/newsfirstlive-kannada/media/post_attachments/wp-content/uploads/2024/12/SM_KRISHAN_DR_RAJ_3.jpg)
ಬೆಂಗಳೂರು: ಸದಾಶಿವನಗರದ ತಮ್ಮ ಸ್ವಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರು ವಿಧಿವಶರಾಗಿದ್ದಾರೆ. ಎಸ್​.ಎಂ ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಡಾ.ರಾಜ್​ಕುಮಾರ್​ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದ್ದು ಅವರಿಗೆ ಹೆಚ್ಚಿನ ಬಹಳಷ್ಟು ಖೇದ ಉಂಟು ಮಾಡಿತ್ತು. ಇದನ್ನು ಎಸ್​.ಎಂ ಕೃಷ್ಣ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಡಾ.ರಾಜ್​ಕುಮಾರ್ ಅವರು ವೀರಪ್ಪನ್ ಜೊತೆ ಕಾಲ ಕಳೆಯುವಂತ ಪ್ರಸಂಗ ಬಂದಿದ್ದು ಎಸ್​​.ಎಂ ಕೃಷ್ಣರಿಗೆ ತುಂಬಾ ಖೇದ ಉಂಟು ಮಾಡಿತ್ತು. ರಾಜ್ಯದ ಹಿರಿಯ ನಟರು ಅಲ್ಲದೇ ರಾಜ್​ಕುಮಾರ್ ಅವರಿಗೆ ಏನಾದರೂ ಆಗಿದ್ದರೇ ಬೆಂಗಳೂರಿನಲ್ಲಿ ಏನು ಆಗುತ್ತೋ ಎನ್ನುವ ಯೋಚನೆ ಅವರಲ್ಲಿತ್ತು. ಏಕೆಂದರೆ ಬೆಂಗಳೂರಿನಲ್ಲಿ ಶೇ.30 ರಷ್ಟು ಜನ ತಮಿಳರು ಇದ್ದರು. ಹೀಗಾಗಿ ಕನ್ನಡಿಗರು-ತಮಿಳರ ಮಧ್ಯೆ ಘರ್ಷಣೆ ಆಗುತ್ತೋ, ಏನೋ ಎನ್ನುವ ಭಯ-ಭೀತಿ ಅಂದಿನ ಮುಖ್ಯಮಂತ್ರಿ ಎಸ್​.ಎಂ ಕೃಷ್ಣರನ್ನು ಎಡೆಬಿಡದೇ ಕಾಡಿತ್ತು.
ರಾಜ್​ಕುಮಾರ್ ಕಿಡ್ನಾಪ್​ಗೂ ಮೊದಲು ಎಸ್​.ಎಂ ಕೃಷ್ಣ ವಿಧಾನಸೌಧದಲ್ಲಿದ್ದರು. ಅಂದು ಸಂಜೆ 6 ಗಂಟೆಗೆ ತಮ್ಮ ಬೆಂಗಳೂರಿನ ನಿವಾಸಕ್ಕೆ ತೆರಳಿದ್ದರು. 6:30ರ ಸುಮಾರಿಗೆ ಅವರ ಸಹಾಯಕರೊಬ್ಬರು ಪಾರ್ವತಮ್ಮ ಅವರು ನಿಮ್ಮ ಜೊತೆ ಮಾತನಾಡಬೇಕು ಎಂದು ಎಸ್​.ಎಂ ಕೃಷ್ಣ ಅವರಿಗೆ ಹೇಳಿದ್ದರು. ತಕ್ಷಣ ಮೈಸೂರಿನಲ್ಲಿದ್ದ ಪಾರ್ವತಮ್ಮ ಅವರಿಗೆ ಫೋನ್ ಮಾಡಿದರು. ಅವಾಗ ಪಾರ್ವತಮ್ಮ ಅವರು ಫೋನ್​ನಲ್ಲಿ ‘ವೀರಪ್ಪ, ಡಾ.ರಾಜ್​ಕುಮಾರ್​ರನ್ನ ಕರೆದುಕೊಂಡು ಹೋಗಿಬಿಟ್ಟ’ ಎಂದು ಹೇಳಿದ್ದರು. ಇದನ್ನು ಕೇಳಿದ್ದ ಎಸ್​.ಎಂ ಕೃಷ್ಣ ಅವರಿಗೆ ಸಿಡಿಲು ಬಡಿದಂತೆ ಆಗಿತ್ತು.
ಇದಾದ ಮೇಲೆ ಪಾರ್ವತಮ್ಮ ಅವರನ್ನು ಮೈಸೂರಿನಿಂದ ಬೆಂಗಳೂರಿಗೆ ಬರುವಂತೆ ಹೇಳಿ, ವಿಷಯವನ್ನು ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದರು. ಮುಖ್ಯಮಂತ್ರಿ ಆಗಿ ಎಸ್​.ಎಂ ಕೃಷ್ಣ ಅವರು ಎಲ್ಲ ಪ್ರಯತ್ನಗಳನ್ನು ಮಾಡಿ ಕೊನೆಗೆ 108 ದಿನಗಳ ಬಳಿಕ ರಾಜ್​ ಕುಮಾರ್​ರನ್ನ ಕರೆದುಕೊಂಡು ಬಂದರು. ರಾಜ್​ಕುಮಾರ್​ರನ್ನ ಕಿಡ್ನಾಪ್ ಮಾಡಿದ್ದ 108 ದಿನವೂ ನಿದ್ದೆ ಇಲ್ಲದೇ ಎಸ್​.ಎಂ ಕೃಷ್ಣ ಟೆನ್ಷನ್​​ನಲ್ಲಿದ್ದರು. ಯಾವಾಗ ರಾಜ್​ಕುಮಾರ್ ಬಂದರೋ ಅವಾಗ ಅವರು ನೆಮ್ಮದಿ ನಿದ್ದೆ ಮಾಡಿದ್ದರು. ಇದನ್ನೆಲ್ಲಾ ಎಸ್​.ಎಂ ಕೃಷ್ಣ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ