/newsfirstlive-kannada/media/post_attachments/wp-content/uploads/2025/03/tharun.jpg)
ತುಮಕೂರು: ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನಟ್ಟು ಬೋಲ್ಟ್ ಟೈಟ್ ಮಾಡುತ್ತೇನೆ ಎಂಬ ಹೇಳಿಕೆ ಜೋರಾಗಿ ಸದ್ದು ಮಾಡುತ್ತಿದೆ. ಇದೇ ವಿಚಾರದ ಬಗ್ಗೆ ಇಡೀ ಸ್ಯಾಂಡಲ್ವುಡ್ ಮಧ್ಯೆ ಜೋರು ಚರ್ಚೆ ಶುರುವಾಗಿದೆ. ಇದರ ಮಧ್ಯೆ ಅನುಮತಿ ಇಲ್ಲದೇ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡಕ್ಕೆ ಅರಣ್ಯ ಇಲಾಖೆ ಶಾಕ್ ನೀಡಿದೆ.
ಇದನ್ನೂ ಓದಿ: ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್ಪ್ರೈಸ್ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?
ಹೌದು, ಸ್ಯಾಂಡಲ್ವುಡ್ ಸ್ಟಾರ್ ನಟಿ ರಕ್ಷಿತಾ ಅವರ ಸಹೋದರ ರಾಣಾ ನಟಿಸುತ್ತಿರುವ ಹಾಗೂ ತರುಣ್ ಸುಧೀರ್ ಪ್ರೊಡಕ್ಷನ್ಸ್ನಲ್ಲಿ ಹೊಸ ಸಿನಿಮಾದ ಶೂಟಿಂಗ್ ಅನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ. ತುಮಕೂರಿನ ಪ್ರಸಿದ್ಧ ನಾಮದ ಚಿಲುಮೆ ಗೇಟ್ ಬಳಿ ಕಳೆದ 5 ದಿನದಿಂದ ಶೂಟಿಂಗ್ ನಡೆಯುತ್ತಿತ್ತು. ಈ ಸಿನಿಮಾದಲ್ಲಿ ನಟಿ ರಕ್ಷಿತಾ ಸಹೋದರ ರಾಣಾ ಹಾಗೂ ಮಹಾನಟಿ ವಿನ್ನರ್ ಪ್ರಿಯಾಂಕಾ ನಟಿಸುತ್ತಿದ್ದರು. ಸುಮಾರು 50-100 ಜನ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಹೀಗೆ ತುಮಕೂರು ಎಸಿಎಫ್ ಪವಿತ್ರಾ ನೇತೃತ್ವದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಚಿತ್ರೀಕರಣವನ್ನು ಬಂದ್ ಮಾಡಿಸಿದ್ದಲ್ಲದೆ, ಸಿನಿಮಾ ಚಿತ್ರೀಕರಣಕ್ಕೆ ಬಳಸಲಾಗಿರುವ ಕ್ಯಾರವಾನ್, ಕ್ಯಾಮರಾ ಲೈಟ್, ಲೈಟ್, ಅಡುಗೆ ಸಾಮಾಗ್ರಿ, ಚೇರ್ಗಳು, ಟೆಂಪೊ ಟ್ರಾವೆಲರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ತಿಂಗಳು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೂರಜ್ ಕುಮಾರ್ ಪತ್ರ ಬರೆದು ಮನವಿ ಕೋರಿದ್ದರಂತೆ. ಆದರೆ ಅರಣ್ಯ ಇಲಾಖೆ ಅನುಮತಿ ನೀಡಿರಲಿಲ್ಲ. ಫೆಬ್ರವರಿ 4, 18, 20ರಂದು ಶೂಟಿಂಗ್ಗೆ ಅನುಮತಿ ನೀಡುವಂತೆ ಪತ್ರ, ಜೊತೆಗೆ ಫೆ.13, 14, 18ರಂದು ಚಿತ್ರೀಕರಣಕ್ಕೆ ಅನುಮತಿ ನೀಡಲು ಪತ್ರ ಬರೆಯಲಾಗಿತ್ತು. ಆದರೆ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ, ಅನುಮತಿಯ ಹೊರತಾಗಿಯೂ ಚಿತ್ರತಂಡ ಚಿತ್ರೀಕರಣ ಶುರು ಮಾಡಿತ್ತು. ಇದೇ ಕಾರಣಕ್ಕೆ ಅರಣ್ಯ ಇಲಾಖೆಯವರು ಈಗ ಚಿತ್ರೀಕರಣ ಬಂದ್ ಮಾಡಿಸಿ, ಚಿತ್ರೀಕರಣಕ್ಕೆ ಬಳಸಿದ್ದ ವಸ್ತುಗಳನ್ನು ಸೀಜ್ ಮಾಡಿದೆ.
ತುಮಕೂರು ಡಿಎಫ್ ಓ ಅನುಪಮಾ ಹೇಳಿದ್ದೇನು?
ಇನ್ನೂ, ಈ ಬಗ್ಗೆ ಮಾತಾಡಿದ ತುಮಕೂರು ಡಿಎಫ್ ಓ ಅನುಪಮಾ ಅವರು, ನಿನ್ನೆ ಸಂಜೆ 10 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂತು. ನಾಮದಚಿಲುಮೆ ಮುಖ್ಯದ್ವಾರ ಬಳಿ ಲೈಟ್ಗಳನ್ನು ಹಾಕಿಕೊಂಡು ಜನರು ಇದ್ದಾರೆ ಅಂತಾ. ಅಷ್ಟರಲ್ಲಿ ನಮ್ಮ ಎಸಿಎಫ್, ಆರ್ ಎಫ್ ಓ ಜೊತೆಗೆ ಸಿಬ್ಬಂದಿ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಗ ಸಿನಿಮಾ ಶೂಟಿಂಗ್ ತಂಡ 8 ಗಂಟೆ ಸುಮಾರಿಗೆ ಬಂದಿದ್ದಾರೆ. ಊಟಕ್ಕೆ ಅಲ್ಲಿ ನಿಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಎಫ್ ಐ ಆರ್ ದಾಖಲಿಸಲು ಸೂಚನೆ ನೀಡಿದ್ದೇನೆ. ತರುಣ್ ಸುದೀರ್ ಪ್ರೊಡಕ್ಷನ್ ಅಂತಾ ತಿಳಿದು ಬಂದಿದೆ. ಅನಧಿಕೃತ ಪ್ರವೇಶ ಅಡಿ ದೂರು ದಾಖಲಿಸಲು ಸೂಚನೆ ನೀಡಲಾಗಿದೆ. ಚಿತ್ರತಂಡ ಮೊದಲೇ ಅನುಮತಿಗೆ ಅರ್ಜಿ ಕಳಿಸಿದ್ದರು. ಆದರೆ ಕೇಂದ್ರ ಅರಣ್ಯ ಕಚೇರಿ ವತಿಯಿಂದ ಇನ್ನೂ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಶೂಟಿಂಗ್ಗೆ ಅನುಮತಿ ಇರಲಿಲ್ಲ. ಆದರೆ ಹೊರಗೆ ಶೂಟಿಂಗ್ ಮಾಡಿ, ಊಟಕ್ಕೆ ನಿಲ್ಲಿಸಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಎಫ್ಐಆರ್ ಮಾಡುತ್ತೇವೆ. ಟಿಟಿ ವಾಹನ ಅಡುಗೆ ಸಾಮಾಗ್ರಿಗಳು, ಚೇರ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ