/newsfirstlive-kannada/media/post_attachments/wp-content/uploads/2024/12/SM_KRISHAN_DR_RAJ_3.jpg)
ಬೆಂಗಳೂರು: ಸದಾಶಿವನಗರದ ತಮ್ಮ ಸ್ವಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ವಿಧಿವಶರಾಗಿದ್ದಾರೆ. ಎಸ್.ಎಂ ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಡಾ.ರಾಜ್ಕುಮಾರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದ್ದು ಅವರಿಗೆ ಹೆಚ್ಚಿನ ಬಹಳಷ್ಟು ಖೇದ ಉಂಟು ಮಾಡಿತ್ತು. ಇದನ್ನು ಎಸ್.ಎಂ ಕೃಷ್ಣ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಡಾ.ರಾಜ್ಕುಮಾರ್ ಅವರು ವೀರಪ್ಪನ್ ಜೊತೆ ಕಾಲ ಕಳೆಯುವಂತ ಪ್ರಸಂಗ ಬಂದಿದ್ದು ಎಸ್.ಎಂ ಕೃಷ್ಣರಿಗೆ ತುಂಬಾ ಖೇದ ಉಂಟು ಮಾಡಿತ್ತು. ರಾಜ್ಯದ ಹಿರಿಯ ನಟರು ಅಲ್ಲದೇ ರಾಜ್ಕುಮಾರ್ ಅವರಿಗೆ ಏನಾದರೂ ಆಗಿದ್ದರೇ ಬೆಂಗಳೂರಿನಲ್ಲಿ ಏನು ಆಗುತ್ತೋ ಎನ್ನುವ ಯೋಚನೆ ಅವರಲ್ಲಿತ್ತು. ಏಕೆಂದರೆ ಬೆಂಗಳೂರಿನಲ್ಲಿ ಶೇ.30 ರಷ್ಟು ಜನ ತಮಿಳರು ಇದ್ದರು. ಹೀಗಾಗಿ ಕನ್ನಡಿಗರು-ತಮಿಳರ ಮಧ್ಯೆ ಘರ್ಷಣೆ ಆಗುತ್ತೋ, ಏನೋ ಎನ್ನುವ ಭಯ-ಭೀತಿ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣರನ್ನು ಎಡೆಬಿಡದೇ ಕಾಡಿತ್ತು.
ಇದನ್ನೂ ಓದಿ:ವೀರಪ್ಪನ್ನಿಂದ ಅಣ್ಣಾವ್ರ ಬಿಡಿಸಿಕೊಂಡು ಬಂದ ಕ್ಷಣ ಹೇಗಿತ್ತು..? ಡಾ.ರಾಜ್ ಮತ್ತು SM ಕೃಷ್ಣ ಫೋಟೋಗಳು
ರಾಜ್ಕುಮಾರ್ ಕಿಡ್ನಾಪ್ಗೂ ಮೊದಲು ಎಸ್.ಎಂ ಕೃಷ್ಣ ವಿಧಾನಸೌಧದಲ್ಲಿದ್ದರು. ಅಂದು ಸಂಜೆ 6 ಗಂಟೆಗೆ ತಮ್ಮ ಬೆಂಗಳೂರಿನ ನಿವಾಸಕ್ಕೆ ತೆರಳಿದ್ದರು. 6:30ರ ಸುಮಾರಿಗೆ ಅವರ ಸಹಾಯಕರೊಬ್ಬರು ಪಾರ್ವತಮ್ಮ ಅವರು ನಿಮ್ಮ ಜೊತೆ ಮಾತನಾಡಬೇಕು ಎಂದು ಎಸ್.ಎಂ ಕೃಷ್ಣ ಅವರಿಗೆ ಹೇಳಿದ್ದರು. ತಕ್ಷಣ ಮೈಸೂರಿನಲ್ಲಿದ್ದ ಪಾರ್ವತಮ್ಮ ಅವರಿಗೆ ಫೋನ್ ಮಾಡಿದರು. ಅವಾಗ ಪಾರ್ವತಮ್ಮ ಅವರು ಫೋನ್ನಲ್ಲಿ ‘ವೀರಪ್ಪ, ಡಾ.ರಾಜ್ಕುಮಾರ್ರನ್ನ ಕರೆದುಕೊಂಡು ಹೋಗಿಬಿಟ್ಟ’ ಎಂದು ಹೇಳಿದ್ದರು. ಇದನ್ನು ಕೇಳಿದ್ದ ಎಸ್.ಎಂ ಕೃಷ್ಣ ಅವರಿಗೆ ಸಿಡಿಲು ಬಡಿದಂತೆ ಆಗಿತ್ತು.
ಇದಾದ ಮೇಲೆ ಪಾರ್ವತಮ್ಮ ಅವರನ್ನು ಮೈಸೂರಿನಿಂದ ಬೆಂಗಳೂರಿಗೆ ಬರುವಂತೆ ಹೇಳಿ, ವಿಷಯವನ್ನು ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದರು. ಮುಖ್ಯಮಂತ್ರಿ ಆಗಿ ಎಸ್.ಎಂ ಕೃಷ್ಣ ಅವರು ಎಲ್ಲ ಪ್ರಯತ್ನಗಳನ್ನು ಮಾಡಿ ಕೊನೆಗೆ 108 ದಿನಗಳ ಬಳಿಕ ರಾಜ್ ಕುಮಾರ್ರನ್ನ ಕರೆದುಕೊಂಡು ಬಂದರು. ರಾಜ್ಕುಮಾರ್ರನ್ನ ಕಿಡ್ನಾಪ್ ಮಾಡಿದ್ದ 108 ದಿನವೂ ನಿದ್ದೆ ಇಲ್ಲದೇ ಎಸ್.ಎಂ ಕೃಷ್ಣ ಟೆನ್ಷನ್ನಲ್ಲಿದ್ದರು. ಯಾವಾಗ ರಾಜ್ಕುಮಾರ್ ಬಂದರೋ ಅವಾಗ ಅವರು ನೆಮ್ಮದಿ ನಿದ್ದೆ ಮಾಡಿದ್ದರು. ಇದನ್ನೆಲ್ಲಾ ಎಸ್.ಎಂ ಕೃಷ್ಣ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ