಲ್ ತಾಲ್ಲೂಕಿಗೆ ನೀರು ಸಿಗದಂತಾಗುತ್ತೆ. ತುಮಕೂರು ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ನೀರು ಕಡಿಮೆಯಾಗುತ್ತೆ ಎಂಬ ಆತಂಕ ತುಮಕೂರು ಜಿಲ್ಲೆಯ ರಾಜಕಾರಣಿಗಳದ್ದು. ತುಮಕೂರು ಜಿಲ್ಲೆಗೆ ವರ್ಷಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದ್ದರೂ, ಇದುವರೆಗೂ ಯಾವ ವರ್ಷವೂ ಕೂಡ 24 ಟಿಎಂಸಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿದೇ ಇಲ್ಲ. ತುಮಕೂರು ಜಿಲ್ಲೆಯ ಕೆರೆಕಟ್ಟೆಗಳಿಗೆ, ಕುಡಿಯುವ ಉದ್ದೇಶಕ್ಕೆ ಕೃಷಿ ಉದ್ದೇಶಕ್ಕೆ ಹೇಮಾವತಿ ನೀರನ್ನು ಬಳಕೆ ಮಾಡಲಾಗುತ್ತೆ.
ತುಮಕೂರು ನಗರ, ಪಟ್ಟಣಗಳಿಗೂ ಕುಡಿಯುವ ಉದ್ದೇಶಕ್ಕೆ ಹೇಮಾವತಿ ನೀರುನ್ನು ಬಳಕೆ ಮಾಡಲಾಗುತ್ತೆ. ಗೊರೂರು ಡ್ಯಾಂ ನೀರನ್ನು ತುಮಕೂರು ನಗರದ ಬಳಿಯ ಬುಗುಡನಹಳ್ಳಿ ಕೆರೆಗೆ ಹರಿಸಿ, ಅಲ್ಲಿಂದ ಪೈಪ್ ಮೂಲಕ ತುಮಕೂರು ನಗರಕ್ಕೆ ಪೂರೈಸಲಾಗುತ್ತಿದೆ. ಇದೇ ರೀತಿ ಮಧುಗಿರಿ, ಶಿರಾ ಪಟ್ಟಣಗಳಿಗೂ ಕೆರೆಗಳಿಗೆ ನೀರು ತುಂಬಿಸಿ ಹೇಮಾವತಿ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ. ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲ್ಲೂಕುಗಳು ಕೂಡ ಹೇಮಾವತಿ ನೀರನ್ನು ಕುಡಿಯುವ ನೀರು, ಕೃಷಿ ಉದ್ದೇಶಕ್ಕೆ ಅವಲಂಬಿಸಿವೆ. ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರಿನ ಮೂಲ ಬಿಟ್ಟರೇ, ಬೇರೆ ನದಿ ನೀರಿನ ಮೂಲಗಳಿಲ್ಲ.
ಇದನ್ನೂ ಓದಿ: ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ
ತುಮಕೂರು ಜಿಲ್ಲೆಗೆ ಹೇಮಾವತಿಯ ಜೀವ ನದಿ. ಹೀಗಾಗಿ ತುಮಕೂರು ಜಿಲ್ಲೆಯ ಜನರು, ರಾಜಕಾರಣಿಗಳು ಪ್ರಾಣ ಬಿಟ್ಟೆವು ಹೇಮಾವತಿ ನೀರು ಕೊಡಲ್ಲ ಎಂದು ಧರಣಿ, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಮಾಗಡಿ ತಾಲ್ಲೂಕಿನ ರಾಜಕಾರಣಿಗಳು ಹೇಳುವ ಪ್ರಕಾರ, ಮಾಗಡಿ ತಾಲ್ಲೂಕಿನ ಶ್ರೀರಂಗ ಏತ ನೀರಾವರಿ ಯೋಜನೆಗೆ ಹೇಮಾವತಿಯ 0.75 ಟಿಎಂಸಿ ನೀರು ಹಂಚಿಕೆಯಾಗಿದೆ. ಹಂಚಿಕೆಯಾಗಿರುವ ನೀರು ಅನ್ನು ಗುಬ್ಬಿ ತಾಲ್ಲೂಕು, ಕುಣಿಗಲ್ ತಾಲ್ಲೂಕು ಮೂಲಕ ಪಕ್ಕದ ಮಾಗಡಿ ತಾಲ್ಲೂಕಿಗೆ ಸ್ಟೀಲ್ ಪೈಪ್ ಲೇನ್ ಮೂಲಕ ಹರಿಸುವ ಯೋಜನೆ ಮಾಡಲಾಗಿದೆ.
ಇದರಿಂದ ನೀರು ಸೋರಿಕೆಯಾಗೋದು, ನಾಲೆಗಳಲ್ಲಿ ಭೂಮಿಯಲ್ಲಿ ಹಿಂಗಿ ವ್ಯರ್ಥವಾಗೋದು ತಪ್ಪುತ್ತೆ. ಗುಬ್ಬಿಯಿಂದ ಹೇಮಾವತಿ ನೀರು, ಕುಣಿಗಲ್ ಮೂಲಕ ಸೀದಾ ಮಾಗಡಿಗೆ ಹರಿಯುತ್ತೆ. ಈ ಯೋಜನೆಯಿಂದ ತುಮಕೂರು ಜಿಲ್ಲೆಯ ಗುಬ್ಬಿ, ಕುಣಿಗಲ್ ತಾಲ್ಲೂಕಿನ ರೈತರಿಗೆ ಯಾವುದೇ ತೊಂದರೆ ಇಲ್ಲ. ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ವಾರ್ಷಿಕ 24 ಟಿಎಂಸಿ ನೀರನ್ನು ಮಾಗಡಿ ತಾಲ್ಲೂಕು ಕಿತ್ತುಕೊಳ್ಳಲ್ಲ. ಇದರ ಬಗ್ಗೆ ತುಮಕೂರು ಜಿಲ್ಲೆಯ ಜನರಿಗೆ, ರಾಜಕಾರಣಿಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ ಅಂತ ಮಾಗಡಿ ತಾಲ್ಲೂಕಿನ ರಾಜಕಾರಣಿಗಳು ವಾದಿಸುತ್ತಿದ್ದಾರೆ.
ತುಮಕೂರು ಜಿಲ್ಲೆ ಬಂದ್ಗೂ ಕರೆ!
ಈಗಾಗಲೇ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ತುಮಕೂರು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸರ್ವಪಕ್ಷದ ಶಾಸಕರು ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಜೆಡಿಎಸ್, ಬಿಜೆಪಿ ಶಾಸಕರು ಮಾಜಿ ಶಾಸಕರು ಗುಬ್ಬಿ ತುಮಕೂರಿನಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮನೆಗೂ ಮುತ್ತಿಗೆ ಹಾಕುವ ಯತ್ನ ಮಾಡಿದ್ದರು. ಈಗ ಜೂನ್ 25 ರಂದು ತುಮಕೂರು ಜಿಲ್ಲೆಯ ಬಂದ್ಗೂ ಕರೆ ನೀಡಿದ್ದಾರೆ.
ಹೇಮಾವತಿ ನೀರಿಗಾಗಿ ತುಮಕೂರು ಹಾಗೂ ರಾಮನಗರ ಜಿಲ್ಲೆಯ ನಡುವೆ ವಿವಾದ ಸೃಷ್ಟಿಯಾಗಿರುವುದನ್ನು ಬಗೆಹರಿಸಲು ಈಗ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ. ಎರಡು ಜಿಲ್ಲೆಯ ಎಂಎಲ್ಎಗಳ ಸಭೆ ಕರೆದಿದ್ದಾರೆ. 2006-07ರಲ್ಲೇ ಹೇಮಾವತಿ ನೀರಿಗಾಗಿ ಕುಣಿಗಲ್ ತಾಲ್ಲೂಕಿನ ಎರಡು ಹೋಬಳಿಗಳ ನಡುವೆಯೇ ಫೈಟಿಂಗ್ ನಡೆದಿತ್ತು. ಈಗ ಜಿಲ್ಲೆ-ಜಿಲ್ಲೆಗಳ ನಡುವೆ ಹೇಮಾವತಿ ನೀರಿಗಾಗಿ ಕಿತ್ತಾಟ ನಡೆಯುತ್ತಿದೆ.
ವಿಶೇಷ ವರದಿ: ಚಂದ್ರಮೋಹನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ